ವೃಷಭ ವರ್ಷ ಭವಿಷ್ಯ: ಸ್ವಲ್ಪ ಎಚ್ಚರ ತಪ್ಪಿದರೂ ಬದುಕು ಬಸ್ ಸ್ಟ್ಯಾಂಡ್
2018 ಅದರಲ್ಲೂ ಅಕ್ಟೋಬರ್ ತನಕ ಎಷ್ಟು ಜಾಗ್ರತೆಯಿಂದ ಇರುತ್ತೀರೋ ಅಷ್ಟೂ ಒಳ್ಳೆಯದು. ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ, ದೇವಸ್ಥಾನದಲ್ಲಿ ನೇತು ಹಾಕಿರುವ ಗಂಟೆ ಬಾರಿಸಲು ಹೋದರೆ ಅಲ್ಲಿನ ಸರಳು ಕಿತ್ತು, ಗಂಟೆ ತಲೆ ಮೇಲೆ ಬಿದ್ದು ಪೆಟ್ಟಾಗುವಂಥ ಸಮಯವಿದು. ಆರನೇ ಮನೆಯಲ್ಲಿನ ಗುರು, ಎಂಟನೇ ಮನೆಯಲ್ಲಿರುವ ಶನಿಯ ಪ್ರಭಾವದಿಂದಾಗಿ ಅದೃಷ್ಟ ಕೈ ಕೊಟ್ಟು ಎಲ್ಲದಕ್ಕೂ ಸಿಕ್ಕಾಪಟ್ಟೆ ಸತಾಯಿಸುತ್ತದೆ.
ಅತಿಯಾದ ಆತ್ಮವಿಶ್ವಾಸ ಅಥವಾ ಆ ರೀತಿಯ ಭ್ರಮೆಯನ್ನು ತಲೆಯಿಂದ ತೆಗೆದು ಹಾಕಿ. ಹೊಸ ವ್ಯವಹಾರ ಆರಂಭಿಸುವಾಗ ವಿಪರೀತ ಲಾಭದ ನಿರೀಕ್ಷೆಯಲ್ಲಿ ಹಾದಿ ತಪ್ಪದಿರಿ. ಉದ್ಯೋಗಸ್ಥರು ಯಾವುದೇ ಕಾರಣಕ್ಕೂ ಕೆಲಸ ಬಿಡಬೇಡಿ. ಅದರಲ್ಲೂ ಮೇಲಧಿಕಾರಿಗಳೊಂದಿಗೆ ಜಗಳ ಆಡಿ, ಸವಾಲು ಹಾಕಿ ಸ್ವಂತ ವ್ಯವಹಾರ ಮಾಡುವ ದುಸ್ಸಾಹಸಕ್ಕೆ ಕೈ ಹಾಕಲೇಬೇಡಿ.
ಶನಿಯಿಂದ ಆಗುವ ತೊಂದರೆಗೆ ಮಾಡಿಸಬೇಕಾದ ಶಾಂತಿ, ಪರಿಹಾರ ಮಾರ್ಗ
ವೃಷಭ ರಾಶಿಯ ಮಹಿಳೆಯರು ಮೇಕಪ್ ಸಾಮಗ್ರಿ ಬಳಸುವಾಗಲೂ ಬಹಳ ಎಚ್ಚರದಿಂದ ಇರಿ. ಏಕೆಂದರೆ ಅದರಿಂದ ಅಲರ್ಜಿ ಆಗುವ ಸಾಧ್ಯತೆಗಳಿವೆ. ಇನ್ನು ಅನಾರೋಗ್ಯ ಬಾಧೆಗಾಗಿ ಔಷಧ-ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಲ್ಲಿ ಎಕ್ಸ್ ಪೈರಿ ದಿನಾಂಕವನ್ನು ಒಂದಕ್ಕೆ ಎರಡು ಸಲ ಪರಿಶೀಲಿಸಿ, ಆ ನಂತರ ತೆಗೆದುಕೊಳ್ಳಿ.
ಸುಲಭ ದಾರಿಯ ಹಣಕ್ಕೆ ಆಸೆ ಪಡಬೇಡಿ
ಕಾಲಿನ ಹಿಮ್ಮಡಿ ನೋವಿರುವವರು, ಅಜೀರ್ಣ ಅಥವ ಜಠರ ಸಮಸ್ಯೆಗಳಿಂದ ಬಳಲುತ್ತಿರುವವರು ವೈದ್ಯರ ಭೇಟಿಯನ್ನು ನಿಯಮಿತವಾಗಿ ಮಾಡಿ. ಸುಲಭದ ದಾರಿಯಲ್ಲಿ ಹಣ ಮಾಡಬಹುದು ಎಂದು ಯಾರೋ ತೋರಿದ ಮಾರ್ಗದಲ್ಲಿ ಹೋಗಬೇಡಿ. ಮೊದಮೊದಲಿಗೆ ಎಲ್ಲವೂ ಚಂದ. ಹಣವೂ ವಾಪಸ್ ಬಂದೀತು. ಆದರೆ ನಂತರ ಒಟ್ಟಿಗೇ ಎಲ್ಲವನ್ನೂ ಕಳೆದುಕೊಳ್ಳುವ ಸಾಧ್ಯತೆಗಳಿವೆ.
ಪಾಲುದಾರಿಕೆ ವ್ಯವಹಾರ ಎಚ್ಚರ
ಕುಟುಂಬದ ವ್ಯವಹಾರವನ್ನು ಮುಂದುವರಿಸುತ್ತಿರುವ ವ್ಯಾಪಾರಸ್ಥರು ಕಾಗದ- ಪತ್ರಗಳ ಬಗ್ಗೆ ತುಂಬ ಎಚ್ಚರದಿಂದ ವ್ಯವಹರಿಸಿ. ಪಾಲುದಾರಿಕೆಗೆ ಸಂಬಂಧಿಸಿದಂತೆ ಈ ವರೆಗೆ ಬಾಯಿ ಮಾತಿನ ಒಪ್ಪಂದವಷ್ಟೇ ಮಾಡಿಕೊಂಡಿದ್ದೀರಿ ಅಂತಾದರೆ, ಕಾನೂನಿನ ಪ್ರಕಾರ ಏನು ಕರಾರು ಪತ್ರ ಮಾಡಿ ನೋಂದಣಿ ಮಾಡಿಸಬೇಕೋ ಅದನ್ನು ತಕ್ಷಣವೇ ಮಾಡಿಸಿ.
ಹೊಸ ಸ್ನೇಹದ ಬಗ್ಗೆ ಎಚ್ಚರ
ಹೆಣ್ಣುಮಕ್ಕಳು ಅವಿವಾಹಿತರಿರಲಿ, ವಿವಾಹಿತರಿರಲಿ ಹೊಸ ಸ್ನೇಹವೊಂದನ್ನು ಮಾಡುವಾಗ ಎಷ್ಟು ಎಚ್ಚರ ವಹಿಸಿದರೆ ಅಷ್ಟು ಒಳ್ಳೆಯದು. ಮೇಲ್ನೋಟಕ್ಕೆ ಕಾಣುವ ಶ್ರೀಮಂತಿಕೆ, ಐಷಾರಾಮಿ ಬದುಕಿಗೆ ಆಕರ್ಷಿತರಾಗಿ ಮಾಡಿದ ಸ್ನೇಹವೊಂದರಿಂದ ಸಮಾಜದ ಎದುರು, ನಿಮ್ಮ ಮನೆಯವರ ಎದುರು ಕೆಟ್ಟವರಾಗುತ್ತೀರಿ. ಅಪವಾದ ಎದುರಿಸಬೇಕಾಗುತ್ತದೆ.
ವಿದೇಶ ಪ್ರಯಾಣ ಎಚ್ಚರ
ವಿದೇಶದ ಉದ್ಯೋಗಕ್ಕೆ ಅವಕಾಶ ಬಂತು ಎಂದು ಪೂರ್ವಾಪರ ಯೋಚಿಸದೆ ಒಪ್ಪಿಕೊಂಡು ಬಿಡಬೇಡಿ. ಉದ್ಯೋಗ ಅವಕಾಶ ಬಂದ ಕಂಪನಿ ಅಥವಾ ಸಂಸ್ಥೆಯ ಬಗ್ಗೆ ಸಂಪೂರ್ಣ ತಿಳಿದುಕೊಳ್ಳಿ. ವಿದ್ಯಾರ್ಥಿಗಳೂ ಅಷ್ಟೇ. ಶಿಕ್ಷಣ- ಉದ್ಯೋಗದ ಅವಕಾಶ ಬಂತು ಎಂಬ ಕಾರಣಕ್ಕೆ ಸರಕ್ಕನೆ ಹೊರಟು ನಿಲ್ಲಬೇಡಿ. ತಿಳಿದವರ ಮಾರ್ಗದರ್ಶನ- ಸಲಹೆ ಪಡೆಯುವುದು ಒಳಿತು.
ವರ್ಷಾಂತ್ಯದ ನಂತರ ವಿವಾಹ ಪ್ರಯತ್ನ
ವಿವಾಹ ಬಯಸುವ ಅವಿವಾಹಿತರು ವರ್ಷಾಂತ್ಯದ ತನಕ ಕಾಯುವುದೇ ಲೇಸು. ಅವಕಾಶ ಬರುವುದಿಲ್ಲ ಎಂದಲ್ಲ. ಬಂದರೂ ನಿಮ್ಮ ಸಮಯ ಸರಿ ಇಲ್ಲದ ಕಾರಣ ಉತ್ತಮ ಸಂಬಂಧಗಳು ಬರುವ ಸಾಧ್ಯತೆಗಳು ಕಡಿಮೆ. ಮಧ್ಯದಲ್ಲಿ ಇರುವವರು ದಾರಿ ತಪ್ಪಿಸುವ ಸಾಧ್ಯತೆಗಳಿರುತ್ತವೆ. ಆ ನಂತರ ಜೀವನವಿಡೀ ಹಳಿಯುವುದರಲ್ಲಿ ಅರ್ಥವೇ ಇಲ್ಲ್.
ಸಾಲ ಮಾಡಬೇಡಿ
ಷೇರು ಮಾರುಕಟ್ಟೆ ಅಥವಾ ಭೂಮಿಯ ಮೇಲೆ ಹೂಡಿಕೆ ಮಾಡುವ ಯಾವುದೇ ಉದ್ದೇಶ ಇದ್ದರೂ ಈ ವರ್ಷ ಬೇಡವೇ ಬೇಡ. ಒಂದು ವೇಳೆ ಅನಿವಾರ್ಯ ಎಂದಾದಲ್ಲಿ ನಿಮ್ಮ ಜಾತಕ ಪರಿಶೀಲನೆ ಅತ್ಯಂತ ಆವಶ್ಯಕ. ಇನ್ನು ಸಾಲ ಮಾಡಬೇಕಾದ ಯಾವುದೇ ದೊಡ್ಡ ಕೆಲಸ- ಕಾರ್ಯಗಳು ಇದ್ದರೂ ಅವುಗಳನ್ನು ಮುಂದೂಡುವುದು ಉತ್ತಮ.
ಅನಿರೀಕ್ಷಿತ ಧನ ಲಾಭದಿಂದ ಅತಿ ಆತ್ಮವಿಶ್ವಾಸ ಬೇಡ
ಬರೀ ಎಚ್ಚರ, ಜೋಪಾನ ಅಂತಲೇ ಹೇಳುತ್ತಿದ್ದೀರಿ ಎಂದು ಬೇಸರ ಆಗಬೇಡಿ. ತೃತೀಯದಲ್ಲಿರುವ ರಾಹು ಕೆಲ ಬಾರಿ ಅನಿರೀಕ್ಷಿತ ಧನ ಲಾಭ ತಂದುಕೊಡಬಹುದು. ಅದನ್ನೇ ನಂಬಿ, ದೊಡ್ಡ ಮಟ್ಟದಲ್ಲಿ ಸಾಲ ಮಾಡಿ, ಹೂಡಿಕೆ ಮಾಡಿಬಿಟ್ಟರೆ ಕತ್ತರಿ ಮಧ್ಯೆ ಕತ್ತು ಸಿಕ್ಕಿಹಾಕಿಕೊಂಡಂತೆ ಆಗುತ್ತದೆ. ಇನ್ನು ರಾಹು ಅಣ್ಣ-ತಮ್ಮಂದಿರ ಜತೆ ಜಗಳ ಕೂಡ ಆಗುವ ಸಾಧ್ಯತೆ ಇದ್ದು, ಕೋರ್ಟ್ ಮೆಟ್ಟಿಲೇರಬಹುದು. ಅಲ್ಲಿ ನಿಮಗೆ ಹಿನ್ನಡೆಯಾಗುತ್ತದೆ.
ಚಾಡಿ ಮಾತನ್ನು ನಂಬಬೇಡಿ
ಪ್ರೀತಿ-ಪ್ರೇಮದಲ್ಲಿ ಇರುವವರ ಮಧ್ಯೆ ಅಸಮಾಧಾನ- ಭಿನ್ನಾಭಿಪ್ರಾಯ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅಕ್ಟೋಬರ್ ತನಕ ಹೀಗೇ ಇರುತ್ತದೆ. ಯಾರದೋ ಚಾಡಿ ಮಾತನ್ನು ನಂಬಬೇಡಿ. ನನ್ನನ್ನು ನೀನೆಷ್ಟು ಪ್ರೀತಿಸುತ್ತೀಯಾ ಎಂಬಂಥ ಪರೀಕ್ಷೆಗಳನ್ನಂತೂ ಮಾಡದಿರುವುದು ಉತ್ತಮ.
ಒತ್ತಡ ಹೆಚ್ಚಾಗಲಿದೆ
ವಿದ್ಯಾರ್ಥಿಗಳಿಗೆ ಒತ್ತಡ ಹೆಚ್ಚಾಗುತ್ತದೆ. ಮಾಡಿದ ಕೆಲಸಕ್ಕೂ ಆಡಿದ ಮಾತಿಗೂ ತಾಳೆಯಾಗದೆ ಅವಮಾನ ಹಾಗೂ ಅನುಮಾನಕ್ಕೆ ಎಡೆಯಾಗುತ್ತೀರಿ. ತಂದೆ-ತಾಯಿಯ ಮಾತನ್ನು ಪೂರ್ತಿಯಾಗಿ ಅನುಸರಿಸಲು ಆಗಲಿಲ್ಲ ಅಂದರೂ ಅವರ ಜತೆಗೆ ಜಗಳ ಆಡಬೇಡಿ. ಕೆಟ್ಟವರ ಸ್ನೇಹದ ಆಕರ್ಷಣೆಗೆ ಸಿಲುಕಬೇಡಿ.
ಚಿಕ್ಕಮದುರೆ ಶನಿ ದೇಗುಲಕ್ಕೆ ಭೇಟಿ ಕೊಡಿ
ಪರಿಹಾರವಾಗಿ ಕಡ್ಡಾಯವಾಗಿ ವೇದೋಕ್ತ ಮಂತ್ರ ಜಪ-ತರ್ಪಣ ಸಹಿತ ಶನಿ ಶಾಂತಿ ಹೋಮ ಮಾಡಿಸಿ. ಆದಷ್ಟು ಶೀಘ್ರವಾಗಿ ಮಾಡಿಸಿ ಹಾಗೂ ಬೆಂಗಳೂರಿನ ಗ್ರಾಮಾಂತರ ಜಿಲ್ಲೆ ನೆಲಮಂಗಲದ ಹತ್ತಿರ ಇರುವ ಶ್ರೀ ಕ್ಷೇತ್ರ ಚಿಕ್ಕ ಮದುರೆ ಶನಿ ದೇಗುಲಕ್ಕೆ ಒಮ್ಮೆ ಭೇಟಿ ನೀಡಿ. ವ್ಯಾಘ್ರ ನೇತ್ರ ರತ್ನಗಳ ಮಾಲೆಯನ್ನು ಧರಿಸಿ.