ಚೀನಾಗೆ ತಿರುಗೇಟು ನೀಡಲು ಚಾರ್ ಧಾಮ್ ಪ್ರದೇಶದಲ್ಲಿ ವಿಶಾಲ ರಸ್ತೆ
ನವದೆಹಲಿ, ನವೆಂಬರ್ 12: ಅರುಣಾಚಲ ಪ್ರದೇಶದಲ್ಲಿ 100 ಮನೆಗಳ ನಿರ್ಮಾಣ ಮಾಡಿದ್ದು ಆಗಿದೆ. ಟಿಬೆಟ್ ಗಡಿಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಮೂಲಭೂತ ಸೌಕರ್ಯ ನಿರ್ಮಾಣ ಕಾಮಗಾರಿಗಳನ್ನೂ ನಡೆಸಲಾಗುತ್ತಿದ್ದು, ಚೀನಾದ ಎಲ್ಲ ಕುತಂತ್ರಗಳಿಗೆ ಭಾರತ ಉತ್ತರ ಕೊಡಬೇಕಿದೆ.
ಭಾರತ-ಚೀನಾದ ವಾಸ್ತವಿಕ ಗಡಿ ರೇಖೆಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಭಾರತವೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲು ಮುಂದಾಗಿದೆ. ಬ್ರಹ್ಮೋಸ್ನಂತಹ ಕ್ಷಿಪಣಿಗಳು ಮತ್ತು ಇತರ ನಿರ್ಣಾಯಕ ಸೇನಾ ಉಪಕರಣಗಳನ್ನು ಸಾಗಿಸಲು ಉತ್ತರಾಖಂಡದ ಚಾರ್ ಧಾಮ್ ಪರ್ವತ ಪ್ರದೇಶದಲ್ಲಿ ವಿಶಾಲವಾದ ರಸ್ತೆಗಳನ್ನು ನಿರ್ಮಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಅರುಣಾಚಲ ಗಡಿಯಲ್ಲಿ 100 ಮನೆ ಕಟ್ಟಿದ ಚೀನಾ; ಏನು ಹೇಳುತ್ತೆ ಭಾರತ?
"ಭಾರತೀಯ ಸೇನೆಯು ಬ್ರಹ್ಮೋಸ್ ಅನ್ನು ತೆಗೆದುಕೊಳ್ಳಬೇಕಾಗಿದ್ದು, ಇದಕ್ಕೆ ದೊಡ್ಡ ಪ್ರದೇಶದ ಅಗತ್ಯವಿದೆ. ಇದೆಲ್ಲ ಭೂಕುಸಿತಕ್ಕೆ ಕಾರಣವಾದರೆ ಸೇನೆಯೇ ಅದನ್ನು ನಿಭಾಯಿಸುತ್ತದೆ. ಗಡಿಯಲ್ಲಿ ರಸ್ತೆಗಳು ಸಾಕಷ್ಟು ಅಗಲವಿಲ್ಲದಿದ್ದರೆ ನಾವು ಹೇಗೆ ಹೋಗುವುದಕ್ಕೆ ಸಾಧ್ಯವಾಗುತ್ತದೆ?, ಎಂದು ಕೇಂದ್ರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್, ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠದ ಎದುರು ವಾದ ಮಂಡಿಸಿದರು.
ಗಡಿ ಪ್ರದೇಶದಲ್ಲಿ ರಸ್ತೆಗಳ ಅಗತ್ಯತೆ ಎಷ್ಟಿದೆ?
"ನಾವು ದೇಶವನ್ನು ರಕ್ಷಿಸಬೇಕಿದೆ. ಇದರ ಜೊತೆಗೆ "ಭೂಕುಸಿತಗಳು, ಹಿಮಪಾತಗಳು ಸಂಭವಿಸಿದ ಸಂದರ್ಭಗಳಲ್ಲಿ ವಾಸ್ತವಿಕ ಗಡಿ ರೇಖೆಯಲ್ಲಿ ರಸ್ತೆಗಳು ಅಗತ್ಯವಾಗಿ ಬೇಕಾಗುತ್ತವೆ. ಈ ವಿಷಯದಲ್ಲಿ ನಾವು ಸಾಕಷ್ಟು ದುರ್ಬಲರಾಗಿದ್ದೇವೆ. ಇದನ್ನು ಸರಿಪಡಿಸಿಕೊಳ್ಳುವುದಕ್ಕೆ ನಮ್ಮಿಂದ ಸಾಧ್ಯವಾಗಿದ್ದನ್ನು ಮಾಡಬೇಕಿದೆ, ಎಂದು ಕೆಕೆ ವೇಣುಗೋಪಾಲ್ ಹೇಳಿದ್ದಾರೆ. ಫೀಡರ್ ರಸ್ತೆಗಳ ಸುಧಾರಣೆ ಮತ್ತು ವಿಸ್ತರಣೆಗಾಗಿ ಮೊದಲ ಹಂತದಲ್ಲಿ ಮರಗಳನ್ನು ಕಡಿಯುವುದಕ್ಕೆ ಅರಣ್ಯ ಮತ್ತು ವನ್ಯಜೀವಿ ನೀಡಲಾದ ಅನುಮತಿಯನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು. ಸಿಟಿಜನ್ ಫಾರ್ ಗ್ರೀನ್ ಡೂನ್ ಎಂಬ ಎನ್ಜಿಒ ಸಲ್ಲಿಸಿದ ಅರ್ಜಿಯನ್ನು ಪೀಠ ಆಲಿಸಿತು.
ರಕ್ಷಣೆ ಹಾಗೂ ಪರಿಸರದ ಕುರಿತು ಕೋರ್ಟ್ ಉಲ್ಲೇಖ
ರಾಷ್ಟ್ರದ ಭದ್ರತೆಯು ಅಪಾಯದಲ್ಲಿದೆ ಎಂಬ ಸತ್ಯವನ್ನು ನಾವು ಯಾವುದೇ ಕಾರಣಕ್ಕೂ ಅಲ್ಲಗೆಳೆಯುವಂತಿಲ್ಲ. ಇತ್ತೀಚಿನ ಘಟನೆಗಳ ಮುಖಾಂತರ ನಾವು ರಕ್ಷಣಾ ಅಗತ್ಯಗಳನ್ನು ಅತಿಕ್ರಮಿಸುತ್ತೇವೆ ಎಂದು ಅತ್ಯುನ್ನತ ಸಾಂವಿಧಾನಿಕ ನ್ಯಾಯಾಲಯ ಹೇಳಬಹುದೇ?, ರಾಷ್ಟ್ರದ ರಕ್ಷಣೆಯ ಮೇಲೆ ಪರಿಸರವು ಜಯಗಳಿಸುತ್ತದೆ ಎಂದು ನಾವು ಹೇಳಬಹುದೇ? ಅಥವಾ ಪರಿಸರದ ಅವನತಿ ನಡೆಯದಂತೆ ರಕ್ಷಣಾ ಕಾಳಜಿ ವಹಿಸಲು ನಾವು ಹೇಳುತ್ತೇವೆ?, ಎಂದು ಪೀಠವು ತಿಳಿಸಿತ್ತು.
ಆದಾಗ್ಯೂ, ಈ ಯೋಜನೆಯು 2016 ರಲ್ಲಿ ಕಲ್ಪಿಸಲಾದ ಚಾರ್ ಧಾಮ್ ಯಾತ್ರೆಯನ್ನು ಸುಗಮಗೊಳಿಸುವ ಉದ್ದೇಶವನ್ನು ಹೊಂದಿದೆ, ಇದರಿಂದಾಗಿ ಹೆಚ್ಚಿನ ಪ್ರವಾಸಿಗರು ಪರ್ವತಗಳನ್ನು ಚಾರಣ ಮಾಡಬಹುದು ಎಂದು ಅರ್ಜಿದಾರ ಎನ್ಜಿಒ ವಾದಿಸಿತ್ತು. ರಸ್ತೆಗಳ ಅಗಲಕ್ಕೆ ಸಂಬಂಧಿಸಿದಂತೆ, ಭಾರತೀಯ ರಸ್ತೆಗಳ ಕಾಂಗ್ರೆಸ್ ವರದಿಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ವೇಣುಗೋಪಾಲ್ ತಿಳಿಸಿದರು.
ನಾವು ಜಾಗರೂಕರಾಗಿ ಇರಬೇಕು ಎಂದ ರಾಜನಾಥ್ ಸಿಂಗ್
ಭಾರತೀಯ ಸೇನೆಯು 8,000 ಕಾರುಗಳನ್ನು ಚೀನಾದ ಗಡಿಯವರೆಗೆ ತೆಗೆದುಕೊಂಡು ಹೋಗುವುದಿಲ್ಲ. ಪರಿಸ್ಥಿತಿ ತುಂಬಾ ಗಂಭೀರವಾದಾಗ, ಅದರ ಮೌಲ್ಯ ಏನು ಎಂಬುದು ಗೊತ್ತಾಗುತ್ತದೆ, ಆದರೆ ಅಂಥದ್ದೇನೂ ಆಗುವುದಿಲ್ಲ ಎಂದು ಕೆಕೆ ವೇಣುಗೋಪಾಲ್ ಹೇಳಿದರು. ಇದೇ ವೇಳೆ ಕೇಂದ್ರ ರಕ್ಷಣಾ ಸಚಿವರು "ನಾವು ಜಾಗರೂಕರಾಗಿ ಇರಬೇಕು, ಎಚ್ಚರಿಕೆ ವಹಿಸಿರಬೇಕು" ಎಂದು ಹೇಳಿದ ಮಾತನ್ನು ಉಲ್ಲೇಖಿಸಿದರು.
ಉತ್ತರಾಖಂಡದ ಪ್ರಮುಖ ಯಾತ್ರಾ ಸ್ಥಳಗಳ ನಡುವೆ ಎಲ್ಲಾ ಹವಾಮಾನ ಸಂಪರ್ಕವನ್ನು ಒದಗಿಸಲು 889 ಕಿಮೀ ಬೆಟ್ಟದ ರಸ್ತೆಗಳನ್ನು ವಿಸ್ತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಇನ್ನು ಉತ್ತರಾಖಂಡದ ಈ ರಸ್ತೆಗಳಲ್ಲಿ ಸಂಚರಿಸುವ ಪ್ರವಾಸಿಗರ ಕಾರುಗಳು ಚಾರ್ ಧಾಮ್ ತಾಣಗಳಿಗೆ ಮಾತ್ರ ಸಂಬಂಧಿಸಿದೆ. ಇದು ಸೇನೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವೇಣುಗೋಪಾಲ್ ಹೇಳಿದರು.
ಈ ಹಿಂದಿನ ಆದೇಶ ಮಾರ್ಪಾಡಿಗೆ ಅಟಾರ್ನಿ ಜನರಲ್ ಮನವಿ
ಚೀನಾ ಗಡಿಯವರೆಗೆ ಹೋಗುವ ಮಹತ್ವಾಕಾಂಕ್ಷೆಯ ಚಾರ್ಧಾಮ್ ಹೆದ್ದಾರಿ ಯೋಜನೆಯಲ್ಲಿ 2018ರ ಸುತ್ತೋಲೆಯ 5.5 ಮೀಟರ್ ಕ್ಯಾರೇಜ್ವೇ ಅಗಲವನ್ನು ಅನುಸರಿಸಲಾಗುತ್ತದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು(MoRTH) ಸೆಪ್ಟೆಂಬರ್ 8, 2020ರ ಆದೇಶವನ್ನು ಮಾರ್ಪಡಿಸುವಂತೆ ಸರ್ಕಾರದ ಪರ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಕೋರಿದ್ದಾರೆ. ಆಯಕಟ್ಟಿನ 900-ಕಿಮೀ ಯೋಜನೆಯು ಉತ್ತರಾಖಂಡದ ನಾಲ್ಕು ಪವಿತ್ರ ಪಟ್ಟಣಗಳಾದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥಗಳಿಗೆ ಎಲ್ಲಾ ಹವಾಮಾನ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಹಿಮಾಲಯದಲ್ಲಿ ಭಯ ಹುಟ್ಟಿಸಿದ ರಸ್ತೆ ನಿರ್ಮಾಣ ಕಾರ್ಯ
"ಹಿಮಾಲಯದ ಮೇಲೆ ಮತ್ತು ಕೆಳಗೆ SUV ಗಳು ಚಲಿಸುವ ರಸ್ತೆಗಳನ್ನು ನಿರ್ಮಿಸಲು ಪರ್ವತಗಳನ್ನು ಒಡೆದು ಹಾಕಲಾಗಿತ್ತು. ಕಳೆದ 2013ರಲ್ಲಿ ಕೇದಾರನಾಥ ಪ್ರವಾಹದ ದುರಂತ ಕಂಡ ಉತ್ತರಾಖಂಡದ ಜನರು ಈಗ ಈ ರಸ್ತೆಗಳನ್ನು ನಿರ್ಮಿಸಲು ಮಾಡುವ ಸ್ಫೋಟದಿಂದಾಗಿ ನಿರಂತರ ಭಯದಲ್ಲಿದ್ದಾರೆ. ಈ ವಾಹನಗಳಿಂದ ಹೊರಸೂಸುವ ಕಪ್ಪು ಮಸಿಯು ಹಿಮನದಿಗಳ ಮೇಲೆ ಅಂಟಿಕೊಳ್ಳುತ್ತದೆ. ಅದು ಶಾಖವನ್ನು ಹೀರಿಕೊಳ್ಳುವ ಮೂಲಕ ಕರಗುತ್ತಿದೆ," ಎಂದು ಹೇಳಿದ ಅವರು ಭೂಕುಸಿತದ ವೀಡಿಯೊ ಕ್ಲಿಪ್ಗಳನ್ನು ತೋರಿಸಿದರು.
ವೇಣುಗೋಪಾಲ್ ಗೊನ್ಸಾಲ್ವಿಸ್ ಮಧ್ಯಪ್ರವೇಶಿಸಿ, 2020ರ ಸೆಪ್ಟೆಂಬರ್ 8 ರ ಆದೇಶದಿಂದ ರಸ್ತೆ ನಿರ್ಮಾಣ ಕಾರ್ಯವು ಸ್ಥಗಿತಗೊಂಡಿದೆ. ಯಾವುದೇ ನಿರ್ವಹಣಾ ಕಾರ್ಯವನ್ನು ಮಾಡಲಾಗಲಿಲ್ಲ, ಇದು ಭೂಕುಸಿತಕ್ಕೆ ಕಾರಣವಾಗಿದೆ ಎಂದು ಹೇಳಿದರು. ಹಿಮ ಕರಗುವಿಕೆಗೆ ಕೇವಲ ಕಪ್ಪು ಮಸಿ ಮಾತ್ರವಲ್ಲದೆ ಬೇರೆ ಬೇರೆ ಕಾರಣಗಳಿವೆ ಎಂದು ಪೀಠ ಹೇಳಿದೆ.
ಈ ಹಿಂದಿನ ಆದೇಶದ ಬಗ್ಗೆ ವಿಚಾರಣೆ ನಡೆಸುತ್ತಿರುವ ಕೋರ್ಟ್
ಚಾರ್ಧಾಮ್ ಹೆದ್ದಾರಿ ಯೋಜನೆಯಲ್ಲಿ 2018ರ ಸುತ್ತೋಲೆ 5.5 ಮೀಟರ್ ಕ್ಯಾರೇಜ್ವೇ ಅಗಲವನ್ನು ಅನುಸರಿಸಲು MoRTH ಅನ್ನು ಕೇಳಿರುವ ಸೆಪ್ಟೆಂಬರ್ 8, 2020ರ ಆದೇಶವನ್ನು ಮಾರ್ಪಡಿಸುವಂತೆ ಕೋರಿ ಕೇಂದ್ರದ ಮನವಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ. ರಕ್ಷಣಾ ಸಚಿವಾಲಯವು (MoD) ಸುಪ್ರೀಂ ಕೋರ್ಟ್ನ ಸೆಪ್ಟೆಂಬರ್ 8ರ ಆದೇಶವನ್ನು ಮಾರ್ಪಾಡು ಮಾಡಲು ಕೋರಿದೆ. ತನ್ನ ಅರ್ಜಿಯಲ್ಲಿ, MoD ಈ ಹಿಂದೆ ಸೆಪ್ಟೆಂಬರ್ 8ರ ಆದೇಶವನ್ನು ಮಾರ್ಪಾಡು ಮಾಡಲು ಮತ್ತು ರಿಷಿಕೇಶದಿಂದ ಮನ, ಋಷಿಕೇಶದಿಂದ ಗಂಗೋತ್ರಿ ಮತ್ತು ತನಕ್ಪುರದಿಂದ ಪಿಥೋರಗಢದವರೆಗಿನ ರಾಷ್ಟ್ರೀಯ ಹೆದ್ದಾರಿಗಳನ್ನು ದ್ವಿಪಥ ಸಂರಚನೆಗೆ ಅಭಿವೃದ್ಧಿಪಡಿಸಬಹುದು ಎಂದು ತಿಳಿಸಲಾಗಿದೆ.