ವಿದ್ಯುತ್ ವ್ಯತ್ಯಯ: ಕರ್ನಾಟಕದಲ್ಲೂ ಕಗ್ಗತ್ತಲು ಮೂಡಿಸುತ್ತಾ ಕಲ್ಲಿದ್ದಲು!?
ಬೆಂಗಳೂರು, ಅಕ್ಟೋಬರ್ 12: ಕಲ್ಲಿದ್ದಲು ಕೊರತೆ ಒಂದೆರೆಡು ರಾಜ್ಯಗಳಿಗೆ ಸೀಮಿತವಾಗಿಲ್ಲ. ಕರ್ನಾಟಕದಲ್ಲೂ ಕತ್ತಲು ಆವರಿಸುವ ದಿನಗಳು ಇನ್ನು ದೂರ ಉಳಿದಿಲ್ಲ. ರಾಜ್ಯದ ವಿದ್ಯುತ್ ಸ್ಥಾವರಗಳಲ್ಲಿ ಸಂಗ್ರಹಿಸಲಾಗಿರುವ ಕಲ್ಲಿದ್ದಲು ಇನ್ನೆರೆಡು ದಿನಗಳಲ್ಲೇ ಖಾಲಿಯಾಗಲಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲೂ ವಿದ್ಯುತ್ ವ್ಯತ್ಯಯ ಉಂಟಾಗುವ ಆತಂಕ ಸೃಷ್ಟಿಯಾಗಿದೆ.
ಸಿಲಿಕಾನ್ ಸಿಟಿಯೊಂದರಲ್ಲೇ 10,000 ದಿಂದ 12,500 ಮೆಗಾವ್ಯಾಟ್ ಬಳಕೆಯಾಗುತ್ತಿದ್ದ ವಿದ್ಯುತ್ ಪ್ರಮಾಣ ಇದೀಗ 8,000 ದಿಂದ 9,000ಕ್ಕೆ ಬಂದು ತಲುಪಿದೆ. ಕಳೆದ ಎರಡ್ಮೂರು ದಿನಗಳಿಂದ ವಿದ್ಯುತ್ ಬಳಕೆಯಲ್ಲಿ 300 ಮೆಗಾ ವ್ಯಾಟ್ ರಷ್ಟು ಕಡಿಮೆಯಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏನಿದು ಬಿಕ್ಕಟ್ಟು: ಕಲ್ಲಿದ್ದಲು ಇಲ್ಲದೇ ಕತ್ತಲೆಯತ್ತ ಸಾಗುತ್ತಿದೆಯಾ ಭಾರತ?
ಕರ್ನಾಟಕದ ಇಂಧನ ಇಲಾಖೆ ಮತ್ತು ಕರ್ನಾಟಕ ವಿದ್ಯುತ್ ನಿಗಮ ಲಿಮಿಟೆಡ್ (KPCL) ದಾಖಲೆಗಳ ಪ್ರಕಾರ, ಸದ್ಯಕ್ಕೆ 12 ಕುಂಟೆಯಷ್ಟು ಕಲ್ಲಿದ್ದಲು ಸಂಗ್ರಹವಾಗಿದ್ದು, ಉಷ್ಣ ವಿದ್ಯುತ್ ಸ್ಥಾವರಗಳು ಎರಡು ದಿನ ಬಳಸಿದರೆ ಅದೂ ಖಾಲಿಯಾಗಲಿದೆ. ಕಲ್ಲಿದ್ದಲನ್ನು ಉಳಿಸಿಕೊಳ್ಳಲು ಉಷ್ಣ ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ಸೀಮಿತಗೊಳಿಸಲಾಗಿದೆ. ಅದರ ಜೊತೆಗೆ ವಿದ್ಯುತ್ ಕಡಿತವನ್ನು ಆಶ್ರಯಿಸಲಾಗುತ್ತಿದೆ. ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲಿ ಅಕ್ಟೋಬರ್ 12ರಂದು ವಿದ್ಯುತ್ ವ್ಯತ್ಯಯದ ಬಗ್ಗೆ ಬೆಸ್ಕಾಂ ಹೊರಡಿಸಿರುವ ಆದೇಶದಿಂದ ಪರಿಸ್ಥಿತಿಯ ಸ್ಪಷ್ಟ ಅರಿವಾಗುತ್ತದೆ. ಮಂಗಳವಾರ ಬೆಂಗಳೂರು ಎದುರಿಸಿದ ಪವರ್ ಕಟ್ ಸಮಸ್ಯೆಯು ಮುಂದಿನ ಎರಡು ದಿನಗಳಲ್ಲಿ ಇಡೀ ರಾಜ್ಯಕ್ಕೆ ವ್ಯಾಪಿಸುವ ಅಪಾಯವೂ ಇದೆ. ಕಲ್ಲಿದ್ದಲು ಕೊರತೆ ಮತ್ತು ಸಿಲಿಕಾನ್ ಸಿಟಿಯ ಪವರ್ ಕಟ್ ಸಮಸ್ಯೆ ಕುರಿತು ಒಂದು ವಿಶೇಷ ವರದಿಗಾಗಿ ಮುಂದೆ ಓದಿ.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವೇ ಪರವಾಗಿಲ್ಲ
ಕಲ್ಲಿದ್ದಲು ಕೊರತೆ ಮತ್ತು ವಿದ್ಯುತ್ ವ್ಯತ್ಯಯದ ಬಗ್ಗೆ ಸುದ್ದಿ ಬಾಯಿಂದ ಬಾಯಿಗೆ ಹರಡುತ್ತಿದೆ. ಆದರೆ ಬೇರೆ ರಾಜ್ಯಗಳಿಗೆ ಹೋಲಿಸಿ ನೋಡಿದರೆ ಕರ್ನಾಟಕವು ಉತ್ತಮ ಪರಿಸ್ಥಿತಿಯಲ್ಲಿದೆ. ನಾವು ಹೈಡ್ರೋ, ಪವನ ಹಾಗೂ ಸೌರಶಕ್ತಿಗೆ ಹೆಚ್ಚು ಒತ್ತು ನೀಡುವುದರಿಂದ ಉತ್ತಮ ಸ್ಥಿತಿಯಲ್ಲಿದ್ದೇವೆ. ನಾವು ಈಗ ಎಂಟರಿಂದ ಒಂಬತ್ತು ರೇಕ್ ಕಲ್ಲಿದ್ದಲನ್ನು ಪಡೆಯುತ್ತಿದ್ದೇವೆ, ಪ್ರತಿ ರೇಕ್ 3,900-4,000 ಮೆಟ್ರಿಕ್ ಟನ್ ಕಲ್ಲಿದ್ದಲನ್ನು ಹೊಂದಿರುತ್ತದೆ. ನಿರಾತಂಕವಾಗಿರಲು ನಮಗೆ 15 ದಿನಗಳಿಗೆ ಅಥವಾ ಕನಿಷ್ಠ ಒಂದು ವಾರದವರೆಗೆ ಸಾಕಾಗುವಷ್ಟು ದಾಸ್ತಾನು ಹೊಂದಿರಬೇಕು," ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕಕ್ಕೆ 14 ರೇಕ್ ಕಲ್ಲಿದ್ದಲು ಪೂರೈಸಲು ಸಮ್ಮತಿ
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಇಂಧನ ಸಚಿವ ಸುನೀಲ್ ಕುಮಾರ್ ಚರ್ಚೆ ಬಳಿಕ ಕೇಂದ್ರ ಸರ್ಕಾರವು ರಾಜ್ಯಕ್ಕೆ 12 ರೇಕ್ಗಳ ಭರವಸೆ ನೀಡಿದೆ. ಇದರ ಜೊತೆಗೆ ಹೆಚ್ಚುವರಿ ಎರಡು ರೇಕ್ಗಳಿಗಾಗಿ ನಾವು ಮಹಾನದಿ ಕೋಲ್ಫೀಲ್ಡ್ಸ್ ಲಿಮಿಟೆಡ್ (ಎಂಸಿಎಲ್) ಜೊತೆ ಮಾತನಾಡುತ್ತಿದ್ದೇವೆ. ಆದರೆ ಅದು ಮುಂದಿನ ತಿಂಗಳು ಬರುತ್ತದೆ. ಅಲ್ಲಿಯವರೆಗೆ ಪರಿಸ್ಥಿತಿ ಬಿಗಿಯಾಗಿರಲಿದೆ," ಎಂದು ಹಿರಿಯ ಕೆಪಿಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯದ ಯಾವ ಘಟಕದಲ್ಲಿ ಎಷ್ಟು ವಿದ್ಯುತ್ ಉತ್ಪಾದನೆ ಸಾಧ್ಯ?
ಕೆಪಿಸಿಎಲ್ ನೀಡಿರುವ ಸೋಮವಾರ ನೀಡಿರುವ ದಾಖಲೆಗಳ ಅಂಕಿ-ಅಂಶಗಳ ಪ್ರಕಾರ, ರಾಯಚೂರು ಉಷ್ಟ ವಿದ್ಯುತ್ ಸ್ಥಾವರದ ಒಂದು ಘಟಕದಿಂದ 444 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಶಕ್ತವಾಗಿದ್ದು, ಮೂರು ಘಟಕಗಳಿಂದ ಒಟ್ಟು 1720 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಿದೆ. ಬಳ್ಳಾರಿ ಉಷ್ಟ ವಿದ್ಯುತ್ ಘಟಕವು 395 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲು ಶಕ್ತವಾಗಿದ್ದು, 1700 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಯರಮರಸ್ ವಿದ್ಯುತ್ ಸ್ಥಾವರವು 678 ಮೆಗಾವ್ಯಾಟ್ ಉತ್ಪಾದಿಸಲು ಶಕ್ತವಾಗಿದ್ದು, 1600 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ. ಇದರ ಹೊರತಾಗಿ ಕಲ್ಲಿದ್ದಲು ದಾಸ್ತಾನು ಸಂರಕ್ಷಿಸುವ ಉದ್ದೇಶದಿಂದ ವೈಟಿಪಿಎಸ್ ಮತ್ತು ಬಿಟಿಪಿಎಸ್ ತಲಾ ಒಂದು ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.
ಭವಿಷ್ಯದಲ್ಲಿ ವಿದ್ಯುತ್ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ
ಮುಂಗಾರು ಮಳೆಯಿಂದಾಗಿ ರೈತರು ಈಗ ನೀರಾವರಿ ಪಂಪ್ ಸೆಟ್ಗಳನ್ನು ಬಳಸುತ್ತಿಲ್ಲ. ಆದರೆ ಒಮ್ಮೆ ಮಳೆ ನಿಂತರೆ, ಐಪಿ ಸೆಟ್ಗಳು ಉತ್ಪಾದಿಸುವ ಶಕ್ತಿಯ ಸುಮಾರು 20-30 ಪ್ರತಿಶತವನ್ನು ಬಳಸುವುದರಿಂದ ಸಮಸ್ಯೆ ಉಲ್ಬಣಗೊಳ್ಳುತ್ತದೆ "ಎಂದು ಅಧಿಕಾರಿ ಹೇಳಿದರು. ಸದ್ಯ ಹಗಲಿನಲ್ಲಿ ವಿದ್ಯುತ್ ಬೇಡಿಕೆಯನ್ನು ಸೌರ ಮತ್ತು ಪವನ ಶಕ್ತಿ ಮೂಲಗಳಿಂದ ಪೂರೈಸಲಾಗುತ್ತಿದೆ. ರಾತ್ರಿಯಲ್ಲಿ ನಾವು ಅದನ್ನು ಜಲವಿದ್ಯುತ್ ಮೂಲಕ ನಿರ್ವಹಿಸುತ್ತಿದ್ದೇವೆ. ಇಂಧನ ಇಲಾಖೆಯ ಅಧಿಕಾರಿಗಳು ಕೇವಲ ಎರಡು ಪರಿಹಾರಗಳಿವೆ ಎಂಬ ಪರಿಸ್ಥಿತಿಯನ್ನು ತಿಳಿದುಕೊಳ್ಳಬೇಕು. ಮುಕ್ತ ಮಾರುಕಟ್ಟೆ ಗ್ರಿಡ್ಗಳಿಂದ ವಿದ್ಯುತ್ ಖರೀದಿಸಿ ಅಥವಾ ಮುಕ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಕಲ್ಲಿದ್ದಲನ್ನು ಖರೀದಿಸಿ - ಇವೆರಡೂ ದುಬಾರಿಯಾಗಿದೆ. ಆದರೆ ಕಲ್ಲಿದ್ದಲು ಕೊರತೆ ಹೊಸ ಸಮಸ್ಯೆ ಏನಲ್ಲ," ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಿಲಿಕಾನ್ ಸಿಟಿ ನಾಲ್ಕೂ ವಲಯಗಳಲ್ಲಿ ವಿದ್ಯುತ್ ವ್ಯತ್ಯಯ
ಕಲ್ಲಿದ್ದಲು ಕೊರತೆ ವಿದ್ಯುತ್ ಸ್ಥಾವರಗಳ ಸ್ಥಗಿತದ ಬಿಸಿ ಕರ್ನಾಟಕದ ರಾಜಧಾನಿ ಬೆಂಗಳೂರಿಗೂ ತಟ್ಟಿದಂತೆ ತೋರುತ್ತಿದೆ. ಮಂಗಳವಾರ ಸಿಲಿಕಾನ್ ಸಿಟಿಯ ನಾಲ್ಕೂ ದಿಕ್ಕುಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಈ ಮಧ್ಯೆ ಬೆಂಗಳೂರಿನಲ್ಲಿರುವ ಹಲವು ಪ್ರದೇಶಗಳಲ್ಲಿ ಅಕ್ಟೋಬರ್ 12ರ ಮಂಗಳವಾರ ವಿದ್ಯುತ್ ಸ್ಥಗಿತವನ್ನು ಎದುರಿಸಲಿದೆ ಎಂದು ಸರ್ಕಾರಿ ಸ್ವಾಮ್ಯದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದೆ.
ದಕ್ಷಿಣ ವಲಯ
ಬೆಂಗಳೂರು ದಕ್ಷಿಣ ವಲಯದ ಜೆಪಿ ನಗರ 3ನೇ ಹಂತ ಮತ್ತು ಜಯನಗರ ವಿಭಾಗದ ಬಿಜಿ ರಸ್ತೆ, ರಾಘವೇಂದ್ರ ಅಪಾರ್ಟ್ ಮೆಂಟ್ ಹಾಗೂ ಕೋರಮಂಗಲದ ಮುನೇಶ್ವರ ಟೆಂಪಲ್ ಪ್ರದೇಶದಲ್ಲಿ ಮಧ್ಯಾಹ್ನ 1.30ರಿಂದ 4 ಗಂಟೆವರೆಗೂ ವಿದ್ಯುತ್ ವ್ಯತ್ಯಯ ಆಗಲಿದೆ. ಅದೇ ರೀತಿ, ಮಂಗಳವಾರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಬಿಕೆ ವೃತ್ತ, ಸುರಭಿ ನಗರ, ಹೊಸ ರಸ್ತೆ, ಕೋನಪ್ಪನ ಅಗ್ರಹಾರ ಮತ್ತು ಕ್ಲಬ್ ರಸ್ತೆ ವೃತ್ತ ಸೇರಿದಂತೆ ಎಚ್ಎಸ್ಆರ್ ಲೇಔಟ್ ವಿಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಜಯನಗರ ವಿಭಾಗದ ಆರ್ಬಿಐ ಲೇಔಟ್, ಎಸ್ಬಿಎಂ ಕಾಲೋನಿ, ಹರಿ ನಗರ, ಈಶ್ವರ ಲೇಔಟ್ ಮತ್ತು ಶಿವಶಕ್ತಿ ನಗರಗಳಂತಹ ಪ್ರದೇಶಗಳು ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆ ದೀರ್ಘಾವಧಿಯ ವಿದ್ಯುತ್ ಕಡಿತವನ್ನು ಎದುರಿಸಬೇಕಾಗುತ್ತದೆ.
ಪಶ್ಚಿಮ ವಲಯ
ರಾಜಾಜಿನಗರ ವಿಭಾಗದ ಗೋವಿಂದರಾಜ ನಗರ, ಕೋಳಿಮನೆ ರಸ್ತೆ, ಸುಬಣ್ಣ ಗಾರ್ಡನ್, ಜಿಕೆಡಬ್ಲ್ಯೂ ಲೇಔಟ್, ವಿನಾಯಕ ಲೇಔಟ್, ಅನುಭವ ನಗರ, ಮಾರುತಿ ನಗರ, ಮತ್ತು ಗಂಗೊಂಡನ ಹಳ್ಳಿ ನಿವಾಸಿಗಳು ಬೆಳಿಗ್ಗೆ 10.30 ರಿಂದ ಸಂಜೆ 5.30 ರವರೆಗೆ ವಿದ್ಯುತ್ ಕಡಿತವನ್ನು ಎದುರಿಸಬೇಕಾಗುತ್ತದೆ. ಆರ್.ಆರ್.ನಗರ ವಿಭಾಗದ ಎಚ್.ಬಿ.ಸಮಾಜ ರಸ್ತೆ ಮತ್ತು ರಂಗನಾಥ ಕಾಲೋನಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 6ರವರೆಗೂ ವಿದ್ಯುತ್ ವ್ಯತ್ಯಯವಾಗಲಿದೆ. ಅದೇ ರೀತಿ, ಶಿರಸಿ ವೃತ್ತದಲ್ಲಿ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆ ಮತ್ತು ದ್ವಾರಕನಗರದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ವಿದ್ಯುತ್ ಕಡಿತವಾಗಲಿದೆ. ಕೆಂಗೇರಿ ವಿಭಾಗದ ಭೂಮಿಕಾ ಲೇಔಟ್, ಪತಂಗಿರಿ ಮತ್ತು ಕೃಷ್ಣಾ ಗಾರ್ಡನ್ ಪ್ರದೇಶದಲ್ಲಿ ಕೂಡ ಮಂಗಳವಾರ ಬೆಳಿಗ್ಗೆ 9 ರಿಂದ ಸಂಜೆ 5 ರ ನಡುವೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಪೂರ್ವ ವಲಯ
ಇಂದಿರಾನಗರ ವಿಭಾಗದ ಹೊಯ್ಸಳ ನಗರ, 11ನೇ ಕ್ರಾಸ್ ಮತ್ತು ಮೀನಾಕ್ಷಿ ದೇವಸ್ಥಾನ ರಸ್ತೆಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ಕಡಿತವಾಗಲಿದೆ. ಶಿವಾಜಿನಗರ ವಿಭಾಗದ ರಾಯಲ್ ಎನ್ಕ್ಲೇವ್ ಮತ್ತು ಪೋನಪ್ಪ ಲೇಔಟ್ ಭಾಗದಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರವರೆಗೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಅದೇ ರೀತಿ, ಭಾರತ್ ನಗರ ಮತ್ತು ಫಾತಿಮಾ ಲೇಔಟ್ ನಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ಮತ್ತು ದೂಪನಹಳ್ಳಿಯ ಕೆಲವು ಭಾಗಗಳಲ್ಲಿ ಮಧ್ಯಾಹ್ನ 2 ರಿಂದ 5 ರವರೆಗೆ ವಿದ್ಯುತ್ ಕಡಿತ ಇರುತ್ತದೆ.
ವಿಧಾನಸೌಧ ವಿಭಾಗದ ರಾಜಭವನ ಮತ್ತು ಮಾಗಡಿ ಮುಖ್ಯರಸ್ತೆಯಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 1.30 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಕನ್ನಿಂಗ್ಹ್ಯಾಮ್ ರಸ್ತೆ ಮತ್ತು ಮೈಸೂರು ರಸ್ತೆಯಲ್ಲಿ ಮಧ್ಯಾಹ್ನ 2.30 ರಿಂದ 5 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಉತ್ತರ ವಲಯ
ಹೆಬ್ಬಾಳ ವಿಭಾಗದ ಕೋಗಿಲು ಲೇಔಟ್, ಅಗ್ರಹಾರ ಮತ್ತು ತಿರುಮೇನಹಳ್ಳಿ ಗ್ರಾಮದ ನಿವಾಸಿಗಳು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ವಿದ್ಯುತ್ ಕಡಿತವನ್ನು ಎದುರಿಸುತ್ತಾರೆ. ಇದೇ ರೀತಿ ಬಾಗಲೂರು ಕ್ರಾಸ್ನಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಮತ್ತು ಎಂಎಲ್ಎ ಲೇಔಟ್ ನಲ್ಲಿ ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ಪವರ್ ಕಟ್ ಆಗಲಿದೆ. ಪೀಣ್ಯ ವಿಭಾಗದಲ್ಲಿ ಪೈಪ್ಲೈನ್ ರಸ್ತೆ, ಪ್ರಶಾಂತನಗರ ಸುತ್ತಮುತ್ತ, ಎಂಟಿಎಸ್ ಕಾಲೋನಿ, ಎಜಿಬಿಜಿ ಲೇಔಟ್, ಜಿಡಿ ನಾಯ್ಡು ಹಾಲ್ ರಸ್ತೆ ಮತ್ತು ಎಂಎಲ್ ಲೇಔಟ್ ಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಮಲ್ಲೇಶ್ವರ ವಿಭಾಗದ ಗಾಯತ್ರಿನಗರ ಮತ್ತು ಇ-ಬ್ಲಾಕ್ ರಾಜಾಜಿನಗರದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರ ನಡುವೆ ವಿದ್ಯುತ್ ಕಡಿತವಾಗಲಿದ್ದು, ಅದೇ ರೀತಿಯ ಸ್ಥಗಿತವನ್ನು ಎಚ್ಎಂಟಿ ಲೇಔಟ್ಗೆ ಬೆಳಿಗ್ಗೆ 10.30 ರಿಂದ ಸಂಜೆ 6 ರವರೆಗೆ ನಿಗದಿಪಡಿಸಲಾಗಿದೆ.