ಮೀನ ವರ್ಷ ಭವಿಷ್ಯ : ನಿರೀಕ್ಷೆ ಇಲ್ಲದಿದ್ದರೆ ನಿರಾಶೆಯೂ ಇಲ್ಲ
ಏಳನೇ ಸ್ಥಾನದಲ್ಲಿದ್ದ ಗುರು ಅಷ್ಟಮಕ್ಕೆ ಬಂದಿದೆ. ಐದನೇ ಮನೆಯಲ್ಲಿ ರಾಹು, ಹತ್ತರಲ್ಲಿ ಶನಿ. ಇಂಥ ಗ್ರಹ ಸ್ಥಿತಿಯಲ್ಲಿ ಹೇಳಬಹುದಾದ ಶುಭ ಫಲಕ್ಕಿಂತ ಉಪಯೋಗ ಆಗುವಂಥ ಸಲಹೆಯೊಂದನ್ನು ನೀಡಬಹುದು. ಅದೆಷ್ಟು ನಿರೀಕ್ಷೆ ಕಡಿಮೆ ಮಾಡಿಕೊಳ್ಳುತ್ತೀರೋ ಅಷ್ಟು ನೆಮ್ಮದಿಯಾಗಿ ಇರಬಹುದು.
ಕೈ ಹಾಕಿದ ಕೆಲಸಗಳೆಲ್ಲ ಅರ್ಧಕ್ಕೆ ನಿಲ್ಲುತ್ತಿದೆ ಅಥವಾ ಮೇಲಕ್ಕೆ ಏಳುತ್ತಿಲ್ಲ ಎಂದು ಚಿಂತೆ ಶುರು ಮಾಡಿದರೆ ಅದಕ್ಕೆ ಕೊನೆಯೇ ಇಲ್ಲ. ಅದರಲ್ಲೂ ಮುಖ್ಯವಾಗಿ ಉದ್ಯೋಗ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಗಳನ್ನು ಅಪೇಕ್ಷಿಸಬೇಡಿ. ಒಂದು ವೇಳೆ ಪ್ರಯತ್ನ ಮಾಡಿದರೂ ಅದು ನಿರಾಸೆಯನ್ನು ಕೊಡುತ್ತದೆ.
ಯಾವ ಹೋಮದಿಂದ ಏನು ಫಲ? ಶಾಸ್ತ್ರೋಕ್ತವಾಗಿ ಮಾಡುವುದು ಹೇಗೆ?
ವಿವಾಹದಲ್ಲಿ ಬಹಳ ವಿಘ್ನಗಳು ಕಾಣುತ್ತಿವೆ. ನಿಶ್ಚಯ ಆದ ವಿವಾಹ ಸಹ ಸ್ವಲ್ಪಮಟ್ಟಿಗೆ ಗೊಂದಲಮಯ ಆಗಬಹುದು. ಜಮೀನು ಖರೀದಿ, ಗೃಹ ನಿರ್ಮಾಣ ಇವ್ಯಾವುದೂ ಸದ್ಯಕ್ಕೆ ಬೇಡ. ಏಕೆಂದರೆ, ನಿಮಗೆ ಹಿರಿಯರ ಸಹಾಯ ಸಹಕಾರ ಲಭಿಸದು. ಷೇರು ಹಾಗೂ ವ್ಯಾಪಾರದಲ್ಲಿ ನೀವು ಮಾಡಿದ ಹೂಡಿಕೆ ಬೆಳೆಯಲು ಬಹಳ ದೀರ್ಘ ಸಮಯ ತೆಗೆದುಕೊಳ್ಳುತ್ತದೆ.
ಅನಾರೋಗ್ಯ ಸಮಸ್ಯೆ
ಇಲ್ಲಿ ಸಮಸ್ಯೆ ಆಗಿ ಕಾಡುವುದು ಅನಾರೋಗ್ಯ. ಆದುದರಿಂದ ವರ್ಷದ ಮಧ್ಯ ಅಥವಾ ಅಂತ್ಯದಲ್ಲಿ ಸಮಸ್ಯೆ ಆಗದಂತೆ ವರ್ಷದ ಆದಿಯಿಂದಲೇ ನಿತ್ಯ ವ್ಯಾಯಾಮ, ನಿಯಮಿತ ಹಾಗೂ ಉತ್ತಮ ಆಹಾರ ಸೇವನೆ ಪ್ರಾರಂಭಿಸಿ. ವರ್ಷಾಂತ್ಯದ ತನಕ ವಿದೇಶ ಪ್ರಯಾಣ ಮುಂದೂಡಲು ಸಾಧ್ಯವಾದರೆ ದಯವಿಟ್ಟು ಹಾಗೇ ಮಾಡಿ.
ಮಕ್ಕಳ ವಿಚಾರದಲ್ಲಿ ತೊಂದರೆ
ನಿಮ್ಮ ಮಕ್ಕಳ ವಿಚಾರದಲ್ಲಿ ಸ್ವಲ್ಪ ತೊಂದರೆಗಳು ಆಗುತ್ತವೆ. ಕೆಲ ಹಿರಿಯರಿಗೆ ಅವರ ಮಕ್ಕಳು ಉದ್ಯೋಗ ಅಥವಾ ಇನ್ನಿತರೆ ಕಾರಣಗಳಿಂದ ದೂರ ಹೋಗಿ ಬೇಸರ ಆಗುತ್ತದೆ. ಇನ್ನು ಕೆಲವರು ಮಕ್ಕಳೊಂದಿಗೆ ಆಸ್ತಿಯ ವಿಚಾರದಲ್ಲಿ ಗಲಾಟೆಗಳನ್ನು ಮಾಡಿಕೊಳ್ಳುವ ಸಾಧ್ಯತೆಗಳು ಇವೆ. ಬರಬೇಕಾದ ಲಾಭಗಳ ವಿಚಾರದಲ್ಲಿ ಸಹ ವಿಘ್ನಗಳು ಹೆಚ್ಚಾಗುತ್ತವೆ.
ರೈತಾಪಿ ವರ್ಗದವರಿಗೆ ಕಷ್ಟದ ದಿನಗಳು
ಮೀನ ರಾಶಿಯ ರೈತಾಪಿ ವರ್ಗದವರಿಗೆ ಕಷ್ಟಗಳು ಕಾಣುತ್ತಿವೆ. ದಿನಸಿ ಅಂಗಡಿ ವ್ಯಾಪಾರಿಗಳಿಗೆ ನಷ್ಟ ಇದೆ. ಮದ್ಯ, ಮಾಂಸ, ಕಬ್ಬಿಣ, ಪ್ರವಾಸೋದ್ಯಮ ಇತ್ಯಾದಿ ವ್ಯಾಪಾರ- ವ್ಯವಹಾರ ಮಾಡಿಕೊಂಡು ಇರುವವರು ಲಾಭ ಕಾಣಬಹುದು. ವರ್ಷದ ಆದಿಯಲ್ಲಿ ನಿಮಗೆ ಶತ್ರುಗಳ ಕಾಟ ಭಯಂಕರ ಹೆಚ್ಚಾಗುತ್ತದೆ.
ಶತ್ರುವನ್ನು ಜಯಿಸುವುದು ಕಷ್ಟ
ಆದರೆ, ಕೋರ್ಟು- ಕಚೇರಿ ಇತ್ಯಾದಿ ಸ್ಥಳಗಳಲ್ಲಿ ನಿಮಗೆ ಜಯ ಇದೆ. ಅದು ನಿಮ್ಮ ಶತ್ರುವಿನೊಂದಿಗೆ ಸಮ ಬಲವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ ವಿನಾ ಶತ್ರುವನ್ನು ಸೋಲಿಸಿ ನೀವು ಜಯಿಸುವುದು ಕಷ್ಟ. ಆದ್ದರಿಂದ ಹೊಸದಾಗಿ ವ್ಯಾಜ್ಯ ಹೂಡುವ ಆಲೋಚನೆಗಳಿದ್ದಲ್ಲಿ ಖಂಡಿತಾ ಆ ಪ್ರಯತ್ನ ಬೇಡ.
ಪ್ರೇಮಿಗಳಿಗೆ ಗೊಂದಲ ಕಾಡುತ್ತದೆ
ಪ್ರೀತಿ- ಪ್ರೇಮದಲ್ಲಿ ಇರುವವರು ಅಥವಾ ಪ್ರೇಮ ನಿವೇದನೆ ಮಾಡಿಕೊಳ್ಳಬೇಕು ಅಂತ ಇರುವವರಿಗೆ ಗೊಂದಲ ಕಾಡುತ್ತದೆ. ಇದೇ ವೇಳೆ ಕೆಲವರು ಚಾಡಿಗಳನ್ನು ಹೇಳುತ್ತಾರೆ. ಬೆಂಕಿ ಜತೆಗೆ ಗಾಳಿಯೂ ಸೇರಿಕೊಂಡಂತಾಗಿ ಒಂದಿಷ್ಟು ಅಸಮಾಧಾನ ಹಾಗೂ ಆಕ್ರೋಶಕ್ಕೆ ಗುರಿಯಾಗುವ ಸಾಧ್ಯತೆಗಳಿವೆ. ಮೊದಲೇ ಹೇಳಿದ ಹಾಗೆ ವಿಪರೀತ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ.
ಆತುರದ ತೀರ್ಮಾನ ಬೇಡ
ವಿದ್ಯಾರ್ಥಿಗಳು ಓದಿನ ಜತೆಗೆ ಉದ್ಯೋಗ ಮಾಡುವ ಆಲೋಚನೆ ಇದ್ದಲ್ಲಿ ಒಂದಕ್ಕೆರಡು ಬಾರಿ ಯೋಚನೆ ಮಾಡಿ. ಏಕೆಂದರೆ, ಕೆಲಸದ ವಿಚಾರದಲ್ಲಿ ಒತ್ತಡ ಹೆಚ್ಚಾಗಿ ಓದಿನ ಮೇಲೆ ಗಮನ ಹರಿಸದಂಥ ಪರಿಸ್ಥಿತಿ ಎದುರಾಗುತ್ತದೆ. ಆದ್ದರಿಂದ ಯಾವುದೇ ಆತುರದ ತೀರ್ಮಾನವನ್ನು ಮಾಡಬೇಡಿ.
ಪರಿಹಾರ ಏನು?
ನಿಮಗೆ ಧನ್ವಂತರಿ ಹವನದ ಅವಶ್ಯಕತೆ ಇದೆ. ಕನಿಷ್ಠ ಸಾವಿರ ಸಂಖ್ಯೆಯಲ್ಲಿ ಧನ್ವಂತರಿ ಜಪ ಸಹಿತ ಹವನ ಮಾಡಿಸಿ. ಜೊತೆಯಲ್ಲಿ ಗುರು ಶಾಂತಿ ಹವನ ಸಹ ಮಾಡಿಸಬೇಕು. ಬೆಳ್ಳಿಯಲ್ಲಿ ಧನ್ವಂತರಿ ಯಂತ್ರ ಬರೆದು, ಅಭಿಮಂತ್ರಿಸಿದ ನಂತರ ಅದನ್ನು ಮನೆಯಲ್ಲಿ ಇಟ್ಟು ನಿತ್ಯ ಪೂಜಿಸಿ. ಧರ್ಮಸ್ಥಳಕ್ಕೆ ಹೋಗಿ ಅಲ್ಲಿ ನೇತ್ರಾವತಿ ನದಿ ಸ್ನಾನ ಮಾಡಿ ಹಾಗೂ ತೀರ್ಥ ಸ್ನಾನ ಮಾಡಿದ ನಂತರ ಅಕ್ಕಿಯಲ್ಲಿ ತುಲಾಭಾರ ಮಾಡಿಸಿ, ರುದ್ರಾಭಿಷೇಕ ಮಾಡಿಸಿ. ಮಂಜುನಾಥನ ದರ್ಶನ ಮಾಡಿ. ಪಂಡಿತ್ ವಿಠ್ಠಲ ಭಟ್ ಸಂಪರ್ಕ ಸಂಖ್ಯೆ 9845682380. ಇಮೇಲ್ ಐಡಿ- [email protected]