ಚುನಾವಣೆ ವರ್ಷದಲ್ಲಿ ಯಾವ ರಾಶಿಯ ರಾಜಕಾರಣಿಗೆ ಯಾವ ಫಲ?
ಒನ್ ಇಂಡಿಯಾ ಕನ್ನಡದಿಂದ ವರ್ಷ ಭವಿಷ್ಯ ಹಾಕಿದ್ದಾಯಿತು. ಪ್ರೇಮಿಗಳಿಗೆ- ವಿವಾಹಿತರಿಗೆ ವರ್ಷ ಭವಿಷ್ಯ ಪ್ರಕಟಿಸಿದ್ದಾಯಿತು. ಇನ್ನು ಉದ್ಯೋಗದಲ್ಲಿರುವವರು ಪಾಲಿಗೆ ಹೇಗಿರಲಿದೆ ಎಂಬುದು ಸಹ ಪ್ರತ್ಯೇಕವಾಗಿ ಓದಿ, ತಿಳಿದುಕೊಂಡಿದ್ದೀರಿ. ಇಂದಿನ ಲೇಖನದಲ್ಲಿ ಸ್ವಲ್ಪ ಭಿನ್ನ ಎನಿಸುವಂತೆ ರಾಜಕೀಯ ನಾಯಕರ ಪಾಲಿಗೆ ಹೇಗಿರಲಿದೆ ಎಂಬುದನ್ನು ತಿಳಿದುಕೊಂಡು ಬಿಡಿ.
ಏಕೆಂದರೆ ಇದು ಚುನಾವಣೆ ವರ್ಷ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹಲವು ರಾಜಕೀಯ ಮುಖಂಡರು ಈಗಾಗಲೇ ಜ್ಯೋತಿಷಿಗಳ ಬಳಿ ತೆರಳಿ, ತಮಗೆ ಟಿಕೆಟ್ ಸಿಗಬಹುದೇ? ನಾನು ಗೆಲ್ಲುತೇನಾ? ನನ್ನ ಹೆಂಡತಿ ಅಥವಾ ಮಗ/ಮಗಳು ಚುನಾವಣೆಗೆ ನಿಲ್ಲಿಸಿದರೆ ಹೇಗೆ? ಇತ್ಯಾದಿ ಪ್ರಶ್ನೆಗಳನ್ನು ಕೇಳಿರುತ್ತಾರೆ ಅಥವಾ ಕೇಳಬೇಕು ಅಂದುಕೊಂಡಿರುತ್ತಾರೆ.
ಪ್ರಮೋಷನ್ ಸಿಗುತ್ತಾ, ಸಂಬಳ ಜಾಸ್ತಿ ಆಗುತ್ತಾ?: 12 ರಾಶಿ ಉದ್ಯೋಗ ಭವಿಷ್ಯ
ಇಂದಿನ ಜ್ಯೋತಿಷ್ಯ ಲೇಖನದಲ್ಲಿ ರಾಜಕೀಯದಲ್ಲಿರುವ ಹನ್ನೆರಡು ರಾಶಿಗಳ ಮುಖಂಡರ ಪಾಲಿಗೆ ಈ ವರ್ಷ ಹೇಗಿರುತ್ತದೆ ಎಂದು ತಿಳಿಸುತ್ತಿದ್ದೇವೆ. ಇದು ಗೋಚಾರದ ಫಲ ಮಾತ್ರ. ಆಯಾ ಮುಖಂಡರ ದಶೆ, ಭುಕ್ತಿ ಹಾಗೂ ಯೋಗಾಯೋಗಗಳು ಸಹ ಪರಿಣಾಮವನ್ನು ಬೀರುತ್ತವೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ದ್ವಾದಶ ರಾಶಿಗಳ ಪಾಲಿನ ಗೋಚಾರ ಫಲ ಹೀಗಿದೆ.
ಮೇಷ
ಮೇಷ ರಾಶಿಯವರಿಗೆ ಹೆಚ್ಚಿನ ಸ್ನೇಹಿತರು ಆಗುತ್ತಾರೆ. ಶತ್ರುಗಳು ಸಹ ಮಿತ್ರರಾಗುವ ಸಾಧ್ಯತೆಗಳಿವೆ. ಅವರಿಗೆ ನೀವು ಅನಿವಾರ್ಯ ಆಗುತ್ತೀರಿ. ರಾಜಕಾರಣದಲ್ಲಿ ಎಲ್ಲರಿಗೂ ಅನಿವಾರ್ಯ ಆಗುತ್ತೀರಿ. ಹಲವರ ಯಶಸ್ಸಿಗೆ ನಿಮ್ಮ ಸಹಾಯ ಬೇಕಾಗುತ್ತದೆ. ಆದರೆ ವರ್ಷದ ಕೊನೆಗೆ ನಿಮ್ಮ ಸ್ನೇಹಿತರೇ ಶತ್ರುಗಳಾಗುವ ಸಾಧ್ಯತೆ ಇದೆ. ಏಕೆಂದರೆ ನಿಮಗೆ ವಿಶ್ವಾಸ ದ್ರೋಹ ಮಾಡುವ ಸಾಧ್ಯತೆ ಇರುತ್ತದೆ.
ವೃಷಭ
ವೃಷಭ ರಾಶಿ ಅಂದರೆ ಸಚಿವ ಡಿ.ಕೆ.ಶಿವಕುಮಾರ್ ರನ್ನು ನೆನಪಿಸಿಕೊಳ್ಳಿ. ಸದ್ಯಕ್ಕೆ ಈ ರಾಶಿಯವರಿಗೆ ಅಷ್ಟಮಿ ಶನಿ ನಡೆಯುತ್ತಿದೆ. ವರ್ಷದ ಆದಿ ಹಾಗೂ ಮಧ್ಯ ಭಾಗ ಇವರಿಗೆ ಚೆನ್ನಾಗಿಲ್ಲ. ಆದರೆ ವರ್ಷಾಂತ್ಯಕ್ಕೆ ಸರಿದಂತೆ ಚೆನ್ನಾಗಿದೆ. ರಾಜಕೀಯದಲ್ಲಿ ಅಧಿಕಾರ ಪ್ರಾಪ್ತಿ ಇಲ್ಲ. ಬಂದರೆ ವರ್ಷದ ಕೊನೆಗೆ ಅವಕಾಶ ಇದೆ. ಈಗ ಅಧಿಕಾರದಲ್ಲಿದ್ದರೂ ಅದನ್ನು ಮನಸಾರೆ ಬಳಸಲು ಆಗಲ್ಲ. ವರ್ಷದ ಕೊನೆಗೆ ಮೂರ್ನಾಲ್ಕು ತಿಂಗಳು ಪರವಾಗಿಲ್ಲ. ಆದಿ ಹಾಗೂ ಮಧ್ಯದಲ್ಲಿ ಆರೋಗ್ಯ ಹಾಗೂ ಶತ್ರು ಬಾಧೆ ಕಾಣಿಸಿಕೊಳ್ಳುತ್ತದೆ.
ಶಿವಕುಮಾರ್ ರನ್ನು ಖೆಡ್ಡಾಕ್ಕೆ ಕೆಡವಿದ್ದು ಶನಿ, ಪರಿಹಾರವೂ ಅವನೇ...
ಮಿಥುನ
ಮಿಥುನ ರಾಶಿಯವರಿಗೆ ಒಂದು ಲೆಕ್ಕದಲ್ಲಿ ಪರವಾಗಿಲ್ಲ. ಆದರೆ ನಿಮ್ಮ ಸುತ್ತಮುತ್ತ ಯಾರಿದ್ದಾರೆ ಎಂಬ ಬಗ್ಗೆ ಗಮನವಿರಲಿ. ನಿಮ್ಮ ಸ್ನೇಹ ವಲಯದಿಂದಲೇ ಅನಾನುಕೂಲ ಆಗುವ ಸಾಧ್ಯತೆ ಇದೆ. ಆದರೆ ವಿಪರೀತ ಹಣ ಖರ್ಚಾಗಲಿದೆ. ಇಷ್ಟು ಕಾಲ ಹೇಗೆ ಅವಕಾಶಗಳು ಹುಡುಕಿಕೊಂಡು ಬಂದು ನಿಲ್ಲುತ್ತಿದ್ದವೋ, ಇನ್ನು ಮುಂದೆ ಹಾಗಾಗುವುದಿಲ್ಲ. ಆರಂಭದಿಂದಲೇ ಪ್ರಯತ್ನವನ್ನು ಶುರು ಮಾಡಿದರಷ್ಟೇ ಸ್ವಲ್ಪವಾದರೂ ಫಲ ಸಿಗುತ್ತದೆ.
ಕರ್ಕಾಟಕ
ರಾಜಕೀಯವಾಗಿ ಏನೆಲ್ಲ ನೀವು ಕಷ್ಟ ಪಡಬೇಕೋ ಅವೆಲ್ಲವನ್ನೂ ಈಗಾಗಲೇ ಅನುಭವಿಸಿದ್ದೀರಿ. ನೀವು ಯಾರಿಗೂ ಬಗ್ಗುವ ಆಸಾಮಿಯಲ್ಲ, ಹೊಗಳುವ ಪೈಕಿಯಲ್ಲ. ನಿಮ್ಮ ನಿಷ್ಠುರ ಬುದ್ಧಿಯ ಕಷ್ಟಗಳನ್ನು ಅನುಭವಿಸಿದ್ದೀರಿ. ಈಗಲೂ ಅದನ್ನು ಮುಂದುವರಿಸಿಕೊಂಡು ಹೋಗುತ್ತೀರಿ. ನಿಮಗೆ ಉತ್ತಮ ಫಲಿತಾಂಶ, ಫಲ ಸಿಗಬೇಕು ಅಂದರೆ ವರ್ಷದ ಕೊನೆಯವರೆಗೆ ಕಾಯಬೇಕು. ಅಧಿಕಾರ ಎಂಬುದು ಕಣ್ಣಿಗೆ ಕಾಣುತ್ತದೆ, ಕೈಗೆ ಸಿಗಲ್ಲ. ನೀವು ಎರಡು ಹೆಜ್ಜೆ ಕೆಳಗಿಳಿದರೆ ಸಿಗಬೇಕಾದ್ದು ದೊರೆಯುತ್ತದೆ. ಆದರೆ ನೀವು ಕೆಳಗಿಳಿಯಲ್ಲ.
ಸಿಂಹ
ನೀವು ಬಹಳ ಎಚ್ಚರವಾಗಿರಬೇಕು. ಒಂದು ಪಕ್ಷ ನಿಮ್ಮ ವ್ಯವಹಾರದಲ್ಲಿ ರಾಜಕಾರಣ- ಅಧಿಕಾರ ಬಳಸಿ ಪ್ರಯೋಜನ ಪಡೆದಿದ್ದರೆ ಅದು ಹಗರಣ ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ಶತ್ರುಗಳು ಮಾಡುವ ಮಸಲತ್ತಿಗೆ ಬಲಿಯಾಗುವ ಸಾಧ್ಯತೆ ಇದೆ. ಇನ್ನು ಯಾವುದಾದರೂ ಗುಪ್ತ ವ್ಯವಹಾರಗಳನ್ನು ಮಾಡಿದ್ದರೆ ಅಥವಾ ಮಾಡಿದರೆ ತೊಂದರೆ ಎದುರಾಗುತ್ತದೆ. ನಿಮಗೆ ತಲುಪಬೇಕಾದ ಲಾಭ- ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲ್ಲ. ನಿಮ್ಮ ಶ್ರಮವನ್ನು ಯಾರೂ ಗುರುತಿಸಲ್ಲ. ಆದರೆ ಪ್ರಯತ್ನವನ್ನು ಮಾತ್ರ ಬಿಡಬೇಡಿ.
ಕನ್ಯಾ
ನಿಮ್ಮ ಬುದ್ಧಿವಂತಿಕೆ ಕಾಪಾಡುವುದು ಹೌದು. ಆದರೆ ಅತಿ ಬುದ್ಧಿವಂತಿಕೆ ಬೇಡ. ಈ ಹಿಂದೆ ನೀವು ಬುದ್ಧಿವಂತಿಕೆ ಮಾಡಿಕೊಂಡು ಎಲ್ಲರನ್ನೂ ಸ್ನೇಹಿತರಾಗಿ ಮಾಡಿಕೊಂಡಿರ್ತೀರಿ. ಆದರೆ ನೀವಂದುಕೊಂಡಂತೆ ಏನೂ ನಡೆಯುವುದಿಲ್ಲ. ಎಲ್ಲವೂ ನಿಧಾನವಾಗುತ್ತದೆ. ಕೊಟ್ಟ ಮಾತು ಉಳಿಸಿಕೊಳ್ಳಲು ಆಗಲ್ಲ. ನಿಮ್ಮ ಕೈ ಕೆಳಗಿನವರೇ ಮಾತು ಕೇಳುವುದಿಲ್ಲ. ಯಾರದೋ ತಪ್ಪಿನ ಫಲಿತ ನೀವು ಅನುಭವಿಸುತ್ತೀರಿ. ವರ್ಷದ ಕೊನೆಗೆ ಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಆತುರದ- ಅವಸರದ ತೀರ್ಮಾನಗಳು ಖಂಡಿತಾ ಬೇಡ.
ತುಲಾ
ನಿಮಗೆ ಅಧಿಕಾರ ಪ್ರಾಪ್ತಿ ಯೋಗ ಮಧ್ಯಮದಲ್ಲಿದೆ. ನೀವು ಪಡುತ್ತಿರುವ ಶ್ರಮ ಮುಂದುವರಿಸಿ. ನಿಮ್ಮನ್ನು ಗಮನಿಸುತ್ತಾ ಇದ್ದಾರೆ. ವರ್ಷಾಂತ್ಯದ ನಂತರ ನಿಮಗೆ ಅಧಿಕಾರ ಪ್ರಾಪ್ತಿ ಯೋಗ ಇದೆ. ಆದರೆ ಹಿಡಿದ ಕೆಲಸವನ್ನು ಅರ್ಧಕ್ಕೆ ಬಿಡಬೇಡಿ. ಹಾಗೆ ಮಾಡುವುದರಿಂದ ಅದರ ಶ್ರೇಯ ಮೂರನೇ ವ್ಯಕ್ತಿಗೆ ಸೇರುತ್ತದೆ. ತಾಳ್ಮೆಯಿಟ್ಟುಕೊಂಡರೆ ಜನ ಮನ್ನಣೆಗೆ ಪಾತ್ರರಾಗುತ್ತೀರಿ. ಮೇಲ್ನೋಟದ ಸನ್ನಿವೇಶ ನೋಡಿ ನಿರಾಶರಾಗಬೇಡಿ. ಇಷ್ಟು ಕಾಲದ ಸಮಸ್ಯೆಗಳು ಕರಗಿ ಯಶಸ್ಸು ಸಿಗುತ್ತದೆ. ಓಡಾಟ ಜಾಸ್ತಿ ಮಾಡಬೇಕು. ಫೋನ್, ಮೇಲ್, ಪತ್ರದಲ್ಲೇ ಎಲ್ಲ ಮಾಡ್ತೀನಿ ಎಂಬ ಧೋರಣೆ ಬೇಡ. ಇನ್ನು ಕುಟುಂಬದಿಂದಲೇ ಕಿರಿಕಿರಿ ಆಗುತ್ತದೆ. ಆದರೆ ನಿರುತ್ಸಾಹಿಗಳಾಗಬೇಡಿ. ಅಂತಿಮವಾಗಿ ಆರೋಗ್ಯದ ಬಗ್ಗೆ ಎಚ್ಚರ ಇರಲಿ.
ವೃಶ್ಚಿಕ
ನಿಮಗೆ ಒಳ್ಳೆ ಹಠ ಇದೆ. ಸಕಾರಾತ್ಮಕವಾಗಿ ಬಳಸಬಹುದಾದ ಸಿಟ್ಟು ಇದೆ. ಆದರೆ ಒಂದು ಶಕ್ತಿ ನಿಮ್ಮನ್ನು ತಡೆಯುತ್ತಿದೆ. ನಿಮ್ಮ ಶಕ್ತಿಯನ್ನು ಗುರುತಿಸಲು ವಿಫಲರಾಗುತ್ತಿದ್ದೀರಿ. ಇನ್ನೊಬ್ಬರು ಹೇಳದ ಹೊರತು ನಿಮ್ಮ ಸಾಮರ್ಥ್ಯ ಗೊತ್ತಾಗುತ್ತಿಲ್ಲ. ನೀವು ಬುದ್ಧಿವಂತರು- ಶಕ್ತಿವಂತರು. ಆದರೆ ಅದರ ಪ್ರಯೋಜನ ಪಡೆಯದಿದ್ದರೆ ವ್ಯರ್ಥವಾಗುತ್ತದೆ. ತಾತ್ಕಾಲಿಕ ಹಿನ್ನಡೆಗಳನ್ನು ಮೆಟ್ಟಿ ನಿಲ್ಲಬೇಕು. ನಿಮ್ಮ ಕೈಯಿಂದ ಇತರರಿಗೆ ಅಧಿಕಾರ ಹಸ್ತಾಂತರ ಮಾಡಬೇಕಾಗುತ್ತದೆ. ಇದರಿಂದ ಧೈರ್ಯಗುಂದಬೇಡಿ.
ಧನುಸ್ಸು
ಅಧಿಕಾರ ಪ್ರಾಪ್ತಿ ಇದೆ. ನಿಮ್ಮ ಕ್ಲೀನ್ ಇಮೇಜ್ ಹಾಗೇ ಮುಂದುವರಿಯುತ್ತದೆ. ಅದಕ್ಕೆ ತಕ್ಕ ಪ್ರತಿಫಲ ಈ ವರೆಗೆ ಸಿಕ್ಕಿರಲಿಲ್ಲ. ಅಂದರೆ ಅಧಿಕಾರ ಸಿಕ್ಕು, ಮನ್ನಣೆ ದೊರೆತಿರಲಿಲ್ಲ. ಈ ವರೆಗೆ ಅಧಿಕಾರ ಸಿಕ್ಕಿದ್ದರೂ ಅಂಥ ಪ್ರಭಾವಿಯಾಗಿ ಕೆಲಸ ಮಾಡಲು ಆಗುತ್ತಿರಲಿಲ್ಲ. ಈ ಬಾರಿ ಒಳ್ಳೆ ಅಧಿಕಾರ ಸಿಗುತ್ತದೆ. ನಿಮ್ಮ ಮೃದುತನ ಬಿಡಬೇಕಾಗುತ್ತದೆ. ಜತೆಗೆ ಆಲಸ್ಯವನ್ನು ಹೊಡೆದೋಡಿಸಬೇಕು. ವ್ಯಕ್ತಿಗತವಾಗಿ ಒಂದಿಷ್ಟು ಚುರುಕುತನ ತಂದುಕೊಳ್ಳಬೇಕು. ಅಧಿಕಾರ ಪ್ರಾಪ್ತಿಯಾಗುವ ಸಮಯದಲ್ಲಿ ಮೈ ಮರೆಯಬೇಡಿ. ನಿಮ್ಮ ವರ್ಚಸ್ಸನ್ನು ಶ್ರೇಯಕ್ಕೆ, ಏಳ್ಗೆಗೆ ಬಳಸಿಕೊಳ್ಳಿ.
ಮಕರ
ಬಹಳ ಕಿರಿಕಿರಿ ಇದೆ. ಅಧಿಕಾರ ಇದ್ದರೂ ಇಲ್ಲದಿದ್ದರೂ ಕಿರಿಕಿರಿ ಇದೆ. ಹೊರಗೆ ನೋಡುವವರಿಗೆ ನಿಮ್ಮ ತುಮ್ಮಲ ಅರ್ಥವಾಗುವುದಿಲ್ಲ. ಒಂದು ಕೆಲಸಕ್ಕೆ ನಾಲ್ಕು ನಾಲ್ಕು ಸಲ ಓಡಾಡಬೇಕಾಗುತ್ತದೆ. ವ್ಯರ್ಥ ಓಡಾಟ, ಮನಸ್ತಾಪ, ಅರೆಬರೆ ಕೆಲಸ ಆಗುತ್ತದೆ. ಈ ಹಿಂದೆ ನಿಮ್ಮ ಮೇಲೆ ಆರೋಪ ಬಂದಿದ್ದರೆ ಆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಕೋರ್ಟ್- ಕೇಸುಗಳು ಅಂತಿದ್ದರೆ ಜೈಲು ಕಾಣಬೇಕಾದ ಸ್ಥಿತಿಯೂ ಬರಬಹುದು. ಪರಿಹಾರಗಳ ಬಗ್ಗೆ ಕೇಳಿ, ಮಾಡಿಸಿಕೊಳ್ಳಿ.
ಕುಂಭ
ನಿಮಗೆ ಅಧಿಕಾರ ಪ್ರಾಪ್ತಿ ಯೋಗವಿದೆ. ನೀವು ಯಾವುದೇ ವಿಷಯದಲ್ಲಿ ಬದಲಾಗುವ ಪೈಕಿ ಇಲ್ಲ. ಹೆಚ್ಚು ಓಡಾಟವಿಲ್ಲ. ಕೂತಲ್ಲೇ ಕೆಲಸಗಳಾಗುತ್ತವೆ. ದೊಡ್ಡ ಸಮಸ್ಯೆಗಳು ಅಂತಿಲ್ಲ. ನೀವು ಕೂಡ ಹೆಚ್ಚಿನ ಅಪೇಕ್ಷೆ ಪಡುವವರಲ್ಲ. ಹೆಚ್ಚು ಆಸೆ ಇಲ್ಲ ಆದ್ದರಿಂದ ದುಃಖವೂ ಇಲ್ಲ. ಇನ್ನು ಅಧಿಕಾರ ಸಿಗಲಿ ಎಂಬ ಆಶಯ ಇದ್ದರೆ ಈಡೇರುತ್ತದೆ. ದೊಡ್ಡ ಹುದ್ದೆ- ವಿದ್ಯಾ- ಆರ್ಥಿಕ- ಅಬಕಾರಿ ಇಲಾಖೆಯಲ್ಲಿ ಸ್ಥಾನ ಮಾನ ಸಿಗುವ ಅವಕಾಶಗಳಿವೆ. ಒಟ್ಟಾರೆಯಾಗಿ ನಿಮಗೆ ಚೆನ್ನಾಗಿದೆ.
ಮೀನ
ಎಲ್ಲ ಇದ್ದು, ಆರೋಗ್ಯ ಕೈ ಕೊಡುತ್ತದೆ. ಇಷ್ಟು ಕಾಲ ನೀವು ಅಧಿಕಾರ ಅನುಭವಿಸಿದ್ದೀರಿ. ಇನ್ನು ಮುಂದೆ ಅದಿಲ್ಲ. ಅಂದರೆ ನಿಮ್ಮ ಪಾಲಿನ ಉತ್ತಮ ಸಮಯ ಮುಗಿದಿದೆ. ಇನ್ನು ಇಷ್ಟು ಕಾಲ ಶ್ರಮ ಪಟ್ಟಿದ್ದೀನಿ. ಆದರೆ ಫಲಿತ ಸಿಕ್ಕಿಲ್ಲ ಅಂದರೆ ವರ್ಷಾಂತ್ಯದ ತನಕ ಕಾಯಬೇಕಾಗುತ್ತದೆ. ನಿಮ್ಮ ಮಕ್ಕಳ ಬೆಂಬಲ ತೆಗೆದುಕೊಂಡು, ಹೆಚ್ಚು ಓಡಾಡಿದರೆ ಅನುಕೂಲ ಇದೆ. ಮತ್ತು ಮಕ್ಕಳನ್ನೇ ಅಥವಾ ಕುಟುಂಬದವರನ್ನೇ ಅಖಾಡಕ್ಕೆ ಇಳಿಸುವುದಕ್ಕೆ ಯೋಚಿಸುತ್ತಿದ್ದರೆ ಉತ್ತಮ ವರ್ಷವಾಗುತ್ತದೆ.
ಪಂಡಿತ್ ವಿಠ್ಠಲ ಭಟ್ ಸಂಪರ್ಕ ಸಂಖ್ಯೆ 9845682380