ಅರುಣಾಚಲ ಗಡಿಯಲ್ಲಿ 100 ಮನೆ ಕಟ್ಟಿದ ಚೀನಾ; ಏನು ಹೇಳುತ್ತೆ ಭಾರತ?
ನವದೆಹಲಿ, ನವೆಂಬರ್ 11: ಭಾರತ ಚೀನಾ ನಡುವಿನ ಟಿಬೆಟ್ ಗಡಿಯಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹೆಸರಿನಲ್ಲಿ ಚೀನಾ ಬೃಹತ್ ನಿರ್ಮಾಣ ಕಾಮಗಾರಿಗಳನ್ನು ನಡೆಸುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಇದರ ಜೊತೆಗೆ ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾ ತನ್ನದೇ ಆಗಿರುವ ಗ್ರಾಮವೊಂದನ್ನು ನಿರ್ಮಿಸಿದೆ ಎಂಬ ವರದಿಗೆ ಈಗ ಭಾರತ ಪ್ರತಿಕ್ರಿಯೆ ನೀಡಿದೆ.
ಕಳೆದ 2020ರ ಡಿಸೆಂಬರ್ ತಿಂಗಳಿನಲ್ಲಿ ಯುನೈಟೆಡ್ ಸ್ಟೇಟ್ಸ್ ರಕ್ಷಣಾ ಇಲಾಖೆಯ ವರದಿ ಆಧಾರದ ಮೇಲೆ ಎನ್ಡಿಟಿವಿ ವಿಶೇಷ ವರದಿಯೊಂದನ್ನು ಪ್ರಕಟಿಸಿದ್ದು, ಈ ವರದಿ ಭಾರತೀಯ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ ನೀಡಿದೆ.
"ಚೀನಾದ ಗಡಿ ಅತಿಕ್ರಮಣದ ಹಿಂದೆ 40 ವರ್ಷದ ಇತಿಹಾಸ"
"ಚೀನಾವು ದಶಕಗಳಿಂದ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳು ಸೇರಿದಂತೆ ಗಡಿ ಪ್ರದೇಶಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ನಿರ್ಮಾಣ ಚಟುವಟಿಕೆಗಳನ್ನು ಕೈಗೊಂಡಿದೆ. ಭಾರತವು ತನ್ನ ಭೂಪ್ರದೇಶದಲ್ಲಿ ಇಂತಹ ಆಕ್ರಮಣವನ್ನು ಎಂದಿಗೂ ಒಪ್ಪಿಕೊಂಡಿಲ್ಲ. ನ್ಯಾಯಸಮ್ಮತವಲ್ಲದ ಚೀನಾದ ಹಕ್ಕುಗಳನ್ನು ಒಪ್ಪಿಕೊಳ್ಳುವುದಕ್ಕೂ ಆಗುವುದಿಲ್ಲ," ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಭಾರತದಿಂದಲೂ ಚೀನಾದ ಗಡಿಯುದ್ದಕ್ಕೂ ಕಾಮಗಾರಿ
"ಭಾರತವು ತನ್ನ ಭದ್ರತೆಯ ಮೇಲೆ ಪ್ರಭಾವ ಬೀರುವ ಎಲ್ಲಾ ಬೆಳವಣಿಗೆಗಳ ಮೇಲೆ ನಿರಂತರವಾಗಿ ಲಕ್ಷ್ಯ ವಹಿಸಿರುತ್ತದೆ. ದೇಶದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ" ಎಂದು ಅರಿಂದಮ್ ಬಾಗ್ಚಿ ಹೇಳಿದ್ದಾರೆ. ಅಲ್ಲದೇ ಚೀನಾದ ಗಡಿಯುದ್ದಕ್ಕೂ ಭಾರತವೂ ಸಹ ರಸ್ತೆ, ಸೇತುವೆಗಳು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಯನ್ನು ಹೆಚ್ಚಿಸಿದೆ ಎಂದು ತಿಳಿಸಿದರು.
ಭಾರತದ ಗಡಿಯಲ್ಲಿ ಬದಲಾದ ಚಿತ್ರಣದ ವರದಿ
ಮಿಲಿಟರಿ ಬೆಳವಣಿಗೆಗಳ ಕುರಿತಾದ ಯುನೈಟೆಡ್ ಸ್ಟೇಟ್ಸ್ ರಕ್ಷಣಾ ಇಲಾಖೆಯ ವಾರ್ಷಿಕ ವರದಿಯಲ್ಲಿ ಚೀನಾ ಅಕ್ರಮವಾಗಿ ಅರುಣಾಚಲ ಪ್ರದೇಶದ ಗಡಿಯಲ್ಲಿ ಗ್ರಾಮವೊಂದನ್ನು ನಿರ್ಮಿಸಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಇದರಿಂದ ಎರಡು ರಾಷ್ಟ್ರಗಳ ನಡುವಿನ ವಾಸ್ತವಿಕ ನಿಯಂತ್ರಣ ರೇಖೆ ಅಥವಾ LAC ಉದ್ದಕ್ಕೂ ಉದ್ವಿಗ್ನತೆಗೆ ಕಾರಣವಾಗುತ್ತದೆ ಎಂದು US ತನ್ನ ವರದಿಯಲ್ಲಿ ವಿವರಿಸಿದೆ. "ಚೀನಾ-ಭಾರತ ಗಡಿ ಬಿಕ್ಕಟ್ಟಿನ ನಡುವೆಯೂ 2020ರಲ್ಲಿ, PRC (ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ) LAC ಯ ಪೂರ್ವ ವಲಯದಲ್ಲಿ PRC ಯ ಟಿಬೆಟ್ ಸ್ವಾಯತ್ತ ಪ್ರದೇಶ ಮತ್ತು ಭಾರತದ ಅರುಣಾಚಲ ಪ್ರದೇಶ ರಾಜ್ಯದ ನಡುವಿನ ವಿವಾದಿತ ಪ್ರದೇಶದೊಳಗೆ 100-ಮನೆಗಳ ದೊಡ್ಡ ನಾಗರಿಕ ಗ್ರಾಮವನ್ನು ನಿರ್ಮಿಸಿದೆ" ಎಂದು US ಡಿಪಾರ್ಟ್ಮೆಂಟ್ ಆಫ್ ಡಿಫರೆನ್ಸ್ ಹೇಳಿದೆ.
ಯುಎಸ್ ಕಾಂಗ್ರೆಸ್ಗೆ ಸಲ್ಲಿಸಿದ ವರದಿಯು "ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ, ವಿಶೇಷವಾಗಿ ಪೂರ್ವ ವಲಯದಲ್ಲಿ ಚೀನಾದ ಕಡೆಯಿಂದ ನಿರ್ಮಾಣ ಚಟುವಟಿಕೆಗಳನ್ನು ಉಲ್ಲೇಖಿಸುತ್ತದೆ" ಎಂದು ಬಾಗ್ಚಿ ಕೂಡ ಹೇಳಿದ್ದಾರೆ. ಈ ವರ್ಷದ ಆರಂಭದಲ್ಲಿ ಮಾಧ್ಯಮಗಳಲ್ಲಿ ಈ ವಿಷಯದ ಬಗ್ಗೆ ವರದಿಗಳು ಬಂದವು ಎಂದು ಅವರು ಹೇಳಿದ್ದಾರೆ.
ಅರುಣಾಚಲದ ಪ್ರದೇಶ ಗಡಿಯಲ್ಲಿ ಗ್ರಾಮ ನಿರ್ಮಾಣ
ಭಾರತದ ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶದಲ್ಲಿ ಚೀನಾ ಹೊಸ ಗ್ರಾಮ ರಚಿಸಿಕೊಂಡಿರುವುದು ಬಾಹ್ಯಾಕಾಶದಲ್ಲಿ ಸೆರೆಯಾದ ಚಿತ್ರಗಳು ತೋರಿದ್ದವು. 101ಕ್ಕೂ ಹೆಚ್ಚು ಮನೆಗಳನ್ನು ಈ ಗ್ರಾಮದಲ್ಲಿ ಕಟ್ಟಿಕೊಳ್ಳಲಾಗಿದ್ದು, ನವೆಂಬರ್.01ರ 2020ರಲ್ಲಿ ಇದೇ ಚಿತ್ರಗಳ ಮೇಲೆ ವಿಮರ್ಶೆ ಮಾಡಲಾಗಿತ್ತು. ಅಂದು ಚೀನಾ ಸೇನೆಯು ಭಾರತದ ಗಡಿಗೆ ಸೇರಿದ ಸರಿ ಸುಮಾರು 4.5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಚೀನಾ ಸೇನೆಯು ಪ್ರವೇಶಿಸುತ್ತಿದೆ ಎಂದು ಆರೋಪಿಸಲಾಗಿತ್ತು.
ಹಿಮಾಲಯದ ಪರ್ವತಗಳ ಪೂರ್ವ ಭಾಗದಲ್ಲಿ ಗಡಿ ವಿಚಾರಕ್ಕೆ ದಶಕಗಳ ಕಾಲದಿಂದಲೂ ಸಂಘರ್ಷ ಮತ್ತು ಹೋರಾಟ ನಡೆಯುತ್ತಿವೆ. ಇದರ ಮಧ್ಯೆ ಅರುಣಾಚಲ ಪ್ರದೇಶ ಸುಬನ್ಸಿರಿ ಜಿಲ್ಲೆ ಮೇಲ್ಭಾಗದಲ್ಲಿರುವ ಹಾಗೂ ತ್ಸಾರಿ ಚು ನದಿಗೆ ಹೊಂದಿಕೊಂಡಂತೆ ಈ ಗ್ರಾಮವನ್ನು ರಚಿಸಿಕೊಳ್ಳಲಾಗಿದೆ. ಇದೇ ಗಡಿ ಪ್ರದೇಶವು ದಶಕಗಳ ಕಾಲದಿಂದಲೂ ಭಾರತ ಮತ್ತು ಚೀನಾದ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು. ವಿವಾದ ಇತ್ಯರ್ಥಕ್ಕೂ ಮೊದಲೇ ಚೀನಾ ಅಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿರುವುದು ಗೋಚರಿಸಿತ್ತು.
ನವೆಂಬರ್.01, 2020 ಮತ್ತು 2019ರ ಆಗಸ್ಟ್.26ರ ಭಾವಚಿತ್ರಗಳ ನಡುವೆ ಸಾಕಷ್ಟು ವ್ಯತ್ಯಾಸಗಳು ಕಾಣುತ್ತಿವೆ. ಕಳೆದ 2019ರಲ್ಲಿ ಯಾವುದೇ ರೀತಿ ಕಾಮಗಾರಿಯಿಲ್ಲದೇ ಬಣಗುಡುತ್ತಿದ್ದ ಪ್ರದೇಶದ ಚಿತ್ರಣ ಇದೀಗ ಸಂಪೂರ್ಣ ಬದಲಾದಂತಿದೆ. ಅಂದರೆ ಒಂದು ವರ್ಷದಲ್ಲಿಯೇ ಚೀನಾ ಗಡಿಯಲ್ಲಿ ತನ್ನ ಕಾರ್ಯ ಸಾಧನೆ ಮಾಡಿಕೊಂಡಿದೆಯಾ ಎಂಬ ಅನುಮಾನಗಳನ್ನು ಇದೊಂದು ಚಿತ್ರವು ಹುಟ್ಟು ಹಾಕುತ್ತಿದೆ.
ಭಾರತದ ಗಡಿ ಪ್ರದೇಶದಲ್ಲಿ ಚೀನಾ ಕಾಮಗಾರಿ ಏಕೆ?
2020ರ ಅಕ್ಟೋಬರ್ ತಿಂಗಳಿನಲ್ಲಿ ಗಡಿ ಕಾಮಗಾರಿಗಳ ಬಗ್ಗೆ ಚೀನಾದ ವಿದೇಶಾಂಗ ಸಚಿವರೊಬ್ಬರು ಹೇಳಿಕೆ ನೀಡಿದ್ದರು. "ಗಡಿಯಲ್ಲಿ ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಭಾರತವು ಹೆಚ್ಚು ಹೆಚ್ಚು ಕಾಮಗಾರಿ ನಡೆಸುತ್ತಿದೆ. ಇದರಿಂದಾಗಿ ಗಡಿಯಲ್ಲಿ ಉಭಯ ಸೇನಾ ಪಡೆಗಳ ಚಟುವಟಿಕೆ ಹೆಚ್ಚಾಯಿತು. ಗಡಿಯು ಬೂದಿ ಮುಚ್ಚಿದ ಕೆಂಡದಂತಾ ಪರಿಸ್ಥಿತಿ ನಿರ್ಮಾಣವಾಗಲು ಇದೇ ಕಾರಣವಾಗಿತ್ತು" ಎಂದು ಚೀನಾದ ವಿದೇಶಾಂಗ ಸಚಿವರು ಹೇಳಿದ್ದರು. ಇಂದು ಚೀನಾದ ಗ್ರಾಮವು ಕಾಣುತ್ತಿರುವ ಪ್ರದೇಶದಲ್ಲಿ ಅಕ್ಟೋಬರ್ ನಲ್ಲಿ ಭಾರತ ಯಾವುದೇ ರಸ್ತೆ ಕಾಮಗಾರಿಯನ್ನೂ ನಡೆಸಿರಲಿಲ್ಲ. ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳೂ ನಡೆದಿರಲಿಲ್ಲ. ಆದರೀಗ ದಿಢೀರನೇ ಈ ಪ್ರದೇಶದಲ್ಲಿ ಚೀನಾದ ಒಂದು ಹಳ್ಳಿಯೇ ನಿರ್ಮಾಣವಾಗಿದೆ.
ಒಂದೇ ದಶಕದಲ್ಲಿ ಬದಲಾಯಿತು ಗಡಿ ಚಿತ್ರಣ
ಪ್ಲಾನೆಟ್ ಲ್ಯಾಬ್ ಐಎನ್ ಸಿ ಸಂಸ್ಥೆಯು ಬಾಹ್ಯಾಕಾಶದಿಂದ ಸೆರೆ ಹಿಡಿದ ಭಾವಚಿತ್ರಗಳನ್ನು ಖಾಸಗಿ ಸುದ್ದಿ ವಾಹಿನಿ(ಎನ್ ಡಿ ಟಿವಿ)ಗೆ ನೀಡಿದೆ. ಗೂಗಲ್ ಅರ್ಥ್ ಮೂಲಕ ಒಂದ ದಶಕದ ಹಿಂದೆ ಅದೇ ಪ್ರದೇಶವು ಹೇಗಿತ್ತು ಎನ್ನುವುದರ ಚಿತ್ರಣವನ್ನು ಮತ್ತೊಂದು ಕಡೆಯಲ್ಲಿ ತೋರಿಸಲಾಗಿದೆ. 10 ವರ್ಷಗಳಲ್ಲಿ ಬದಲಾದ ಚಿತ್ರಣವನ್ನು ಈ ಭಾವಚಿತ್ರಗಳು ತೋರಿಸುತ್ತವೆ.
ಸರ್ವೇಯರ್ ಜನರಲ್ ಆಫ್ ಇಂಡಿಯಾದ ನಕ್ಷೆಯನ್ನು ಭಾರತದ ಸರ್ಕಾರವು ತನ್ನ ಅಧಿಕೃತ ನಕ್ಷೆಯಾಗಿ ಬಳಸಿದೆ. ಈ ನಕ್ಷೆಯಲ್ಲಿ ಚೀನಾವು ಭಾರತದ ಭೂ ಪ್ರದೇಶದಲ್ಲಿ ಗ್ರಾಮವನ್ನು ರಚಿಸಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಭಾರತದಿಂದಲೂ ಸೇನಾ ಪಡೆಗಳಿಗಾಗಿ ರಸ್ತೆಗಳ ನಿರ್ಮಾಣ
ಭಾರತ-ಚೀನಾದ ಟಿಬೆಟ್ ಗಡಿಯಲ್ಲಿ ಒಂದು ಕಡೆ ಚೀನಾ ತನ್ನ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹೆಸರಿನಲ್ಲಿ ನಿರ್ಮಾಣ ಕಾಮಗಾರಿಗಳನ್ನು ನಡೆಸುತ್ತಿದೆ. ಇದರ ಮಧ್ಯೆ ಚೀನಾವನ್ನು ಎದುರಿಸಲು ಅಗತ್ಯವಿರುವ ವ್ಯವಸ್ಥೆಯನ್ನು ಭಾರತೀಯ ಸೇನೆಗೆ ಒದಗಿಸಬೇಕಿದೆ. ಭಾರತೀಯ ಸೇನೆಯು ಟ್ಯಾಂಕರ್, ಭಾರಿ ಫಿರಂಗಿ, ಸೇನೆ ಮತ್ತು ಯಂತ್ರೋಪಕರಣಗಳನ್ನು ಗಡಿ ಪ್ರದೇಶಕ್ಕೆ ಸ್ಥಳಾಂತರಿಸಬೇಕಾಗುತ್ತದೆ. 1962ರಲ್ಲಿ ಚೀನಾದ ಗಡಿಯವರೆಗೂ ಕಾಲ್ನಡಿಗೆಯಲ್ಲೇ ಸಾಗಿ ಪಡಿತರವನ್ನು ಸರಬರಾಜು ಮಾಡುವಂತಾ ಪರಿಸ್ಥಿತಿಯನ್ನು ಎದುರಿಸಲಾಗಿತ್ತು. ಇಂದು ರಸ್ತೆಯು ದ್ವಿಪಥವಾಗದಿದ್ದರೆ ಅಲ್ಲಿ ರಸ್ತೆಯನ್ನು ಹೊಂದಿರುವ ಉದ್ದೇಶವೇ ವ್ಯರ್ಥವಾಗುತ್ತದೆ. ಆದ್ದರಿಂದ ಡಬಲ್ ಲೇನಿಂಗ್ ಅನ್ನು 7 ಮೀಟರ್ ಅಗಲದ ರಸ್ತೆಗೆ ಅನುಮತಿ ನೀಡಬೇಕು," ಎಂದು ಕೇಂದ್ರ ಸರ್ಕಾರದ ಪರವಾಗಿ ಈಗಾಗಲೇ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಸುಪ್ರೀಂಕೋರ್ಟ್ ಎದುರು ವಾದ ಮಂಡಿಸಿದ್ದಾರೆ.
ಚೀನಾ ಗಡಿಯವರೆಗೆ ಹೋಗುವ ಮಹತ್ವಾಕಾಂಕ್ಷೆಯ ಚಾರ್ಧಾಮ್ ಹೆದ್ದಾರಿ ಯೋಜನೆಯಲ್ಲಿ 2018ರ ಸುತ್ತೋಲೆಯ 5.5 ಮೀಟರ್ ಕ್ಯಾರೇಜ್ವೇ ಅಗಲವನ್ನು ಅನುಸರಿಸಲಾಗುತ್ತದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು(MoRTH) ಸೆಪ್ಟೆಂಬರ್ 8, 2020ರ ಆದೇಶವನ್ನು ಮಾರ್ಪಡಿಸುವಂತೆ ಸರ್ಕಾರದ ಪರ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಕೋರಿದ್ದಾರೆ.