ಈ ದಿನದ ವಿಶೇಷ: ಯಡಿಯೂರಪ್ಪ ರಾಜಕೀಯ ಬದುಕಿನ ಹಿನ್ನೋಟ
ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ರುಚಿ ಕಾಣಲು ಕಾರಣರಾದವರು ಬಿ.ಎಸ್ ಯಡಿಯೂರಪ್ಪ. 2007ರಲ್ಲಿ ''ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಎಂಬುವವನಾದ ನಾನು...'' ಎಂದು ಬಿಜೆಪಿಯ ಹಿರಿಯ ನಾಯಕ ಪ್ರಮಾಣವಚನ ಸ್ವೀರಿಸುತ್ತಿದ್ದಂತೆ ಹೊಸ ಅಧ್ಯಾಯ ಆರಂಭವಾಯಿತು. ಈ ಮೂಲಕ ದಕ್ಷಿಣ ಭಾರತದ ಅತಿ ದೊಡ್ಡ ರಾಜ್ಯವಾದ ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೇರಿದರು. ಅಲ್ಲಿಂದಾಚೆಗೆ ನಾಲ್ಕು ಬಾರಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಜುಲೈ 26ರಂದು ತಮ್ಮ ಸರ್ಕಾರದ 2ನೇ ವರ್ಷದ ಸಾಧನಾ ಸಮಾರಂಭದಲ್ಲೇ ವಿದಾಯ ಭಾಷಣ ಮಾಡಿ, ರಾಜೀನಾಮೆ ಘೋಷಿಸಿದ್ದು ವಿಪರ್ಯಾಸ.
ಬಲಪಂಥೀಯ ನಿಲುವಿನ ಬಿಜೆಪಿ ಪಕ್ಷದಲ್ಲಿದ್ದರೂ ಹಸಿರು ಶಾಲು ಹೊದ್ದುಕೊಂಡು, ಪ್ರತಿಭಟನೆ, ಹೋರಾಟದ ಮೂಲಕ ಪಕ್ಷ ಸಂಘಟಿಸಿದವರು ಯಡಿಯೂರಪ್ಪ. ಮೂರು ದಶಕಗಳ ಕಾಲ ವಿರೋಧ ಪಕ್ಷದಲ್ಲಿದ್ದು ಕೆಲಸ ಮಾಡಿದ್ದ ಯಡಿಯೂರಪ್ಪ ಅವರು ಸಿಎಂ ಗದ್ದುಗೆಗೆ ಸಾಗಿ ಬಂದ ಹಾದಿ ಹಾಗೂ ನಿರ್ಗಮನದ ಹೆಜ್ಜೆ ಗುರುತು ಇಲ್ಲಿದೆ.
ಮಂಡ್ಯ ಜಿಲ್ಲೆಯಲ್ಲಿ ಜನಿಸಿ, ಶಿವಮೊಗ್ಗದ ಶಿಕಾರಿಪುರದಿಂದ ರಾಷ್ಟ್ರ ರಾಜಕೀಯಕ್ಕೆ ಜಿಗಿದು ನಂತರ ಕರುನಾಡಿಗೆ ಮರಳಿ ಮತ್ತೊಮ್ಮೆ ಕರ್ನಾಟಕದಲ್ಲಿ ಕಮಲ ಅರಳುವಂತೆ ಮಾಡಿದ ಯಡಿಯೂರಪ್ಪ ಇದೇ ಮೊದಲ ಬಾರಿಗೆ ರಾಜಕೀಯವಾಗಿ ಮುಂದೇನು? ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುವಂಥ ಪರಿಸ್ಥಿತಿ ಎದುರಿಸುತ್ತಿದ್ದು, ಅವರ ರಾಜಕೀಯ ಬದುಕಿನ ಚಿತ್ರಣ ಇಲ್ಲಿದೆ...
ದಿಢೀರ್ ನಾಯಕರಾದವರಲ್ಲ ಯಡಿಯೂರಪ್ಪ
ಬೂಕನಕೆರೆ ಎಂಬ ಕುಗ್ರಾಮದ ಬಡ ರೈತ ಕುಟುಂಬದ ಯಡಿಯೂರಪ್ಪ ದಿಢೀರ್ ನಾಯಕರಾದವರಲ್ಲ. ಯಾವುದೇ ಗಾಡ್ ಫಾದರ್ ಇಲ್ಲದೇ ಸ್ವಂತ ಪರಿಶ್ರಮ ಮೇಲೆ ಹಂತಹಂತವಾಗಿ ಬೆಳೆದು ಬಂದ ಧೀಮಂತ ನಾಯಕ. ಹಳ್ಳಿಯಿಂದಲೇ ಹೋರಾಟ ಆರಂಭಿಸಿ ರಾಜಕೀಯ ನೆಲೆಗಟ್ಟನ್ನು ಕಂಡುಕೊಂಡವರು. ಯಡಿಯೂರಪ್ಪ ಧೃತಿಗೆಡದೆ 80ರ ದಶಕದಲ್ಲಿ ಎರಡು ಶಾಸಕರಿದ್ದ ಪಕ್ಷವನ್ನು ಹಂತಹಂತವಾಗಿ ಬೆಳೆಸುತ್ತಾ 110 ಶಾಸಕರ ಪಕ್ಷವಾಗಿ ಮಾಡಿದ್ದು ಕಡಿಮೆ ಸಾಧನೆ ಏನಲ್ಲ. ಹೀಗಾಗಿ ವಿರೋಧ ಪಕ್ಷದ ದ್ವೇಷಿಗಳಿಗೂ ಸಕಾರಣವಾಗಿ ಬೆದರಿಕೆ ಹುಟ್ಟಿಸಬಲ್ಲ ಛಾತಿಯುಳ್ಳವರು. ಆದರೆ, ಒಮ್ಮೆಯಾದರೂ ಬಿಜೆಪಿ ಸಂಪೂರ್ಣ ಮೆಜಾರಿಟಿ ಹೊಂದಬೇಕು ಎಂಬ ಅವರ ಆಸೆ ಇನ್ನೂ ಈಡೇರಿಲ್ಲ.
ಅಲ್ಪಾವಧಿ ಸಿಎಂ ಪಟ್ಟಿಯಲ್ಲೂ ಯಡಿಯೂರಪ್ಪ
2007 ರ ನವೆಂಬರ್ 12 ರಂದು ಮೊದಲ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಅವರು ನವೆಂಬರ್ 19(7ದಿನ)ರ ತನಕ ಪಟ್ಟದಲ್ಲಿದ್ದರು. 2008 ರ ಮೇ 30 ರಂದು ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ 2011 ರ ಜುಲೈ 31 ರವರೆಗೆ 3 ವರ್ಷ 62 ದಿನಗಳ ಕಾಲ (39 ತಿಂಗಳು) ಅವರು ಮುಖ್ಯಮಂತ್ರಿಯಾಗಿದ್ದರು. 3 ನೇ ಬಾರಿಗೆ ಮುಖ್ಯಮಂತ್ರಿಯಾಗಿ ಮೇ 18, 2018ರಂದು ಪ್ರಮಾಣ ವಚನ ಸ್ವೀಕರಿಸಿ 55 ಗಂಟೆಗಳ ಕಾಲ ಸಿಎಂ ಆಗಿ ಅಲ್ಪಾವಧಿ ಸರ್ಕಾರದ ದೊರೆ ಎನಿಸಿಕೊಂಡರು. 4ನೇ ಬಾರಿಗೆ ಸಿಎಂ ಆಗಿ ಜುಲೈ 26ರಂದು ಸಂಜೆ 6 ಗಂಟೆ ನಂತರ ಪ್ರಮಾಣ ವಚನ ಸ್ವೀಕರಿಸಿ, 2 ವರ್ಷಗಳ ನಂತರ ಜುಲೈ 26, 2021ರಂದು ರಾಜೀನಾಮೆ ಸಲ್ಲಿಸಿದ್ದಾರೆ.
ರಾಜಕೀಯ ಬದುಕಿನಲ್ಲಿ ಕಪ್ಪುಚುಕ್ಕೆ ಏನು?
ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಅವರ ಅಧಿಕಾರ ಅವಧಿಯಲ್ಲಿ ಗೋಲಿಬಾರ್ನಲ್ಲಿ ರೈತನೊಬ್ಬ ಮೃತಪಟ್ಟ ಘಟನೆ ಮರೆಯುವಂತಿಲ್ಲ. ಅಮಾಯಕ ರೈತ ಬಲಿಯಾದ ಹಾವೇರಿಯಲ್ಲೇ ಉದಯವಾದ ಹೊಸ ಪ್ರಾದೇಶಿಕ ಪಕ್ಷದ ಚುಕ್ಕಾಣಿ ಹಿಡಿದ ಯಡಿಯೂರಪ್ಪ ಅವರ ಸುತ್ತ ಇನ್ನೂ ಅನೇಕ ಹಗರಣಗಳ ಬಲೆ ಇದ್ದೇ ಇದೆ. ಡಿ ನೋಟಿಫಿಕೇಷನ್, ಸ್ವಜನಪಕ್ಷಪಾತ, ಭೂ ಹಗರಣಗಳ ಜೊತೆ ಯಡಿಯೂರಪ್ಪ ಅವರ ಸಿಡುಕು ಕಂಡರೆ ಜನ ಮುಖ ಬೇರೆಡೆ ತಿರುಗಿಸುತ್ತಾರೆ ಎಂಬ ದೂರಿದೆ. ಕೆಜೆಪಿ ಅಳಿವು ಉಳಿವಿನೊಂದಿಗೆ ಯಡಿಯೂರಪ್ಪ ಅವರ ರಾಜಕೀಯ ಭವಿಷ್ಯ ನಿರ್ಧಾರ ಎನ್ನಲಾಗಿತ್ತು. ಪ್ರಬಲ ಲಿಂಗಾಯತ ನಾಯಕರಾಗಿರುವ ಯಡಿಯೂರಪ್ಪ ಅವರು ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ, ಗೊಂದಲಗಳಲ್ಲಿ ಸರಿ ಮಾರ್ಗವನ್ನು ತಮ್ಮ ಅನುಯಾಯಿಗಳಿಗೆ ತೋರಲಿಲ್ಲ ಎಂಬ ಕೊರಗಿದೆ. ಆದರೆ, ಮತ್ತೊಮ್ಮೆ ಬಿಜೆಪಿ ಸೇರ್ಪಡೆಯೊಂದಿಗೆ ಅಂತ್ಯ ಕಂಡಿತು. ಬಿಜೆಪಿ ಹಿರಿಯ ನಾಯಕರು, ವಿಪಕ್ಷಗಳ ವಿರೋಧದ ನಡುವೆ ಬಿಎಸ್ ವೈ ಮತ್ತೊಮ್ಮೆ ಏಳಿಗೆ ಕಂಡರು. ಅಧಿಕಾರ ಹುಡುಕಿಕೊಂಡು ಬಂದರೂ ಪೂರ್ಣಾವಧಿ ಅಧಿಕಾರ ಹೊಂದಲು ಸಾಧ್ಯವಾಗಲೇ ಇಲ್ಲ.
ರಾಜ್ಯ ರಾಜಕೀಯದಲ್ಲೇ ಆಸಕ್ತಿ
ಕೆಜೆಪಿಯಿಂದ ಬಿಜೆಪಿಗೆ ಮರಳಿದ ಬಳಿಕ ಬಿಎಸ್ ಯಡಿಯೂರಪ್ಪ ಲೋಕಸಭೆ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕೆ ಇಳಿದು ಜಯಗಳಿಸಿದರು. ರಾಷ್ಟ್ರರಾಜಕಾರಣದಲ್ಲಿ ಮಿಂಚುವ ಅವಕಾಶ ಸಿಕ್ಕರೂ, ರಾಜ್ಯಕ್ಕೆ ಮರಳಿದರು. ಶಿವಮೊಗ್ಗದ ಸಂಸದರಾಗಿ ಕಾರ್ಯ ನಿರ್ವಹಿಸಿದ ನಂತರ ಬಿಜೆಪಿಯ ರಾಜ್ಯಾಧ್ಯಕ್ಷರಾದರು. ಚುನಾವಣೆಗೆ ಕಾರ್ಯಕರ್ತರನ್ನು ಹುರಿದುಂಬಿಸಿದರು. 'ಮಾಸ್ ಲೀಡರ್' ಎಂದೆನಿಸಿಕೊಂಡಿರುವ ಯಡಿಯೂರಪ್ಪ ಅವರು ಪಕ್ಷದ ಇತರೆ ನಾಯಕರ ಜತೆ ಮನಸ್ತಾಪಗಳಿದ್ದರೂ ಪಕ್ಷಕ್ಕಾಗಿ ಅವಡುಗಚ್ಚಿಕೊಂಡು ಕಣಕ್ಕಿಳಿದರು. 2018ರ ವಿಧಾನಸಭೆ ಚುನಾವಣೆ ವೇಳೆ 'ಮತ್ತೊಮ್ಮೆ ಸಿಎಂ ಆಗುವ ಕನಸಿಗಿಂತ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನನಗೆ ಮುಖ್ಯ' ಎಂದರು. ಪ್ರತಿಷ್ಠೆಯ ಸಮರದಲ್ಲಿ ಬಿಎಸ್ವೈ, ಅಂದುಕೊಂಡಿದ್ದನ್ನು ಸಾಧಿಸಿದರು. 2018ರ ವಿಧಾನಸಭೆ ಚುನಾವಣೆಗೆ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿ.ಎಸ್.ಯಡಿಯೂರಪ್ಪ ಅವರು 86983 ಮತಗಳನ್ನು ಪಡೆದು ಜಯಗಳಿಸಿದರು. ಆದರೆ, ಬಿಜೆಪಿ ಶಾಸಕರ ಸಂಖ್ಯಾಬಲ 105 ದಾಟಲಿಲ್ಲ. ಆತುರವಾಗಿ ಸಿಎಂ ಆಗಿ ಕೆಲ ದಿನಗಳ ಅಲ್ಪಾವಧಿ ಸರ್ಕಾರದ ಸಿಎಂ ಆಗಬೇಕಾಯಿತು.
ಅನೇಕ ಹೊಸ ಯೋಜನೆಗಳ ಹರಿಕಾರ
ತಮ್ಮ ಅಧಿಕಾರ ಅವಧಿಯಲ್ಲಿ ರೈತರ ಸಾಲ ಮನ್ನಾ, ಸಾರಾಯಿ ನಿಷೇಧ. ಲಾಟರಿ ನಿಷೇಧ, ರೈತರಿಗೆ ಶೇ.4 ಬಡ್ಡಿದರದಲ್ಲಿ ಸಾಲ, ಬಿಪಿಎಲ್ ಕುಟುಂಬಗಳ ಹೆಣ್ಣುಮಕ್ಕಳ ಸಬಲೀಕರಣಕ್ಕೆ ಭಾಗ್ಯಲಕ್ಷ್ಮಿ ಯೋಜನೆ, ಉಚಿತ ಬೈಸಿಕಲ್ ವಿತರಣೆ ಯೋಜನೆ, ನಿರುದ್ಯೋಗ ನಿವಾರಣೆಗೆ ಸುವರ್ಣ ಕಾಯಕ ಉದ್ಯೋಗ ತರಬೇತಿ ಯೋಜನೆ, ಹಿರಿಯ ನಾಗರಿಕರ ಸಾಮಾಜಿಕ ಭದ್ರತೆಗೆ ಸಂಧ್ಯಾ ಸುರಕ್ಷಾ ಯೋಜನೆ, ಮೊದಲಾದ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಬಜೆಟ್ನಲ್ಲಿ ಅಳವಡಿಸಿ ಅನುಷ್ಠಾನಗೊಳಿಸಿದ ಹೆಗ್ಗಳಿಕೆ. ರೈತರಿಗಾಗಿ ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮಾಡಿ, ರೈತ ಪರ ಕಾಳಜಿ ಮೆರೆದರು. ಕೋವಿಡ್ 19 ಸಾಂಕ್ರಾಮಿಕಕ್ಕೆ ಕರ್ನಾಟಕದಲ್ಲೇ ಮೊದಲ ಬಲಿ ಆಗಿದ್ದು ಮರೆಯುವಂತಿಲ್ಲ. ಹೆಚ್ಚು ಲಸಿಕೆ ನೀಡುವ ಮೂಲಕ ಸಾಂಕ್ರಾಮಿಕ ನಿಯಂತ್ರಣ ಸಾಧಿಸಿದರೂ ಹಗರಣ, ಆರೋಗ್ಯ ಸಚಿವ ಸ್ಥಾನಕ್ಕಾಗಿ ಪೈಪೋಟಿ ಎಲ್ಲವನ್ನು ಎದುರಿಸಬೇಕಾಯಿತು.
ಯಡಿಯೂರಪ್ಪಗೆ ಸಿಕ್ಕಿದ್ದ ವಿನಾಯಿತಿ
ಬಿ.ಎಸ್.ಯಡಿಯೂರಪ್ಪ ಅವರ ಪಾಲಿಗೆ ವಯಸ್ಸು ಕೇವಲ ನಂಬರ್. 2018ರ ವಿಧಾನಸಭೆ ಚುನಾವಣೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದಾಗಲೇ 75 ವಸಂತಗಳನ್ನು ಕಂಡಿದ್ದವರು. 75 ವರ್ಷ ಮೇಲ್ಪಟ್ಟವರಿಗೆ ಉನ್ನತ ಹುದ್ದೆ ಸಿಗುವುದಿಲ್ಲ ಎಂಬ ಬಿಜೆಪಿಯ ಅಲಿಖಿತ ನಿಯಮದಿಂದ ಯಡಿಯೂರಪ್ಪ ಅವರಿಗೆ ವಿನಾಯಿತಿ ಸಿಕ್ಕಿತ್ತು. ಇದಲ್ಲದೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಂತೆ ಕರ್ನಾಟಕ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೂಡಾ ಎರಡು ಹುದ್ದೆಗಳನ್ನು ನಿಭಾಯಿಸಿದ್ದರು. ಆದರೆ, ಈಗ ಕಾಲ, ನಿಯಮ ಬದಲಾಗಿದೆ. ವಯಸ್ಸು, ಎರಡು ಹುದ್ದೆ ನಿಯಮ, ಹೆಚ್ಚಿದ ಭಿನ್ನಮತ, ಭ್ರಷ್ಟಾಚಾರ, ಹೊಸ ಮುಖಗಳಿಗೆ ಆದ್ಯತೆ ಎಲ್ಲವನ್ನು ಪರಿಗಣಿಸಿ ಯಡಿಯೂರಪ್ಪರನ್ನು ಬದಲಾಯಿಸಲಾಗಿದೆ. ಯಡಿಯೂರಪ್ಪರಂಥ ಮಾಸ್ ಲೀಡರ್ ಮತ್ತೊಬ್ಬರು ಸದ್ಯಕ್ಕಂತೂ ಯಾರೂ ಕಂಡು ಬರುತ್ತಿಲ್ಲವಾದರೂ 2023ರ ವಿಧಾನಸಭೆ ಚುನಾವಣೆಗೆ ಈಗಿಂದಲೇ ತಯಾರಿ ನಡೆಸಿರುವ ಬಿಜೆಪಿ, ಲಿಂಗಾಯತ, ಕುರುಬ, ಒಕ್ಕಲಿಗ, ದಲಿತ, ಹಿಂದುಳಿದ ವರ್ಗ, ಬ್ರಾಹ್ಮಣ, ಅಲ್ಪಸಂಖ್ಯಾತ ಎಲ್ಲಾ ಸಮುದಾಯಕ್ಕೂ ಸಲ್ಲಬಲ್ಲ ಮುಖಂಡರನ್ನುಳ್ಳ ತಂಡ ಕಟ್ಟಲು ಮುಂದಾಗಿದೆ.