ಹವಾನಾ ಸಿಂಡ್ರೋಮ್: ಭಾರತದಲ್ಲಿ ಯುಎಸ್ ಅಧಿಕಾರಿ ಮೇಲೆ ದಾಳಿ ನಡೆಸಿದ್ಯಾರು?
ನವದೆಹಲಿ, ಸೆಪ್ಟೆಂಬರ್ 22: ಭಾರತಕ್ಕೆ ಸೆಪ್ಟೆಂಬರ್ ತಿಂಗಳಿನಲ್ಲಿ ಭೇಟಿ ನೀಡಿದ್ದ ಕೇಂದ್ರೀಯ ಗುಪ್ತಚರ ವಿಭಾಗದ ನಿರ್ದೇಶಕ ವಿಲಿಯಂ ಬರ್ನ್ಸ್ ಜೊತೆ ಆಗಮಿಸಿದ್ದ ಸಿಐಎ ಅಧಿಕಾರಿಯೊಬ್ಬರಲ್ಲಿ ಹವಾನಾ ಸಿಂಡ್ರೋಮ್ಗೆ ಸಂಬಂಧಿಸಿದ ರೋಗದ ಲಕ್ಷಣಗಳು ಗೋಚರಿಸಿವೆ ಎಂದು ವರದಿಯಾಗಿದೆ. ಈ ಸೋಂಕು ಅಮೆರಿಕದ ರಾಜತಾಂತ್ರಿಕರು, ಗೂಢಾಚಾರರು ಮತ್ತು ದೇಶೀಯ ಹಾಗೂ ವಿದೇಶದಲ್ಲಿರುವ ಇತರ ಸರ್ಕಾರಿ ಅಧಿಕಾರಿಗಳಲ್ಲಿ ಕಾಣಿಸಿಕೊಂಡಿದೆ ಎಂದು ಯುಎಸ್ ಮಾಧ್ಯಮಗಳು ವರದಿ ಮಾಡಿವೆ.
ಯುಎಸ್ ಸರ್ಕಾರದಲ್ಲಿ ಇದೊಂದು ಸೋಂಕಿನ ಘಟನೆಯು ಎಚ್ಚರಿಕೆ ಗಂಟೆಯನ್ನು ಬಾರಿಸಿದೆ. ಕೇಂದ್ರೀಯ ಗುಪ್ತಚರ ವಿಭಾಗದ ಕೆಲವು ಅಧಿಕಾರಿಗಳು ರಾಷ್ಟ್ರದ ಉನ್ನತ ಗೂಢಾಚಾರಿಕೆಗಾಗಿ ನೇರವಾಗಿ ಕೆಲಸ ಮಾಡುವವರು ಸೇರಿದಂತೆ ಯಾರೂ ಸುರಕ್ಷಿತವಾಗಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.
2021ರ ವೇಳೆಗೆ ಪ್ರತಿ ದೇಶ 40% ಜನಸಂಖ್ಯೆಗೆ ಲಸಿಕೆ ಗುರಿ ತಲುಪಬೇಕು; ಐಎಂಎಫ್
ಯುಎಸ್ ಗುಪ್ತಚರ ವಿಭಾಗದ ನಿರ್ದೇಶಕ ವಿಲಿಯಮ್ಸ್ ಬರ್ನ್ಸ್ ಜೊತೆಗೆ ಪ್ರಯಾಣಿಸಿದ ಕಾರಣಕ್ಕೆ ಸಿಐಎ ಅಧಿಕಾರಿಯನ್ನು ಗುರಿಯಾಗಿಸಿಕೊಳ್ಳಲಾಯಿತೇ ಅಥವಾ ಬೇರೆ ಕಾರಣಕ್ಕೆ ಈ ಘಟನೆ ನಡೆದಿದೆಯೇ ಎಂಬುದರ ಬಗ್ಗೆ ಖಾತ್ರಿಯಾಗಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಒಂದು ವೇಳೆ ಎದುರಾಳಿ ಗುಪ್ತಚರ ಸೇನೆಯಿಂದಾಗಿ ಈ ಘಟನೆ ಸಂಭವಿಸಿದ್ದರೆ, ಆ ಅಧಿಕಾರಿ ಬರ್ನ್ಸ್ ಜೊತೆ ಪ್ರಯಾಣಿಸುತ್ತಿರುವುದು ತಿಳಿದಿರಲಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಅಸಲಿಗೆ ಏನಿದು ಹವಾನಾ ಸಿಂಡ್ರೋಮ್?, ಈ ಸೋಂಕಿನ ಲಕ್ಷಣಗಳೇನು?, ರೋಗದ ಕುರಿತು ತಿಳಿದುಕೊಳ್ಳಬೇಕಾದ ಮಹತ್ವದ ವಿಷಯಗಳನ್ನು ಮುಂದೆ ವಿವರಿಸಲಾಗಿದೆ.
"ಯುಎಸ್ ಪ್ರತಿ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ"
ಭಾರತದಲ್ಲಿ ಹವಾನಾ ಪ್ರಕರಣ ದೃಢವಾಗಿರುವುದನ್ನು ಸಿಐಎ ವಕ್ತಾರರು ನಿರಾಕರಿಸಿದ್ದಾರೆ, ಆದರೆ ಯುಎಸ್ ಸರ್ಕಾರ ಮತ್ತು ಸಂಸ್ಥೆಯು ಪ್ರತಿಯೊಂದು ಘಟನೆಯನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಹೇಳಿದ್ದಾರೆ. ಸಿಐಎ ಅಧಿಕಾರಿಗಳಿಗೆ ಅಗತ್ಯವಾದ ಆರೈಕೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ರೋಗದ ತಳಮಟ್ಟಕ್ಕೆ ಹೋಗುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ನಿರ್ದೇಶಕ ಬರ್ನ್ಸ್ ಹೇಳಿದ್ದಾರೆ. ಅಲ್ಲದೇ, ಘಟನೆಗಳ ಮೂಲವನ್ನು ನಿರ್ಧರಿಸುವ ಪ್ರಯತ್ನಗಳನ್ನು ಮುಂದುವರಿಸಬೇಕಿದೆ. ನಮ್ಮ ತಜ್ಞರ ತಂಡದ ಮುಖೇನ ಈ ಸಮಸ್ಯೆಯ ತೀವ್ರತೆ ತಿಳಿಯುವುದು ಹಾಗೂ ಪರಿಣಿತಿಯನ್ನು ಪಡೆಯುವುದು ಓಸಾಮಾ ಬಿನ್ ಲಾಡೆನ್ ಅನ್ನು ಹುಡುಕುವ ನಮ್ಮ ಪ್ರಯತ್ನಕ್ಕೆ ಸಮನಾಗಿದೆ ಎಂದು ಬರ್ನ್ಸ್ ಹೇಳಿದ್ದಾರೆ.
ನಾಟಕೀಯ ಪರಿಣಾಮ ಹೊಂದಿರಬಹುದು
ಭಾರತದ ಪರಿಸ್ಥಿತಿ ನಾಟಕೀಯ ಪರಿಣಾಮಗಳನ್ನು ಬೀರಬಹುದು. ಸಿಐಎ ನಿರ್ದೇಶಕರ ವೇಳಾಪಟ್ಟಿಯನ್ನು ಯುಎಸ್ ಅಧಿಕಾರಿಗಳು ಬಲುಕಾಳಜಿ ಹಾಗೂ ಎಚ್ಚರಿಕೆಯಿಂದ ನಿಗದಿಪಡಿಸಿದ್ದರು. ಅದಾಗ್ಯೂ, ಅಪರಾಧಿಗಳಿಗೆ ಈ ಬಗ್ಗೆ ತಿಳಿದಿದ್ದು ಹೇಗೆ ಮತ್ತು ಇಂಥ ದಾಳಿ ನಡೆಸುವುದಕ್ಕೆ ಹೇಗೆ ಸಾಧ್ಯವಾಯಿತು ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಸಿಐಎ ನಿರ್ದೇಶಕ ವಿಲಿಯಮ್ಸ್ ಬರ್ನ್ಸ್ ಜೊತೆಗೆ ಭಾರತಕ್ಕೆ ತೆರಳಿದ ವ್ಯಕ್ತಿಯಲ್ಲಿ ರೋಗದ ಲಕ್ಷಣಗಳು ಗೋಚರಿಸಿದ ಹಿನ್ನೆಲೆ ಯುಎಸ್ಗೆ ವಾಪಸ್ಸಾದ ದಿನದಿಂದಲೇ ವೈದ್ಯಕೀಯ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಫ್ಘಾನಿಸ್ತಾನದ ಬಿಕ್ಕಟ್ಟಿನ ಕುರಿತು ಯುಎಸ್ ಕೇಂದ್ರೀಯ ಗುಪ್ತಚರ ವಿಭಾಗದ ನಿರ್ದೇಶದ ವಿಲಿಯಮ್ಸ್ ಬರ್ನ್ಸ್ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜೊತೆಗೆ ಚರ್ಚೆ ನಡೆಸಿದ್ದರು. ಯುಎಸ್ ತನ್ನ ಸೇನೆಯನ್ನು ವಾಪಸ್ ತೆಗೆದುಕೊಂಡ ನಂತರ ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಸಿಐಎ ಮುಖ್ಯಸ್ಥರು ಹಾಗೂ ಇತರೆ ಅಧಿಕಾರಿಗಳು ಚರ್ಚೆ ನಡೆಸಿದರು. ತಮ್ಮ ಭೇಟಿ ಬಗ್ಗೆ ಪ್ರಶ್ನಿಸಿದ ಸಂದರ್ಭದಲ್ಲಿ ಪ್ರತಿಕ್ರಿಯೆಗೆ ಯುಎಸ್ ರಾಯಭಾರಿಗಳು ನಿರಾಕರಿಸಿದರು. ಇನ್ನೊಂದು ಕಡೆಯಲ್ಲಿ ಭಾರತೀಯ ಭದ್ರತಾ ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಮಧ್ಯೆ ಕಾರ್ಯಕ್ರಮವು ಯುಎಸ್ ಸರ್ಕಾರಿ ಉದ್ಯೋಗಿಯಲ್ಲಿ ಒಂದು ನಿಗೂಢ ಅನಾರೋಗ್ಯಕ್ಕೆ ಸಂಬಂಧಿಸಿದ ರೋಗದ ಲಕ್ಷಣಗಳನ್ನು ವರದಿ ಆಗಿರುವುದನ್ನು ಗುರುತಿಸಿದೆ.
ಹವಾನಾ ಸಿಂಡ್ರೋಮ್ ಎಂದರೇನು?
ಕಳೆದ 2017ರಲ್ಲಿ ಕ್ಯೂಬಾದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ರಾಯಭಾರಿ ಮತ್ತು ಅಧಿಕಾರಿಗಳು ಬೀಡುಬಿಟ್ಟ ಸಂದರ್ಭದಲ್ಲಿ ವಿಚಿತ್ರವಾದ ಹೆಚ್ಚಿನ ಮತ್ತು ಕಡಿಮೆ ಶಬ್ದಗಳನ್ನು ಕೇಳಿದ ನಂತರದಲ್ಲಿ ಅಸಾಮಾನ್ಯ ದೈಹಿಕ ಸಂವೇದನೆಗಳನ್ನು ಅನುಭವಿಸಿರುವುದು ವರದಿಯಾಗಿದೆ. ಯುಎಸ್ ಸರ್ಕಾರಿ ಅಧಿಕಾರಿಗಳು ಚೀನಾ ಮತ್ತು ವಾಷಿಂಗ್ಟನ್, ಡಿಸಿ ಪ್ರದೇಶದಲ್ಲಿ ಇಂಥ ಪ್ರಕರಣಗಳು ವರದಿಯಾಗಿವೆ. ಕಳೆದ ತಿಂಗಳ ಕೊನೆಯಲ್ಲಿ ಯುೆಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಆಗಮನಕ್ಕೆ ಮುಂಚಿತವಾಗಿ ರಾಜಧಾನಿ ಹನೋಯಿಯಲ್ಲಿ ಹವಾನಾ ಸಿಂಡ್ರೋಮ್ ಘಟನೆಗಳು ವರದಿಯಾದ ನಂತರ ಕನಿಷ್ಠ ಇಬ್ಬರು ಯುಎಸ್ ರಾಜತಾಂತ್ರಿಕರನ್ನು ವಿಯೆಟ್ನಾಂನಿಂದ ಸ್ಥಳಾಂತರಿಸಲಾಗಿತ್ತು.
ಹವಾನಾ ರೋಗದ ಲಕ್ಷಣ ಹಾಗೂ ಕಾರಣಗಳು
ಸಾಮಾನ್ಯವಾಗಿ ಹವಾನಾ ಸಿಂಡ್ರೋಮ್ ರೋಗ ಕಾಣಿಸಿಕೊಂಡ ಹಲವರು ತಲೆತಿರುಗುವಿಕೆ, ಆಯಾಸ, ವಾಕರಿಕೆ ಮತ್ತು ತೀವ್ರ ತಲೆನೋವು ಎದುರಿಸುತ್ತಿರುತ್ತಾರೆ. ಕೆಲವರಲ್ಲಿ ಅದೃಶ್ಯತನ ಕಾಡುತ್ತಿದ್ದು, ಹಲವರಿಗೆ ಕೆಲಸ ಮಾಡುವುದು ಅಸಾಧ್ಯದಂತೆ ಭಾಸವಾಗುತ್ತದೆ. ಕೆಲವು ಯುಎಸ್ ಅಧಿಕಾರಿಗಳಲ್ಲಿ ಶಾಶ್ವತ ಮಿದುಳಿನ ಗಾಯವಾಗಿದೆ. ಇದರ ಹಿಂದೆ ರಷ್ಯಾದ ಬೇಹುಗಾರರ ದಾಳಿ ಅಥವಾ ಕಣ್ಗಾವಲು ಕಾರ್ಯಾಚರಣೆಯ ಪರಿಣಾಮದ ಕೈವಾಡವಿರುವ ಬಗ್ಗೆ ಅನೇಕ ಯುಎಸ್ ಅಧಿಕಾರಿಗಳು ಶಂಕಿಸಿದ್ದಾರೆ, ಆದರೆ ಈ ಬಗ್ಗೆ ಸಾಕ್ಷ್ಯಗಳು ಬಲು ನಿರ್ಣಾಯಕವಾಗಲಿವೆ.
ನಿಗೂಢ ದಾಳಿಯ ಕುರಿತು ತನಿಖೆ ವ್ಯಾಪಕ
ಯುೆಸ್ ಕೇಂದ್ರೀಯ ಗುಪ್ತಚರ ವಿಭಾಗದ ನಿರ್ದೇಶಕ ಬರ್ನ್ಸ್ ಮತ್ತು ರಾಷ್ಟ್ರೀಯ ಗುಪ್ತಚರ ನಿರ್ದೇಶಕರಾದ ಅವ್ರಿಲ್ ಹೈನ್ಸ್ ಅಡಿಯಲ್ಲಿ ಗುಪ್ತಚರ ಸಮುದಾಯವು ನಿಗೂಢ ದಾಳಿಯ ಬಗ್ಗೆ ವ್ಯಾಪಕ ತನಿಖೆ ಕೈಗೊಂಡಿದೆ. "ನಾವು ನಿರ್ದಿಷ್ಟ ಘಟನೆಗಳು ಅಥವಾ ಅಧಿಕಾರಿಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಯಾವುದೇ ವ್ಯಕ್ತಿ ಅಥವಾ ಅಧಿಕಾರಿಯು ಅಸಂಬದ್ಧ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಪಡೆಯುವುದಕ್ಕೆ ನಾವು ಮಾರ್ಗಸೂಚಿಗಳನ್ನು ಹಾಗೂ ಶಿಷ್ಟಾಚಾರವನ್ನು ಹೊಂದಿದ್ವೇವೆ ಎಂದು ಸಿಐಎ ವಕ್ತಾರರು ಹೇಳಿದ್ದಾರೆ.
"ಅಮೆರಿಕಾದ ಸಾರ್ವಜನಿಕ ಸೇವಕರ ಆರೋಗ್ಯ ಮತ್ತು ಯೋಗಕ್ಷೇಮವು ಆಡಳಿತಕ್ಕೆ ಅತ್ಯಂತ ಮಹತ್ವದ್ದಾಗಿದೆ, ಮತ್ತು ಅಸಹಜ ಆರೋಗ್ಯ ಘಟನೆಯ ಕುರಿತು ನಮ್ಮ ಸಿಬ್ಬಂದಿಯ ಯಾವುದೇ ವರದಿಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ" ಎಂದು ಹಿರಿಯ ಆಡಳಿತ ಅಧಿಕಾರಿಯೊಬ್ಬರು ಎನ್ಬಿಸಿ ನ್ಯೂಸ್ ಉಲ್ಲೇಖಿಸಿದ್ದಾರೆ.
ಭಾರತದ ಭೇಟಿ ವೇಳೆ ನಡೆದ ಘಟನೆಗೆ ಕಾರಣ ತಿಳಿದಿಲ್ಲ
ಭಾರತದಲ್ಲಿ ನಡೆದಿದೆ ಎನ್ನಲಾದ ಘಟನೆ ವಿದೇಶಿ ಎದುರಾಳಿಯು ಉದ್ದೇಶಪೂರ್ವಕವಾಗಿ ಸಿಐಎ ನಿರ್ದೇಶಕರ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆದರೆ ಮೂಲಗಳು ಏಜೆನ್ಸಿಯು ನಿಖರವಾಗಿ ಇದಕ್ಕೆ ಕಾರಣವೇನು ಎಂದು ಸ್ಪಷ್ಟವಾಗಿಲ್ಲ ಎಂದು ವರದಿ ಹೇಳಿದೆ. ಯುಎಸ್ ಅಧಿಕಾರಿಗಳು "ಅಸಂಗತ ಆರೋಗ್ಯ ಘಟನೆಗಳು" ಎಂದು ಕರೆಯುವ ಇಂಥ ಪ್ರಕರಣಗಳು ಇತ್ತೀಚಿನ ತಿಂಗಳುಗಳಲ್ಲಿ ಹೆಚ್ಚಾಗಿವೆ.
ಬಗೆಹರಿಯದ ರಹಸ್ಯ
ಕಳೆದ ವರ್ಷದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ವರದಿಯಲ್ಲಿ ಮೈಕ್ರೊವೇವ್ ಶಕ್ತಿಯ ಬಗ್ಗೆ ಹೇಳಲಾಗಿದೆ, ಆದರೆ ವೈಜ್ಞಾನಿಕ ಸಮುದಾಯದಲ್ಲಿ ಈ ತೀರ್ಮಾನದ ಕುರಿತು ಇನ್ನೂ ಚರ್ಚೆ ನಡೆಸಲಾಗುತ್ತಿದೆ. ಕಳೆದ ವಾರ ಸಿಐಎ ಉಪ ನಿರ್ದೇಶಕ ಡೇವಿಡ್ ಕೋಹೆನ್, ರಹಸ್ಯವನ್ನು ಬಗೆಹರಿಸುವಲ್ಲಿ ಏಜೆನ್ಸಿಯು ಹತ್ತಿರದಲ್ಲಿದೆ, ಆದರೆ ನಮಗೂ ಕೆಲವು ಮಿತಿಗಳಿವೆ ಎಂದು ಹೇಳಿದ್ದರು. "ನಾವು ಸಮಸ್ಯೆಯ ಮೂಲವನ್ನು ಕಂಡುಕೊಳ್ಳುವುದಕ್ಕೆ ಹತ್ತಿರದಲ್ಲಿದ್ದೇವೆ ಎಂದು ನಾನು ಭಾವಿಸುತ್ತೇನೆ. ಆದರೆ ಜನರು ನಿರೀಕ್ಷಿಸುತ್ತಿರುವಷ್ಟು ವಿಶ್ಲೇಷಣಾತ್ಮಕ ತೀರ್ಪು ನೀಡುವಷ್ಟು ಹತ್ತಿರವಾಗಿಲ್ಲ" ಎಂದು ಹೇಳಿದ್ದಾರೆ.