ಸಿಂಹ ರಾಶಿ ವರ್ಷಭವಿಷ್ಯ 2016 ಮತ್ತು ಪರಿಹಾರೋಪಾಯ
ರಾಶಿಚಕ್ರದಲ್ಲಿ ಈ ರಾಶಿಯವರ ಗುರುತು ಸಿಂಹ. ಹೀಗಾಗಿ ಇವರಿಗೆ ಭಯವೆಂಬುದೇ ಗೊತ್ತಿರುವುದಿಲ್ಲ. ಘರ್ಜಿಸಲು ನಿಂತರೆ ಎಲ್ಲರೂ ಪತರಗುಟ್ಟಬೇಕು ಹಂಗೆ ಇವರ ವೈಖರಿ. ಇದಕ್ಕೆಲ್ಲಾ ಕಾರಣವೆಂದರೆ ಈ ರಾಶಿಯವರ ಅಧಿಪತಿ ಸೂರ್ಯ. ಜಗತ್ತು ನಡೆಯುತ್ತಿರುವುದೇ ಸೂರ್ಯನ ಬೆಳಕಿನಿಂದ. ಅಂಥಾ ಅಧಿಪತಿ ಹೊಂದಿರುವ ಸಿಂಹ ರಾಶಿಯವರ ವ್ಯಕ್ತಿತ್ವ ಕೇಳಬೇಕೇ?
ಈ ವರ್ಷ ಸಿಂಹದವರು ಕೇವಲ ಕೇಸರಿ, ಹಳದಿ, ಬಿಳಿ, ಕೆಂಪು ಬಣ್ಣದ ವಸ್ತುಗಳನ್ನು ಮತ್ತು ವಸ್ತ್ರಗಳನ್ನಷ್ಟೇ ಉಪಯೋಗಿಸಬೇಕು. ಹಳೆಯದನ್ನೇನು ಮಾಡಬೇಕೆಂದು ಚಿಂತಿಸುವ ಅಗತ್ಯವಿಲ್ಲ. ಬಟ್ಟೆ ಬರೆ ಇಲ್ಲದವರೂ ಎಷ್ಟೋ ಜನ ಇದ್ದಾರೆ ನಮ್ಮ ನಡುವೆ. ಕೈಯಾರೆ ದಾನ ಮಾಡಿ ಒಂದಿಷ್ಟು ಪುಣ್ಯವಾದರೂ ಬರುತ್ತೆ. ಪುಣ್ಯ ಸಾಕಷ್ಟಿದೆ ಸಾಮೀ... ಬೇರೆ ಬಣ್ಣದ ಬಟ್ಟೆಗಳನ್ನೇ ಹಾಕ್ಕೋಳ್ತೇವೆ ಎನ್ನುವವರಿಗೆ, ಸಾಮೇರು, ಮೊದಲೇ ಅರ್ಧಾಷ್ಟಮ ಶನಿಕಾಟದಲ್ಲಿ ಮುಳುಗುವ ಸಮಯದಲ್ಲಿ ಉದ್ಧಟತನ ಮಾತನಾಡುವವರಿಗೆ ಜನರಲ್ ವಾರ್ಡ್ ಗತಿ ಎನ್ನುತ್ತಾರೆ.
ಆದಷ್ಟು ಪೂರ್ವಕ್ಕೆ ಮುಖ ಮಾಡಿ ಕೆಲಸ ಮಾಡುವ ಅಥವಾ ಅದೇ ದಿಕ್ಕಿಗೆ ಪ್ರಾಶಸ್ತ್ಯ ಕೊಡಬೇಕು. ವರ್ಷಪೂರ್ತಿ ರವಿವಾರ, ಸೋಮವಾರ, ಮಂಗಳವಾರ ಮತ್ತು ಗುರುವಾರಗಳಂದು ಮಾತ್ರ ಮುಖ್ಯವಾದ ಮಾತುಕತೆ ಅಥವಾ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬೇಕು. ಉಳಿದ ದಿನ ಮಾಡಿಕೊಂಡರೆ ಯಶಸ್ಸು ಅಷ್ಟಕ್ಕಷ್ಟೇ ಎನ್ನಬಹುದು. [ಕರ್ಕ ರಾಶಿ ವರ್ಷಭವಿಷ್ಯ 2016]
ಬೆಂಕಿಯಂಗೆ ಇರುವ ಗುಣ ಕಮ್ಮಿ ಮಾಡಿಕೊಳ್ಳಬೇಕು ಮೊದಲು ಸಿಂಹ ರಾಶಿಯವರು, ಏಕೆಂದ್ರೆ ಕಾಡಿನ ರಾಜನೇ ನಮ್ಮ ರಾಶಿಯ ಗುರುತು ಎಂದುಕೊಳ್ಳುವುದು ಬೇಡ. ಬೇರೆ ರಾಶಿಯವರಿಗೂ ಪ್ರಾಣಿಗಳ ಗುರುತುಗಳಿವೆ. ಅವರಿಗೂ ಗೊತ್ತು ಸಿಂಹದ ಜೊತೆ ಹೆಂಗಿರಬೇಕು ಎಂದು. ಹೀಗಾಗಿ ಸಿಂಹ ರಾಶಿಯವರು ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಅರಿತುಕೊಳ್ಳಬೇಕು.
ಸಾಮೇರು ಹಿಂದೂ ಧರ್ಮದವರು, ಮೊದಲೇ ಕಾಮಣ್ಣನ ಮಕ್ಕಳು.... ಕಚ್ಚಿದರೆ ಎರಡೇ ನಿಮಿಷದಲ್ಲಿ ಸಾಯಿಸಬಲ್ಲ ಕಾಳಸರ್ಪವನ್ನು ಪೂಜಿಸುವವರು ಅವರು ವಿಷ ಕಾರುವುದು ಗೊತ್ತಿದೆ ಅವರಿಗೆ. ಹನುಮನ ಪೂಜೆ ಮಾಡಿ ಅವನಂಗೆ ಮಂಗಾಟ ಮಾಡುವುದೂ ಗೊತ್ತಿದೆ. ಇನ್ನು ಬಸವಣ್ಣನ ಪೂಜಿಸುತ್ತ ಹೊತ್ತು ಬಂದರೆ ಗೂಳಿಯಾಗಿ ಗುಮ್ಮುವುದು ಗೊತ್ತಿದೆ. ಗಣಪನ ಆರಾಧಿಸುತ್ತ ಆನೆಯ ಬಲ ಮತ್ತು ಚುರುಕು ಬುದ್ಧಿ ಬೆಳೆಯುತ್ತ ಕಲಿತವರು ಅವರು. ಹೀಗಾಗಿ ಸಾಮೇರು ಹೇಳಿದಂಗೆ ಕೇಳೋರಿಗೆ ಅನ್ಯಾಯ ಆಗುವುದಂತೂ ಅಸಾಧ್ಯವೇ ಸರಿ ಎನ್ನಬಹುದು.
ಇನ್ನು, ಶಂಭೋಲಿಂಗನನ್ನು ಇವರು ಹೆಚ್ಚಾಗಿ ಧ್ಯಾನಿಸುತ್ತಿರಬೇಕು. ಆದರೆ, ಶಿವಪಂಚಾಕ್ಷರಿ ಮಂತ್ರವನ್ನು ಸಾಮೇರ ಕಡೆಯಿಂದ ಕೇಳಿ ತಿಳಿದುಕೊಳ್ಳಬೇಕು. ಘಂಟಾಘೋಷವಾಗಿ ಶಿವಪಂಚಾಕ್ಷರಿ ಮಂತ್ರ ಹೇಳಬಾರದು. 1, 2, 5 3 ಮತ್ತು ಈ ಸಂಖ್ಯೆಗಳನ್ನು ಆಯ್ಕೆ ಮಾಡಿಕೊಂಡು ಅದರಲ್ಲೂ ಅದೃಷ್ಟವನ್ನು ಪಡೆದುಕೊಳ್ಳಬೇಕು ಸಿಂಹ ರಾಶಿಯವರು ಈ ವರ್ಷ. [ಶಿವರಾತ್ರಿ : ಜ್ಯೋತಿರ್ಲಿಂಗಗಳ ಪೌರಾಣಿಕ ಹಿನ್ನೆಲೆ ಗೊತ್ತಾ?]
ಮೈಮೇಲೆ ಬಂಗಾರದೊಂದಾದರೂ ದಾಗೀನು ಇರಲಿ. ಇಲ್ಲಾ ಸಾಮೀ, ಅಷ್ಟು ಕಾಸು ನಮ್ಮಲ್ಲಿ ಎಲ್ಲೈತೇ? ಎನ್ನುವವರಿಗೆ ಕನಿಷ್ಠ ತಾಮ್ರದ ಉಂಗುರನಾದ್ರೂ ಹಾಕ್ಕೋಳಿ ಬಾಡಿನಲ್ಲಿದ್ದ ಹೀಟ್ ಆದ್ರೂ ಕಮ್ಮೀ ಆಗತ್ತೆ ಅಂತಾರೆ ಸಾಮೇರು.
ಕಾಸಿನ ಸಲುವಾಗಿ ಆವಾಗಾವಾಗ ವೇಂಕಪ್ಪನ ಕಾಲಿಗೆರುವುದು ರೂಢಿಸಿಕೊಳ್ಳಬೇಕು ಇವರು. ಕಟಕ, ಧನುಸ್ಸು, ಮೀನ, ಮೇಷ ಮತ್ತು ವೃಶ್ಚಿಕ ರಾಶಿಯವರೊಂದಿಗೆ ಉತ್ತಮ ಹೊಂದಾಣಿಕೆ ಇಟ್ಟುಕೊಳ್ಳಬೇಕು. ಇವರೇ ಕಷ್ಟದಲ್ಲಿ ಒಂದಿಷ್ಟು ಇಷ್ಟಪಟ್ಟು ಬಂದು ಸಹಾಯಕ್ಕೆ ನಿಲ್ಲುವವರು ನೆನಪಿಟ್ಟುಕೊಳ್ಳಿ. ಇಲ್ಲಾಂದ್ರೆ ನಿಮ್ಮ ಸುತ್ತಮುತ್ತಲಿನ ಜನರಲ್ಲಿ ಈ ರಾಶಿಯವರು ಯಾರ್ಯಾರಿದಾರೆ ಎಂದು ನೋಟ್ ಮಾಡಿಟ್ಟುಕೊಂಡು ಅವರ ಬಳಿ ನಿಮ್ಮದೇನಾದರೂ ಕೆಲಸವಿದೆಯಾ ನೋಡಿಕೊಂಡು ಆಗುವುದನ್ನು ಮಾಡಿಕೊಳ್ಳುವುದು ಬುದ್ಧಿವಂತಿಕೆ.
ಅನ್ನದಾಸೋಹಕ್ಕೆ ಗೋಧಿ ದಾನ ನೀಡುತ್ತಿದ್ದರೆ ಶುಭಫಲ. ದುಡಿಯುವ ಶಕ್ತಿ ಇರುವವರೆಗೂ ದಾನ ನೀಡುತ್ತಿದ್ದರೆ, ದುಡಿಯುವ ಶಕ್ತಿ ನಿಂತ ಮೇಲೆ ದಾನದ ಪ್ರತಿಫಲ ಲಭಿಸಲಾರಂಭಿಸುತ್ತದೆ ಎಂಬುದು ಗೊತ್ತಿರಲಿ.
ಅತೀಯಾಗಿ ಎಲ್ಲರೊಂದಿಗೂ ಆಪ್ತತೆ ಬೆಳೆಸಿಕೊಳ್ಳುವುದು ಸ್ವಲ್ಪ ಕಮ್ಮಿ ಮಾಡಿಕೊಂಡು, ಉದಾರತನವನ್ನು ಈ ವರ್ಷ ಕಮ್ಮಿ ಮಾಡಿಕೊಳ್ಳಬೇಕು. ಸತತ ದುಡಿಮೆಯ ಗುಣ ಹೊಂದಿರುವ ಈ ರಾಶಿಯವರು ಹಾಸಿಗೆಯಿದ್ದಷ್ಟು ಕಾಲು ಚಾಚುವ ಗುಣ ಹೊಂದಿರುವುದರಿಂದ ಆತ್ಮವಿಶ್ವಾಸದಲ್ಲಿ ಕೊರತೆ ಮಾಡಿಕೊಳ್ಳಬಾರದು.
ಎಲ್ಲಿಯೇ ಯಾವುದೇ ಧರ್ಮದ ದೇವರು ಕಂಡರೂ ಕೈಮುಗಿಯುವ ಸಿಂಹ ರಾಶಿಯವರು ಹಠವನ್ನು ಮತ್ತು ಅತೀ ಸಮಾಧಾನ ಮತ್ತು ಸಹನೆಯನ್ನು ಹೊತ್ತಿಗೆ ಬಂದಾಗ ಬದಲಾಯಿಸಿಕೊಳ್ಳಬೇಕು. ಏಕೆಂದರೆ ಇವರ ಗುಣ ಹೆಂಗಿರುತ್ತೇ ಅಂದ್ರೆ ನಾ ಪೂಜೆ ಮಾಡೋ ದೇವರ್ನಾ ನಾ ಕಾಣೇನಾ ಎನ್ನುವಂತಿರುತ್ತದೆ. ಹಿಂಗಾದ್ರೆ ದೇವರನ್ನು ಅತಿಯಾಗಿ ಹಚ್ಚಿಕೊಳ್ಳುವ ಇವರು ತಾನೇನು ತಪ್ಪು ಮಾಡಿದರೂ ದೇವರು ಕ್ಷಮಿಸುತ್ತಾನೆ ಎಂದುಕೊಂಡಿರುತ್ತಾರೆ. ಇದೇ ತಪ್ಪು ತಿಳಿವಳಿಕೆಯಿಂದ ತಪ್ಪು ಮಾಡಲು ಹೋಗಿ ಸಿಕ್ಕಿಹಾಕಿಕೊಳ್ಳುವುದರಲ್ಲಿ ಸಿಂಹ ರಾಶಿಯವರ ಪಾಲೇ ಹೆಚ್ಚು ಎಲ್ಲ ರಾಶಿಯವರಿಗಿಂತ.
ಈ ವರ್ಷದ ಜುಲೈ ನಂತರ ತೊಂದರೆಗಳ ಸರಮಾಲೆಗಳು ನಿಲ್ಲುವುದರಿಂದ ಮುಖ್ಯವಾದ ಕೆಲಸಗಳನ್ನು ಅಲ್ಲಿಯವರೆಗೆ ಮುಂದೂಡಿಕೊಳ್ಳಬೇಕು. ಅಷ್ಟಮ ಶನಿಕಾಟ ಇರುವುದರಿಂದ ದೇಹಾರೋಗ್ಯಕ್ಕಾಗಿ ನಿತ್ಯ ವ್ಯಾಯಾಮ ಮಾಡಬೇಕು. ವ್ಯಾಯಾಮ ಮಾಡಕ್ಕೆ ಆಗಲ್ಲ ಎಂದರೆ, ದೇವಾಲಯಕ್ಕೆ ಹೋದಾಗ ಬೆವರು ಬರುವಷ್ಟು ಪ್ರದಕ್ಷಿಣೆ ಹಾಕಿ ವಾಕಿಂಗ್ ಆಗುತ್ತೇ ದೈವಕೃಪೆಯೂ ಆಗುತ್ತೆ.
ಈಗ ರಾಹು ಕೂಡ ನಿಮ್ಮ ರಾಶಿಗೆ ಬಂದಿರುವುದರಿಂದ ಸ್ವಲ್ಪ ಸುಳ್ಳು ಹೇಳುವ ಗುಣ ಹುಟ್ಟಿಕೊಳ್ಳಬಹುದು. ಹೀಗಾಗಿ ನಾಲಿಗೆ ಮೇಲೆ ನಿಯಂತ್ರಣವಿರಲಿ. ಕೆಟ್ಟ ಚಟಗಳನ್ನು ಮುಕ್ತಗೊಳಿಸಿಕೊಂಡು ಶಕ್ತಿಯುತರಾಗಲು ಈಗ ಪ್ರಯತ್ನಿಸಬೇಕು. ಒಟ್ಟಿನಲ್ಲಿ ಈ ವರ್ಷ ಸಿಂಹ ರಾಶಿಯವರು ಸ್ವಲ್ಪ ಸೊಕ್ಕಿಳಿಸಿಕೊಳ್ಳುವ ಅಡಕತ್ತರಿಯಲ್ಲಿ ಸಿಕ್ಕಿಕೊಂಡಿದ್ದಾರೆ.
ಪರಿಹಾರಗಳು : ಮೊದಲು ಅರ್ಧಾಷ್ಟಮ ಶನಿಕಾಟ, ಜನ್ಮಗುರು, ರಾಹು-ಕೇತು ಶಾಂತಿಗಳನ್ನು ಮಾಡಿಸಿಕೊಳ್ಳಬೇಕು. ಏಕೆಂದರೆ ಒಮ್ಮೆಲೆ ನಾಲ್ಕು ಗ್ರಹಗಳು ತಿರುಗಿ ಬಿದ್ದಿವೆ. ಅರ್ಥಮಾಡಿಕೊಳ್ಳಬಹುದು ಸಿಂಹ ರಾಶಿಯವರು. ಕೆಲವರಿಗಂತೂ ಈಗಾಗಲೇ ಅನುಭವ ಆಗುತ್ತಿದೆ ಇದರ ಬಗ್ಗೆ. ಆದವರು ನಿಸ್ಸಂಕೋಚವಾಗಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ. ಉಳಿದವರಿಗೂ ಅರ್ಥವಾಗಲಿ ಕಷ್ಟ ನಮಗಷ್ಟೇ ಇಲ್ಲ. ಎಲ್ಲರಿಗೂ ಇದ್ದದ್ದೇ ಎಂದು.
ಶಂಭೋಲಿಂಗನಿಗೆ ಶನಿವಾರ ಬಿಲ್ವಪತ್ರೆ ಅರ್ಪಿಸಿ, ಇದಕ್ಕೂ ಮುನ್ನ ಕರಿಎಳ್ಳನ್ನು ಸ್ನಾನದ ನೀರಿನಲ್ಲಿ ಹಾಕಿಕೊಂಡು ಅಭ್ಯಂಜನ ಸ್ನಾನ ಮಾಡಬೇಕು. ಎಲ್ಲೆ ಹಾವಿನ ಹುತ್ತ ಕಂಡರೆ ಅದಕ್ಕೆ ಧಕ್ಕೆ ಮಾಡಬೇಡಿ.
ಪ್ರತಿನಿತ್ಯ ಕನಿಷ್ಠ 10 ಸೂರ್ಯನಮಸ್ಕಾರ ಮಾಡಬೇಕು. ಶಕ್ತಿವಂತರಾಗಿದ್ದರೇ ಅಥವಾ ಬಿಸಿರಕ್ತದವರಾಗಿದ್ದರೆ ನೂರೆಂಟು ಸೂರ್ಯನಮಸ್ಕಾರ ಮಾಡಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ನೆನಪಿರಲಿ ಸೂರ್ಯನಮಸ್ಕಾರದಿಂದ ಶಕ್ತಿಯಷ್ಟೇ ಅಲ್ಲ ಸೌಂದರ್ಯವೂ ಇಮ್ಮಡಿಗೊಳ್ಳುತ್ತದೆ. ಯಾವುದೇ ಔಷಧವಿಲ್ಲದೇ ಶಕ್ತಿ ಮತ್ತು ಸುಂದರತೆ ಬರುತ್ತದೆ ಎಂದರೆ ಬಿಟ್ಟವರು ದಡ್ಡರೇ ಸರಿ. [ಸೂರ್ಯ ನಮಸ್ಕಾರ ಕ್ರಮಬದ್ಧವಾಗಿ ಮಾಡುವ ವಿಧಾನ]
ಮುಂದಿನ ಲೇಖನದಲ್ಲಿ : ಕನ್ಯಾ ರಾಶಿಯವರ ವರ್ಷಫಲ ಮತ್ತು ಪರಿಹಾರೋಪಾಯಗಳು.