ಶುಭಾಶುಭ ಫಲಗಳನ್ನು ತಿಳಿಯುವುದು ಹೇಗೆ?
ಮೊದಲನೆಯದಾಗಿ ಜನವರಿ 15ರ ಮಕರ ಸಂಕ್ರಮಣದಿಂದ ಜನ್ಮನಕ್ಷತ್ರ ಆಧರಿಸಿ ಶುಭಾಶುಭ ಫಲ ತಿಳಿದುಕೊಳ್ಳಬಹುದು. ಈ ಫಲ 6 ತಿಂಗಳೊಳಗಾಗಿ ಅನುಭವಕ್ಕೆ ಬರುತ್ತದೆ.
ಇನ್ನು ಎರಡನೆಯದಾಗಿ ನಮ್ಮ ದೊಡ್ಡ ಹಬ್ಬವೆಂದೇ ಖ್ಯಾತಿ ಹೊಂದಿದ ಹಾಗೂ ಪಂಚಾಂಗದ ಪ್ರಕಾರ ಹೊಸ ವರ್ಷವೆಂದು ಪರಿಗಣಿಸಲ್ಪಟ್ಟ ಯುಗಾದಿಯಿಂದ ವರ್ಷಫಲ ತಿಳಿದುಕೊಳ್ಳಬಹುದು. ಈ ಫಲವು ಮುಂದಿನ ವರ್ಷದ ಯುಗಾದಿಯವರೆಗೂ ಅನುಭವಕ್ಕೆ ಬರುತ್ತದೆ. ಅಲ್ಲದೇ ಇದು ಪ್ರಕೃತಿಯೊಂದಿಗೆ ಹಣಕಾಸು ಪರಿಸ್ಥಿತಿಯ ಏರಿಳಿತವನ್ನು ಹೊಂದುವಂತಹ ಸಮಯವಾಗಿರುತ್ತದೆ. ಹೀಗಾಗಿ ಬಹಳಷ್ಟು ಜನರು ಯುಗಾದಿ ಭವಿಷ್ಯವನ್ನೇ ಹೆಚ್ಚು ಅವಲಂಬಿಸುತ್ತಾರೆ.
ಇದೇ ರೀತಿ ಮೂರನೆಯದಾಗಿ ರಾಶಿಗತವಾಗಿ ಸಂಚರಿಸುವ ಗುರುವಿನ ಗೋಚಾರದಿಂದಲೂ ಕೂಡ ನಮ್ಮ ಭವಿಷ್ಯದ ದಿನಗಳನ್ನು ಕಂಡುಕೊಳ್ಳಬಹುದು. ಆದರೆ ಗುರು ಗೋಚಾರ ಫಲ ಜೂನ್ನಿಂದ ಮುಂದಿನ ವರ್ಷದ ಜೂನ್ವರೆಗೂ ಇರುತ್ತದೆ. ಈ ಫಲವು ವರ್ಷದ ಮಧ್ಯಭಾಗದಿಂದ ಮುಂದಿನ ವರ್ಷದ ಮಧ್ಯದವರೆಗೂ ಅನ್ವಯಿಸುತ್ತದೆ. ಹೀಗಾಗಿ 2014ರ ವರ್ಷಭವಿಷ್ಯದಲ್ಲಿ ಗುರು ಗೋಚಾರ ಫಲವನ್ನು ಎರಡು ಭಾಗಗಳಾಗಿ ವಿಂಗಡನೆ ಮಾಡಬೇಕಾಗುತ್ತದೆ.
ಗುರುವು ತನ್ನ ಗೋಚಾರದಲ್ಲಿ ಉತ್ತಮ ಫಲವನ್ನಷ್ಟೇ ನೀಡುತ್ತಾನೆ. ಕೆಟ್ಟದ್ದನ್ನು ಅಪ್ಪಿತಪ್ಪಿಯೂ ಮಾಡುವುದಿಲ್ಲ. ಆದರೆ ಆರೋಗ್ಯದಲ್ಲಿ ತೊಂದರೆಯನ್ನಷ್ಟೇ ಮಾಡಬಹುದು. ಗುರು ಗೋಚಾರದಲ್ಲಿ ಮಧ್ಯದ 2 ತಿಂಗಳು ತುಂಬಾ ಶಕ್ತಿಯುತವಾಗಿ ಫಲ ಸಿಗುತ್ತದೆ.
ನಾಲ್ಕನೆಯದಾಗಿ ಶನಿದೇವರ ಗೋಚಾರದಿಂದಲೂ ರಾಶಿಫಲ ತಿಳಿದುಕೊಳ್ಳಬಹುದು. ಈ ಫಲವು ಎರಡೂವರೆ ವರ್ಷಗಳವರೆಗೆ ಇರುತ್ತದೆ. ಈ ವರ್ಷ ಶನಿದೇವರ ಗೋಚಾರ ಫಲವು ನವೆಂಬರ್ ತಿಂಗಳವರೆಗೂ ಒಂದು ತರಹ ಇದ್ದರೆ, ನವೆಂಬರ್ ನಂತರ ಮುಂದಿನ ಮೂರು ವರ್ಷಗಳವರೆಗೆ ರಾಶಿಗತ ಫಲ ಬೇರೆಯದೇ ಆಗುತ್ತದೆ.
ಇನ್ನು ಶನಿದೇವರು ಪಂಚಮ (ಎರಡೂವರೆ ವರ್ಷ) ಮತ್ತು ಅಷ್ಟಮ (ಎರಡೂವರೆ ವರ್ಷ) ಭಾವ ಗೋಚಾರದಲ್ಲಿ ಕೇವಲ ಕೆಟ್ಟಫಲವನ್ನೇ ನೀಡುತ್ತಾನೆ. ಸಾಡೇಸಾತಿಯಲ್ಲಿ (ಏಳೂವರೆ ವರ್ಷ) ಅತೀ ಕೆಟ್ಟದ್ದು ಮತ್ತು ಅತೀ ಒಳ್ಳೆಯದನ್ನೂ ಮಾಡುತ್ತಾನೆ. ಈಗಾಗಲೇ ಎಲ್ಲ ರಾಶಿಗಳವರು ನವೆಂಬರ್ವರೆಗೂ ಶನಿದೇವರ ಗೋಚಾರ ಫಲವನ್ನು ಓದಿಕೊಂಡಿದ್ದೀರಿ. ಈ ವರ್ಷಫಲದಲ್ಲಿ ಶನಿದೇವರ ನವೆಂಬರ್ ನಂತರದ ಗೋಚಾರದ ಫಲವನ್ನು ನೀಡಲಾಗುತ್ತದೆ.
ಐದನೇಯದಾಗಿ ಜನ್ಮಜಾತಕದ ಪ್ರಕಾರ ದಶಾಭುಕ್ತಿ ಸಮಯವನ್ನು ಆಧರಿಸಿ ನಮ್ಮ ದಿನಗಳು ಹೇಗಿರುತ್ತವೆ ಎಂದು ನೋಡಿಕೊಳ್ಳಬಹುದು. ನಮ್ಮ ಎಲ್ಲ ಏಳ್ಗೆಗೂ ಕೂಡ ದಶಾಭುಕ್ತಿಗಳನ್ನೇ ನಾವು ಅವಲಂಬಿಸಬೇಕಾಗುತ್ತದೆ. ಕೆಲವರು ಅತೀ ಕಡಿಮೆ ವಯಸ್ಸಿನಲ್ಲಿ ಹೆಚ್ಚು ಹೆಸರು ಮಾಡುತ್ತಾರೆ. ಇನ್ನು ಕೆಲವರು ಮುಪ್ಪಿನ ವಯಸ್ಸಿನಲ್ಲಿ ಉತ್ತಮ ಹೆಸರು ಗಳಿಸಿಕೊಳ್ಳುತ್ತಾರೆ. ಇದೇ ರೀತಿ ಗಳಿಕೆಯನ್ನೂ ಕೂಡ ಪರಿಗಣಿಸಬಹುದು. ಕಡಿಮೆ ವಯಸ್ಸಿನಲ್ಲಿಯೇ ಕಷ್ಟಪಟ್ಟು ದುಡಿದು ಆಸ್ತಿಪಾಸ್ತಿ ಮಾಡಿಕೊಂಡು ಮುಂದೊಂದು ದಿನ ಮಧ್ಯ ವಯಸ್ಸಿನಲ್ಲಿ ಇದ್ದಬದ್ದನ್ನೆಲ್ಲಾ ಮಾರಿಕೊಂಡು ಮತ್ತೆ ರೋಡಿಗೆ ಬಂದಿರುತ್ತಾರೆ ಕೆಲವರು. ಇದಕ್ಕೆ ದಶಾಭುಕ್ತಿ ಫಲವೆಂದು ಕರೆಯುತ್ತಾರೆ. ಇನ್ನು ದಶಾಸಂಧಿಗಳಲ್ಲಂತೂ ಅಪಘಾತ, ಆಘಾತ, ಜೀವನ್ಮರಣ ಹೋರಾಟವನ್ನೂ ಕೂಡ ಮಾಡಬೇಕಾಗುತ್ತದೆ.
ಇದೇ ರೀತಿ ಮಕ್ಕಳು (ವಿದ್ಯಾರ್ಥಿಗಳು), ಯುವಕ, ಯುವತಿಯರು (ಉದ್ಯೋಗಾಕಾಂಕ್ಷಿಗಳು, ಮದುವೆ ಬಂಧನಕ್ಕೆ ಕಾಯುತ್ತಿರುವವರು), ಯಜಮಾನರು (ಮಧ್ಯವಯಸ್ಕರು, ಉದ್ಯೋಗಸ್ಥರು, ಮಕ್ಕಳಾದವರು) ಹಾಗೂ ಹಿರಿಯರು (ನಿವೃತ್ತರು, ಮೊಮ್ಮಕ್ಕಳನ್ನು ಹೊಂದಿರುವರು) ವಯಸ್ಸಿಗೆ ತಕ್ಕಂತೆ ಅವರ ಮುಂಬರುವ ದಿನಗಳ ಫಲವನ್ನೂ ನಾವು ಕಂಡುಕೊಳ್ಳಬಹುದು. ಈ ರೀತಿ ಇನ್ನು ಹಲವಾರು ಹಂತಗಳಲ್ಲಿ ನಮ್ಮ ಮುಂದಿನ ದಿನಗಳ ಬಗ್ಗೆ ನಾವು ಮೊದಲೇ ತಿಳಿದುಕೊಳ್ಳಬಹುದು.