ರೆಡ್ಡಿಗಳ ರಿಪಬ್ಲಿಕ್ ಆಫ್ ಬಳ್ಳಾರಿ ಮಾದರಿ "ಜಾರಕಿಹೊಳಿ" ಸಾಮ್ರಾಜ್ಯದ ಪತನವೇ ?
ಬೆಂಗಳೂರು, ಏಪ್ರಿಲ್ 02 : ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಕಣ ರಂಗೇರಿದೆ. ಮಾ. 17 ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಪಕ್ಷದಿಂದ ಸತೀಶ್ ಜಾರಕಿಹೊಳಿ, ಬಿಜೆಪಿಯಿಂದ ದಿ. ಸುರೇಶ್ ಅಂಗಡಿ ಪತ್ನಿ ಮಂಗಲಾ ಅಂಗಡಿ ಕಣಕ್ಕೆ ಇಳಿದಿದ್ದಾರೆ. ಇದು ಮೇಲ್ನೋಟಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆ ಕಣವಾಗಿದೆ. ಇನ್ನೊಂದು ದೃಷ್ಟಿ ಕೋನದಲ್ಲಿ ನೋಡಿ ಹೇಳುವುದಾದರೆ, ಗಣಿ ಧಣಿಗಳ ರಿಪಬ್ಲಿಕ್ ಆಫ್ ಬಳ್ಳಾರಿ ಅಧ್ಯಾಯ ಮುಗಿದ ರೀತಿಯಲ್ಲಿಯೇ ಈ ಉಪ ಚುನಾವಣೆ " ಜಾರಕಿಹೊಳಿ" ಬೆಳಗಾವಿ ಕೋಟೆ ಪತನ ಅಥವಾ ಉಳಿವು ನಿರ್ಣಯಿಸುವ ಕದನವಾಗಲಿದೆಯಾ ಎಂಬ ಪ್ರಶ್ನೆ ಕೂಡ ಹುಟ್ಟು ಹಾಕಿದೆ.
ಸಾಹುಕಾರ್ ತಂತ್ರ: ಹದಿನಾರು ಶಾಸಕರನ್ನು ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಕರೆ ತರುವ ಮೂಲಕ ರಾಜ್ಯ ರಾಜಕಾರಣದಲ್ಲಿ "ಜಾರಕಿಹೊಳಿ ಸಾಹುಕಾರ್ " ಶಕ್ತಿ ಏನೆಂಬುದನ್ನು ತೋರಿದ್ದರು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು. ಬಯಸಿದ ಖಾತೆಯನ್ನು ಪಡೆದು ಮೀಸೆ ತಿರುವಿ" ನಾನು ಬೆಳಗಾವಿಯ ಸಾಹುಕಾರ್ ಕಣೋ ಎಂಬ ಸಂದೇಶ ಸಾರಿದ್ದರು. ಕಾಂಗ್ರೆಸ್ನಿಂದ ಪಕ್ಷಾಂತರಗೊಂಡು ಬಿಜೆಪಿಯಲ್ಲಿ ಒಂದೇ ವರ್ಷದಲ್ಲಿ ಬಹುದೊಡ್ಡ ನಾಯಕನಾಗಿ ಮಿಂಚಿದ್ದರು. ತಾನು ತನ್ನ ಶಕ್ತಿಗೆ ಒಂದು ದಿನ ಸಿಎಂ ಆಗಲೇಬೇಕೆಂಬ ಆಸೆಗೆ ಬಿದ್ದರು. ಅಲ್ಲೂ ಶತ್ರುಗಳನ್ನು ಕಟ್ಟಿಕೊಂಡಿದ್ದರು. ಇದ್ಯಾವುದಕ್ಕೂ ಕ್ಯಾರೆ ಎನ್ನದೇ ರಮೇಶ್ ಜಾರಕಿಹೊಳಿ ದೊಡ್ಡ ಲೀಡರ್ ಆಗಿ ಗುರುತಿಕೊಂಡಿದ್ದರು.
"ಸಿಡಿ ಪ್ರಕರಣದಲ್ಲಿ ಡಿಕೆಶಿ ಏಕೆ ರಾಜೀನಾಮೆ ನೀಡಬಾರದು?"
ಒಂದೆಡೆ ರಾಜ್ಯದಲ್ಲಿ ಬಜೆಟ್ ಅಧಿವೇಶನ ಕರೆಯುವ ಸಂದರ್ಭ. ಇನ್ನೊಂದೆಡೆ ಬೆಳಗಾವಿ ಉಪ ಚುನಾವಣೆ ಘೋಷಣೆ. ಈ ಸಂದರ್ಭದಲ್ಲಿಯೇ ರಮೆಶ್ ಜಾರಕಿಹೊಳಿಯ ಅಶ್ಲೀಲ ಸಿಡಿ ಸ್ಫೋಟಗೊಂಡಿತು. ಯಾವಾಗ ಸಿಡಿ ಸ್ಫೋಟಗೊಂಡಿತು, ಅಲ್ಲಿಗೆ ರಮೇಶ್ ಜಾರಕಿಹೊಳಿಯ ಸಾಮಾಜಿಕ ಜೀವನ ಸತ್ತು ಹೋಗಿತ್ತು. ಅದೊಂದು ನಕಲಿ ಸಿಡಿ, ರಾಜಕೀಯ ಷಡ್ಯಂತ್ರ ಅಡಗಿದೆ ಎಂಬ ಸಂಗತಿಯನ್ನು ಮುಂದಿಟ್ಟು ರಮೇಶ್ ಜಾರಕಿಹೊಳಿ ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದರು.
ಯಾವಾಗ ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟಗೊಂಡಿತು ಅದರಲ್ಲಿ "ಯಡಿಯೂರಪ್ಪ ದೊಡ್ಡ ಭ್ರಷ್ಟಾಚಾರಿ, ಸಿದ್ದರಾಮಯ್ಯ ಒಳ್ಳೆಯವರು" ಎಂಬ ರಮೇಶ್ ಮಾತು ಬಿಜೆಪಿಯ ಶತ್ರು ಪಾಳಯಕ್ಕೆ ಬಹುದೊಡ್ಡ ಅಸ್ತ್ರ ಸಿಕ್ಕಿಂತಾಯಿತು. ಈ ಅಶ್ಲೀಲ ಸಿಡಿ ಕೇಸಿನಲ್ಲಿ ಆರೋಪ ಮುಕ್ತನಾಗಿ ಬರುವ ವರೆಗೂ ಬೆಳಗಾವಿಯ ಉಪ ಚುನಾವಣೆಯ ಪ್ರಚಾರ ಸಭೆಯಲ್ಲಾಗಲೀ, ಪ್ರಚಾರವಾಗಲೀ ಮಾಡಬಾರದು'' ಎಂದು ಕೇಂದ್ರ ವರಿಷ್ಠರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಸರ್ಕಾರವನ್ನೇ ರಚಿಸಿದ ರಮೇಶ್ ಜಾರಕಿಹೊಳಿ ಇದೀಗ ಪಕ್ಷದ ಒಂದು ಪ್ರಚಾರ ಸಭೆ ಪ್ರತಿನಿಧಿಸುವಷ್ಟು ಶಕ್ತಿಯಿಲ್ಲ. ಅಷ್ಟರ ಮಟ್ಟಿಗೆ ಅಶ್ಲೀಲ ಸಿಡಿ ಹೈರಾಣ ಮಾಡಿದೆ. ಇದರ ನಡುವೆಯೇ ಅಶ್ಲೀಲ ಸಿಡಿ ಲೇಡಿ ಸ್ವ ಇಚ್ಛಾ ಹೇಳಿಕೆ ದಾಖಲಿಸಿ ಅತ್ಯಾಚಾರ ಆರೋಪ ಹೊರಿಸಿದ್ದಾಳೆ. ರೇಪಿಸ್ಟ್ ರಮೇಶ್ನನ್ನು ಅರೆಸ್ಟ್ ಮಾಡಿ ಎಂದು ಕಾಂಗ್ರೆಸ್ ಟ್ವಿಟ್ಟರ್ ಅಭಿಯಾನ ಕೈಗೊಂಡಿದೆ.
ಸದ್ಯದ ಸಿಡಿ ಕೇಸಿನ ಬೆಳವಣಿಗೆ ನೋಡಿದರೆ ರಮೇಶ್ ಜಾರಕಿಹೊಳಿ ಅದರಿಂದ ಸದ್ಯಕ್ಕೆ ಹೊರಗೆ ಬರುವಂತೆ ಕಾಣುತ್ತಿಲ್ಲ. ಆರಂಭದಲ್ಲಿ ಇದು ಎದುರಾಳಿಗಳ ರಾಜಕೀಯ ಷಡ್ಯಂತ್ರ ಎಂದು ಬಿಂಬಿಸುವಲ್ಲಿ ಯಶಸ್ವಿಯಾದರೂ, ಅದನ್ನು ಸಾಬೀತು ಪಡಿಸುವಲ್ಲಿ ಜಾರಕಿಹೊಳಿ ಎಡವಿದರು. ಇದೀಗ ಬಂಧನದ ಕುಣಿಕೆ ಎದುರಾಗಿದೆ. ಅಶ್ಲೀಲ ಸಿಡಿ ಪ್ರಕರಣದಲ್ಲಿ ಕುಟುಂಬದ ಮರ್ಯಾದೆ ರಕ್ಷಣೆಗೆ ಜಾರಕಿಹೊಳಿ ಸಹೋದರರು ಮುಂದಾಗಿದ್ದರು.
ಇದೇ ವೇಳೆ ಬೆಳಗಾವಿ ಲೋಕಸಭಾ ಚುನಾವಣೆ ಉಪ ಕದನ ಎದುರಾಗಿದೆ. ಒಲ್ಲದ ಮನಸ್ಸಿನಿಂದಲೇ ಸತೀಶ್ ಜಾರಕಿಹೊಳಿಯನ್ನು ಕಣಕ್ಕೆ ಇಳಿಸಲಾಗಿದೆ. ಬೆಳಗಾವಿ ಉಪ ಚುನಾವಣೆಯನ್ನು ಗೆಲ್ಲಲೇಬೇಕೆಂಬ ಪಣ ತೊಟ್ಟಿರುವ ಕಾಂಗ್ರೆಸ್ ವರಿಷ್ಠರು ಸತೀಶ್ ಜಾರಕಿಹೊಳಿಯನ್ನು ಅಂತಿಮಗೊಳಿಸಿದ್ದಾರೆ. ತನ್ನ ಸಹೋದರ ರಮೇಶ್ ಜಾರಕಿಹೊಳಿಗೆ ಎದುರಿಸುತ್ತಿರುವ ಅಶ್ಲೀಲ ಸಿಡಿ ಪ್ರಕರಣದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹೆಸರು ತಳಕು ಹಾಕಿಕೊಂಡಿದೆ. ಇದು ಸಹಜವಾಗಿ ಸತೀಶ್ ಜಾರಕಿಹೊಳಿಗೂ ಬೇಸರ ಮೂಡಿಸಿರುವ ಸಂಗತಿ. ವಿಪರ್ಯಾಸವೆಂದರೇ ಡಿಕೆ ಅವರೇ ಸತೀಶ್ ಜಾರಕಿಹೊಳಿಯನ್ನು ಬೆಳಗಾವಿ ಉಪ ಕದನ ಕಣಕ್ಕೆ ಇಳಿಸಿದ್ದಾರೆ.
ಇತ್ತ ರಮೇಶ್ ಜಾರಕಿಹೊಳಿಯ ನೆರವು, ನೆರಳು ಇಲ್ಲದೇ ಬಿಜೆಪಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಮುಂದಾಗಿದೆ. ಈ ನಿಟ್ಟಿನಲ್ಲಿ ಲಿಂಗಾಯುತ ಮತ್ತು ಬ್ರಾಹ್ಮಣ ಸಮುದಾಯದ ಎಲ್ಲಾ ನಾಯಕರು ಒಗ್ಗೂಡಿದ್ದಾರೆ. ರಮೇಶ್ ಜಾರಕಿಹೊಳಿಯ ಸಣ್ಣ ನೆರವು ಇಲ್ಲದೇ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕು ಎಂದು ಬಿಜೆಪಿ ನಾಯಕರು ಪಣ ತೊಟ್ಟಿದ್ದಾರೆ. ಎಲ್ಲಾ ಅಯಾಮದಲ್ಲಿ ನೋಡಿದರೂ ಮಂಗಲಾ ಅಂಗಡಿ ಗೆಲ್ಲುವ ದೊಡ್ಡ ಭರವಸೆ ಮೂಡಿಸಿದ್ದಾರೆ. ಒಂದೆಡೆ ಸುರೇಶ್ ಅಂಗಡಿ ನಾಯಕತ್ವಕ್ಕೆ ಇರುವ ವರ್ಚಸ್ಸು, ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ರೂಢ ಪಕ್ಷಗಳ ಪ್ರಭಾವ, ಇತ್ತೀಚೆಗೆ ಲಿಂಗಾಯುತ ಸಮುದಾಯದ ಎಲ್ಲಾ ನಾಯಕರು ಈ ಬಾರಿ ಒಗ್ಗೂಡಿರುವುದು ಇದಕ್ಕೆ ಕಾರಣ. ಒಂದು ವೇಳೆ ಮಂಗಳಾ ಅಂಗಡಿ ಗೆದ್ದರೆ, ಅತ್ತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಗೆ ಬಹುದೊಡ್ಡ ಸೋಲು. ಅಲ್ಲಿಗೆ ಜಾರಕಿಹೊಳಿ ಸಹೋದರರು ಪ್ರಭಾವ ಬೆಳಗಾವಿಯಲ್ಲಿ ಉಳಿದಿಲ್ಲ ಎಂಬ ದೊಡ್ಡ ಸಂದೇಶ ರವಾನಿಸುದಂತಾಗುತ್ತದೆ.
2006 ರಲ್ಲಿ ಕೂಡ ಗಾಲಿ ಜನಾರ್ದನ ರೆಡ್ಡಿ ಹವಾ ಕೂಡ ಇದೇ ರೀತಿ ಇತ್ತು. ಆಪರೇಷನ್ ಕಮಲ ಮೂಲಕ ಸರ್ಕಾರ ರಚಿಸಿದರು. ಯಡಿಯೂರಪ್ಪ ಅವರನ್ನು ಸಿಎಂ ಮಾಡಿದರು. ಕೊನೆಗೆ ಅಕ್ರಮ ಗಣಿಗಾರಿಕೆ ಪ್ರಕರಣ ಕೊರಳಿಗೆ ಸುತ್ತಿಕೊಂಡಿತು. ಗಾಲಿ ಜನಾರ್ದನ ರೆಡ್ಡಿ ಮತ್ತು ಪಟಾಲಂ ಜೈಲು ಸೇರಿತು. ರಿಪಬ್ಲಿಕ್ ಆಫ್ ಬಳ್ಳಾರಿ ಸಾಮ್ರಾಜ್ಯ ಕೂಡ ಪತನವಾಗಿತ್ತು. ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರಿಗೆ ಎದುರಾಗಿರುವ ಸವಾಲು ನೋಡಿದರೆ ಕೂಡ ಸಾಹುಕಾರ್ ಕುಟುಂಬದ ರಾಜಕೀಯ ಪ್ರಭಾವ ಇಲ್ಲಿಗೆ ಮುಗಿಯಲಿದೆಯೇ ? ಎಂಬ ಅನುಮಾನ ವ್ಯಕ್ತವಾಗಿದೆ.
ಸರ್ಕಾರವನ್ನು ರಚಿಸಿದ್ದ ರಮೇಶ್ ಜಾರಕಿಹೊಳಿ ಸದ್ಯ ಎದುರಾಗಿರುವ ಸಿಡಿ ಕಂಟಕದಿಂದ ಪರಾಗುವ ಲಕ್ಷಣ ಕಾಣಿಸುತ್ತಿಲ್ಲ. ಪಾರಾದರೂ ಈಗಾಗಲೇ ಇಡೀ ಸಮಾಜ ಅವರ ಕೃತ್ಯವನ್ನು ನೈತಿಕವಾಗಿ ಒಪ್ಪಿಕೊಳ್ಳುತ್ತಿಲ್ಲ. ಇನ್ನೊಂದಡೆ ಸಹೋದರ ಸತೀಶ್ ಜಾರಕಿಹೊಳಿಯದ್ದು ಎದುರಾಳಿ ಪಕ್ಷದಿಂದ ಸ್ಪರ್ಧೆ. ಸತೀಶ್ ಏನಾದರೂ ಚುನಾವಣೆಯಲ್ಲಿ ಗೆದ್ದರೆ ಪ್ರಭಾವಿ ನಾಯಕನಾಗಿ ಗುರುತಿಸಿಕೊಳ್ಳಬಹುದು. ಸೋತಲ್ಲಿ, ಜಾರಕಿಹೊಳಿ ಇಬ್ಬರ ಸಹೋದರರ ರಾಜಕೀಯ ಭವಿಷ್ಯ ಅಂತ್ಯವಾಗಲಿದೆ ಎಂಬ ಲೆಕ್ಕಾಚಾರಗಳು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.