ಭವಾನಿಪುರದಲ್ಲಿ ಹೈ ವೋಲ್ಟೆಜ್ ಸ್ಪರ್ಧೆ: ದೀದಿ ಎದುರು ಬಿಜೆಪಿಯಿಂದ ವಕೀಲೆ ಕಣಕ್ಕೆ?
ಕೋಲ್ಕತ್ತಾ, ಸೆಪ್ಟೆಂಬರ್, 09: ಪಶ್ಚಿಮ ಬಂಗಾಳದಲ್ಲಿ ಭವಾನಿಪುರ ಉಪಚುನಾವಣೆಯಲ್ಲಿ ಟಿಎಂಸಿ ಯಿಂದ ನಿರೀಕ್ಷೆಯಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ ಮಾತ್ರ ತನ್ನ ಯಾವುದೇ ಅಭ್ಯರ್ಥಿಯನ್ನು ಟಿಎಂಸಿ ಎದುರು ಸ್ಪರ್ಧೆಗೆ ಇಳಿಸಲಾರೆವು ಎಂದು ಹೇಳಿದೆ. ಆದರೆ ಬಿಜೆಪಿ ಈಗ ಮಮತಾ ಎದುರು ವಕೀಲೆ ಪ್ರಿಯಾಂಕ ಟಿಬ್ರೆವಾಲ್ರನ್ನು ತಮ್ಮ ಅಭ್ಯರ್ಥಿಯಾಗಿ ಆರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಹೈ ವೋಲ್ಟೇಜ್ ಸ್ಪರ್ಧೆ ನಡೆಯಲಿದ್ದು, ಮುಖ್ಯಮಂತ್ರಿ ಕುರ್ಚಿಯನ್ನು ತಮ್ಮ ಕೈಯಲ್ಲೇ ಉಳಿಸಿಕೊಳ್ಳಲು ಈ ಚುನಾವಣೆಯಲ್ಲಿ ಜಯ ಗಳಿಸುವುದು ಮಮತಾ ಬ್ಯಾನರ್ಜಿಗೆ ಅನಿವಾರ್ಯವಾಗಿದೆ. ಈ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ ಆಜ್ಞೆಯಂತೆ ಟಿಎಂಸಿ ಎದುರು ಯಾವುದೇ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ.
ಉಪಚುನಾವಣೆ: ಇಂದಿನಿಂದ ದೀದಿ ಪ್ರಚಾರ, ಅಭ್ಯರ್ಥಿ ಕಣಕ್ಕಿಳಿಸದ ಕಾಂಗ್ರೆಸ್
ಪ್ರಧಾನ ಮಂತ್ರಿ ನರೇಂದ್ರ ಮೋದಿಯಿಂದ ಪ್ರೇರಣೆಗೆ ಒಳಪಟ್ಟು ಬಿಜೆಪಿಗೆ ಆಗಸ್ಟ್ 2014 ರಲ್ಲಿ ಸೇರ್ಪಡೆಯಾದ ಬಾಬೂಲ್ ಸುಪ್ರಿಯೋರ ಕಾನೂನು ಸಲಹೆಗಾರರಾಗಿ ವಕೀಲೆ ಪ್ರಿಯಾಂಕ ಟಿಬ್ರೆವಾಲ್ ಕಾರ್ಯ ನಿರ್ವಹಿಸುತ್ತಿದ್ದರು. 2015 ರಲ್ಲಿ ಕೋಲ್ಕತಾ ಮುನ್ಸಿಪಲ್ ಕೌನ್ಸಿಲ್ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ 58 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪ್ರಿಯಾಂಕ ಟಿಬ್ರೆವಾಲ್ ಸ್ಪರ್ಧಿಸಿದ್ದರು. ಆದರೆ ತೃಣಮೂಲ ಕಾಂಗ್ರೆಸ್ನ ಸ್ಪಪನ್ ಸಮ್ಮದರ್ ಎದುರು ಪರಾಭವಗೊಂಡಿದ್ದಾರೆ.
ಯಾರಿದು ವಕೀಲೆ ಪ್ರಿಯಾಂಕ ಟಿಬ್ರೆವಾಲ್?
ಬಿಜೆಪಿ ಪಕ್ಷದಲ್ಲಿದ್ದ ತಮ್ಮ ಆರು ವರ್ಷಗಳ ಕಾಲದಲ್ಲಿ ಪ್ರಿಯಾಂಕ ಬಿಜೆಪಿಯ ಹಲವಾರು ಕಾರ್ಯಗಳನ್ನು ನಿರ್ವಹಿಸಿದ್ದಾರೆ. 2020 ರಲ್ಲಿ ಪಶ್ಚಿಮ ಬಂಗಾಳದ ಭಾರತೀಯ ಜನತಾ ಯುವ ಮೋರ್ಚಾದ ಉಪಾಧ್ಯಕ್ಷೆಯಾಗಿ ಪ್ರಿಯಾಂಕ ಟಿಬ್ರೆವಾಲ್ ಆಯ್ಕೆಯಾಗಿದ್ದಾರೆ. ಇನ್ನು 2021 ರಲ್ಲಿ ವಕೀಲೆ ಪ್ರಿಯಾಂಕ ಟಿಬ್ರೆವಾಲ್ ಇಂತಲಿ ಕ್ಷೇತ್ರದಲ್ಲಿ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಿದ್ದು ಆದರೆ ಟಿಎಂಸಿಯ ಸ್ವರ್ಣ ಕಮಲ್ ಸಹಾ ಎದುರು 58,257 ಮತಗಳ ಅಂತರದ ಸೋಲನ್ನುಡಿದ್ದಾರೆ. 1981 ರಲ್ಲಿ ಜುಲೈ 7 ರಂದು ಕೋಲ್ಕತ್ತಾದಲ್ಲಿ ಜನಿಸಿದ ಪ್ರಿಯಾಂಕ ಟಿಬ್ರೆವಾಲ್, ತನ್ನ ಶಾಲಾ ಶಿಕ್ಷಣವನ್ನು ವೆಲ್ಯಾಂಡ್ ಗೌಲ್ಡ್ಸ್ಮಿತ್ ಶಾಲೆಯಲ್ಲಿ ಕಲಿತಿದ್ದಾರೆ. ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಬಳಿಕ ತನ್ನ ಕಾನೂನು ಪದವಿಯನ್ನು 2007 ರಲ್ಲಿ ಕೋಲ್ಕತ್ತಾ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಹಜ್ರಾ ಕಾನೂನು ಕಾಲೇಜಿನಿಂದ ಪಡೆದಿದ್ದಾರೆ. ಹಾಗೆಯೇ ಎಂಬಿಎ ಪದವಿಯನ್ನು ಥೈಲಾಂಡ್ ಅಸಮ್ಷನ್ ವಿಶ್ವವಿದ್ಯಾನಿಲಯದಿಂದ ಪಡದಿದ್ದಾರೆ.
"ನಾನು ಪ್ರಧಾನಿ ಮೋದಿಯ ಸಂದೇಶಕಿ"
ಈ ಬಗ್ಗೆ ನ್ಯೂಸ್ 18 ಗೆ ಪ್ರತಿಕ್ರಿಯೆ ನೀಡಿರುವ ಟಿಬ್ರೆವಾಲ್, "ಪಕ್ಷ ನನ್ನನ್ನು ಸಂಪರ್ಕ ಮಾಡಿ, ಭವಾನಿಪುರದಲ್ಲಿ ನಾನು ಸ್ಪರ್ಧಿಸಲು ಇಚ್ಛಿಸುತ್ತೇನೆಯೇ ಇಲ್ಲವೇ ಎಂಬ ಅಭಿಪ್ರಾಯವನ್ನು ಕೇಳಿದ್ದಾರೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಹಲವಾರು ಮಂದಿಯ ಹೆಸರು ಇದೆ. ಆದರೆ ನನಗೆ ಯಾರೆಲ್ಲಾ ಹೆಸರು ಇದೆ ಎಂದು ತಿಳಿದಿಲ್ಲ. ನನಗೆ ಇಷ್ಟು ವರ್ಷಗಳ ಕಾಲ ಬೆಂಬಲ ನೀಡಿದ ಪಕ್ಷದ ಹಿರಿಯ ನಾಯಕರಿಗೆ ಈ ಮೂಲಕ ನಾನು ಧನ್ಯವಾದ ತಿಳಿಸುತ್ತೇನೆ," ಎಂದು ತಿಳಿಸಿದ್ದಾರೆ. ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ಎದುರು ನನ್ನನ್ನು ಪಕ್ಷವು ಕಣಕ್ಕೆ ಇಳಿಸಿದರೆ, ನಾನು ನನ್ನಿಂದ ಸಾಧ್ಯವಾದಷ್ಟು ಕಾರ್ಯ ನಿರ್ವಹಿಸುತ್ತೇನೆ. ನ್ಯಾಯ ಹಾಗೂ ಅನ್ಯಾಯದ ನಡುವಿನ ಹೋರಾಟದಲ್ಲಿ ಜನರು ನನಗೆ ಬೆಂಬಲ ನೀಡುತ್ತಾರೆ ಎಂಬ ಭರವಸೆ ನನಗೆ ಇದೆ. ಟಿಎಂಸಿ ಯ ದುರಾಡಳಿತದ ವಿರುದ್ದ ಜನರು ನನಗೆ ಮತ ಹಾಕುತ್ತಾರೆ ಎಂಬ ಭರವಸೆಯೂ ನನಗೆ ಇದೆ. ಇದು ಚುನಾವಣಾ ನಂತರದ ಹಿಂಸೆಯ ವಿರುದ್ದ ಹಾಗೂ ಜನರು ಪಶ್ಚಿಮ ಬಂಗಾಳದಲ್ಲಿ ಅನುಭವಿಸುತ್ತಿರುವ ಬಳಲುತ್ತಿರುವುದರ ವಿರುದ್ದ ನನ್ನ ಹೋರಾಟ," ಎಂದು ಕೂಡಾ ಹೇಳಿದ್ದಾರೆ. "ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಸಂದೇಶಕಿ, ಪ್ರಧಾನಿ ನರೇಂದ್ರ ಮೋದಿಯ ಆಡಳಿತ ಆರಂಭವಾದ ನಂತರ ದೇಶವು ಬೆಳೆಯುತ್ತಿದೆ, ಆದ್ದರಿಂದ ಭವಾನಿಪುರದ ಜನರು ನನಗೆ ಮತ ಹಾಕಬೇಕು ಎಂದು ನಾನು ಬಯಸುತ್ತೇನೆ. ಈ ಮೂಲಕ ಪಶ್ಚಿಮ ಬಂಗಾಳವನ್ನೇ ನಾವು ಅಭಿವೃದ್ದಿ ಪಡಿಸಬಹುದು," ಎಂದಿದ್ದಾರೆ.
ಉಪಚುನಾವಣೆ: ಮಮತಾ ವಿರುದ್ದ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವ ಸಾಧ್ಯತೆ
ಬರೀ ಸಿಎಂ ಕುರ್ಚಿಗಾಗಿ ಮಮತಾ ಸ್ಪರ್ಧೆ
"ಚುನಾವಣಾ ನಂತರದ ಹಿಂಸಾಚಾರದ ವಿರುದ್ದ ನಾನು ಹೋರಾಡಿದ್ದೇನೆ, ಕೋರ್ಟ್ ಕೇಸುಗಳನ್ನು ಹಾಕಿದ್ದೇನೆ. ಇಂತಲಿಯಲ್ಲಿ ನಾನು ಬಿಜೆಪಿ ಕಾರ್ಯಕರ್ತರ ಪರವಾಗಿ ವಾದ ಮಾಡಿದ್ದೇನೆ. ಟಿಎಂಸಿ ಗೂಂಡಾಗಳಿಗೆ ಬೆದರಿ ಬಿಜೆಪಿ ಕಾರ್ಯಕರ್ತರು ತಮ್ಮ ಮನೆಯನ್ನೇ ತೊರೆದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ರಕ್ಷಪಾತವನ್ನು ನಿಲ್ಲಿಸುವಂತೆ ನಾನು ಟಿಎಂಸಿಗೆ ಮನವಿ ಮಾಡುತ್ತೇನೆ. ಭವಾನಿಪುರದಲ್ಲಿ ಯಾರು ಶಾಸಕರಾದರೆ ಉತ್ತಮ ಎಂದು ಇಲ್ಲಿಯ ಜನರೇ ನಿರ್ಧಾರ ಮಾಡಲಿ. ಬಿಜೆಪಿಯೇ ಅಥವಾ ಮಮತಾ ಬ್ಯಾನರ್ಜಿಯೇ? ಮಮತಾ ಬ್ಯಾನರ್ಜಿ ಬರೀ ತಮ್ಮ ಸಿಎಂ ಕುರ್ಚಿಯನ್ನು ಉಳಿಸಿಕೊಳ್ಳಲು ಸ್ಪರ್ಧೆಗೆ ಇಳಿದಿದ್ದಾರೆ. ಅಧಿಕಾರಯನ್ನು ಮತ್ತೆ ತನ್ನ ವಶದಲ್ಲೇ ಇಟ್ಟುಕೊಳ್ಳುವುದು ಮಾತ್ರ ಮಮತಾರ ಉದ್ದೇಶ," ಎಂದು ಆರೋಪ ಮಾಡಿದ್ದಾರೆ.
ಪಶ್ಚಿಮ ಬಂಗಾಳ ಉಪಚುನಾವಣೆ: ಮಮತಾ ಬ್ಯಾನರ್ಜಿ ಭವಾನಿಪುರದಿಂದ ಕಣಕ್ಕೆ
ಮಮತಾ ಉಪಚುನಾವಣೆಯಲ್ಲಿ ಸ್ಪರ್ಧಿಸುವುದು ಏಕೆ?
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರ ಭವಾನಿಪುರದಲ್ಲಿ ಸ್ಪರ್ಧಿಸಿರಲಿಲ್ಲ. ಬದಲಾಗಿ ನಂದಿಗ್ರಾಮ ಕ್ಷೇತ್ರದಲ್ಲಿ ಸ್ಪರ್ಧಿಸಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸೋಲನ್ನುಂಡಿದ್ದರು. ಬಳಿಕ ಮಮತಾ ಬ್ಯಾನರ್ಜಿ ಮೇ 5ಕ್ಕೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಆದರೆ ನವೆಂಬರ್ 5 ರ ಒಳಗೆ ವಿಧಾನಸಭೆಗೆ ಆಯ್ಕೆಯಾಗಬೇಕಿದೆ.ಈ ಹಿನ್ನೆಲೆಯಿಂದಾಗಿ ಮಮತಾ ಬ್ಯಾನರ್ಜಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಲು ಭವಾನಿಪುರದ ಶಾಸಕ ಸ್ಥಾನಕ್ಕೆ ಶೋಭನ್ದೇವ್ ಚಟ್ಟೋಪಾಧ್ಯಾಯ ರಾಜೀನಾಮೆ ನೀಡಿದ್ದರು. ಸೆಪ್ಟೆಂಬರ್ 30ಕ್ಕೆ ಉಪಚುನಾವಣೆ ನಿಗದಿಯಾಗಿದೆ. ಭವಾನಿಪುರ ಮಾತ್ರವಲ್ಲದೇ ಇನ್ನೂ ಎರಡು ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ. ಮುರ್ಷಿದಾಬಾದ್ನ ಜಂಗೀಪುರ ಕ್ಷೇತ್ರದಲ್ಲಿ ಮಾಜಿ ಸಚಿವ ಜಾಕಿರ್ ಹುಸೇನ್, ಸಮ್ಸೇರ್ಗಂಜ್ ಕ್ಷೇತ್ರದಿಂದ ಅಮಿರುಲ್ ಇಸ್ಲಾಂ ಟಿಎಂಸಿಯಿಂದ ಕಣಕ್ಕೆ ಇಳಿಸಲಾಗಿದೆ. ಈ ಎರಡೂ ಕ್ಷೇತ್ರಗಳ ಶಾಸಕರು ಕೋವಿಡ್ನಿಂದಾಗಿ ಸಾವನ್ನಪ್ಪಿದ್ದಾರೆ. ಹೀಗಾಗಿ ಉಪಚುನಾವಣೆ ನಡೆಯುತ್ತಿದೆ.