ಕನ್ಯಾ ವರ್ಷ ಭವಿಷ್ಯ: ಕೇಡು ಗೇಟು ಬಡಿಯುವಾಗ ಎಚ್ಚರವಾಗಲು ಲೇಟಾಗಬಾರದು
ಪರ್ಫೆಕ್ಷನಿಸ್ಟ್ ಗಳಾದ ಕನ್ಯಾ ರಾಶಿಯವರೇ ಈ ಸಲ ನಾಲಗೆಯನ್ನು ಹತೋಟಿಯಲ್ಲಿಟ್ಟುಕೊಳ್ಳಿ. ಅದು ಮಾತೇ ಆಗಿರಲಿ, ಮಾಡುವ ಊಟವೇ ಆಗಿರಲಿ ಕೇಡು ಬಂದು ಗೇಟು ಬಡಿಯುವ ಬಗ್ಗೆ ಎಚ್ಚರವಾಗಿರಿ. ಕಾಲ ಮಿಂಚಿ ಹೋದ ಮೇಲೆ ಎಷ್ಟೇ ಕೈ ಕೈ ಹಿಸುಕಿಕೊಂಡರೂ ಏನೂ ಉಪಯೋಗವಿಲ್ಲ.
ನಾಲ್ಕನೇ ಮನೆಯಲ್ಲಿರುವ ಶನಿ ಕಿರಿಕಿರಿ ಅನುಭವಿಸುವಂತೆ ಮಾಡುತ್ತಾನೆ. ಎರಡನೇ ಮನೆಯಲ್ಲಿರುವ ಗುರುವಿನ ಬಲದ ಕಾರಣಕ್ಕೆ ಬೆಂಕಿಯ ಜ್ವಾಲೆ ದೊಡ್ಡ ಮಟ್ಟದಲ್ಲಿ ಅನುಭವಕ್ಕೆ ಬರುವುದಿಲ್ಲ. ಅದೇನಿದ್ದರೂ ಅಕ್ಟೋಬರ್ ತಿಂಗಳವರೆಗೆ ಮಾತ್ರ. ಆ ನಂತರ ಗುರುವಿನ ಬಲವನ್ನೂ ಕಳೆದುಕೊಳ್ಳುವ ನಿಮ್ಮ ಸ್ಥಿತಿ ಮತ್ತಷ್ಟು ಕಷ್ಟವಾಗುತ್ತದೆ.
ಯಾವ ಹೋಮದಿಂದ ಏನು ಫಲ? ಶಾಸ್ತ್ರೋಕ್ತವಾಗಿ ಮಾಡುವುದು ಹೇಗೆ?
ಮುಖ್ಯವಾಗಿ ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಗಮನ ಅವಶ್ಯ ಇದೆ. ಈ ವರೆಗೆ ಇಲ್ಲದಷ್ಟು ಅಥವಾ ಸ್ವಭಾವತಃ ನೀವು ಹಾಗಲ್ಲದಿದ್ದರೂ ಆಲಸ್ಯ ಹೆಚ್ಚಾಗುತ್ತದೆ. ಇನ್ನೇನು ಕೆಲಸ ಕಾರ್ಯಗಳು ಆದವು, ಒಂದಿಷ್ಟು ಹಣ ಕೈ ಸೇರಿತು ಎಂದು ನಿರಾಳ ಅನ್ನುವುದರೊಳಗೆ ವಿಘ್ನಗಳು ಹೆಚ್ಚಾಗುತ್ತವೆ. ಹಣದ ವಿಚಾರದಲ್ಲಿ ಕಿರಿಕಿರಿ ಹೆಚ್ಚಾಗುತ್ತದೆ. ಆದುದರಿಂದ ಹಣ ಕೊಡುವುದಾಗಿ ಎಲ್ಲಿಯೂ ಒಪ್ಪಿಕೊಳ್ಳಬೇಡಿ.
ವಿವಾಹ ನಿಶ್ಚಯ ಸಾಧ್ಯತೆ
ಇನ್ನು ಅವಿವಾಹಿತರಿಗೆ ವಿವಾಹ ಸಂಬಂಧ ನಿಶ್ಚಯ ಆಗುತ್ತದೆ. ಅದರಲ್ಲಿಯೂ ನಿಮ್ಮ ಸಂಬಂಧಿಕರಲ್ಲಿಯೇ ವಿವಾಹ ನಿಶ್ಚಯ ಆಗುವ ಸಾಧ್ಯತೆಗಳು ಹೆಚ್ಚಿವೆ ಅಥವಾ ನಿಮ್ಮ ಪ್ರಯತ್ನ ಆದರೂ ಸಂಬಂಧಿಕರಲ್ಲಿ ಹುಡುಕುವತ್ತ ಇದ್ದರೆ ಒಳಿತು. ಮನಸ್ಸಿನಲ್ಲಿ ಅಂದುಕೊಂಡಿದ್ದು ಸಾಕಾರ ಆಗಬೇಕಲ್ಲವೆ? ಆದ್ದರಿಂದ ಯಾವುದೇ ವಿಘ್ನ ಆಗದಂತೆ ಗಣಪತಿಯ ಆರಾಧನೆ ಮಾಡಿ.
ಸಂತಾನಕ್ಕೆ ಪ್ರಯತ್ನಿಸಬಹುದು
ಆ ನಂತರ ಸಂತಾನ ವಿಚಾರದಲ್ಲಿ ಚಿಂತಿಸುತ್ತಾ ಇರುವವರು ಈಗ ಪ್ರಯತ್ನ ಪಡಲು ಸಕಾಲ. ಇನ್ನೂ ವಿಘ್ನಗಳು ಆಗುತ್ತಿವೆ ಎಂದು ಅನಿಸಿದಲ್ಲಿ ದಂಪತಿಯ ಜಾತಕ ಪರಿಶೀಲನೆ ಅತ್ಯವಶ್ಯ ಮಾಡಿಸಿ. ಯಾವುದಾದರೂ ಅಡೆತಡೆಗಳಿದ್ದಲ್ಲಿ ತಡ ಮಾಡದೆ ನಿವಾರಣೆ ಮಾಡಿಕೊಳ್ಳಿ. ಸಮಯ ಮೀರಿದ ನಂತರ ಪ್ರಯತ್ನಿಸಿದರೆ ಫಲವಿಲ್ಲ.
ವಿದೇಶ ಪ್ರಯಾಣದಲ್ಲಿ ಎಚ್ಚರ
ಉದ್ಯೋಗ ಅಥವಾ ವಿದ್ಯಾಭ್ಯಾಸ ಇತರೆ ಯಾವುದೇ ಉದ್ದೇಶದಿಂದ ವಿದೇಶ ಪ್ರಯಾಣ ಮಾಡಿದ್ದರೂ ಅಲ್ಲಿ ಆಹಾರದ ವಿಚಾರದಲ್ಲಿ ಹೆಚ್ಚಿನ ತೊಂದರೆ, ತಾಪತ್ರಯಗಳು ಆಗುತ್ತವೆ. ಆದ್ದರಿಂದ ಮನೆಯ ಅಡುಗೆಯೇ ಕ್ಷೇಮ. ನೀರು ಬಳಸುವಾಗ ಎಚ್ಚರಿಕೆ ಇರಲಿ. ಹೊಸ ಆಹಾರ ಪದಾರ್ಥಗಳ ಬಳಕೆ ಮಾಡುವಾಗ ಒಂದಕ್ಕೆ ಎರಡು ಸಲ ಪರೀಕ್ಷೆ ಮಾಡಿ.
ಆಪಾದನೆ ಎದುರಾಗಲಿದೆ
ಪ್ರೀತಿ- ಪ್ರೇಮದಲ್ಲಿ ಇರುವವರು ಸಂಬಂಧಿಕರು, ಸ್ನೇಹಿತರ ಕಣ್ಣಿಗೆ ಬಿದ್ದು, ಮನೆಯಲ್ಲಿ ವಿಚಾರ ತಿಳಿಯುವ ಸಾಧ್ಯತೆ ಜಾಸ್ತಿ ಇದೆ. ಆ ನಂತರ ಮನೆಯವರು ನಿಮ್ಮ ಮೇಲೆ ಅನುಮಾನ ಪಟ್ಟು, ರಂಪ- ರಾಮಾಯಣ ಆಗಲಿದೆ. ಇನ್ನೂ ಕೆಲವರಿಗೆ ಆಪಾದನೆ ಎದುರಾಗುತ್ತದೆ. ಗುರುವಿನ ಅನುಗ್ರಹ ಇರುವವರು ಅದರಿಂದ ಪಾರಾಗುತ್ತಾರೆ.
ಪ್ರಭಾವಿಗಳ ವಿಚಾರಕ್ಕೆ ಹೋಗಬೇಡಿ
ನಿಮಗಿಂತ ಬಲಶಾಲಿಗಳು, ಪ್ರಭಾವಿಗಳ ವಿಚಾರವಾಗಿ ಹಾಗೂ ಅವರ ಕುಟುಂಬದ ವಿಚಾರವಾಗಿ ಸಾರ್ವಜನಿಕವಾಗಿ ಯಾವುದೇ ಅಪಮಾನಕಾರಿ ಮಾತುಗಳನ್ನಾಡಬೇಡಿ. ಅದೇ ದೊಡ್ಡ ಮಟ್ಟದಲ್ಲಿ ವಿವಾದವಾಗಿ ನಿಮ್ಮ ಮೇಲೆ ಮುನಿಸಿಕೊಳ್ಳುವ ಸಾಧ್ಯತೆ ಇದೆ. ಜತೆಗೆ ಅದರ ದ್ವೇಷವನ್ನೂ ಸಾಧಿಸಬಹುದು, ಎಚ್ಚರ.
ನಾನು, ನನ್ನದು ಎಂಬುದನ್ನು ಬಿಡಿ
ದೇವರ ಪೂಜೆ -ಪುನಸ್ಕಾರಗಳು ನೀವು ಅಪೇಕ್ಷೆ ಮಾಡಿದ ಮಟ್ಟಕ್ಕೂ ಇನ್ನೂ ಹೆಚ್ಚು ಲಭಿಸುತ್ತದೆ. ವ್ಯಾಪಾರ ಅಥವಾ ಸ್ವಯಂ ವೃತ್ತಿ ಮಾಡುತ್ತಿರುವವರು ತಮ್ಮ ಎಂದಿನ ನಿಗದಿತ ಸ್ಥಾನಕ್ಕಿಂತ ಒಂದು ಹೆಜ್ಜೆ ಕೆಳಗೆ ಬಂದರೆ ಮಾತ್ರ ಕೆಲಸ ಸಿಗುತ್ತದೆ. ಇಲ್ಲ, ನಾನು ಕೆಳಗೆ ಇಳಿಯುವುದಿಲ್ಲ ಎಂದಾದಲ್ಲಿ ನಿರುದ್ಯೋಗಿಯಾಗಿ ಮನೆಯಲ್ಲಿ ಕುಳಿತಿರಬೇಕಾಗುವುದು.
ನಿಮ್ಮ ವಿಚಾರ ಯಾರಿಗೂ ತಿಳಿಸದಿರಿ
ಅವಕಾಶಗಳು ಬಂದಂತೆ ಅನಿಸುತ್ತವೆ. ಆದರೆ ನಿಜವಾಗಿ ಅದು ಎಷ್ಟು ಕಾರ್ಯಗತ ಆಗುತ್ತವೆ ಎನ್ನುವುದು ಮುಖ್ಯ. ನಿಮಗೆ ಈ ವರ್ಷ ಬಹಳ ದೃಷ್ಟಿ ದೋಷ ಆಗುತ್ತದೆ. ಅದರ ಬಗ್ಗೆ ಸಹ ಗಮನ ಇರಲಿ. ವ್ಯಾಪಾರದಲ್ಲಿ ಅಥವಾ ಉದ್ಯೋಗದಲ್ಲಿ ಅಥವಾ ನಿಮ್ಮ ನಿತ್ಯ ಜೀವನದಲ್ಲಿ ಆಗುತ್ತಿರುವ ಲಾಭ ಅಥವಾ ಒಳಿತು ಯಾರಿಗೂ ತಿಳಿಸಬೇಡಿ. ಮನೆ ಕಟ್ಟುವ, ಖರೀದಿಸುವ ಆಲೋಚನೆಯಿದ್ದರೆ ಒಮ್ಮೆ ಜಾತಕ ತೋರಿಸಿಕೊಳ್ಳಿ.
ಹಿರಿಯ ಮಾತು- ಸಲಹೆ ಕೇಳಿಸಿಕೊಳ್ಳಿ
ವಿದ್ಯಾರ್ಥಿಗಳು ಅನಾರೋಗ್ಯದ ಕಾರಣಕ್ಕೆ ತರಗತಿಗಳನ್ನು ತಪ್ಪಿಸಿಕೊಂಡು ಓದಿನಲ್ಲಿ ಹಿಂದುಳಿಯ ಬೇಕಾಗುತ್ತದೆ. ಆದರೆ ಆ ಕಾರಣಕ್ಕೆ ನಿಮಗೆ ಯಾರೂ ವಿನಾಯಿತಿ ತೋರಿಸುವುದಿಲ್ಲ. ಸಲ್ಲದ ಅನುಮಾನಕ್ಕೆ ನೀವೇ ಕಾರಣ ಮಾಡಿಕೊಡುತ್ತೀರಿ. ಹಿರಿಯರ ಮಾತು, ಸಲಹೆಯನ್ನು ಕಿವಿಗೊಟ್ಟು ಕೇಳಿಸಿಕೊಳ್ಳಿ, ಅನುಸರಿಸಿ.
ಪರಿಹಾರ ಏನು?
ನಿಮಗಿರುವ ತೊಂದರೆಯ ಪರಿಹಾರವಾಗಿ ಪಂಚ ದುರ್ಗಾ ಹವನ ಹಾಗೂ ಅಘೋರಾಸ್ತ್ರ ಮಂತ್ರ ಜಪ ಸಹಿತ ಹವನದ ಆವಶ್ಯಕತೆ ಕಾಣುತ್ತಿದೆ. ವ್ಯಾಘ್ರ ನೇತ್ರ ರತ್ನ ಧಾರಣೆ ಮಾಡಲೇಬೇಕು. ಈ ವರ್ಷ ತಿಂಗಳಿಗೆ ಒಮ್ಮೆ ಆದರೂ ಅನ್ನ ದಾನ ಮಾಡಿ ಅಥವಾ ನಿಮಗೆ ತಿಳಿದಲ್ಲಿ ಎಲ್ಲಿ ಅನ್ನ ದಾನ ಮಾಡುತ್ತಾರೋ ಅಲ್ಲಿ ಎಷ್ಟು ಸಾಧ್ಯವೋ ಅಷ್ಟು ಸಹಕಾರ ನೀಡಿ.