ಸಿಗ್ನಲ್ ನಲ್ಲಿ ಪೊಲೀಸರಿಲ್ಲ ಎಂದು ಸಂಚಾರ ನಿಯಮ ಉಲ್ಲಂಘಿಸಿದ್ರೂ ದಂಡ ಪಕ್ಕಾ !
ಬೆಂಗಳೂರು, ಜನವರಿ 21: ಸಿಗ್ನಲ್ ನಲ್ಲಿ ಸಂಚಾರ ಪೊಲೀಸರು ಇಲ್ಲ ಎಂದು ಭಾವಿಸಿ ಸಿಗ್ನಲ್ ಜಂಪ್ ಮಾಡುವುದು, ಹೆಲ್ಮೆಟ್ ಇಲ್ಲದೇ ವಾಹನದಲ್ಲಿ ಸಂಚರಿಸಿದ್ರೆ ದಂಡದ ರಶೀದಿ ಮನೆ ಬಾಗಿಲಿಗೆ ಬರುತ್ತದೆ. ಸಿಸಿಟಿವಿ ದೃಶ್ಯ ಆಧರಿಸಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರ ಮನೆ ಬಾಗಿಲಿಗೆ ದಂಡದ ರಶೀದಿ ಬರುತ್ತದೆ !
ಕೋವಿಡ್ ಲಾಕ್ ಡೌನ್ ವೇಳೆ ಯಾರೂ ಇಲ್ಲ ಎಂದು ಭಾವಿಸಿ ವಾಹನ ಸವಾರರು ಬೇಕಾಬಿಟ್ಟಿಯಾಗಿ ವಾಹನ ಸಂಚಾರ ಮಾಡಿದವರ ಮನೆ ಬಾಗಲಿಗೆ ರಶೀದಿ ಕಳಿಸಿ ದಂಡ ವಸೂಲಿ ಮಾಡಿದ್ದಾರೆ. ಕರೋನಾ ಕಷ್ಟ ಕಾಲದಲ್ಲೂ ಬೆಂಗಳೂರು ಸಂಚಾರ ಪೊಲೀಸರು ಒಂದೇ ವರ್ಷದಲ್ಲಿ 99 ಕೋಟಿ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ: ವಿಶೇಷ ಕಾರ್ಯಾಚರಣೆ ಹೇಗಿರಲಿದೆ ಗೊತ್ತೇ?
ಕಷ್ಟ ಕಾಲದಲ್ಲೂ ಬಿಡಲಿಲ್ಲ:
ಹೌದು ಬೆಂಗಳೂರು ಸಂಚಾರ ಪೊಲೀಸರು ಕಳೆದ ವರ್ಷ ಬೆಂಗಳೂರಿನಲ್ಲಿ ದಾಖಲಾದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಅಂಕಿ ಅಂಶ ಬಿಡುಗಡೆ ಮಾಡಿದ್ದಾರೆ. ಕಳೆದ ವರ್ಷದಲ್ಲಿ 73,24,289 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ 99, 62, 40,510 ರೂಪಾಯಿ ಅಧಿಕೃತ ದಂಡವನ್ನು ವಸೂಲಿ ಮಾಡಲಾಗಿದೆ. ಕರೋನಾ ಕಷ್ಟ ಕಾಲದಲ್ಲೂ ಜನರಿಗೆ ದಂಡ ವಿಧಿಸಿ ಬೆಂಗಳೂರು ಸಂಚಾರ ಪೊಲೀಸರು ತಮ್ಮ ಖಜಾನೆ ತುಂಬಿಸಿದ್ದಾರೆ. ರಶೀದಿ ನೀಡದಿರುವುದು ಟೋಯಿಂಗ್ ವಸೂಲಿ ಎಲ್ಲವನ್ನೂ ಪರಿಗಣಿಸಿದರೆ ನೂರು ಕೋಟಿಯ ಗಡಿ ದಾಟಿ ಬಿಡುತ್ತದೆ !
ಮನೆ ಬಾಗಿಲಿಗೆ ರಶೀದಿ:
ಕರೋನಾ ಸೋಂಕು ಹಿನ್ನೆಲೆಯಲ್ಲಿ ಐದು ತಿಂಗಳ ಕಾಲ ಲಾಕ್ ಡೌನ್ ನಿಯಮ ವಿಧಿಸಲಾಗಿತ್ತು. ಈ ವೇಳೆ ಸಂಚಾರದ ಮೇಲೂ ನಿರ್ಬಂಧ ವಿಧಿಸಲಾಗಿತ್ತು. ಸಿಗ್ನಲ್ ಗಳಲ್ಲಿ ನಿಂತು ದಂಡ ವಸೂಲಿ ಮಾಡುವುದನ್ನು ಬೆಂಗಳೂರು ಸಂಚಾರ ಪೊಲೀಸರು ಕೈ ಬಿಟ್ಟಿದ್ದರು. ಇದನ್ನೇ ಮನಗೊಂಡ ವಾಹನ ಸವಾರರು ಬೇಕಾಬಿಟ್ಟಿ ಓಡಾಡತೊಡಗಿದ್ದರು. ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸಂಬಂಧ ಸಿಸಿ ಟಿವಿ ಕ್ಯಾಮರಾ ದೃಶ್ಯ ಆಧರಿಸಿ ವಾಹನ ಸವಾರರಿಗೆ ನೋಟಿಸ್ ನೀಡಿ ದಂಡ ವಸೂಲಿ ಮಾಡಲಾಗಿದೆ.
ಕರೋನಾ ಕಷ್ಟ ಕಾಲದಲ್ಲೂ ವಸೂಲಿ:
ಹೆಲ್ಮೆಟ್ ಇಲ್ಲದೇ ಬೈಡ್ ಓಡಿಸಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ 27.59 ಲಕ್ಷ ಪ್ರಕರಣ ದಾಖಲಾಗಿವೆ. ಹಿಂಬದಿ ಸವಾರನ ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ ಮಾಡಿದ 6.62 ಲಕ್ಷ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ಇನ್ನು ಸಿಗ್ನಲ್ ಜಂಪ್ ಮಾಡಿ ವಾಹನ ಚಾಲನೆ ಮಾಡಿದ ಪ್ರಕರಣ 8. 12 ಲಕ್ಷ ಪ್ರಕರಣ ದಾಖಲಾಗಿವೆ. ಕರೋನಾ ಕಷ್ಟ ಕಾಲದಲ್ಲೂ ಈ ಪರಿಯ ಸಂಚಾರ ನಿಯಮ ಉಲ್ಲಂಘನೆಯಾಗಿರುವುದು ಪೊಲೀಸರನ್ನು ಬೆರಗುಗೊಳಿಸಿದೆ. ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರು ದಂಡ ವಸೂಲಿಗೆ ಬಿಗಿ ಕ್ರಮ ಕೈಗೊಂಡಿರುವ ಕಾರಣ ಈ ಪರಿಯ ದಂಡ ವಸೂಲಿ ಮಾಡಲಾಗಿದೆ.
ಕುಡಿದು ವಾಹನ ಚಾಲನೆ:
ಕುಡಿದು ವಾಹನ ಚಾಲನೆ ಮಾಡುವುದು ಮಹಾ ಅಪರಾಧ. ಕುಡಿದು ವಾಹನ ಚಾಲನೆ ಮಾಡಿದರೆ ಅಪಘಾತಗಳು ಆಗುವ ಸಾಧ್ಯತೆಯಿದೆ. ಕುಡಿದು ವಾಹನ ಚಾಲನೆ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದರೆ ಅಂತಹವರ ವಾಹನ ಜಪ್ತಿ ಮಾಡಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುತ್ತದೆ. ನ್ಯಾಯಾಧೀಶರ ಆದೇಶದ ಅನ್ವಯ ದಂಡವನ್ನು ವಿಧಿಸಲಾಗುತ್ತದೆ. ಇತ್ತೀಚೆಗೆ ಸಂಚಾರ ನಿಯಮಗಳಿಗೆ ತಿದ್ದುಪಡಿ ತಂದು ಕುಡಿದು ವಾಹನ ಚಾಲನೆ ಮಾಡಿದವರಿಗೆ ಸಾವಿರ ಗಟ್ಟಲೇ ದಂಡ ವಿಧಿಸಲಾಗುತ್ತದೆ. ಇಷ್ಟು ಕಠಿಣ ಕಾನೂನು ಇದ್ದರೂ, ಕುಡಿದು ವಾಹನ ಚಾಲನೆ ಮಾಡಿ ಸಿಕ್ಕಿ ಬೀಳವರು ಕಡಿಮೆ ಇಲ್ಲ. ಒಂದು ವರ್ಷದಲ್ಲಿ ಐದು ಸಾವಿರ ಜನ ಕುಡಿದು ವಾಹನ ಚಾಲನೆ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
80 ಲಕ್ಷ ವಾಹನ :
ರಾಜಧಾನಿ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ 80 ಲಕ್ಷ ದಾಟಿದೆ. ಇನ್ನು 2022-23 ರ ವೇಳೆಗೆ ವಾಹನಗಳ ಸಂಖ್ಯೆಯೂ ಕೋಟಿ ದಾಡುವ ಬಗ್ಗೆ ಸಾರಿಗೆ ಅಧಿಕಾರಿಗಳು ತಿಳಿಸಿದ್ದರು. ವಾಹನಗಳ ಹೆಚ್ಚಳ ಹಾಗೂ ಜನ ಸಂಖ್ಯೆ ಬೆಳವಣಿಗೆಯಾದಂತೆ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗಳು ಮಾತ್ರ ಬದಲಾಗಿಲ್ಲ. ಸಂಚಾರ ಪೊಲೀಸರು ಕೇವಲ ದಂಡ ವಸೂಲಿ ನಿಯಮಗಳನ್ನು ಪರಿಷ್ಕೃತಗೊಳಿಸುತ್ತಿದ್ದಾರೆ ಹೊರತು ಪಡಿಸಿ, ಸುಗಮ ಸಂಚಾರದ ಬಗ್ಗೆಯಾಗಲೀ ಶಾಶ್ವತ ಸಂಚಾರ ನಿಯಮ ಉಲ್ಲಂಘನೆ ನಿಯಂತ್ರಣಕ್ಕೆ ಆದ್ಯತೆ ನೀಡುತ್ತಿಲ್ಲ. ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಠಾಣಾವಾರು ನೀಡುವ ದಂಡ ವಸೂಲಿ ಟಾರ್ಗೆಟ್ ಮುಟ್ಟಲಿಕ್ಕೆ ಸಾಧ್ಯ ಎನ್ನುವ ಮನಸ್ಥಿತಿಯಲ್ಲಿ ಸಂಚಾರ ಪೊಲೀಸರು ಜನ ಸಾಮಾನ್ಯರಿಂದ ದಂಡ ವಸೂಲಿ ಮಾಡುತ್ತಿದ್ದಾರೆ. ಕೇವಲ ದಂಡದ ಮೊತ್ತದಿಂದಲೇ ಸಂಚಾರ ನಿಯಮ ಉಲ್ಲಂಘನೆಯಾಗದಂತೆ ಕ್ರಮ ಜರುಗಿಸಲು ಸಾಧ್ಯವಿಲ್ಲ. ಇದಕ್ಕೆ ಪರ್ಯಾಯ ಆಲೋಚನೆ ಬಗ್ಗೆ ಈವರಗೂ ಸಂಚಾರ ಪೊಲೀಸರು ಚಿಂತನೆ ನಡೆಸಿಲ್ಲ. ವಾಹನಗಳಿಗೆ ಅನುಗುಣವಾಗಿ ಎಲ್ಲೂ ಪಾರ್ಕಿಂಗ್ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ. ಆದರೆ ಇದ್ಯಾವುದೂ ಪೊಲೀಸರಿಗೆ ಮುಖ್ಯವಾಗಿಲ್ಲ. ಬದಲಿಗೆ ವಾಹನ ಸವಾರರು ನಿಯಮ ಉಲ್ಲಂಘಿಸಬೇಕು. ದಂಡ ಕಟ್ಟಬೇಕು. ಸಂಚಾರ ಪೊಲೀಸರು ದಂಡ ವಸೂಲಿ ಟಾರ್ಗಟ್ ಪ್ರತಿ ವರ್ಷ ಮುಟ್ಟಬೇಕು.
ದಂಡ ವಸೂಲಿ ಕ್ರಮ:
ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ಪೊಲೀಸರ ದಂಡ ವಸೂಲಿ ಕ್ರಮದ ಬಗ್ಗೆ ಸಾರ್ವಜನಿಕರಲ್ಲಿ ದೊಡ್ಡ ಮಟ್ಟದ ಆಕ್ರೋಶ ಮನೆ ಮಾಡಿದೆ. ಸಂಚಾರ ಪೊಲೀಸರ ವರ್ತನೆ, ಪಾರ್ಕಿಂಗ್ ನಿಯಮ ಉಲ್ಲಂಘನೆ ಮಾಡಿದ ವಾಹನಗಳನ್ನು ಟೋಯಿಂಗ್ ಮಾಡುವ ಗುತ್ತಿಗೆಯನ್ನು ಖಾಸಗಿ ವಾಹನಗಳಿಗೆ ವಹಿಸಲಾಗಿದೆ. ಠಾಣಾವಾರು ಖಾಸಗಿ ವಾಹನಗಳು ಕಾರ್ಯ ನಿರ್ವಹಿಸುತ್ತಿವೆ. ಲಾಭದ ಉದ್ದೇಶ ಇಟ್ಟುಕೊಂಡೇ ಬರುವ ಟೋಯಿಂಗ್ ಸಿಬ್ಬಂದಿ ಪಾರ್ಕಿಂಗ್ ಮಾಡಿರುವ ವಾಹನಗಳನ್ನು ಟೋಯಿಂಗ್ ಮಾಡಿ ಹಣ ವಸೂಲಿ ಮಾಡುತ್ತಾರೆ. ಟೋಯಿಂಗ್ ವಾಹನ ಜತೆ ಹೋಗುವ ಪೊಲೀಸ್ ಸಿಬ್ಬಂದಿ ಕೂಡ ಟೋಯಿಂಗ್ ವಾಹನ ಜತೆ ಶಾಮೀಲಾಗಿರುವ ಆರೋಪಗಳಿವೆ. ವಾಹನಗಳಿಗೆ ಅನುಗುಣವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಿ ಅಲ್ಲಿ ಪಾರ್ಕಿಂಗ್ ಮಾಡದ ವಾಹನಗಳನ್ನು ಟೋಯಿಂಗ್ ಮಾಡುವುದರಲ್ಲಿ ಅರ್ಥವಿದೆ. ಆದರೆ ಪೊಲೀಸರು ಎಲ್ಲಾ ಕಡೆ ನೋ ಪಾರ್ಕಿಂಗ್ ಬೋರ್ಡ್ ಹಾಕಿ ವಾಹನ ಟೋಯಿಂಗ್ ಮಾಡಿ ದುಬಾರಿ ದಂಡ ವಿಧಿಸಲಾಗುತ್ತಿದೆ. ಇದು ಸಾರ್ವಜನಿಕರಲ್ಲಿ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ.
|
ಟೋಯಿಂಗ್ ದಂಧೆ:
ಬೆಂಗಳೂರಿನ ಗಾಂಧಿ ನಗರದಲ್ಲಿ ಹೋಟೆಲ್ ಮುಂದೆ ವಾಹನ ನಿಲ್ಲಿಸಿದ್ದರು. ಅಲ್ಲಿಗೆ ಬಂದ ಟೋಯಿಂಗ್ ಸಿಬ್ಬಂದಿ, ಹಿಂದೆ ಮುಂದೆ ನೋಡದೇ ದ್ವಿಚಕ್ರ ವಾಹನ ಟೋಯಿಂಗ್ ಮಾಡಿದರು. ಈ ಕೂಡಲೇ ಅಲ್ಲಿಗೆ ಬಂದ ವಾಹನ ಮಾಲೀಕ ಪರಿ ಪರಿ ಕೇಳಿದರೂ ವಾಹನ ಕೊಡಲಿಲ್ಲ. ಇದರಿಂದ ರೊಚ್ಚಿಗೆದ್ದ ವಾಹನ ಮಾಲೀಕ ಟೋಯಿಂಗ್ ವಾಹನ ಹತ್ತಿ ಬಾಯಿ ಬಡಿದುಕೊಂಡು ಟೋಯಿಂಗ್ ವಾಹನದಲ್ಲೇ ತೆರಳುತ್ತಿದ್ದ ದೃಶ್ಯ ನೋಡಿ ಸಾರ್ವಜನಿಕರು ಪೊಲೀಸರ ವಿರುದ್ಧ ಕಿಡಿ ಕಾರಿದರು.