Explained: ಭಾರತದಲ್ಲಿ ಕಲ್ಲಿದ್ದಲು ಬಿಕ್ಕಟ್ಟು ಸುತ್ತಲಿನ ಪ್ರಮುಖ ಬೆಳವಣಿಗೆಗಳು
ದೇಶದಲ್ಲಿನ ಕಲ್ಲಿದ್ದಲು ಕೊರತೆ ಮತ್ತು ವಿದ್ಯುತ್ ಸ್ಥಾವರಗಳ ವಸ್ತುಸ್ಥಿತಿ ಬಗ್ಗೆ ಪ್ರಧಾನಮಂತ್ರಿ ಸಚಿವಾಲಯದ ಕಚೇರಿಯು ಪರಿಶೀಲನೆ ನಡೆಸಿದ್ದು, ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.
ಕಲ್ಲಿದ್ದಲು ಬಿಕ್ಕಟ್ಟು ಸೃಷ್ಟಿ ಹಾಗೂ ದೇಶದಲ್ಲಿ ಸೃಷ್ಟಿಯಾಗುತ್ತಿರುವ ವಿದ್ಯುತ್ ಅಭಾವದ ಸುತ್ತಮುತ್ತಲಿನಲ್ಲಿ ನಡೆಯುತ್ತಿರುವ ಪ್ರಮುಖ ಬೆಳವಣಿಗೆಳು ಮತ್ತು ಕೇಂದ್ರದ ನಾಯಕರು ನೀಡುತ್ತಿರುವ ಸ್ಪಷ್ಟನೆಗಳ ಕುರಿತು ಪ್ರಮುಖ ಅಂಶಗಳನ್ನು ಮುಂದೆ ಪಟ್ಟಿ ಮಾಡಲಾಗಿದೆ.
ಕಲ್ಲಿದ್ದಲು ಬಿಕ್ಕಟ್ಟಿನ ಸುತ್ತ ಬೆಳವಣಿಗೆಗಳು:
* ಪ್ರಸ್ತುತ ಕೋಲ್ ಇಂಡಿಯಾ ಲಿಮಿಟೆಡ್ 22 ದಿನಗಳ ಕಲ್ಲಿದ್ದಲು ದಾಸ್ತಾನು ಹೊಂದಿದೆ. ಸೋಮವಾರ 1.95 ದಶಲಕ್ಷ ಟನ್ ಕಲ್ಲಿದ್ದಲು ಪೂರೈಕೆಯಾಗಿದ್ದು ಇದು ಇಲ್ಲಿಯವರೆಗಿನ ಹೊಸ ದಾಖಲೆಯಾಗಿದೆ. ನಾವು ಕಲ್ಲಿದ್ದಲು ಪೂರೈಕೆ ವೇಗ ಹೆಚ್ಚಿಸುವುದನ್ನು ಮುಂದುವರಿಸುತ್ತೇವೆ. ಮುಂಗಾರು ಮುಗಿದ ನಂತರ ಕಲ್ಲಿದ್ದಲು ಪೂರೈಕೆಯು ಶೀಘ್ರವಾಗಿ ಸುಧಾರಿಸುತ್ತದೆ," ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ವಿದ್ಯುತ್ ವ್ಯತ್ಯಯ: ಕರ್ನಾಟಕದಲ್ಲೂ ಕಗ್ಗತ್ತಲು ಮೂಡಿಸುತ್ತಾ ಕಲ್ಲಿದ್ದಲು!?
* ಜಾಗತಿಕ ಮಾರುಕಟ್ಟೆಯಲ್ಲಿ ಕಲ್ಲಿದ್ದಲು ಬೆಲೆಯು ಪ್ರತಿ ಟನ್ಗೆ 60 ರೂ.ನಿಂದ 190 ರೂಪಾಯಿ ಹೆಚ್ಚಳವಾಯಿತು. ಈ ಮೊದಲು ಆಮದು ಮಾಡಿಕೊಂಡಿದ್ದ ಕಲ್ಲಿದ್ದಲು ಪ್ರಮಾಣವು 15 ರಿಂದ 20 ದಿನಗಳವರೆಗೆ ಸಾಕಾಗುವಷ್ಟಿದ್ದು, ತದನಂತರದಲ್ಲಿ ವಿದ್ಯುತ್ ಉತ್ಪಾದನೆ ಪ್ರಮಾಣ ಕೆಲವೆಡೆ ಇಳಿಮುಖವಾದರೆ ಇನ್ನು ಕೆಲವೆಡೆ ಸ್ಥಗಿತಗೊಂಡಿತು. ಇದರಿಂದಾಗಿ ದೇಶೀಯ ಕಲ್ಲಿದ್ದಲು ಉತ್ಪಾದನೆ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡಿದೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
* ಪ್ರಧಾನಮಂತ್ರಿ ನರೇಂದ್ರ ಮೋದಿ "ವೈಯಕ್ತಿಕವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವ" ಮತ್ತು ವಿದ್ಯುತ್ ವಲಯದಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಕಲ್ಲಿದ್ದಲು ಪೂರೈಕೆ ಮತ್ತು ಹೆಚ್ಚಿನ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಸೇರಿದಂತೆ ದೀರ್ಘಾವಧಿಯ ಪರಿಹಾರದ ಕಡೆಗೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
* ಸರ್ಕಾರದ ಮಾಹಿತಿಯ ಪ್ರಕಾರ, ಉಷ್ಣ ವಿದ್ಯುತ್ ಘಟಕಗಳಲ್ಲಿ ಕಲ್ಲಿದ್ದಲು ದಾಸ್ತಾನು ಪರಿಸ್ಥಿತಿಯು ತೀರಾ ಕೆಟ್ಟದಾಗಿದೆ. ದೇಶದ 135 ಕೇಂದ್ರೀಕೃತ ವಿದ್ಯುತ್ ಕೇಂದ್ರಗಳ ಪೈಕಿ 115 ಘಟಕಗಳು ತೀವ್ರ ಕಲ್ಲಿದ್ದಲು ಕೊರತೆಯನ್ನು ಎದುರಿಸುತ್ತಿದೆ. ಉಳಿದಂತೆ ದೇಶದ 70 ವಿದ್ಯುತ್ ಸ್ಥಾವರಗಳಲ್ಲಿ ನಾಲ್ಕು ದಿನಗಳೊಳಗೆ ಕಲ್ಲಿದ್ದಲು ಖಾಲಿ ಆಗಲಿದೆ.
* ವಿದ್ಯುತ್ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ದೇಶೀಯ ದರ್ಜೆಯೊಂದಿಗೆ ಹೆಚ್ಚಿನ ಕಲ್ಲಿದ್ದಲು ಆಮದು ಮಾಡಿಕೊಳ್ಳುವುದಕ್ಕೆ ವಿದ್ಯುತ್ ಉತ್ಪಾದಕರಿಗೆ ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಲ್ಲಿದ್ದಲು ಬೆಲೆ ಏರಿಕೆಯಾಗುವಂತೆ ಮಾಡಿದೆ. ದೇಶೀಯ ಹಾಗೂ ಸ್ಥಳೀಯ ಕಲ್ಲಿದ್ದಲು ಬಳಸುವ ವಿದ್ಯುತ್ ಸ್ಥಾವರಗಳು ಸ್ವಲ್ಪ ಪ್ರಮಾಣದ ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತಿವೆ. ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾದಿಂದ ಪೂರೈಕೆಯು ಸಾಕಾಗುವುದಿಲ್ಲ, ವಿದ್ಯುತ್ ಬಳಕೆಯಲ್ಲಿ ಹೆಚ್ಚಳವಾಗಿದ್ದು, ಕಲ್ಲಿದ್ದಲು ಆಮದುಗಳ ಮೇಲೆ ಸರ್ಕಾರದ ನೀತಿಯಲ್ಲಿ ಬದಲಾವಣೆಗೆ ಕಾರಣವಾಗುತ್ತಿದೆ.
* ವಿದ್ಯುತ್ ಉತ್ಪಾದಕರು ತಮ್ಮ ಲಾಭಕ್ಕಾಗಿ ಪರಿಸ್ಥಿತಿಯನ್ನು ಬಳಸಿಕೊಂಡು ಹೆಚ್ಚಿನ ಬೆಲೆಗೆ ವಿದ್ಯುತ್ ಮಾರಾಟ ಮಾಡುವುದು ಕಂಡುಬಂದರೆ ಅಂಥ ಉತ್ಪಾದಕರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ವಿದ್ಯುತ್ ಸಚಿವಾಲಯವು ರಾಜ್ಯಗಳಿಗೆ ಎಚ್ಚರಿಸಿದೆ.
* ಕೆಲವು ರಾಜ್ಯಗಳು, ತಮ್ಮ ಗ್ರಾಹಕರಿಗೆ ವಿದ್ಯುತ್ ಪೂರೈಸುವ ಬದಲು, ಲೋಡ್ ಶೆಡ್ಡಿಂಗ್ ಎಂದು ಕರೆಯಲ್ಪಡುವ ರೋಲಿಂಗ್ ವಿದ್ಯುತ್ ಕಡಿತವನ್ನು ವಿಧಿಸುತ್ತಿವೆ ಮತ್ತು ಇಂಧನ ವಿನಿಮಯ ಕೇಂದ್ರಗಳಿಗೆ ಹೆಚ್ಚಿನ ಬೆಲೆಗೆ ವಿದ್ಯುತ್ ಮಾರಾಟ ಮಾಡುತ್ತಿವೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಈ ರೀತಿ ನಡೆದುಕೊಳ್ಳುವ ರಾಜ್ಯಗಳು ಫೆಡರಲ್ ಸರಬರಾಜು ಮಾಡಿದ ವಿದ್ಯುತ್ ಅನ್ನು ಹಂಚಿಕೆ ಮಾಡುತ್ತವೆ, ಇದನ್ನು ಹಂಚಿಕೆಯಾಗದ ವಿದ್ಯುತ್ ಎಂದು ಕರೆಯಲಾಗುತ್ತದೆ ಎಂದು ಸಚಿವಾಲಯ ಹೇಳಿದೆ.
* ರಾಜ್ಯಗಳು ತಮ್ಮ ಗ್ರಾಹಕರಿಗೆ ಸೇವೆ ಸಲ್ಲಿಸದೇ ಇದ್ದಲ್ಲಿ "ವಿದ್ಯುತ್ ವಿನಿಮಯ ಕೇಂದ್ರಗಳಲ್ಲಿ ಹೆಚ್ಚಿನ ದರದಲ್ಲಿ ವಿದ್ಯುತ್ ಮಾರಾಟ ಮಾಡುತ್ತಿದ್ದರೆ, ಅಂತಹ ರಾಜ್ಯಗಳ ಹಂಚಿಕೆಯಾಗದ ಶಕ್ತಿಯನ್ನು ಹಿಂತೆಗೆದುಕೊಳ್ಳಲಾಗುತ್ತದೆ ಮತ್ತು ಇತರ ಅಗತ್ಯ ರಾಜ್ಯಗಳಿಗೆ ಹಂಚಲಾಗುತ್ತದೆ" ಎಂದು ಸಚಿವಾಲಯ ಹೇಳಿದೆ.
* ಕಳೆದ ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕಲ್ಲಿದ್ದಲು ಮತ್ತು ವಿದ್ಯುತ್ ಸಚಿವಾಲಯಗಳ ಉಸ್ತುವಾರಿ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ಆರ್ ಕೆ ಸಿಂಗ್ ಭೇಟಿ ಮಾಡಿದರು. ವಾರಾಂತ್ಯದ ವಿದ್ಯುತ್ ಕಡಿತದ ನಂತರ ಅನೇಕ ರಾಜ್ಯಗಳು ಕಳವಳ ವ್ಯಕ್ತಪಡಿಸಿವೆ. ದೆಹಲಿ, ಮಹಾರಾಷ್ಟ್ರ, ಕೇರಳ, ಪಂಜಾಬ್, ರಾಜಸ್ಥಾನ, ಆಂಧ್ರಪ್ರದೇಶ, ಬಿಹಾರ ಮತ್ತು ತಮಿಳುನಾಡುಗಳು ಬಿಕ್ಕಟ್ಟು ಎದುರಿಸುತ್ತಿವೆ ಎಂದು ಮನದಟ್ಟು ಮಾಡಿದರು.
* ಕಲ್ಲಿದ್ದಲು ಕೊರತೆ ಕುರಿತು ಚರ್ಚೆಗೆ ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಭೆ ನಡೆಸಿದರು. ಕೇಂದ್ರ ವಿದ್ಯುತ್ ಸಚಿವ ಆರ್ ಕೆ ಸಿಂಗ್, ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಮತ್ತು ಉತ್ತರ ವಿಭಾಗದಲ್ಲಿ ಎರಡೂ ಸಚಿವಾಲಯಗಳ ಉನ್ನತ ಅಧಿಕಾರಿಗಳೊಂದಿಗೆ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಚರ್ಚೆ ನಡೆಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ನಂತರ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಹ್ಲಾದ್ ಜೋಶಿ, "ಅಕ್ಟೋಬರ್ 21ರ ನಂತರ, ನಾವು 2 ಮಿಲಿಯನ್ ಟನ್ಗಳಷ್ಟು ಕಲ್ಲಿದ್ದಲನ್ನು ಪೂರೈಸಲು ಪ್ರಯತ್ನಿಸುತ್ತೇವೆ" ಎಂದು ಹೇಳಿದ್ದಾರೆ.
* ಭಾರತದ ವಿದ್ಯುತ್ ಉತ್ಪಾದನೆಯ ಕಲ್ಲಿದ್ದಲು ಸುಮಾರು 70 ಪ್ರತಿಶತದಷ್ಟಿದ್ದು, ಮುಕ್ಕಾಲು ಭಾಗವನ್ನು ದೇಶೀಯವಾಗಿ ಗಣಿಗಾರಿಕೆ ಮಾಡಲಾಗುತ್ತದೆ. ದಾಖಲೆಯ ಕಲ್ಲಿದ್ದಲು ಉತ್ಪಾದನೆಯ ವರ್ಷದಲ್ಲಿ ಬಿಕ್ಕಟ್ಟು ಸೃಷ್ಟಿಗೆ ಗಣಿಗಳಿಂದ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಇಂಧನದ ಚಲನೆಯ ಮೇಲೆ ಪರಿಣಾಮ ಬೀರುವುದಕ್ಕೆ ಮಳೆಯೇ ಕಾರಣ ಎಂದು ಹೇಳಲಾಗುತ್ತಿದೆ.
* ಬಿಕ್ಕಟ್ಟನ್ನು ಹೆಚ್ಚಿಸುವುದಕ್ಕಾಗಿ ಆಮದು ಮಾಡಿಕೊಂಡಿರುವ ಕಲ್ಲಿದ್ದಲನ್ನು ಬಳಸುವ ವಿದ್ಯುತ್ ಸ್ಥಾವರಗಳು ತಮ್ಮ ಉತ್ಪಾದನೆಯನ್ನು ಕಡಿಮೆ ಮಾಡಿವೆ. ಅಥವಾ ಅಂತಾರಾಷ್ಟ್ರೀಯ ಇಂಧನ ಬೆಲೆಗಳ ಏರಿಕೆಯಿಂದಾಗಿ ವಿದ್ಯುತ್ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿವೆ.