ವೃಶ್ಚಿಕ ವರ್ಷ ಭವಿಷ್ಯ : ಸಿಟ್ಟು ಬಿಡದ ಹೊರತು ಬದುಕು ನೆಟ್ಟಗಾಗಲ್ಲ
ಸಾಡೇಸಾತ್ ನ ಪ್ರಭಾವ ಇನ್ನೂ ನಿಮ್ಮ ಮೇಲೆ ಇರುತ್ತದೆ ಎನ್ನುವಾಗ ಒಳಿತು ಹೇಳುವುದಕ್ಕೆ- ಮಾಡುವುದಕ್ಕೆ ಯಾವ ಗ್ರಹದ ಪ್ರಭಾವ ಇದೆ ಎಂದು ಹುಡುಕಾಡಬೇಕಿದೆ. ಇಷ್ಟು ಕಾಲ ಇದ್ದ ರೀತಿ ಬೇರೆ, ಇನ್ನು ಮುಂದಿನ ದಿನಗಳೇ ಬೇರೆ. ಕಳೆದ ಅಕ್ಟೋಬರ್ ವರೆಗೆ ಗುರುವಿನ ಅನುಗ್ರಹವಾದರೂ ಇತ್ತು. ಈಗ ಅದೂ ಇಲ್ಲ. ಆದ್ದರಿಂದ ಪರಿಸ್ಥಿತಿ ಗಂಭೀರವಾಗಿದೆ.
ಈ ವರ್ಷ ಎಲ್ಲ ಕಡೆಯೂ ನಿಮ್ಮ ಸಿಟ್ಟಿನ ಬಗ್ಗೆಯೇ ಚರ್ಚೆ ಆಗಲಿದೆ. ಮನೆಯಲ್ಲಿ ಕಲಹಗಳು ಕಾಣಿಸಿಕೊಳ್ಳಲಿವೆ. ಇದಕ್ಕೆ ಮೂಲ ಕಾರಣವೇ ನಿಮ್ಮ ಸಿಟ್ಟು. ಅದನ್ನು ನಿಯಂತ್ರಿಸದಿದ್ದಲ್ಲಿ ಮನೆಯಲ್ಲಿನ ವಾತಾವರಣವೇ ಹಾಳಾಗಲಿದೆ. ಎದುರುತ್ತರ ನೀಡುವುದು ಹಾಗೂ ಹಠ ಮಾಡುವುದನ್ನು ಬಿಡುವುದು ಅತ್ಯಂತ ಒಳ್ಳೆಯದು ಮತ್ತು ಅದು ಈಗಿನ ತುರ್ತು.
ನೀವು ಮಾಡಲು ಹೊರಟ ಹೆಚ್ಚಿನ ಕೆಲಸ-ಕಾರ್ಯಗಳಲ್ಲಿ ಹಿನ್ನಡೆ ಆಗಲಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ನಿಮ್ಮ ರಾಶಿಯಿಂದ ಹನ್ನೆರಡನೇ ಸ್ಥಾನದಲ್ಲಿ ಗುರು, ಎರಡನೇ ಸ್ಥಾನದಲ್ಲಿ ಶನಿ, ಮೂರರಲ್ಲಿ ಕೇತು, ಒಂಬತ್ತರಲ್ಲಿ ರಾಹು ಇದೆ. ಯಾವ ಗ್ರಹವು ನಿಮಗೆ ಒಳಿತು ಮಾಡಬಹುದು ಎಂದು ಹುಡುಕಾಡುವಂಥ ಸ್ಥಿತಿ ಇದೆ.
ವ್ಯಾಪಾರ ಕಡಿಮೆ
ವ್ಯಾಪಾರಿಗಳಿಗೆ ಸ್ವಾಭಾವಿಕವಾಗಿ ಆಗುತ್ತಿದ್ದ ಲಾಭ ಹಾಗೂ ಇಷ್ಟು ದಿನ ಬರುತ್ತಿದ್ದ ವ್ಯಾಪಾರ ಕ್ರಮೇಣ ಕಡಿಮೆ ಆಗುತ್ತಿರುವುದು ಗಮನಕ್ಕೆ ಬರುತ್ತದೆ. ಆದರೆ ಎಚ್ಚೆತ್ತುಕೊಂಡು ಏನು ಬದಲಾವಣೆ ಮಾಡಿಕೊಳ್ಳಬೇಕು ಎಂಬುದು ಹೊಳೆಯುವುದಿಲ್ಲ. ಒಂದು ವೇಳೆ ಏನಾದರೂ ಬದಲಾವಣೆ ತರಬೇಕು ಅಂತ ಮಾಡುವ ಯತ್ನಗಳೂ ಸಫಲವಾಗುವುದಿಲ್ಲ.
ಭೂಮಿ ಮೇಲೆ ಹೂಡಿಕೆ ಮಾಡಬೇಡಿ
ಇನ್ನು ದೊಡ್ಡ ಪ್ರಮಾಣದಲ್ಲಿ ಭೂಮಿಯ ಮೇಲೆ ಹೂಡಿಕೆ ಮಾಡಿದರೆ ನಷ್ಟವನ್ನು ತರುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಸಹ ಅಷ್ಟು ಉತ್ತಮವಾಗಿ ಕಾಣುತ್ತಿಲ್ಲ. ತಗಾದೆ ಇರುವ ಭೂಮಿಯ ಮೇಲೆ ಹೂಡಿಕೆ ಮಾಡಿ ನೆಮ್ಮದಿ ಹಾಳಾಗಬಹುದು ಅಥವಾ ಮುಂಗಡವಾಗಿ ಕೊಟ್ಟ ಹಣ ವಾಪಸ್ ಬರದೆ ಹೋಗಬಹುದು.
ಮದುವೆ ಪ್ರಯತ್ನ ಬೇಡ
ಈ ವರ್ಷ ವಿವಾಹ ಸಾಧ್ಯತೆಗಳು ಇಲ್ಲ. ಪ್ರಯತ್ನ ಮಾಡಿದರೂ ವ್ಯರ್ಥವಾಗುತ್ತದೆ. ಹನ್ನೆರಡನೇ ಮನೆಯಲ್ಲಿರುವ ಗುರು ನಷ್ಟ ತರುತ್ತದೆ. ವಿವಾಹಕ್ಕೆ ಮಾಡುವ ಪ್ರಯತ್ನದಲ್ಲಿ ಹಣಕಾಸು ನಷ್ಟವಾಗುತ್ತದೆ. ಹಾಗಿದ್ದೂ ಸಂಬಂಧ ಮುಂದುವರಿಯುವ ಮಟ್ಟಕ್ಕೆ ಬಂದರೆ ನಿಶ್ಚಿತಾರ್ಥದವರೆಗೆ ಅಥವಾ ನಿಶ್ಚಿತಾರ್ಥದ ನಂತರ ಮುರಿದು ಬೀಳುವ ಸಾಧ್ಯತೆ ಇದೆ. ಇನ್ನು ಸಂತಾನ ಭಾಗ್ಯ ಸಹ ಅಷ್ಟಾಗಿ ಕಾಣುತ್ತಾ ಇಲ್ಲ. ಆ ಕಾರಣಕ್ಕಾಗಿ ಮನಸ್ಸಿನಲ್ಲಿ ಚಿಂತೆ ಮಾಡಬೇಡಿ. ಆದುದರಿಂದ ವಿಫಲ ಪ್ರಯತ್ನ ಆಗುವುದು ಬೇಡ ಎನ್ನುವುದು ಅನಿಸಿಕೆ.
ಉತ್ತಮ ಉದ್ಯೋಗಾವಕಾಶಗಳಿಲ್ಲ
ಕೆಲ ಕಾಲದಿಂದ ಉದ್ಯೋಗವಿಲ್ಲ ಎನ್ನುವವರಿದ್ದರೆ ನಿರುದ್ಯೋಗಿಗಳಿಗೆ ಸಿಗುವುದು ಎಲ್ಲವೂ ತಾತ್ಕಾಲಿಕ ಉದ್ಯೋಗವೇ. ಉತ್ತಮ ಹಾಗೂ ಶಾಶ್ವತವಾದ ಉದ್ಯೋಗ ಸಿಗುವುದಕ್ಕೆ ವರ್ಷಾಂತ್ಯದ ತನಕ ಕಾಯಲೇ ಬೇಕಾಗುತ್ತದೆ ಹಾಗೆ ಕಾದಿದ್ದರೂ ಕೆಲಸ ಸಿಕ್ಕೇ ಸಿಗುತ್ತದೆ ಎಂದು ಖಚಿತವಾಗಿ ಹೇಳಲು ಆಗುವುದಿಲ್ಲ. ಉದ್ಯೋಗ ಉಳಿಸಿಕೊಳ್ಳಲು ಅಥವಾ ಉದ್ಯೋಗ ಸ್ಥಾನದಲ್ಲಿ ಆದ ಅನ್ಯಾಯ - ಅವಮಾಮಾನಕ್ಕೆ ಉತ್ತರಿಸಲು ಕೆಲವರಿಗೆ ನ್ಯಾಯಾಲಯ ಅನಿವಾರ್ಯ ದಾರಿ ಆಗಿಬಿಡುತ್ತದೆ ಆದರೂ ಸಹ ಅಲ್ಲಿ ಜಯ ಸಿಗುವ ಸಾಧ್ಯತೆಗಳು ತೀರಾ ಕಡಿಮೆ ಇವೆ. ಇರುವ ಉತ್ತಮ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು, ಆ ನಂತರ ಇನ್ನೂ ಉತ್ತಮ ಉದ್ಯೋಗ ಹುಡುಕಿಕೊಳ್ಳುತ್ತೇನೆ ಎನ್ನುವುದು ಮೂರ್ಖತ್ವದ ನಡೆ ಆಗಿರುತ್ತದೆ ನೆನಪಿರಲಿ.
ಬೂದಿ ಮುಚ್ಚಿದ ಕೆಂಡದಂತೆ
ಇನ್ನು ಸಹೋದರರ ಸಹಕಾರ ಸಿಕ್ಕರೂ ಸಹ ಬೂದಿ ಮುಚ್ಚಿದ ಕೆಂಡದಂತೆ ಕೆಲವು ಸಂಗತಿಗಳು ಘಟಿಸುತ್ತವೆ. ನಿಮಗೆ ಸಹಾಯ ಹಸ್ತ ನೀಡುವ ಸ್ನೇಹಿತರು ಸ್ವತಃ ನಿಸ್ಸಹಾಯಕ ಆಗಿರುವುದು ನಿಮ್ಮ ಗಮನಕ್ಕೆ ಬಂದು, ಅವರ ಸಹಾಯ ಕೇಳಲು ಮನಸ್ಸು ಬಾರದೇ ನೀವೇ ಹಿಂಜರಿಯುತ್ತೀರಿ.
ಹಣ ಬರುವುದಿಲ್ಲ
ಕಬ್ಬಿಣ ಸಿಮೆಂಟ್ ಇತ್ಯಾದಿಗಳ ವ್ಯಾಪಾರ ಮಾಡುವವರಿಗೆ ವ್ಯವಹಾರ ಆಗುತ್ತದೆ. ಆದರೆ ದುಡ್ಡು ಸರಿಯಾದ ಸಮಯಕ್ಕೆ ಪಾವತಿ ಆಗುವುದಿಲ್ಲ. ಸಮಾಜದಲ್ಲಿ ದೊಡ್ಡ ಹೆಸರು ಹೊಂದಿರುವ ವ್ಯಕ್ತಿ ಅಥವಾ ರಾಜಕೀಯದಲ್ಲಿ ಇರುವವರು ನೀವು ಎಂದಾದಲ್ಲಿ ಇದು ನಿಮಗೆ ಅಷ್ಟು ಉತ್ತಮ ವರ್ಷ ಅಲ್ಲವೇ ಅಲ್ಲ. ಸನ್ಮಾನಗಳು, ಅದ್ಧೂರಿ ಸ್ವಾಗತ ಇತ್ಯಾದಿ ಹೆಚ್ಚು ಸಿಗದು.
ಪ್ರೇಮಿಗಳಿಗೆ ಒತ್ತಡ
ಇನ್ನು ಪ್ರೇಮಿಗಳಿಗೆ ಒತ್ತಡ ಹೆಚ್ಚಾಗುತ್ತದೆ. ಅಂದುಕೊಂಡಂತೆ ಏನೂ ನಡೆಯುವುದಿಲ್ಲ. ಮಾತಿಗೆ ಸಿಕ್ಕುತ್ತಿಲ್ಲ, ಮನಸ್ಸು ಕೊಟ್ಟು ಮಾತು ಕೇಳುವುದಿಲ್ಲ ಎಂಬ ಬೇಸರ- ಅಸಮಾಧಾನ ಹೆಚ್ಚಾಗುತ್ತದೆ. ಅದಕ್ಕೆ ತಕ್ಕಂತೆ ಕೆಲವು ವಾಗ್ವಾದ-ಜಗಳ ನಡೆದು ಮಾತು ಬಿಡುತ್ತೀರಿ. ಗೊಂದಲ ನಿರ್ಮಾಣವಾಗುತ್ತದೆ.
ಸುಮ್ಮನೆ ಖರ್ಚು ಮಾಡಿಸಬೇಡಿ
ವಿದ್ಯಾರ್ಥಿಗಳು ನಿಮ್ಮಿಂದ ಮಾಡಲು ಸಾಧ್ಯವಾಗುವ ಕೋರ್ಸ್ ಯಾವುದು ಎಂಬುದರ ಸ್ಪಷ್ಟತೆ ಇಟ್ಟುಕೊಳ್ಳಿ. ಸ್ನೇಹಿತರು ಸೇರಿಕೊಂಡರು, ನಾನು ಅಲ್ಲೇ ಹೋಗ್ತೀನಿ ಎಂಬ ಹಠ ಬೇಡ. ನಿಮ್ಮ ಸಲ್ಲುವಾಗಿ ಅನವಶ್ಯಕ ಖರ್ಚು ಹಾಗೂ ಚಿಂತೆ ಎದುರಾಗುವ ಸಾಧ್ಯತೆ ಇರುವುದರಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಗುರು-ಹಿರಿಯರ ಮಾರ್ಗದರ್ಶನ ಪಡೆಯಿರಿ.
ಪರಿಹಾರ ಏನು?
ಹತ್ತು ಸಾವಿರ ಸಂಖ್ಯೆಯಲ್ಲಿ ಗುರು ಜಪ ಮಾಡಿಸಿ. ಆ ಸಂಖ್ಯೆಯ ಹತ್ತನೇ ಒಂದು ಭಾಗದ ಪ್ರಮಾಣದಲ್ಲಿ ಹವನ- ತರ್ಪಣ ಇತ್ಯಾದಿ ಮಾಡಿಸಿ. ಗುರು ಸನ್ನಿಧಾನ ಇರುವ ಮಂತ್ರಾಲಯ, ರಾಮಚಂದ್ರಾಪುರ ಮಠ, ಶೃಂಗೇರಿ ಇತ್ಯಾದಿ ಯಾವುದಾದರೂ ನಿಮ್ಮ ನಂಬಿಕೆಯ ಸ್ಥಾನಗಳಿಗೆ ಭೇಟಿ ಕೊಟ್ಟು, ಶಕ್ತ್ಯಾನುಸಾರ ಗುರು ಸೇವೆ ಮಾಡಿ. ಬೆಳ್ಳಿಯ ತಗಡಿನಲ್ಲಿ ರುದ್ರ ಯಂತ್ರ ಬರೆಸಿ, ಶಾಸ್ತ್ರೋಕ್ತ ಪೂಜೆ ಮಾಡಿಸಿ ದೇವರ ಮನೆಯಲ್ಲಿ ಇಟ್ಟುಕೊಂಡು ನಿತ್ಯ ಪೂಜಿಸಿ.