ದುಬಾರಿ ದುನಿಯಾ: 5 ರೂ ವಿದ್ಯುತ್ಗೆ 20 ರೂ ನೀಡುತ್ತಿರುವ ರಾಜ್ಯಗಳು!
ನವದೆಹಲಿ, ಅಕ್ಟೋಬರ್ 14: ಭಾರತದ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಅಗತ್ಯ ಕಲ್ಲಿದ್ದಲು ಪೂರೈಕೆ ಮಾಡುವುದಕ್ಕಾಗಿ ಕೇಂದ್ರ ಸರ್ಕಾರ ಹರಸಾಹಸ ಪಡುತ್ತಿದೆ. ಈ ಮಧ್ಯೆ ವಿದ್ಯುತ್ ಕಡಿತ ಸಮಸ್ಯೆ ಎದುರಿಸುತ್ತಿರುವ ಹಲವು ರಾಜ್ಯಗಳು ಪವರ್ ಕಟ್ ತೊಂದರೆಯಿಂದ ಪಾರಾಗಲು ದುಬಾರಿ ಬೆಲೆ ತೆರುತ್ತಿವೆ. ವಿದ್ಯುತ್ ಕೊರತೆ ನೀಗಿಸಿಕೊಳ್ಳಲು ಹಲವು ರಾಜ್ಯಗಳು ರಾಷ್ಟ್ರೀಯ ವಿನಿಮಯದಿಂದ ವಿದ್ಯುತ್ ಖರೀದಿಸುವುದಕ್ಕೆ ದುಬಾರಿ ಬೆಲೆ ನೀಡುತ್ತಿವೆ.
15 ನಿಮಿಷಗಳ ನೈಜ-ಸಮಯದ ಬ್ಲಾಕ್ಗಳಿಗೆ ಟೆಂಡರ್ಗಳನ್ನು ಭಾರತೀಯ ಇಂಧನ ವಿನಿಮಯ ಕೇಂದ್ರವು ಮಾರಾಟಕ್ಕೆ 1.5 ಗಂಟೆಗಳ ಮೊದಲು ಆಹ್ವಾನ ನೀಡಿತ್ತು. ಈ ಹಂತದಲ್ಲಿ ಸಾಮಾನ್ಯವಾಗಿ ಪ್ರತಿ ಯೂನಿಟ್ಗೆ 5-6 ರೂಪಾಯಿ ನೀಡಬೇಕಾಗಿತ್ತು. ಆದರೆ ರಾಜ್ಯಗಳು ಎದುರಿಸುತ್ತಿರುವ ಕಲ್ಲಿದ್ದಲು ಬಿಕ್ಕಟ್ಟಿನಿಂದಾಗಿ ವಿದ್ಯುತ್ ದರವು ಯೂನಿಟ್ಗೆ 20 ರೂಪಾಯಿಗೆ ಏರಿಕೆಯಾಗಿದೆ.
Explained: ಭಾರತದಲ್ಲಿ ಕಲ್ಲಿದ್ದಲು ಬಿಕ್ಕಟ್ಟು ಸುತ್ತಲಿನ ಪ್ರಮುಖ ಬೆಳವಣಿಗೆಗಳು
ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಹಲವು ರಾಜ್ಯಗಳು ಒಂದು ಯೂನಿಟ್ ವಿದ್ಯುತ್ ಖರೀದಿಗೆ ಒಂದಕ್ಕೆ ನಾಲ್ಕರಿಂದ ಐದು ಪಟ್ಟು ಹಣವನ್ನು ನೀಡುತ್ತಿವೆ. ಆ ಮೂಲಕ ರಾಜ್ಯವನ್ನು ವಿದ್ಯುತ್ ಕಡಿತ ಸಮಸ್ಯೆಯಿಂದ ಪಾರು ಮಾಡುವುದಕ್ಕೆ ಮುಂದಾಗಿದೆ. ಯಾವ ರಾಜ್ಯಗಳು ವಿದ್ಯುತ್ ಖರೀದಿಸಲು ಎಷ್ಟು ಹಣವನ್ನು ನೀಡುತ್ತಿವೆ?, ಯಾವ ರಾಜ್ಯಗಳಲ್ಲಿ ಎಷ್ಟು ಪ್ರಮಾಣದ ವಿದ್ಯುತ್ ಕೊರತೆಯಿದೆ?, ಕಲ್ಲಿದ್ದಲು ಕೊರತೆ ನೀಗಿಸುವ ಬಗ್ಗೆ ಕೇಂದ್ರ ಸರ್ಕಾರ ಏನು ಹೇಳುತ್ತಿದೆ ಎಂಬುದರ ಕುರಿತು ಒಂದು ವಿಸ್ತೃತ ವರದಿಗಾಗಿ ಮುಂದೆ ಓದಿ.
ಆಂಧ್ರ ಪ್ರದೇಶದಿಂದ ಗರಿಷ್ಠ ಬೆಲೆಗೆ ವಿದ್ಯುತ್ ಖರೀದಿ
ಆಂಧ್ರ ಪ್ರದೇಶ ಸರ್ಕಾರವು ಕಳೆದ ಬುಧವಾರ ಸಂಜೆ 6.30 ರಿಂದ 6.45 ರವರೆಗೆ ಪ್ರತಿ ನಿಮಿಷಕ್ಕೆ ಪ್ರತಿ ಯೂನಿಟ್ಗೆ ರೂ. 20 ರಂತೆ 2,102 ಮೆಗಾವ್ಯಾಟ್ನ್ನು ಖರೀದಿಸಿದೆ. ಸಂಜೆ 7 ರಿಂದ 7.15ರವರೆಗೂ ಖರೀದಿಸಿದ ವಿದ್ಯುತ್ ಬ್ಲಾಕ್ ಗೂ ಅದೇ ದರವನ್ನು ಪಾವತಿಸಲಾಗಿದೆ. ಮಂಗಳವಾರ ಒಂದು ಯೂನಿಟ್ಗೆ 20 ರೂ.ಗಳಂತೆ 15-ನಿಮಿಷದ ಎರಡು ಬ್ಲಾಕ್ಗಳಲ್ಲಿ 2,000 MW ಅನ್ನು ಖರೀದಿಸಲಾಗಿತ್ತು. ರಾಜ್ಯವು ಖಾಸಗಿ ಕಂಪನಿಗಳಿಂದ ಸರಾಸರಿ 28-40 ದಶಲಕ್ಷ ಯೂನಿಟ್ ವಿದ್ಯುತ್ ಖರೀದಿಸಿ ಅದನ್ನು ಪ್ರತಿದಿನ ಮಾರುಕಟ್ಟೆಯಲ್ಲಿ ವಿನಿಮಯ ಮಾಡಿಕೊಳ್ಳಲಾಗುತ್ತಿದೆ.
ರಾಜಸ್ಥಾನ, ಕೇರಳದಲ್ಲಿ ವಿದ್ಯುತ್ ಖರೀದಿ ದರ ಎಷ್ಟಿದೆ?
ಕೇರಳ ಸರ್ಕಾರ ಕೂಡ ಒಂದು ದಿನದ ಬಳಕೆ ಹಾಗೂ ವಿನಿಮಯಕ್ಕಾಗಿ 0.4 ರಿಂದ 1.10 ದಶಲಕ್ಷ ಯೂನಿಟ್ ವಿದ್ಯುತ್ ಖರೀದಿ ಮಾಡುತ್ತಿದೆ. ಪ್ರತಿ ಯೂನಿಟ್ಗೆ 20 ರೂಪಾಯಿ ಹಣ ಪಾವತಿ ಮಾಡಲಾಗುತ್ತಿದೆ. ಅದೇ ರೀತಿ ರಾಜಸ್ಥಾನ ಸರ್ಕಾರ ಕೂಡ ವಿದ್ಯುತ್ ಖರೀದಿಗೆ ನಾಲ್ಕು ಪಟ್ಟು ಹಣವನ್ನು ನೀಡುತ್ತಿದೆ. ಒಂದು ದಿನದ ಬಳಕೆಗಾಗಿ ರಾಜ್ಯ ಸರ್ಕಾರ 4 ಕೋಟಿ ಯೂನಿಟ್ ವಿದ್ಯುತ್ ಖರೀದಿಸುತ್ತಿದ್ದು, ಸಾಮಾನ್ಯ ಸಂದರ್ಭಗಳಲ್ಲಿ 3 ರಿಂದ 4 ರೂಪಾಯಿ ನೀಡುಲಾಗುತ್ತಿದ್ದ ಒಂದು ಯೂನಿಟ್ಗೆ ಈಗ 15 ರಿಂದ 20 ರೂಪಾಯಿ ಪಾವತಿ ಮಾಡುತ್ತಿದೆ. ಇದರಿಂದಾಗಿ ಪ್ರತಿನಿತ್ಯ ಅನಗತ್ಯವಾಗಿ 80 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಲಾಗುತ್ತಿದೆ.
ಹರಿಯಾಣದಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ 8,382 ಮೆಗಾವ್ಯಾಟ್ ಇದ್ದು 8,319 ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದ್ದು, ಕೇವಲ 63 ಮೆಗಾವಾಟ್ ವಿದ್ಯುತ್ ಕೊರತೆ ಕಂಡು ಬಂದಿದೆ. ರಾಜಸ್ಥಾನದ ಗರಿಷ್ಠ ಬೇಡಿಕೆ 12,534 ಮೆಗಾವ್ಯಾಟ್ ಆಗಿದ್ದು, 12,262 ಮೆಗಾವ್ಯಾಟ್ ಬೇಡಿಕೆಯನ್ನು ಪೂರೈಸಲಾಗುತ್ತಿದೆ. 272 ಮೆಗಾವ್ಯಾಟ್ ಕೊರತೆ ಎದುರಿಸಲಾಗುತ್ತಿದೆ.
ವಿದ್ಯುತ್ ಇಲ್ಲದೇ ಪಂಜಾಬ್ನಲ್ಲಿ ಶೋಚನೀಯ ಸ್ಥಿತಿ
ದಸರಾ ಹಬ್ಬದ ಸಮಯದಲ್ಲಿ ಯಾವುದೇ ರೀತಿ ವಿದ್ಯುತ್ ಕಡಿತ ಅಥವಾ ವ್ಯತ್ಯಯ ಸೃಷ್ಟಿಯಾಗದಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭರವಸೆ ನೀಡಿದ್ದಾರೆ. ಈ ಹಿನ್ನೆಲೆ ರಾಜ್ಯ ಸರ್ಕಾರವು ಪ್ರತಿ ಯೂನಿಟ್ಗೆ 20 ರೂ.ಗಳಂತೆ 1,200 ಮೆಗಾವ್ಯಾಟ್ಗಳನ್ನು ಖರೀದಿಸುತ್ತಿದೆ. ಪಂಜಾಬ್ನಲ್ಲಿ ಕಲ್ಲಿದ್ದಲು ಕೊರತೆ ಮತ್ತು ವಿದ್ಯುತ್ ಅಭಾವದಿಂದ ಶೋಚನೀಯ ಪರಿಸ್ಥಿತಿ ಸೃಷ್ಟಿಯಾಗಿದೆ. ಪಂಜಾಬ್ ಸರ್ಕಾರ ಕಳೆದ 13 ದಿನಗಳಲ್ಲಿ ವಿದ್ಯುತ್ ಖರೀದಿ ಮತ್ತು ವಿನಿಮಯಕ್ಕಾಗಿ 282 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಿದೆ.
ಉತ್ತರ ಪ್ರಾದೇಶಿಕ ಲೋಡ್ ರವಾನೆ ಕೇಂದ್ರ (NRLDC) ಬಿಡುಗಡೆ ಮಾಡಿದ ವರದಿಯ ಪ್ರಕಾರ, ಪಂಜಾಬ್ನಲ್ಲಿ 11,046 ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯ ಇರುವ ಪ್ರದೇಶಗಳಲ್ಲಿ ಗ್ರಾಹಕರಿಗೆ ಕೇವಲ 8,751 ಮೆಗಾವ್ಯಾಟ್ ವಿದ್ಯುತ್ ಸರಬರಾಜು ಮಾಡುವುದಕ್ಕೆ ಮಾತ್ರ ಸಾಧ್ಯವಾಗುತ್ತಿದೆ. ಬಾಕಿ ಉಳಿದ 2,295 ಮೆಗಾವ್ಯಾಟ್ ಕೊರತೆಯನ್ನು ವಿದ್ಯುತ್ ಕಡಿತವಾಗಿ ಪರಿವರ್ತನೆ ಮಾಡಲಾಗುತ್ತಿದೆ.
ದುಬಾರಿ ದುಡ್ಡಿಗೆ ವಿದ್ಯುತ್ ಖರೀದಿಸುತ್ತಿರುವ ಯುಪಿ
ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲೇ ಉತ್ತರ ಪ್ರದೇಶವು ವಿದ್ಯುತ್ ಕ್ಷಾಮ ಎದುರಿಸುತ್ತಿದೆ. ವಿದ್ಯುತ್ ಪೂರೈಕೆಗಾಗಿ ರಾಜ್ಯ ಸರ್ಕಾರ ಹೆಣಗಾಡುತ್ತಿರುವುದರ ಬಗ್ಗೆ ವರದಿಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಲೋಡ್ ಶೆಡ್ಡಿಂಗ್ ಮಾಡುತ್ತಿರುವುದು ಸರ್ಕಾರಕ್ಕೆ ತಲೆನೋವು ತಂದಿಟ್ಟಿದೆ. ಬುಧವಾರ 1800 MW ಅನ್ನು ಪ್ರತಿ ಯೂನಿಟ್ಗೆ 10.55 ರೂಪಾಯಿ ಹಾಗೂ ಮಂಗಳವಾರ ಪ್ರತಿ ಯೂನಿಟ್ಗೆ 14.06 ರೂಪಾಯಿ ಹಣ ಪಾವತಿಸಿದೆ. ಕಲ್ಲಿದ್ದಲಿನ ಕೊರತೆಯಿಂದಾಗಿ ಸುಮಾರು ಎಂಟು ಥರ್ಮಲ್ ಘಟಕಗಳನ್ನು ಮುಚ್ಚಲಾಗಿದೆ. ರಾಜ್ಯ ಸರ್ಕಾರ ಒಂದು ಯೂನಿಟ್ಗೆ ಸುಮಾರು 13 ರೂ.ಗೆ ನೀಡಿ ವಿದ್ಯುತ್ ಖರೀದಿಸುತ್ತಿದ್ದು, ಅದಾಗ್ಯೂ ಬೇಡಿಕೆ ಮತ್ತು ಪೂರೈಕೆಯ ನಡುವೆ ತೀವ್ರ ಅಭಾವ ಸೃಷ್ಟಿಯಾಗಿದೆ.
ಉತ್ತರ ಪ್ರದೇಶದಲ್ಲಿ 19,843 ಮೆಗಾವ್ಯಾಟ್ ವಿದ್ಯುತ್ ಪೂರೈಸುವ ಬೇಡಿಕೆಯಿದ್ದು, ಈ ಪೈಕಿ ರಾಜ್ಯವು 18,973 ಮೆಗಾವ್ಯಾಟ್ ಅನ್ನು ಮಾತ್ರ ಪೂರೈಸುತ್ತಿದ್ದು, 870 ಮೆಗಾವ್ಯಾಟ್ ಕೊರತೆಯನ್ನು ಎದುರಿಸುತ್ತಿದೆ. ಉತ್ತರಾಖಂಡವು 2,052 ಮೆಗಾವ್ಯಾಟ್ ಗರಿಷ್ಠ ಬೇಡಿಕೆಯನ್ನು ಹೊಂದಿದ್ದು, 1,862 ಮೆಗಾವ್ಯಾಟ್ ಅನ್ನು ಪೂರೈಸುವುದಕ್ಕಷ್ಟೇ ಶಕ್ತವಾಗಿದೆ. ಹಿಮಾಚಲ ಪ್ರದೇಶಕ್ಕೆ 1551 ಮೆಗಾವ್ಯಾಟ್ ಬೇಡಿಕೆಯನ್ನು ಪೂರೈಸಿದ್ದರಿಂದ ಯಾವುದೇ ಕೊರತೆಯಿಲ್ಲ, ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 200 ಮೆಗಾವ್ಯಾಟ್ ವಿದ್ಯುತ್ ಕೊರತೆ ಎದುರಿಸಲಾಗುತ್ತಿದೆ.
ನವೀಕರಿಸಬಹುದಾದ ವಿದ್ಯುತ್ ಉತ್ಪಾದಿಸುತ್ತಿರುವ ಕರ್ನಾಟಕ
ಒಂದು ಕಡೆಯಲ್ಲಿ ವಿದ್ಯುತ್ ಕ್ಷಾಮ ಸೃಷ್ಟಿಯಿಂದಾಗಿ ದುಬಾರಿ ಬೆಲೆಗೆ ರಾಜ್ಯಗಳು ವಿದ್ಯುತ್ ಖರೀದಿ ಮಾಡುತ್ತಿವೆ. ಈ ಮಧ್ಯೆ ಕರ್ನಾಟಕವು ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಏರಿಕೆಯಿಂದ ವಿದ್ಯುತ್ ಅನ್ನು ಗ್ರಿಡ್ಗೆ ಮಾರಾಟ ಮಾಡುತ್ತಿದೆ. ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್ನ ಹಿರಿಯ ಅಧಿಕಾರಿಯ ಪ್ರಕಾರ, ಸೌರಶಕ್ತಿಯ ಮಾರಾಟ ದರವು ಭಾರತೀಯ ವಿದ್ಯುತ್ ವಿನಿಮಯ ಮತ್ತು ಪವರ್ ಎಕ್ಸ್ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ ಮೇಲೆ ಅವಲಂಬಿತವಾಗಿರುತ್ತದೆ. ಅಲ್ಲಿ ಪ್ರತಿ 15 ನಿಮಿಷಕ್ಕೆ ಬೆಲೆ ಏರಿಳಿತವಾಗುತ್ತದೆ.
ಒಡಿಶಾ ಮತ್ತು ತೆಲಂಗಾಣ ರಾಜ್ಯಗಳು ಕೂಡ ರಾಷ್ಟ್ರೀಯ ಗ್ರಿಡ್ಗೆ ವಿದ್ಯುತ್ ಮಾರಾಟ ಮಾಡುತ್ತವೆ. ಗುರುವಾರ ಒಡಿಶಾ ಸುಮಾರು 500 ಮೆಗಾವ್ಯಾಟ್ ವಿದ್ಯುತ್ ಮಾರಾಟವಾಗಿದೆ. "ತೆಲಂಗಾಣ ಕಳೆದ ಎರಡು ತಿಂಗಳಿನಿಂದ ವಿದ್ಯುತ್ ಮಾರಾಟ ಮಾಡುತ್ತಿದೆ" ಎಂದು ಟಿಎಸ್ ಟ್ರಾನ್ಸ್ಕೊ ಮತ್ತು ಜೆನ್ಕೊ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ದೇವುಲಪಲ್ಲಿ ಪ್ರಭಾಕರ್ ರಾವ್ ಹೇಳಿದ್ದಾರೆ.
ತಮಿಳುನಾಡು 2010 ರಿಂದ ಸ್ಪಾಟ್ ಪ್ರೈಸ್ ಸಿಸ್ಟಮ್ ಮೂಲಕ ಖಾಸಗಿ ಕಂಪನಿಗಳಿಂದ ವಿದ್ಯುತ್ ಖರೀದಿಸಿಲ್ಲ. ಆದರೆ ಚೆನ್ನೈನಲ್ಲಿರುವ ತಮಿಳುನಾಡು ಜನರೇಷನ್ ಮತ್ತು ಡಿಸ್ಟ್ರಿಬ್ಯೂಷನ್ ಕಾರ್ಪೊರೇಷನ್ ಲಿಮಿಟೆಡ್ (ಟ್ಯಾಂಗೆಡ್ಕೊ)ನಲ್ಲಿ ಕಲ್ಲಿದ್ದಲು ಬಿಕ್ಕಟ್ಟು ಮುಂದುವರಿದರೆ ಇಂಧನ ಸಂಗ್ರಹಿಸಲು ಸ್ಪಾಟ್ ಮಾರುಕಟ್ಟೆಗೆ ಹೋಗಬೇಕಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿದ್ಯುತ್ ಉತ್ಪಾದನೆ ಹೆಚ್ಚಿಸುವಂತೆ ಕೋರಿಕೆ
ಕೇಂದ್ರ ಸರ್ಕಾರವು ದುರ್ಗಾ ಪೂಜೆ ವೇಳೆಗೆ ವಿದ್ಯುತ್ ಉತ್ಪಾದನಾ ಘಟಕಗಳಿಗೆ ದಿನಕ್ಕೆ 1.55 ರಿಂದ 1.60 ದಶಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಪೂರೈಕೆ ಮಾಡಬೇಕು. ಅಕ್ಟೋಬರ್ 20ರ ನಂತರ ಈ ಪ್ರಮಾಣವನ್ನು 1.70 ದಶಲಕ್ಷ ಮೆಟ್ರಿಕ್ ಟನ್ ಗೆ ಹೆಚ್ಚಿಸಬೇಕು ಎಂದು ಕೋಲ್ ಇಂಡಿಯಾ ಲಿಮಿಡೆಟ್ ಕಂಪನಿಗೆ ಕೇಂದ್ರ ಸರ್ಕಾರ ತಿಳಿಸಿದೆ. ವಿದ್ಯುತ್ ಉತ್ಪಾದಿಸುವ ಸ್ಥಾವರಗಳ ಬೇಡಿಕೆಯನ್ನು ಪೂರೈಸಲು ದೇಶದಲ್ಲಿ ಸಾಕಷ್ಟು ಇಂಧನ ಲಭ್ಯವಿರುವುದಾಗಿ ಕಲ್ಲಿದ್ದಲು ಸಚಿವಾಲಯವು ಭಾನುವಾರ ಭರವಸೆ ನೀಡಿದೆ. ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಅಡ್ಡಿ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದೆ.