2015 ವರ್ಷ ಭವಿಷ್ಯ : ಮಿಥುನ ರಾಶಿಗೆ ಬಂಪರ್!
ಮೃಗಶಿರಾ ನಕ್ಷತ್ರದ 3, 4ನೇ ಚರಣ, ಆರಿದ್ರಾ, ಪುನರ್ವಸು ನಕ್ಷತ್ರದ 1, 2, 3ನೇ ಚರಣದವರದು ಮಿಥುನ ರಾಶಿ. ಇವರಿಗೆ ಜನ್ಮನಾಮ ಕ, ಕಿ, ಕು, ಘ, ಙ, ಛ, ಕೆ, ಕೊ, ಹ ಎಂಬಕ್ಷರಗಳಲ್ಲಿ ಬರುತ್ತದೆ.
ಈ ರಾಶಿಯವರಿಗೆ 2015ನೇ ಹೊಸ ವರ್ಷವು ಸೂಪರ್ ಎನ್ನಬಹುದು. ವರ್ಷದ ಮೊದಲಾರ್ಧ ಅತೀ ಮುಖ್ಯವಾದದು. ಹೀಗಾಗಿ ಈ ಸಮಯದಲ್ಲಿ ಮುಖ್ಯವಾದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನ ಮಾಡಿ. ಯಶಸ್ಸು ಕಟ್ಟಿಟ್ಟ ಬುತ್ತಿ. ಹಣದ ವಿಷಯದಲ್ಲಿ ಹೆಚ್ಚಿನ ಅನುಕೂಲ. ಬಂದ ಹಣವನ್ನು ಸೂಕ್ತವಾಗಿ ಕೂಡಿಟ್ಟುಕೊಂಡು ಅನುಕೂಲಕ್ಕೆ ಬಳಸಿಕೊಳ್ಳಬಹುದು.
ಗುರುಬಲವಿರುವುದರಿಂದ ಮದುವೆಗೆ ಪ್ರಯತ್ನಿಸುತ್ತಿರುವವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ವ್ಯವಹಾರದಿಂದ ಮತ್ತು ಶೇರು ವಹಿವಾಟಿನಿಂದ ಲಾಭದಲ್ಲಿ ತೇಲಾಡುವ ಯೋಗವಿದೆ. ಕುಟುಂಬ ವರ್ಗದವರೊಂದಿಗೆ ಸುಖ, ಸಂತೋಷ, ನೆಮ್ಮದಿ ಹಾಗೂ ಇಷ್ಟದ ವಸ್ತುಗಳ ಖರೀದಿ ಜೀವನದ ಖುಷಿ ಅನುಭವಿಸುವ ಸಮಯ. ಇಷ್ಟು ದಿನ ಪಂಚಮಶನಿಯಾಗಿ ಕಾಡಿದ ಶನಿದೇವರು ನಿಮಗೆ ಷಷ್ಠಮನಾಗಿ ಲಾಭ ನೀಡಲಿದ್ದಾನೆ.
ಜುಲೈ ನಂತರ ಸ್ವಲ್ಪ ಗುರುಬಲ ಕಮ್ಮಿಯಾಗುವುದರಿಂದ ಆ ಸಮಯದಲ್ಲಿ ಸೊಕ್ಕು, ಸೆಡವು, ಕೋಪ ನಿಮ್ಮಲ್ಲಿದ್ದರೆ ಕಮ್ಮಿ ಮಾಡಿಕೊಳ್ಳಿ. ಇಲ್ಲಾಂದ್ರೆ ಸೊಕ್ಕಿಳಿಸುತ್ತಾರೆ ನಿಮಗಾಗದವರು ನೆನಪಿರಲಿ. ಸ್ನೇಹಿತರೊಂದಿಗೆ ಜುಲೈ ನಂತರ ಹೆಚ್ಚಿನ ವ್ಯವಹಾರ ಮತ್ತು ಒಡನಾಟ ಕುರಿತು ಎಚ್ಚರಿಕೆಯಿಂದಿರಲಿ. ಕುಟುಂಬದವರೊಂದಿಗೂ ಸ್ವಲ್ಪ ನಿಮ್ಮತನ ಬದಲಿಸಿಕೊಳ್ಳಿ. ಇಲ್ಲಾಂದ್ರೆ ನಿಮಗೂ ನಿಮ್ಮನೆಯವರಿಗೂ ಯಾಕೆ ಆಗಿ ಬರುತ್ತಿಲ್ಲ ಎಂದು ಗೊಣಗಿಕೊಳ್ಳಬೇಕಾಗುತ್ತದೆ.
ಆರೋಗ್ಯದಲ್ಲೂ ಸ್ವಲ್ಪ ಕಿರಿಕಿರಿ ಕಾಣಿಸಿಕೊಳ್ಳಬಹುದು. ಹೀಗಾಗಿ ದೇಹವನ್ನು ಫಿಟ್ ಆಗಿಟ್ಟುಕೊಳ್ಳಲು ಪ್ರತಿನಿತ್ಯ ಒಂದು ತಾಸು ವ್ಯಾಯಾಮಕ್ಕೆಂದು ಮೀಸಲಿಡಿ. ಇಲ್ಲಾಂದ್ರೆ ಆಸ್ಪತ್ರೆಗೆ ದುಡ್ಡು ಸುರಿಯಲು ರೆಡಿಯಾಗಿರಿ.
ಶನಿಬಲವಿರುವುದರಿಂದ ನೀವೇ ನಿಮಗಾಗದವರಿಗೆ ಈಗ ಶನಿ! ನಿಮ್ಮ ಏಳ್ಗೆಯನ್ನು ನೋಡಿ ಹೊಟ್ಟೆಕಿಚ್ಚು ಪಟ್ಟುಕೊಳ್ಳುವ ಜನರನ್ನು ಆದಷ್ಟು ದೂರವಿಡಿ. ಇನ್ನು ಮೂರು ವರ್ಷ ಶನಿಬಲ ನಿಮಗಿದೆ. ಹೆದರದೇ ಎಲ್ಲ ಕೆಲಸ ಕಾರ್ಯಗಳನ್ನು ಮುನ್ನುಗ್ಗಿ ಮಾಡಿಕೊಳ್ಳಿ. ಎಲ್ಲವೂ ನಿಮಗಾಗಿಯೇ ಕಾದಿದೆಯೆ ಎಂದುಕೊಳ್ಳಬೇಕು ಜನರು. ಆ ತರಹ ಅವಕಾಶಗಳು ಸಿಗುವುದರಿಂದ ದಿನನಿತ್ಯ ಒಂದು ಗಂಟೆ ಹೆಚ್ಚಿಗೆ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಿ.
ದುಡ್ಡು ಮಾಡಲು ಸರಿಯಾದ ಸಮಯ : ಲಾಭ ನಿಮಗೆ ಸಿಗುವುದರಿಂದ ಶೇರು ವಹಿವಾಟಿನಲ್ಲಿ ಸೂಕ್ತ ಸಮಯ ನೋಡಿಕೊಂಡು ಹೂಡಿಕೆ ಮಾಡಿ. ಹಣ ಕೂಡಿಟ್ಟುಕೊಂಡಾಗ ಆಸ್ತಿ-ಪಾಸ್ತಿ ಮಾಡಿಕೊಂಡು ಮುಂದಿನ ದಿನಗಳನ್ನು ಚಿಂತೆಯಲ್ಲಿಲ್ಲದೇ ಕಳೆಯಬಹುದು ಎಂಬುದನ್ನು ನೆನಪಿಡಿ. ಆದರೆ ದುರ್ಬುದ್ಧಿಯಿಂದ ಹಣ ಗಳಿಸುವುದು ಬೇಡ. ಅದು ಉಳಿಯುವುದೂ ಇಲ್ಲ ಕೂಡ. ನಿಮ್ಮನ್ನೂ ಹಾಳು ಮಾಡಿ ಹೋಗುತ್ತದೆ. ಆಮೇಲೆ ಹಾಳಾದದನ್ನು ಸುಧಾರಿಸಿಕೊಳ್ಳಲೂ ನಿಮ್ಮಲ್ಲಿ ಹಣವಿರುವುದಿಲ್ಲ. ಅಂಥಾ ಪರಿಸ್ಥಿತಿ ತಂದುಕೊಳ್ಳದಿರಿ.
ಹೊಸ ಹೊಸ ಆಲೋಚನೆಗಳು ಮತ್ತು ಹೊಸಬರಿಂದ ದುಡ್ಡು ಮಾಡುವ ಕೆಲಸಗಳು, ಮಾಹಿತಿಗಳು ನಿಮಗೆ ಗೊತ್ತಾಗುತ್ತವೆ ಮತ್ತು ಸಿಗುತ್ತವೆ. ಅವುಗಳನ್ನು ನಂಬಿಕೆ, ವಿಶ್ವಾಸಗಳಿಂದ ಮಾಡಿಕೊಳ್ಳಿ. ಮತ್ತೆ ಈ ಸಮಯ ಬರುವುದು ಮುಂದಿನ 30 ವರ್ಷಗಳ ನಂತರವೇ ಎಂಬುದು ನೆನಪಿರಲಿ.
ಮನೆಯಲ್ಲಿ ಶುಭ, ಸಮಾರಂಭಗಳ ಬಗ್ಗೆ ಹೆಚ್ಚಿನ ರೀತಿಯಲ್ಲಿ ಖರ್ಚು ಮಾಡಬೇಡಿ. ಆದಷ್ಟು ದುಂದುವೆಚ್ಚ ಮಾಡದೇ ಮನೆಯ ಕಾರ್ಯಗಳನ್ನು ಮುಗಿಸಿಕೊಳ್ಳಿ. ದುಡ್ಡಿರುವ ಬಂಧುಗಳು ನಿಮಗೆ ಸಹಾಯ ಮಾಡುವುದರಿಂದ ಅವರಿಂದ ಅನುಕೂಲ ಪಡೆದುಕೊಳ್ಳಿ. ದುಶ್ಚಟಗಳಿದ್ದರೆ ಬಿಟ್ಟು ಹೆಚ್ಚಿನ ಸಮಯವನ್ನು ದುಡಿಮೆಗೆ ಬಳಸಿಕೊಳ್ಳಿ. ಅದೃಷ್ಟ ಒದ್ದುಕೊಂಡು ಬಂದಿದೆ ಎಂಬುದು ಅರ್ಥ ಮಾಡಿಕೊಳ್ಳಿ.
ಮನೆಯಿಲ್ಲದವರು, ವಾಹನವಿಲ್ಲದವರು ಹೊಸಮನೆಯಲ್ಲಿ ವಾಸಿಸುವ ಮತ್ತು ಹೊಸವಾಹನದಲ್ಲಿ ಓಡಾಡುವ ಯೋಗ ಹೊಂದುತ್ತಾರೆ ಈ ವರ್ಷ. ಅದಕ್ಕೇನು ಬೇಕು ಎಂಬುದರ ಬಗ್ಗೆ ಸಿದ್ಧತೆ ಮಾಡಿಕೊಳ್ಳಿ ಈಗ್ಲಿಂದಲೇ. ಆದರೆ, ಸ್ವಲ್ಪ ರಾಹು-ಕೇತುಗಳ ಕಿರಿಕಿರಿಯಿದ್ದರೂ ಶನಿ ಆಟದ ಮುಂದೆ ಯಾರದೂ ನಡೆಯುವುದಿಲ್ಲ ಚಿಂತೆ ಬಿಟ್ಟಾಕಿ. ಶನಿಬಲ ಬಂದಿದೆ ಸರಿಯಾಗಿ ಬೆಳೆಯಿರಿ.
ಶುಭ ಕಾರ್ಯಕ್ಕೆ ಶುಭ ದಿನಗಳು : ಹಸಿರು, ಗಿಳಿಹಸಿರು, ಕಪ್ಪುಹಸಿರು, ಹಳದಿ ಬಣ್ಣವನ್ನು ಹೆಚ್ಚಿಗೆ ಬಳಸಿ. ಈ ಬಣ್ಣದ ಸಾಮಾನು ಮತ್ತು ಬಟ್ಟೆಗಳನ್ನು ಹೆಚ್ಚಿಗೆ ಉಪಯೋಗಿಸಿದರೆ ನಿಮಗೇನೇ ಶುಭ. ಗಣಪನನ್ನು ಆರಾಧಿಸಿಯೇ ಮುಂದಿನ ಕಾರ್ಯಕ್ಕೆ ಮುಂದಡಿ ಇಡಿ. 5, 14, 23ನೇ ತಾರೀಖಿನಲ್ಲಿಯೇ ನಿಮ್ಮ ಮುಖ್ಯವಾದ ಕೆಲಸ ಕಾರ್ಯಗಳಿಗೆ ಶ್ರೀಕಾರ ಹಾಕಿ. ಬುಧವಾರ, ಸೋಮವಾರ ನಿಮಗೆ ಖುಷಿ ಕೊಡುವ ದಿನಗಳಾಗಿರುವುದರಿಂದ ಅಂದಿನ ದಿನಗಳಲ್ಲಿ ನಿಮ್ಮ ಹೆಚ್ಚಿನ ಕೆಲಸಗಳನ್ನು ಮಾಡಿಕೊಳ್ಳಿ. ಸಂಖ್ಯೆಗಳಿಂದಲೂ ಲಾಭವಾಗುತ್ತದೆಯಂತಲ್ಲ ಎಂದುಕೊಂಡಿದ್ದರೆ 5, 2, 6, 3 ಅಂಕಿಗಳಲ್ಲಿ ನಿಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಿ ಬೇಕಿದ್ದರೆ.
ಮೇಷ, ಸಿಂಹ, ತುಲಾ, ಕನ್ಯಾ ರಾಶಿಯವರೊಂದಿಗೆ ನಿಮಗೆ ಸಂಪರ್ಕ ಜಾಸ್ತಿಯಿರುತ್ತದೆ. ಇವರಿಂದ ನಿಮಗೆ ಒಳ್ಳೆಯದೆ ಆಗುತ್ತದೆ. ಈ ರಾಶಿಯವರೂ ಕೂಡ ನಿಮ್ಮ ಏಳ್ಗೆಯನ್ನು ಬಯಸುವವರೇ. ನೀವೂ ಕೂಡ ಇವರ ಏಳ್ಗೆಗೆ ಸಹಕರಿಸುತ್ತೀರುತ್ತೀರಿ. ಆದರೆ ಕರ್ಕ ರಾಶಿಯವರಿಂದ ಮಾತ್ರ ಆದಷ್ಟು ದೂರವಿರಿ. ಅವರಂತೂ ಮೊದಲೇ ಮಾನಸಿಕ ಸ್ಥಿರತೆ ಏರಿಳಿತದಲ್ಲಿ ಏರಿದ ಕೈನವರು. ನಿಮ್ಮನ್ನು ಕಂಡರೆ ಆಗಲ್ಲ. ನಿಮಗೂ ಕರ್ಕ ರಾಶಿಯವರನ್ನು ಕಂಡರೆ ಅಷ್ಟಕ್ಕಷ್ಟೇ ಎನಿಸುತ್ತಿರುತ್ತದೆ. ಹೀಗಾಗಿ ಕರ್ಕ ರಾಶಿಯವರೊಂದಿಗೆ ಯಾವುದೇ ರೀತಿಯ ವ್ಯವಹಾರ ಮತ್ತು ಜಗಳ ಕೂಡ ಬೇಡ ನಿಮಗೆ. ಹಾಯ್, ಬೈ ಅಷ್ಟಿದ್ದರೆ ನಿಮಗೊಳ್ಳೆಯದು.
ಯಾರಿಗೂ ಹೆದರದ ಮತ್ತು ಸ್ವಲ್ಪ ರಸಿಕತನವೂ ನಿಮ್ಮಲ್ಲಿ ಹೆಚ್ಚಿರುವುದರಿಂದ ಏನು ಮಾಡುತ್ತಿದ್ದೇನೆ ಎಂಬುದರ ಬಗ್ಗೆ ಗಮನವಿಟ್ಟುಕೊಳ್ಳಿ. ಸುತ್ತಮುತ್ತಲಿನವರು ನಿಮ್ಮನ್ನು ಗಮನಿಸುತ್ತಿದ್ದಾರೆ ಎಂಬುದರ ಅರಿವಿರಲಿ. ಯಾಕೆಂದರೆ "ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರಲ್ವಂತೆ' ಗೊತ್ತಿರಲಿ.
ಅತಿಯಾದ ಸ್ವಾರ್ಥತನವನ್ನು ಈ ವರ್ಷ ಬಿಟ್ಟಾಕಿ, ಸೇಡಿನ ಸ್ವಭಾವ ಸ್ವಲ್ಪ ಕಮ್ಮಿ ಮಾಡಿಕೊಳ್ಳಿ. ಕರುಣೆ ಮತ್ತು ಪ್ರೀತಿ ಅರ್ಹರಿಗೆ ಮಾತ್ರ ಇರಲಿ. ಅನರ್ಹರನ್ನು ತಿರುಗಿಯೂ ಕೂಡ ನೋಡಬೇಡಿ. ನಿಮ್ಮ ಏಳ್ಗೆಯ ಈ ಸಮಯದಲ್ಲಿ ದುಷ್ಟರು ಅಡ್ಡಗಾಲು ಹಾಕಬಹುದು, ಅದಕ್ಕಾಗಿ ಜಾಗೃತೆ ಹೆಚ್ಚಿನ ಪ್ರಮಾಣದಲ್ಲಿರಲಿ. ನಂಬಿಕೆ, ವಿಶ್ವಾಸವಿದ್ದವರ ಬಳಿ ಮಾತ್ರ ವ್ಯವಹಾರ ಇರಲಿ. ಅಂದ್ರೆ ಮಾತ್ರ ಲಾಭವಾಗುತ್ತೆ.
ತಂದೆ-ತಾಯಿಗಳನ್ನು ಮತ್ತು ಮನೆಯ ಹಿರಿಯ ಸದಸ್ಯರನ್ನು ಹೆಚ್ಚಿನ ಕಾಳಜಿಯಿಂದ ನೋಡಿಕೊಳ್ಳಿ. ಅವರೆಂಗೇ ಇರಲಿ ನಿಮಗೆ ಮಾತ್ರ ಅವರಾಶೀರ್ವಾದ ಬೇಕಷ್ಟೇ ಎಂಬುದು ಅರ್ಥ ಮಾಡಿಕೊಂಡರೆ ಸಾಕು. ಸಾಧ್ಯವಾದರೆ ಅನುಕೂಲ ಮಾಡಿಕೊಂಡು ಒಮ್ಮೆ ವೇಂಕಪ್ಪನ ದರ್ಶನ ಮಾಡಿಕೊಂಡು ಬನ್ನಿ ಆದಷ್ಟು ಬೇಗ.
ಒಟ್ಟಿನಲ್ಲಿ ಹೊಸ ವರ್ಷವು ಮಿಥುನ ರಾಶಿಯವರಿಗೆ ಶೇ.100ರಷ್ಟು ಒಳ್ಳೆಯದಿದೆ ಎನ್ನಬಹುದು. ಬಂದಿರುವ ಈ ಸುವರ್ಷವನ್ನು ಸಂತಸದಿಂದ ಸ್ವಾಗತಿಸಿ. ಹೊಸ ವರ್ಷದ ಶುಭಾಶಯಗಳೊಂದಿಗೆ ಶುಭವಾಗಲಿ ನಿಮಗೆ.