ಎದುರಾಯ್ತು ಹೊಸ ಸವಾಲು: 'BSY' ಕೊಟ್ಟಿದ್ದ ಮಾತು ಉಳಿಸಿಕೊಳ್ಳುವ ಇಕ್ಕಟ್ಟಿನಲ್ಲಿ 'ಬಸವರಾಜ ಬೊಮ್ಮಾಯಿ'
ಬೆಂಗಳೂರು, ಆ. 26: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊಟ್ಟಿದ್ದ ಮಾತು ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಜಾತಿ ಗಣತಿ ಮಾಡಿರುವ ಕಾಂತರಾಜ ವರದಿಯನ್ನು ಜಾರಿಗೆ ತನ್ನಿ ಹಾಗೂ ಬಲಿಷ್ಠ ಸಮುದಾಯಗಳನ್ನು ಪ್ರವರ್ಗ 2(ಎ) ಪಟ್ಟಿಗೆ ಸೇರಿಸಬಾರದು ಎಂದು ಆಗ್ರಹಿಸಿ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿ ಮಾಡಿ ಆಗ್ರಹಿಸಿತ್ತು. ಅದರಲ್ಲಿಯೂ ಲಿಂಗಾಯತ ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯಗಳನ್ನು 2(ಎ) ಪಟ್ಟಿಗೆ ಸೇರಿಸಲೇಬಾರದು ಎಂದು ನಿಯೋಗದಲ್ಲಿದ್ದ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಗೌರವ ಸಲಹೆಗಾರ ಡಾ. ಸಿ. ಎಸ್. ದ್ವಾರಕಾನಾಥ್ ಆಗ್ರಹಿಸಿದ್ದರು. ಜೊತೆಗೆ ಗೌರವ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸೇರಿದಂತೆ ಇತರೆ ಪದಾಧಿಕಾರಿಗಳು ತಮ್ಮ ಸಮುದಾಯಗಳ ಮೀಸಲಾತಿಯನ್ನು ಬೇರೆ ಸಮುದಾಯಗಳಿಗೆ ಹಂಚಬಾರದು ಎಂದಿದ್ದರು.
ಅದಕ್ಕೂ ಮೊದಲು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮಹತ್ವದ ಭರವಸೆ ಕೊಟ್ಟಿದ್ದರು. ಇದೀಗ ಆ ಭರವಸೆಯನ್ನು ಈಡೇರಿಸುವ ಒತ್ತಡದ ಇಕ್ಕಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದ್ದಾರೆ. ಜೊತೆಗೆ ಅತಿ ಹಿಂದುಳಿದ ವರ್ಗಗಳ ಹಿತವನ್ನು ಕಾಯಬೇಕಾದ ಜವಾಬ್ದಾರಿ ಕೂಡ ಅವರ ಮೇಲಿದೆ. ಹೀಗಾಗಿ ಇದೀಗ ಸಿಎಂ ಬೊಮ್ಮಾಯಿಗೆ ಹೊಸ ಸಮಸ್ಯೆ ಎದುರಾಗಿದೆ.
ಪ್ರತಿಜ್ಞಾ ಪಂಚಾಯತ್ ಹೋರಾಟ ಆರಂಭ!
ಪಂಚಮಸಾಲಿ ಸಮುದಾಯಕ್ಕೆೆ 2(ಎ) ಮೀಸಲಾತಿ ಕೊಡುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಲು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಇಂದಿನಿಂದ (ಗುರುವಾರ) ಪ್ರತಿಜ್ಞಾ ಪಂಚಾಯತ್ ಹೋರಾಟ ಆರಂಭವಾಗಲಿದೆ. ಇದೇ ಹಿನ್ನೆಲೆಯಲ್ಲಿ ಮಂಗಳವಾರ ಬೆಂಗಳೂರಿನ ಚಾಲುಕ್ಯ ವೃತ್ತದ ಬಳಿಯ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಲೈ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದಾರೆ. ಮಲೆಮಹದೇಶ್ವರ ಬೆಟ್ಟದಲ್ಲಿ ಆರಂಭವಾಗುವ ಅಭಿಯಾನ ರಾಜ್ಯಾದ್ಯಂತ ನಡೆಯಲಿದೆ.
ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ!
ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ಸಂದರ್ಭದಲ್ಲಿ ಮಾತನಾಡಿದ್ದ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, "2(ಎ) ಮೀಸಲಾತಿಗೆ ಪಂಚಮಸಾಲಿ ಮೀಸಲಾತಿ ಹೋರಾಟ ನಡೆದಿದೆ. ಈಗಾಗಲೇ ಪಾದಯಾತ್ರೆೆ ಮಾಡಿದ್ದೇವೆ. ಅಧಿವೇಶನದಲ್ಲಿ ಆಗಿನ ಸಿಎಂ ಯಡಿಯೂರಪ್ಪ ಆರು ತಿಂಗಳೊಳಗೆ ಬೇಡಿಕೆ ಈಡೇರಿಸುತ್ತೇವೆ ಎಂದಿದ್ದರು. ಅವರು ಕೊಟ್ಟಿದ್ದ ಗಡುವು ಸೆಪ್ಟಂಬರ್ 15ಕ್ಕೆೆ ಮುಗಿಯುತ್ತಿದೆ. ಹೀಗಾಗಿ ನಾವು ಮತ್ತೊಮ್ಮೆ ಹೋರಾಟ ಮಾಡುತ್ತೇವೆ. ಗುರುವಾರದಿಂದ ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದಿಂದ ಪ್ರತಿಜ್ಞಾ ಪಂಚಾಯತ್ ಹೆಸರಲ್ಲಿ ಅಭಿಯಾನ ಆರಂಭಿಸುತ್ತೇವೆ." ಎಂದಿದ್ದಾರೆ.
ಇಕ್ಕಟ್ಟಿಗೆ ಸಿಲುಕಿದ ಸಿಎಂ ಬೊಮ್ಮಾಯಿ!
"ಸೆಪ್ಟಂಬರ್ 30 ರೊಳಗೆ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲವಾದರೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಸಮಾವೇಶ ಮಾಡುತ್ತೇವೆ. ಹಿಂದುಳಿದ ವರ್ಗಗಳ ಆಯೋಗಕ್ಕೆೆ ವರದಿ ಸಲ್ಲಿಸಲು ಸರ್ಕಾರ ಸೂಚನೆ ಕೊಟ್ಟಿದೆ. ಆಯೋಗದ ವರದಿ ಬರುತ್ತಲೇ ಸರ್ಕಾರ ನಮ್ಮ ಬೇಡಿಕೆ ಈಡೇರಿಸಲೇಬೇಕು" ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ. ಇದರಿಂದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಕ್ಕಟ್ಟಿಗೆ ಸಿಲುಕಿದ್ದಾರೆ.
ತ್ರಿಶಂಕು ಸ್ಥಿತಿಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ?
ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬದಲಾಯಿಸಿದರೂ, ಲಿಂಗಾಯತ ಸಮುದಾಯದ ಬೆಂಬಲ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿಯನ್ನಾಗಿಸಿದೆ. ಹೀಗಾಗಿ ಲಿಂಗಾಯತ ಸಮುದಾಯದ ಬೆಂಬಲವನ್ನು ಹಿಡಿದಿಟ್ಟುಕೊಳ್ಳುವುದು ಬೊಮ್ಮಾಯಿ ಅವರಿಗೆ ಅನಿವಾರ್ಯವೂ ಆಗಿದೆ. ಒಂದೆಡೆ ಹಿಂದುಳಿದ ವರ್ಗಗಳ ಹಿತ, ಮತ್ತೊಂದೆಡೆ ಬಲಾಢ್ಯ ಸಮುದಾಯದ ಒತ್ತಡದಲ್ಲಿ ಸಿಎಂ ಬೊಮ್ಮಾಯಿ ಇದ್ದಾರೆ. ಜೊತೆಗೆ ಮೀಸಲಾತಿ ಒದಗಿಸುವುದಾಗಿ ಸಿಂ ಆಗಿದ್ದಾಗ ಯಡಿಯೂರಪ್ಪ ಕೊಟ್ಟಿದ್ದ ಮಾತೂ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಸಿಎಂ ಬೊಮ್ಮಾಯಿ ಅವರಿಗಿದೆ.
ಒಂದೆಡೆ ಹಿಂದುಳಿದ ವರ್ಗದ ಹಿತ ಕಾಪಾಡುವುದು, ಮತ್ತೊಂದೆಡೆ ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಬಿಜೆಪಿಯೊಂದಿಗೆ ಹಿಡಿದಿಟ್ಟುಕೊಳ್ಳುವುದು ಜೊತೆಗೆ ಯಡಿಯೂರಪ್ಪ ಕೊಟ್ಟಿದ್ದ ಮಾತು ಉಳಿಸಿಕೊಳ್ಳುವುದು, ಈ ತ್ರಿಶಂಕು ಸ್ಥಿತಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿಲುಕಿದ್ದಾರೆ. ಹೈಕಮಾಂಡ್ ಸೂಚಿಸಿರುವಂತೆ ಈ ಎಲ್ಲ ಸವಾಲುಗಳನ್ನು ಎದುರಿಸಿ, ಪರಿಹರಿಸುವ ಮೂಲಕ 'ಶಾಡೊ ಸಿಎಂ' ಪಟ್ಟದಿಂದ ಬೊಮ್ಮಾಯಿ ಹೊರಗೆ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಕಾರ್ಯಕರ್ತರಿದ್ದಾರೆ!