ಬಿಹಾರ ಚುನಾವಣೆ: ಬಿಜೆಪಿ ರೆಬೆಲ್ಗಳ ಆಶ್ರಯತಾಣವಾದ ಎಲ್ಜೆಪಿ
ಪಾಟ್ನಾ, ಅ. 9: ಲೋಕ ಜನಶಕ್ತಿ ಪಕ್ಷ(ಎಲ್ಜೆಪಿ)ತನ್ನ ಅಧಿನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರ ಅಗಲಿಕೆಯ ನೋವಿನಲ್ಲಿದೆ. ಆದರೆ, ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ತರಲು ಪಕ್ಷದ ಕಾರ್ಯಕರ್ತರು ಅನಿವಾರ್ಯವಾಗಿ ಶೀಘ್ರವೇ ಕಾರ್ಯತತ್ಪರರಾಗಬೇಕಿದೆ.
ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಉಪಾಧ್ಯಕ್ಷ ರಾಜೇಂದ್ರ ಸಿಂಗ್ ಅವರು ಲೋಕ ಜನಶಕ್ತಿ ಪಕ್ಷ(ಎಲ್ಜೆಪಿ) ಸೇರಿದ ಬೆನ್ನಲ್ಲೇ ಬಿಜೆಪಿ ಹಿರಿಯ ನಾಯಕಿ ಹಿರಿಯ ನಾಯಕಿ ಉಷಾ ವಿದ್ಯಾರ್ಥಿ ಬುಧವಾರದಂದು ಎಲ್ಜೆಪಿ ಸೇರಿದ ಸುದ್ದಿ ತಿಳಿದಿರಬಹುದು. ಇವರಿಬ್ಬರ ನಂತರ ರಾಮೇಶ್ವರ್ ಚೌರಾಸಿಯಾ ಅವರು ಎಲ್ ಜೆಪಿಗೆ ಬಂದಿದ್ದಾರೆ.
ಸ್ಮರಣೆ: ಹಾಜಿಪುರದ ದಲಿತ ಮುಖಂಡ ರಾಮ್ ವಿಲಾಸ್ ಪಾಸ್ವಾನ್
ಪಾಲಿಗಂಜ್ ಕ್ಷೇತ್ರದ ಶಾಸಕಿಯಾಗಿದ್ದ ಉಷಾ ವಿದ್ಯಾರ್ಥಿ ಅವರಿಗೆ ಕಳೆದ ಬಾರಿ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ರಾಮ್ಜನಮ್ ಶರ್ಮ ಅವರಿಗೆ ಟಿಕೆಟ್ ನೀಡಿತ್ತು. ಬಿಹಾರದ ರಾಜ್ಯ ಮಹಿಳಾ ಆಯೋಗದ ಸದಸ್ಯರಾಗಿ ಹುದ್ದೆ ನೀಡಿ ಸಮಾಧಾನಪಡಿಸಲಾಗಿತ್ತು. ಇನ್ನೊಂದೆಡೆ 2015ರಲ್ಲಿ ಸಿಎಂ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದ ಹಿರಿಯ ಮುಖಂಡ ರಾಜೇಂದ್ರ ಸಿಂಗ್ ಅವರು ಬಿಜೆಪಿ ಹಾಗೂ ಆರೆಸ್ಸೆಸ್ ಪರ ಕಳೆದ 36ವರ್ಷಗಳಿಂದ ದುಡಿದಿದ್ದಾರೆ. ಈಗ ವಿಧಾನಸಭೆಗೆ ಆಯ್ಕೆಯಾಗಲು ಬಿಜೆಪಿ ತೊರೆದಿದ್ದಾರೆ ಎಂದರೆ ನಂಬಲು ಸಾಧ್ಯವಿಲ್ಲ. ಬಿಜೆಪಿ ಎಲ್ ಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡು ತನ್ನ ಬಂಡಾಯ ಅಭ್ಯರ್ಥಿಗಳನ್ನು ಎಲ್ ಜೆಪಿಗೆ ಕಳಿಸುತ್ತಿದೆ ಎಂದು ವಿಪಕ್ಷಗಳು ಗುಮಾನಿ ವ್ಯಕ್ತಪಡಿಸಿವೆ.
ಮೈತ್ರಿಕೂಟಗಳಿಗೆ ಬೇಡವಾದ LJD, ಬಿಹಾರ ರಣಕಣದಲ್ಲಿ ಏಕಾಂಗಿ
ಈ ನಡುವೆ ಬಿಜೆಪಿ ರೆಬೆಲ್ಗಳ ಆಶ್ರಯತಾಣವಾದ ಎಲ್ಜೆಪಿ ಮಾರ್ಪಾಡಾಗುತ್ತಿದೆ. ರೆಬೆಲ್ ಗಳನ್ನು ಎಲ್ ಜೆಪಿ ಬಳಿ ಕಳಿಸಿ ಬಿಜೆಪಿ 'ಬಿ' ಟೀಂ ಕಟ್ಟಲು ಏನಾದರೂ ಯತ್ನಿಸಲಾಗುತ್ತಿದೆಯೆ? ಎಂಬ ಪ್ರಶ್ನೆಯೂ ಎದ್ದಿದೆ.
''ಬಿಹಾರ ಮೊದಲು, ಬಿಹಾರಿ ಮೊದಲು''
ಎಲ್ ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರ ನೇತೃತ್ವದಲ್ಲಿ ''ಬಿಹಾರ ಮೊದಲು, ಬಿಹಾರಿ ಮೊದಲು'' ಎಂಬ ಘೋಷಣೆಗೆ ಬದ್ಧರಾಗಿ ಬಿಹಾರ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಎಲ್ ಜೆಪಿ ಸೇರಿರುವುದಾಗಿ ರೆಬೆಲ್ ಮುಖಂಡರು ಹೇಳಿದ್ದಾರೆ.
ಎನ್ಡಿಎ ಮೈತ್ರಿಕೂಟದಿಂದ ಹೊರಬಂದಿರುವ ಎಲ್ ಜೆಪಿ ಪ್ರತ್ಯೇಕವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಜನತಾದಳ (ಸಂಯುಕ್ತ) ವಿರುದ್ಧ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಚಿರಾಗ್ ಘೋಷಿಸಿದ್ದಾರೆ. ಈಗಾಗಲೇ 42 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಈ ನಡುವೆ 50: 50ರ ಅನುಪಾತದಲ್ಲಿ ಸೀಟು ಹಂಚಿಕೆ ಮಾಡಿಕೊಂಡಿರುವ ಬಿಜೆಪಿ ಹಾಗೂ ಜೆಡಿಯು ಕ್ರಮವಾಗಿ 121 ಹಾಗೂ 122 ಕ್ಷೇತ್ರಗಳನ್ನು ಪಡೆದುಕೊಂಡಿವೆ. ಎಲ್ ಜೆಪಿ ಸದ್ಯ 143 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದೆ.
ಬಿಜೆಪಿಯ ರವೀಂದ್ರ ಯಾದವ್
ಬಿಜೆಪಿಯ ರವೀಂದ್ರ ಯಾದವ್ ಅವರಿಗೆ ಸಿಗಬೇಕಿದ್ದ ಟಿಕೆಟ್ ಜೆಡಿಯು ಅಭ್ಯರ್ಥಿಗೆ ಹಂಚಿಕೆಯಾಗಿದ್ದರಿಂದ ರವೀಂದ್ರ ಅವರು ಬಿಜೆಪಿ ತೊರೆದು ಎಲ್ ಜೆಪಿ ಸೇರಿದ್ದಾರೆ. 2015ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜೆಡಿಯು ಅಭ್ಯರ್ಥಿಯನ್ನು ರವೀಂದ್ರ ಸೋಲಿಸಿದ್ದರು. ಎರಡು ಬಾರಿ ಶಾಸಕ, ಒಂದು ಬಾರಿ ಎಂಎಲ್ಸಿಯಾಗಿದ್ದು, ಕಾಂಗ್ರೆಸ್ ಟಿಕೆಟ್ ಪಡೆದು ಕೂಡಾ ಗೆಲುವು ಸಾಧಿಸಿದ್ದಾರೆ.
ಬಿಹಾರ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ
2015ರಲ್ಲಿ ಜೆಡಿಯು ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದ ಬಿಜೆಪಿಯ ಮೃಣಾಲ್ ಶೇಖರ್ ಕೂಡಾ ಎಲ್ ಜೆಪಿ ಸೇರಿಕೊಂಡಿದ್ದಾರೆ. ಇದೇ ರೀತಿ ಬಿಜೆಪಿ ಟಿಕೆಟ್ ವಂಚಿತರಾದ ಇಂದು ಕಶ್ಯಪ್ ಹಾಗೂ ಆರ್ ಜೆ ಡಿಯಲ್ಲಿದ್ದ ಕಮಲೇಶ್ ಶರ್ಮ ಕೂಡಾ ಎಲ್ ಜೆಪಿ ಟಿಕೆಟ್ ಬಯಸಿ ಪಕ್ಷ ಸೇರಿಕೊಂಡಿದ್ದಾರೆ. ಪಟ್ಟಿ ಇಲ್ಲಿಗೆ ನಿಲ್ಲುವುದಿಲ್ಲ, ಬಿಜೆಪಿಯ ಕುಂದನ್ ಶರ್ಮ, ಸಂಜಯ್ ಸಿಂಗ್ ಕೂಡಾ ಎಲ್ ಜೆಪಿ ಟಿಕೆಟ್ ಪಡೆದು ಸ್ಪರ್ಧಿಸುತ್ತಿದ್ದಾರೆ. ಜೆಡಿಯುನಲ್ಲಿದ್ದ ಭಗ್ವಾನ್ ಸಿಂಘ್ ಕುಶ್ವಾಹ್ ಅವರಿಗೂ ಎಲ್ ಜೆಪಿ ಟಿಕೆಟ್ ಘೋಷಣೆಯಾಗಿದೆ.
243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ
243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ ಅವಧಿಯು ನವೆಂಬರ್ 29 ರಂದು ಕೊನೆಗೊಳ್ಳಲಿದೆ. ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್ 28ರಂದು 16 ಜಿಲ್ಲೆಗಳ 71 ಕ್ಷೇತ್ರಗಳಿಗೆ 31,000 ಮತಗಟ್ಟೆಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 03ರಂದು ಎರಡನೆಯ ಹಂತದಲ್ಲಿ 17 ಜಿಲ್ಲೆಗಳಲ್ಲಿ 94 ಕ್ಷೇತ್ರಗಳಿಗೆ 42,000 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 07ರಂದು ಮೂರನೇ ಹಂತದಲ್ಲಿ 78 ಕ್ಷೇತ್ರಗಳಿಗೆ 15 ಜಿಲ್ಲೆಗಳಲ್ಲಿ ಅಂದಾಜು 33,500 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಅಂತಿಮವಾಗಿ ನವೆಂಬರ್10ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶವು ಹೊರ ಬೀಳಲಿದೆ.
2015ರಲ್ಲಿ ರಾಷ್ಟ್ರೀಯ ಜನತಾ ದಳ 80 ಸ್ಥಾನ, ಜನತಾ ದಳ ಯುನೈಟೆಡ್ 71, ಕಾಂಗ್ರೆಸ್ 27 ಗಳಿಸಿದ್ದವು. ಬಿಜೆಪಿ 53 ಸ್ಥಾನ, ಎಲ್ ಜೆಪಿ 2 ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ ಸೆಕ್ಯುಲರ್ 1, ಇತರೆ 10 ಸ್ಥಾನ. ಬಿಜೆಪಿ ಶೇ 24ರಷ್ಟು ಮತಗಳಿಕೆ, ಅರ್ ಜೆ ಡಿ ಶೇ 18 ಹಾಗೂ ಜೆಡಿಯು ಶೇ 17ರಷ್ಟು, ಕಾಂಗ್ರೆಸ್ ಶೇ 7, ಎಲ್ ಜೆಪಿ ಶೇ 4.8ರಷ್ಟು ಮತ ಗಳಿಸಿದ್ದವು.
ಸಮಸ್ಯೆಗಳಿಗೆ ನಿತೀಶ್ ಸ್ಪಂದಿಸಿಲ್ಲ: ಚಿರಾಗ್
ಕೊವಿಡ್ 19 ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳಿಗೆ ಉದ್ಯೋಗ ಅರಸಿ ವಲಸೆ ಹೋಗಿದ್ದ ಯುವ ಸಮುದಾಯಕ್ಕೆ ಚಿರಾಗ್ ಭರವಸೆ ನೀಡಿದ್ದು, ಎಲ್ಲರೂ ಬಿಹಾರದಲ್ಲೆ ನೆಲೆಗೊಳ್ಳಲು ಸಿದ್ಧ ಎಂದಿದ್ದಾರೆ. ನಿತೀಶ್ ಸರ್ಕಾರ ಸರಿಯಾಗಿ ಕಾಳಜಿ ವಹಿಸಿದ್ದರೆ ಬೇರೆ ರಾಜ್ಯಕ್ಕೆ ವಲಸೆ ಹೋಗುವ ಪ್ರಮೇಯವೇ ಇರುತ್ತಿರಲಿಲ್ಲ ಎಂದು ಚಿರಾಗ್ ಎಲ್ಲರಿಗೂ ಮನದಟ್ಟಾಗುವಂತೆ ಮಾಡಿದ್ದಾರೆ. ದಲಿತ-ಮುಸ್ಲಿಂ ಹಾಗೂ ಶ್ರಮಿಕ ವರ್ಗದವರಿಗೆ ನಿತೀಶ್ ಸರ್ಕಾರದ ಮೇಲೆ ಉದ್ಯೋಗ ಕುರಿತಂತೆ ಇದ್ದ ನಿರೀಕ್ಷೆ ಹುಸಿಯಾಗಿದೆ ಎಂದು ಎಲ್ ಜೆಪಿ ಆರೋಪಿಸಿದೆ.
ಸಮೀಕ್ಷೆ ಫಲಿತಾಂಶ: 4ನೇ ಬಾರಿಗೆ ನಿತೀಶ್ ನೇತೃತ್ವದ ಎನ್ಡಿಎ ಕ್ಲೀನ್ ಸ್ವೀಪ್
2010ರ ವಿಧಾನಸಭೆಯಲ್ಲಿ ಇದ್ದ ಸೀಟು ಹಂಚಿಕೆ ಅನುಪಾತದಂತೆ ಈ ಬಾರಿಯೂ ಸೀಟು ಹಂಚಿಕೆಯಾಗಲಿ ಎಂದು ಜೆಡಿಯು ಹಠ ಹಿಡಿದಿದೆ. ಈಗ ಬಿಜೆಪಿ ವರಿಷ್ಠರು ಸೀಟು ಹಂಚಿಕೆ, ಜಾತಿ ಸೆಂಟಿಮೆಂಟು, ಹಿಂದುಳಿದ, ಶೋಷಿತ, ಅಲ್ಪಸಂಖ್ಯಾತರು ಎಲ್ಲರ ಪ್ರಾತಿನಿಧ್ಯ ಪರಿಗಣಿಸಿ ಜೆಡಿಯು ಹಾಗೂ ಎಲ್ ಜೆಪಿ ನಡುವಿನ ಕಿತ್ತಾಟವನ್ನು ಮುಂದಿಟ್ಟುಕೊಂಡು ಸೀಟು ಹಂಚಿಕೆ ಸಾಹಸಕ್ಕೆ ಇಳಿದ ಬಿಜೆಪಿ ಕೊನೆಗೆ ಯುವ ಮುಖಂಡ ಚಿರಾಗ್ ಬದಲಿಗೆ ಅನುಭವಿ ನಿತೀಶ್ ಅವರಿಗೆ ಮಣೆ ಹಾಕಿತು. ಇದರಿಂದ ಬಿಜೆಪಿ ಮೈತ್ರಿಯನ್ನು ಬಿಹಾರದಲ್ಲಿ ಕಳೆದುಕೊಳ್ಳುವುದು ಚಿರಾಗ್ ಅವರಿಗೆ ಅನಿವಾರ್ಯವಾಯಿತು.
ದಲಿತ ಮತಗಳ ಲೆಕ್ಕಾಚಾರ ಹೇಗಿದೆ?
ದಲಿತ ಮತಗಳ ಲೆಕ್ಕಾಚಾರ ಅಂದು -ಇಂದು ಬಿಹಾರದಲ್ಲಿ ಶೇ 17ರಷ್ಟು ದಲಿತ ಮತಗಳಿವೆ. ಜಾತಿ ಆಧಾರಿತ ರಾಜಕೀಯವನ್ನು ಚೆನ್ನಾಗಿ ಅರಿತಿದ್ದ ಆರ್ ಜೆಡಿಯ ಲಾಲೂ ಪ್ರಸಾದ್ ಯಾದವರು ವೋಟ್ ಬ್ಯಾಂಕ್ ತಂತ್ರವನ್ನು ಚೆನ್ನಾಗಿ ಬಳಸಿಕೊಂಡಿದ್ದರು. ಲಾಲೂ-ರಾಬ್ಡಿ ದೇವಿ ಅಧಿಕಾರ ಅವಧಿಯ ಫಲವೇ ಪಾಸ್ವಾನ್ ಅವರಿಗೆ ದಲಿತ ಕಾರ್ಡ್ ಬಳಸಿ ಲೋಕಸಭೆ ಚುನಾವಣೆಯಲ್ಲಿ ಭಾರಿ ಅಂತರದಲ್ಲಿ ಗೆಲ್ಲಲು ಸಾಧ್ಯವಾಗುತ್ತಿತ್ತು. ಲಾಲೂ ಪ್ರಸಾದ್ ಅವರು ದಲಿತ ಮತಗಳನ್ನು ಕಳೆದುಕೊಳ್ಳುವ ವೇಳೆಗೆ ನಿತೀಶ್ ಕುಮಾರ್ ಹಾಗೂ ಪಾಸ್ವಾನ್ ಇಬ್ಬರು ಇದೇ ವೋಟ್ ಬ್ಯಾಂಕ್ ಮೇಲೆ ಕಣ್ಣಿರಿಸಿದರು. 2005ರಲ್ಲಿ ಅಧಿಕಾರಕ್ಕೆ ಬಂದ ನಿತೀಶ್ ಅವರು ಮಹಾದಲಿತ್ ವೋಟ್ ಬ್ಯಾಂಕ್ ತಂತ್ರ ಬಳಸಿದರು. 20ಕ್ಕೂ ಅಧಿಕ ಉಪ ಪಂಗಡಗಳನ್ನು ಒಳಗೊಂಡಿದ್ದ ಮಹಾದಲಿತ್ ಸಮೂಹಕ್ಕೆ ಪಾಸ್ವಾನ್ ಉಪ ಪಂಗಡವನ್ನು ನಿತೀಶ್ ಸೇರಿಸಿರಲಿಲ್ಲ. 2015ರ ವಿಧಾನಸಭೆ ಚುನಾವಣೆ ಹೊರತುಪಡಿಸಿದರೆ, ಪಾಸ್ವಾನ್ ಅವರು ತಮ್ಮ ಪಂಗಡದ ಬಲದಿಂದಲೇ 2014 ಹಾಗೂ 2019ರಲ್ಲಿ ಜಯ ದಾಖಲಿಸಿದರು. ಬಿಜೆಪಿ ಅವರ ಬೆನ್ನ ಹಿಂದೆ ಇತ್ತು ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ.
ಮಾಂಝಿ ಜೊತೆ ಮೈತ್ರಿಗೆ ಚಿರಾಗ್ ಸಿದ್ಧವಿಲ್ಲ
ಬಿಹಾರ್ ಮೊದಲು ಬಿಹಾರಿ ಮೊದಲು ಎಂಬ ಚಿರಾಗ್ ಘೋಷವಾಕ್ಯವನ್ನೇ ತಿದ್ದಿ ಬಿಹಾರ್ ಮೊದಲು ನಿತೀಶ್ ಮೊದಲು ಎಂದು ನಿತೀಶ್ ಪರ ಬ್ಯಾಟ್ ಬೀಸುತ್ತಾ ಮಾಂಝಿ ಎನ್ಡಿಎ ಮೈತ್ರಿಕೂಟಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪ್ರಚಾರದ ಸಾಧನಗಳಲ್ಲಿ ಪಾಸ್ವಾನ್ ಅಪ್ಪ-ಮಗನ ಬಗ್ಗೆ ಉಲ್ಲೇಖವೇ ಇಲ್ಲ. ಒಂದು ವೇಳೆ ಮಾಂಝಿ ಕಾರಣದಿಂದ ಎನ್ಡಿಎ ಜೊತೆ ಚಿರಾಗ್ ಮೈತ್ರಿ ಕಳೆದುಕೊಂಡರೆ, ಜೆಡಿಯು- ಎಚ್ಎಎಂ ಮೈತ್ರಿ ಇನ್ನಷ್ಟು ಬಲವಾಗಲಿದೆ. ಜೆಡಿಯು ವಿರುದ್ಧ 143 ಎಲ್ ಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧ ಚಿರಾಗ್ ಘೋಷಿಸಿದ್ದಾರೆ ಕೂಡಾ.