ಕೆ.ಜಿ. ಹಳ್ಳಿ ಗಲಭೆಯಲ್ಲಿ 4.49 ಕೋಟಿ ರೂ ನಷ್ಟದ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಕೆ
ಬೆಂಗಳೂರು, ಆ. 18: ಡಿ.ಜೆ. ಹಳ್ಳಿ ಹಾಗೂ ಕೆ.ಜಿ ಹಳ್ಳಿ ಗಲಭೆಯಲ್ಲಿ ಉಂಟಾಗಿರುವ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾ. ಕೆಂಪಣ್ಣ ನೇತೃತ್ವದ ಕ್ಲೇಮ್ ಕಮೀಷನ್ ಸರ್ಕಾರಕ್ಕೆ ಹಾಗೂ ಹೈಕೋರ್ಟ್ಗೆ ವರದಿ ಸಲ್ಲಿಸಿದೆ. ಈ ಗಲಭೆಯಲ್ಲಿ ಒಟ್ಟು 4.49 ಕೋಟಿ ರೂ. ಮೌಲ್ಯದ ಆಸ್ತಿ ನಷ್ಟವುಂಟಾಗಿದೆ ಎಂದು ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ.
ಕೆ.ಜಿ. ಹಳ್ಳಿ ಗಲಭೆಯಲ್ಲಿ ಹಾನಿಯಾಗಿರುವ ಸಂಬಂಧ ಈವರೆಗೂ 90 ಅರ್ಜಿಗಳು ಕ್ಲೇಮ್ ಕಮೀಷನ್ಗೆ ಸಲ್ಲಿಕೆಯಾಗಿವೆ. ಗಲಭೆಯಲ್ಲಿ 28 ಸರ್ಕಾರಿ ವಾಹನಗಳು ಹಾಗೂ 20 ಸಾರ್ವಜನಿಕರ ವಾಹನಗಳು ಬೆಂಕಿಗೆ ಆಹುತಿಯಾಗಿವೆ. ನೂರಾರು ವಾಹನಗಳು ಸುಟ್ಟು ಕರಕಲಾಗಿದ್ದು, ಸಾಕಷ್ಟು ಮಂದಿ ಕ್ಲೇಮ್ ಕಮೀಷನ್ಗೆ ಅರ್ಜಿ ಸಲ್ಲಿಸಿಲ್ಲ ಎಂಬ ಮಾಹಿತಿ "ಒನ್ ಇಂಡಿಯಾ ಕನ್ನಡ"ಗೆ ಲಭ್ಯವಾಗಿದೆ.
ಡಿಜೆ ಹಳ್ಳಿ ಗಲಭೆ ಪ್ರಕರಣ: ಜೈಲಿನಲ್ಲಿ ನ್ಯಾಯಾಲಯದ ಕಲಾಪ ಕೈದಿಗಳ ವೀಕ್ಷಣೆ
ಎರಡು ಠಾಣೆ ಸೇರಿ ನಾಲ್ಕು ಸರ್ಕಾರಿ ಆಸ್ತಿಗಳಿಗೆ ನಷ್ಟ
ಡಿ.ಜೆ. ಹಳ್ಳಿ ಗಲಭೆಯಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಸೇರಿದ 27 ಖಾಸಗಿ ವಾಹನಗಳು ಹಾನಿಯಾಗಿವೆ. ಡಿ.ಜೆ. ಹಳ್ಳಿ- ಕೆ.ಜಿ.ಹಳ್ಳಿ ವ್ಯಾಪ್ತಿಯಲ್ಲಿ 27 ಮನೆಗಳಿಗೆ ಹಾನಿಯಾಗಿದೆ. ಡಿ.ಜೆ.ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಠಾಣೆ ಸೇರಿದಂತೆ ನಾಲ್ಕು ಸರ್ಕಾರಿ ಆಸ್ತಿಗಳು ನಷ್ಟಕ್ಕೆ ಒಳಗಾಗಿವೆ. ಗಲಭೆಯಲ್ಲಿ ಒಟ್ಟು 4.49 ಕೋಟಿ ರೂ. ಮೌಲ್ಯದ ಆಸ್ತಿ ನಷ್ಟವಾಗಿದೆ. ಒಟ್ಟು 103 ವಾಹನ ಗಲಭೆಯ ಕಿಚ್ಚಿನಲ್ಲಿ ಸುಟ್ಟು ಹೋಗಿವೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ನಷ್ಟ ಪರಿಹಾರ ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ.
ಒಂದು ಕೋಟಿ ಪರಿಹಾರ ಕೋರಿ ಅಖಂಡ ಶ್ರೀನಿವಾಸ್ ಅರ್ಜಿ
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆ ಮೇಲೆ ಕಲ್ಲು ತೂರಿ ಬೆಂಕಿ ಹಚ್ಚಿದ ಪರಿಣಾಮ ಒಂದು ಕೋಟಿ ಮೌಲ್ಯದ ಆಸ್ತಿ ನಷ್ಟವಾಗಿದೆ. ಆ. 11 ರಂದು ನಡೆದ ಗಲಭೆಯಿಂದ 80 ಲಕ್ಷ ರೂ. ಮೌಲ್ಯದ ಮನೆ, 20 ಲಕ್ಷ ರೂ. ಮೌಲ್ಯದ ಐದು ಕಾರುಗಳು ಬೆಂಕಿಗೆ ಆಹುತಿಯಾಗಿದ್ದು, ಒಟ್ಟು ಒಂದು ಕೋಟಿ ರೂ. ಮೊತ್ತದ ಆಸ್ತಿ ನಷ್ಟವಾಗಿರುವ ಬಗ್ಗೆ ಅಖಂಡ ಶ್ರೀನಿವಾಸ್ ಕ್ಲೇಮ್ ಕಮೀಷನ್ಗೆ ಅರ್ಜಿ ಹಾಗೂ ದಾಖಲೆ ಸಲ್ಲಿಸಿದ್ದಾರೆ. ಅಖಂಡ ಶ್ರೀನಿವಾಸ್ ಅವರ ಅಕ್ಕನ ಮಗ ನವೀನ್ ಎಂಬಾತ ಪ್ರವಾದಿ ಮಹಮದ್ ಕುರಿತ ಸಣ್ಣ ಪ್ರತಿಕ್ರಿಯೆ ಇಡೀ ಗಲಭೆಗೆ ಕಿಚ್ಚು ಹಚ್ಚಲು ಮೂಲ ಕಾರಣವಾಗಿತ್ತು.
ಡಿ ಜೆ ಹಳ್ಳಿ ಗಲಭೆ ಪ್ರಕರಣ: ಎನ್ಐಎ ನ್ಯಾಯಾಲಯ ಆದೇಶ ರದ್ದು, 115 ಆರೋಪಿತರಿಗೆ ಜಾಮೀನು
ಅಖಂಡ ಪಕ್ಕದ ಮನೆಯವರಿಂದ ಆಯೋಗಕ್ಕೆ ಅರ್ಜಿ
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಗುರಿಯಾಗಿಸಿಕೊಂಡೇ ಗಲಭೆ ನಡೆದಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಗಲಭೆಯಲ್ಲಿ ಅಖಂಡ ಶ್ರೀನಿವಾಸ್ಗಿಂತಲೂ ಹೆಚ್ಚಾಗಿ, ಅವರ ನೆರೆಹೊರೆಯ ಮನೆಗೆ ಹೆಚ್ಚು ಹಾನಿಯಾಗಿತ್ತು. ಅಖಂಡ ಶ್ರೀನಿವಾಸ್ ಮನೆ ಪಕ್ಕದಲ್ಲೇ ಇರುವ ಪವನ್ ಕುಮಾರ್ ಎಂಬುವರ ಮನೆಗೂ ಬೆಂಕಿ ತಗುಲಿದ್ದು, ಇದರಿಂದ 1.86 ಕೋಟಿ ರೂ. ಮೌಲ್ಯದ ಆಸ್ತಿ ನಷ್ಟವಾಗಿದೆ ಎಂದು ಪವನ್ ಕುಮಾರ್ ಕ್ಲೇಮ್ ಕಮೀಷನ್ಗೆ ಅರ್ಜಿ ಸಲ್ಲಿಸಿದ್ದಾರೆ. ಎರಡು ಕಾರು, ಐದು ಲಕ್ಷ ರೂ. ನಗದು, ಚಿನ್ನ , ಬೆಳ್ಳಿ, ಲಕ್ಷಾಂತರ ರೂಪಾಯಿಯ ಬಟ್ಟೆಗಳು ಬೆಂಕಿಗೆ ಆಹುತಿಯಾಗಿವೆ ಎಂದು ಪವನ್ ಕುಮಾರ್ ಕ್ಲೇಮ್ ಕಮೀಷನ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ನಷ್ಟ ಪರಿಹಾರ ಅರ್ಜಿ ಸಲ್ಲಿಸಿದ ಕೆಎಸ್ಆರ್ಪಿ
ಗಲಭೆ ನಿಯಂತ್ರಿಸಲು ತೆರಳಿದ್ದ ಕೆಎಸ್ಆರ್ಪಿಗೆ ಸೇರಿದ ಎಂಟು ಲಕ್ಷ ಮೌಲ್ಯದ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಇದರ ಜತೆಗೆ ಕೆಎಸ್ಆರ್ಪಿ ವಾಹನದಲ್ಲಿದ್ದ ಗನ್, ಶೆಲ್ಗಳು ಸುಟ್ಟು ಕರಕಲಾಗಿವೆ ಎಂದು ಕ್ಲೇಮ್ ಕಮೀಷನ್ಗೆ ಕೆಎಸ್ಆರ್ಪಿ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದಾರೆ. ಒಟ್ಟಾರೆ ಈವರೆಗೂ 90 ಅರ್ಜಿಗಳನ್ನು ಸಲ್ಲಿಸಿದ್ದು, ಇನ್ನೂ ಅರ್ಜಿ ಸಲ್ಲಿಸಲು ಕಾಲಾವಕಾಶವಿದೆ ಎಂದು ಆಯೋಗ ತಿಳಿಸಿದೆ. ಈಗಾಗಲೇ ಮೊದಲ ವರದಿಯನ್ನು ನಿವೃತ್ತ ನ್ಯಾ. ಕೆಂಪಣ್ಣ ನೇತೃತ್ವದ ಆಯೋಗ ಸರ್ಕಾರಕ್ಕೆ ಹಾಗೂ ಹೈಕೋರ್ಟ್ಗೆ ಸಲ್ಲಿಸಿದೆ. ಹೈಕೋರ್ಟ್ ತೀರ್ಪಿನಂತೆ ಹಾನಿಗೊಳಗಾದವರಿಗೆ ಪರಿಹಾರ ಸಿಗಲಿದೆ.
ಹಾನಿ ಮಾಡಿದವರಿಂದ ಪರಿಹಾರ ವಸೂಲಿ
ಪ್ರವಾದಿ ಮಹಮದ್ ಕುರಿತ ವ್ಯಂಗ್ಯಚಿತ್ರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿವಾದ ಹುಟ್ಟಿಕೊಂಡಿತ್ತು. ಇದು ಡಿ.ಜೆ. ಹಳ್ಳಿ ಹಾಗೂ ಕೆ.ಜಿ ಹಳ್ಳಿಯ ಗಲಭೆಗೆ ಕಾರಣವಾಗಿತ್ತು. ಆ. 11ರಂದು ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆಗೆ ಬೆಂಕಿ ಇಡಲಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಪೊಲೀಸ್ ಠಾಣೆಗಳಿಗೆ ಬೆಂಕಿ ಇಟ್ಟು ದುಷ್ಕರ್ಮಿಗಳು ವಿಕೃತಿ ಮೆರೆದಿದ್ದರು. ಪೊಲೀಸರ ಮೇಲೆಯೇ ದಾಳಿ ನಡೆದಿತ್ತು. ರಸ್ತೆಯಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಇಟ್ಟಿದ್ದರು. ಪೊಲೀಸರು ಲಾಠಿ ಚಾರ್ಜ್ ಮಾಡುವ ಮೂಲಕ ಪರಿಸ್ಥಿತಿ ನಿಯಂತ್ರಿಸಿದ್ದರು. ಅಷ್ಟರಲ್ಲಿ ಕೋಟ್ಯಂತರ ಮೌಲ್ಯದ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವುಂಟಾಗಿತ್ತು. ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚನೆ ಮಾಡಲಾಗಿತ್ತು. ಸುಮಾರು ನೂರಕ್ಕೂಹೆಚ್ಚು ಆರೋಪಿಗಳನ್ನು ಬಂಧಿಸಲಾಗಿತ್ತು. ಕೆ.ಜಿ. ಹಳ್ಳಿ ಗಲಭೆಯಲ್ಲಿ ನಿಷೇಧಿತ ಸಂಘಟನೆಗಳ ಕೈವಾಡ ಇರುವ ಶಂಕೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ ಎರಡು ಪ್ರತ್ಯೇಕ ಕೇಸು ದಾಖಲಿಸಿ ತನಿಖೆ ನಡೆಸುತ್ತಿದೆ. ಇನ್ನು ಸಾರ್ವಜನಿಕ ಆಸ್ತಿಗೆ ನಷ್ಟವುಂಟು ಮಾಡಿರುವ ಸಂಬಂಧ ನಷ್ಟ ಮಾಡಿದ ಆರೋಪಿಗಳ ಆಸ್ತಿ ಜಪ್ತಿ ಮಾಡಿ ಪರಿಹಾರ ನೀಡಲಾಗುತ್ತದೆ.
{document1}