ಮೀನ ವರ್ಷಭವಿಷ್ಯ : ದೈವಾನುಗ್ರಹದಿಂದ ಬದುಕು ಸುಂದರ
ಮೀನ ರಾಶಿಗೆ 2017 ಅದ್ಭುತವಾಗಿದೆ. ದೈವಾನುಗ್ರಹದಿಂದ ಬದುಕು ಸುಂದರವಾಗಿರುತ್ತದೆ. ಕೆಲ ಎಚ್ಚರಿಕೆಗಳನ್ನು ತೆಗೆದುಕೊಂಡರೆ ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ಸಂಯಮದಿಂದ ಇದ್ದರೆ ವೃತ್ತಿಯಲ್ಲಿಯೂ ವೃದ್ಧಿಯಾಗುತ್ತದೆ.
ಸಂಪೂರ್ಣವಾಗಿ ನೋಡಿದಾಗ ಮೀನ ರಾಶಿಯವರಿಗೆ ಈ ವರ್ಷ ಸುಂದರವಾಗಿ ಇರುತ್ತದೆ. ನೀವು ಎಂದಾಗುವುದೋ ಎಂದು ಕಾಯುತ್ತಾ ಕುಳಿತಿದ್ದ ಶುಭಕಾರ್ಯಗಳೆಲ್ಲಾ ನೆರವೇರುತ್ತವೆ. ಅದರಲ್ಲಿಯೂ ಸಹ ವಿವಾಹ ಆಗದೇ ಇದ್ದಲ್ಲಿ ಅದು ನೆರವೇರುವ ಸಾಧ್ಯತೆ ಈ ವರ್ಷ ಅತೀ ಹೆಚ್ಚಾಗಿದೆ.
ಆರೋಗ್ಯ ವಿಚಾರದಲ್ಲಿ ಸಹ ಈ ವರ್ಷ ಉತ್ತಮವಾಗಿದೆ. ಯಾವುದೇ ಔಷಧಿ ಮಾಡಿದರೂ ಸಹ ವಾಸಿ ಆಗದ ಖಾಯಿಲೆಗಳಿದ್ದಲ್ಲಿ ಆಯುರ್ವೇದ ಪದ್ಧತಿ ಬಳಸುವುದರಿಂದ ಈ ವರ್ಷ ಉತ್ತಮ ಫಲಿತಾಂಶ ಲಭಿಸುವುದು. ಭೂಮಿ ಖರೀದಿ ಅಥವಾ ನಿಮ್ಮ ಸ್ಥಳದಲ್ಲಿ ನೂತನ ಗೃಹ ನಿರ್ಮಾಣದ ಯೋಚನೆಗಳಿದ್ದಲ್ಲಿ ಶೀಘ್ರ ಕಾರ್ಯಗತಕ್ಕೆ ಪ್ರಯತ್ನಿಸಿ ಸಾಧ್ಯವಾಗುತ್ತದೆ.
ಏನಾದರೂ ನಿಧಾನ ಅಥವಾ ಹೆಚ್ಚು ಪ್ರಗತಿ ಇಲ್ಲ ಅನಿಸಿದರೆ ಅದು ನಿಮ್ಮ ಉದ್ಯೋಗದಲ್ಲಿ ಆಗಬಹುದು. ಉದ್ಯೋಗದಲ್ಲಿ ವರ್ಗಾವಣೆ ಬಯಸಿದಲ್ಲಿ ಬಹಳ ಸುಲಭ ಬೇಗ ಆಗುವುದು ಎಂದು ಅನಿಸಿದರೂ ಸಹ ಬಹಳ ನಿಧಾನವಾಗಿ ಆಗುತ್ತದೆ.
ಈ ವರ್ಷ ನಿಮಗೆ ದೈವಾನುಗ್ರಹ ಉತ್ತಮವಾಗಿದೆ. ಮನೆದೇವರ ದೇಗುಲಕ್ಕೆ ಹೋಗದೇ ಇದ್ದಲ್ಲಿ, ಎಷ್ಟೇ ಕಷ್ಟ ಆದರೂ ಸಹ ಲೆಕ್ಕಿಸದೇ ಈ ವರ್ಷ ಕಡ್ಡಾಯವಾಗಿ ಹೋಗಿಬನ್ನಿ. ಇನ್ನು ವಿದೇಶ ಪ್ರಯಾಣದ ಕನಸು ಅಥವಾ ಆಸೆ ಹೊತ್ತವರ ಆಸೆ ಈಡೇರುತ್ತದೆ, ಕನಸು ನನಸಾಗುತ್ತದೆ. [ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]
ಸ್ತ್ರೀಯರಿಗೂ ಸಹ ಸಮಯ ಅತ್ಯುತ್ತಮ. ಮನೆಯಲ್ಲಿ ಅವರ ಮಾತಿಗೆ ಹೆಚ್ಚು ಪ್ರಾಧಾನ್ಯತೆ ಲಭಿಸುತ್ತದೆ. ದಂಪತಿಗಳ ಮಧ್ಯೆ ಅಥವಾ ಸ್ನೇಹಿತರ ಮಧ್ಯದಲ್ಲಿ ಭಿನ್ನಾಭಿಪ್ರಾಯಗಳು ಶಮನವಾಗುತ್ತದೆ. ಹೊಸದಾಗಿ ವ್ಯವಹಾರಗಳನ್ನು ಮಾಡಲು ಧನ ಸಹಾಯ ಹಾಗೂ ಸಹಕಾರಗಳು ಅನಾಯಾಸವಾಗಿ ಸಿಗುತ್ತದೆ.
ಕೌಟುಂಬಿಕ ಕಲಹಗಳು ಕಡಿಮೆ ಆದಂತೆ ಭಾಸವಾಗುತ್ತದೆ. ಹಿಂದಿನ ವರುಷದ ಆರಂಭದ ಹಾಗೆ ಈ ವರುಷ ನೀವು ಯಾರ ಮೇಲೆಯೂ ಸಹ ಅವಲಂಬಿತರಾಗಿ ಇರುವುದಿಲ್ಲ. ನಿಮ್ಮಿಂದ ಹೆಚ್ಚು ಜನ ಸಹಾಯ ಪಡೆಯುತ್ತಾರೆ. ಅದನ್ನೂ ಸಹ ನೀವು ಆನಂದದಿಂದಲೇ ಮಾಡುತ್ತೀರಿ. ಇತರರನ್ನೂ ಸಹ ನೀವು ಈ ವರ್ಷ ಸರಿ ದಾರಿಗೆ ತರುತ್ತೀರಿ.
ಖರ್ಚುಗಳು ಈ ವರ್ಷ ತುಸು ಹೆಚ್ಚೆಂದು ಅನಿಸಿದರೂ ಸಹ ಅವು ಅನವಶ್ಯಕ ಆಗಿರುವುದಿಲ್ಲ ಎಂಬುದೇ ವಿಶೇಷ! ಈ ಹಿಂದೆ ನಿಮ್ಮ ಕುರಿತು ಅಪಹಾಸ್ಯ ಮಾಡಿದವರೇ ಈಗ ನಿಮ್ಮ ಬಳಿ ಸಹಾಯ ಕೇಳುತ್ತ ಬಂದರೂ ಆಶ್ಚರ್ಯವಿಲ್ಲ. [ಮೇಷ ವರ್ಷ ಭವಿಷ್ಯ : ಹರ್ಷದ ಸಮಯ ಅನುಭವಿಸಲು ಸಿದ್ಧರಾಗಿ]
ವರ್ಷದ ಒಟ್ಟಾರೆ ಫಲ 4/5
ಜನವರಿ ಫೆಬ್ರವರಿ : ವ್ಯವಹಾರದಲ್ಲಿ ನೋವರಿ
ಈ ಸಮಯ ಅತ್ಯುತ್ತಮ! ಬುದ್ದಿವಂತರು ಉತ್ತಮ ಸಮಯವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಅಂದರೆ ಸ್ವತಂತ್ರವಾಗಿ ಹೊಸದಾಗಿ ಏನಾದರೂ ಪ್ರಯತ್ನಿಸುವ ಹಂಬಲ ಇದ್ದರೆ ಈಗ ಅದರ ಬಗ್ಗೆ ಯೋಚಿಸಿ ನಿರ್ಧರಿಸಬಹುದು. ಆದರೆ ಬೇರೆಯವರೊಂದಿಗೆ ಸೇರಿ ವ್ಯವಹಾರ ಪ್ರಾರಂಭಿಸುವುದಾದಲ್ಲಿ ಎಚ್ಚರ. ಸಮಾಜದಲ್ಲಿ ಗೌರವ ಜಾಸ್ತಿ ಆಗಲಿದೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡವರಿಗೆ ಅಥವಾ ತಮ್ಮ ಕ್ಷೇತ್ರದಲ್ಲಿ ಸಾಧನೆ ಗೈದವರಿ ಪ್ರಶಸ್ತಿ ಪುರಸ್ಕಾರ ಇತ್ಯಾದಿಗಳು ಹುಡುಕಿಕೊಂಡು ಬರಲಿವೆ.
ಮಾರ್ಚ್ ಏಪ್ರಿಲ್ : ಸ್ತ್ರೀಯರಿಗೆ ಆಸ್ತಿಯಲ್ಲಿ ಫಲ
ರಾಜಕೀಯದಲ್ಲಿ ಆಸಕ್ತಿ ಇರುವವರಿಗೆ ಅವಕಾಶ ಲಭಿಸಲಿದೆ. ಅಷ್ಟೇ ಅಲ್ಲ ಜನ ಗುರುತಿಸಿ ಗೌರವಿಸುತ್ತಾರೆ. ತವರು ಮನೆಯ ಆಸ್ತಿಯ ವಿಚಾರದಲ್ಲಿ ಆಸಕ್ತಿ ಇರುವ ವಿವಾಹಿತ ಸ್ತ್ರೀಯರು ಈ ತಿಂಗಳುಗಳಲ್ಲಿ ಪ್ರಯತ್ನಿಸಿದರೆ ಫಲ ಸಿಗುವುದು ಆದರೆ ಅತೀ ಅನಿವಾರ್ಯ ಅಲ್ಲದೆ ಇದ್ದರೆ ಜಗಳ , ಮನಸ್ತಾಪ ಅಥವಾ ನ್ಯಾಯಾಲಯಗಳಿಗೆ ವಿಚಾರಗಳು ಹೋಗದಂತೆ ಕೇವಲ ಚಿಕ್ಕ ಪುಟ್ಟ ಮಾತುಕತೆ ಹಾಗೂ ನಗು ಮೊಗದಲ್ಲಿ ಕಾರ್ಯ ಸಂಪನ್ನ ಗೊಳಿಸಲು ಪ್ರಯತ್ನಿಸಿ.
ಮೇ ಜೂನ್ : ವೃತ್ತಿ ಜೀವನದಲ್ಲಿ ಇಲ್ಲ ಗೇನ್
ನಿಮ್ಮ ವೃತ್ತಿ ಜೀವನ ನಿಮಗೆ ಸ್ವಲ್ಪ ಬೇಸರ ಮೂಡಿಸಲಿದೆ. ಎಲ್ಲಾ ಕಾರ್ಯಗಳು ಆದರೂ ಸಹ ಏಕೋ ಕೆಲಸದ ಜಾಗದಲ್ಲಿ ನಾನು ಅಂದುಕೊಂಡಂತೆ ಎಲ್ಲ ಆಗುತ್ತಿಲ್ಲ ಅನಿಸುತ್ತದೆ. ನೀವು ಆಶಿಸಿದ ಜಾಗಕ್ಕೆ ವರ್ಗಾವಣೆ ಪಡೆಯಲು ಹರಸಾಹಸ ಮಾಡ ಬೇಕಿದೆ ಅನಿಸುತ್ತದೆ. ನಿಮ್ಮಿಂದ ಈ ಹಿಂದೆ ಎಷ್ಟೋ ವಿಧದ ಸಹಾಯ ಪಡೆದವರು ಈ ಚಿಕ್ಕ ವಿಚಾರದಲ್ಲಿ ಮಾತ್ರ ನಿರೀಕ್ಷೆ ಮಾಡಿದಷ್ಟು ಸಹಾಯ ಮಾಡುತ್ತಿಲ್ಲ ಅನಿಸುತ್ತದೆ. ಇಷ್ಟಕ್ಕೆ ನಿಮ್ಮ ಮೇಲೆ ದೊಡ್ದ ಉಪಕಾರ ಮಾಡಿದಂತೆ ಅವರು ಭಾವಿಸುತ್ತಿದ್ದರೆ ಅನಿಸುತ್ತದೆ.
ಜುಲೈ ಆಗಸ್ಟ್ : ವಿದೇಶಕ್ಕೆ ಹಾರಲು ಈ ಸಮಯವೇ ಬೆಸ್ಟ್
ಮಕ್ಕಳಿಗಾಗಿ ಸ್ವಲ್ಪ ಹೆಚ್ಚೇ ಖರ್ಚುಗಳನ್ನು ಈ ತಿಂಗಳುಗಳಲ್ಲಿಯೇ ಮಾಡಬೇಕಾಗುತ್ತದೆ. ಆದರೆ ಆ ಎಲ್ಲ ಖರ್ಚುಗಳು ನಿಮ್ಮ ಜವಾಬ್ದಾರಿಯ ಪರಿಧಿಯಲ್ಲಿ ಬರುವುದರಿಂದ ನೀವು ಪ್ರಶ್ನಿಸೋ ಹಾಗಿಲ್ಲ. ವಾಹನ ಖರೀದಿ ಯೋಗ ಇದೆ. ಯೋಚಿಸಿ ಉತ್ತಮ ಹಾಗೂ ಅವಶ್ಯಕತೆಗಳಿಗೆ ಅನುಗುಣವಾದ ವಾಹನ ತೆಗೆದುಕೊಳ್ಳಿ. ದೂರ ಪ್ರಯಾಣ ಮಾಡಲು ಅಥವಾ ವಿದೇಶಕ್ಕೆ ಹಾರಿ ಹೋಗಲು ನಿಮಗಿದು ಕೊನೆಯ ಸುಲಭ ಅವಕಾಶ. ಆದುದರಿಂದ ಅಂತಹ ಕಾರ್ಯಗಳನ್ನು ಬೇಗ ಮುಗಿಸಿಕೊಳ್ಳಬೇಕು. ಸ್ನೇಹಿತರ ಮನೆಗಳ ಶುಭ ಕಾರ್ಯಗಳಲ್ಲಿ ನಿಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳುತ್ತೀರಿ.
ಸೆಪ್ಟೆಂಬರ್ ಅಕ್ಟೋಬರ್ : ಆರೋಗ್ಯದ ಬಗ್ಗೆ ಎಚ್ಚರ
ಈ ಸಮಯ ನಿಮಗೆ ವರ್ಷದ ಆದಿ ಹಾಗೂ ಮಧ್ಯ ಭಾಗದಷ್ಟು ಸುಲಭವಾಗಿ ಇರುವುದು ಕಷ್ಟ. ಆರೋಗ್ಯ ಬಾಧೆ ಕಾಡುವ ಸಾಧ್ಯತೆ ಹೆಚ್ಚು. ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆ ಹೆಚ್ಚು ಕಾಡಬಹುದು. ಉದಾಹರಣೆಗೆ ವಾಯು, ಅಜೀರ್ಣ ಹೊಟ್ಟೆ ಉರಿ ಇತ್ಯಾದಿ. ಸ್ತ್ರೀಯರಿಗೆ ಗರ್ಭಕೋಶದ ಸಮಸ್ಯೆ, ಮಾಸಿಕ ಋತುಚಕ್ರದಲ್ಲಿ ವ್ಯತ್ಯಾಸವಾಗಿ ಹೊಟ್ಟೆ ನೋವು ಹಾಗೂ ಅತಿಯಾದ ರಕ್ತಸ್ರಾವ ಆಗಬಹುದು. ಈ ಸಮಸ್ಯೆಗಳಿಗೆ ಪರಿಹಾರವಾಗಿ ವರ್ಷದ ಆರಂಭದಿಂದಲೇ ಸಮಯಕ್ಕೆ ಸರಿಯಾಗಿ ಹಾಗೂ ಶುಚಿಯಾದ ಆಹಾರ ಸೇವನೆ ಮಾಡಿ ಸರಿಯಾಗಿ ಇಟ್ಟುಕೊಳ್ಳಬೇಕು.
ನವೆಂಬರ್ ಡಿಸೆಂಬರ್ : ಯಾರನ್ನೇ ಅತಿಯಾಗಿ ನಂಬದಿರಿ
ಯಾರನ್ನೇ ಆಗಲೀ ಅತಿಯಾಗಿ ನಂಬುವುದು ನಿತ್ಯ ಜೀವನದಲ್ಲಿ ಹಾನಿಕಾರಕ ಎಂಬ ಸತ್ಯದ ಅರಿವು ಈಗ ಆಗಲಿದೆ. ದೂರದ ದಾಯಾದಿಗಳಿಗೆ ಸಂಬಂಧಿಸಿದಂತೆ ಕೆಟ್ಟ ವಾರ್ತೆಗಳನ್ನು ಕೇಳುವ ಸಾಧ್ಯತೆಗಳಿವೆ. ಕೆಲಸ ಕಾರ್ಯಗಳಲ್ಲಿ ಈ ಹಿಂದಿನ ಅಸಕ್ತಿಯನ್ನು ಕ್ರಮೇಣ ಕಳೆದುಕೊಳ್ಳುತ್ತೀರಿ.
ಪರಿಹಾರ
ವೈದಿಕ : ಈ ವರ್ಷ ಸಾಧ್ಯವಾದರೆ ಅಶ್ಲೇಷ ಬಲಿ ಪೂಜೆಯನ್ನು, ಸರ್ಪ ಶಾಂತಿ ಹವನದೊಂದಿಗೆ ಪ್ರತ್ಯೇಕವಾಗಿ ಶಾಸ್ತ್ರೋಕ್ತವಾಗಿ ಮಾಡಿಸಿದರೆ ಉತ್ತಮ ನಿಮಗೆ ನಿರೀಕ್ಷಿತ ಫಲಗಳನ್ನು ವರ್ಷ ಪೂರ್ತೀ ಪಡೆಯುತ್ತೀರಿ.
ಕ್ಷೇತ್ರ : ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಇರುವ ಶ್ರೀ ಕ್ಷೇತ್ರ ವರದಹಳ್ಳಿಯಲ್ಲಿ ಇರುವ ಶ್ರೀ ಶ್ರೀಧರಾಶ್ರಮಕ್ಕೆ ತಪ್ಪದೇ ಭೇಟಿ ಮಾಡಿ ಅಲ್ಲಿ ಪವಿತ್ರವಾದ ಶ್ರೀಧರ ತೀರ್ಥದಲ್ಲಿ ಸ್ನಾನ ಮಾಡಿ ಗುರುಗಳ ಸನ್ನಿಧಿಯಲ್ಲಿ ರುದ್ರಾಭಿಷೇಕ ಮಾಡಿಸಿ.
ರತ್ನ : ಉತ್ತಮ ಗುಣ್ಮಟ್ಟದ ಸಮುದ್ರದ ನೈಜ "ಮುತ್ತು" ರತ್ನವನ್ನು ಬೆಳ್ಳಿಯಲ್ಲಿ ಉಂಗುರ ಮಾಡಿಸಿ ಎರಡು ದಿನ ಶುದ್ಧಿ ಪೂಜೆ ಮಾಡಿ ಅಭಿಮಂತ್ರಿಸಿ ಸೋಮವಾರದಂದು ಧರಿಸಿ.
ಸ್ತೋತ್ರ : ಪ್ರತಿ ದಿನ ಗಣಪತಿ ಸ್ತೋತ್ರಗಳನ್ನು ತಪ್ಪದೇ ಪಠಿಸಿ ಹಾಗು ಈ ವರ್ಷ ಆರೋಗ್ಯ ಸಮಸ್ಯೆಗಳಿದ್ದವರು ಸಾಧ್ಯವಾದಲ್ಲಿ ಪ್ರತೀ ತಿಂಗಳ ಸಂಕಷ್ಟಿಯಲ್ಲಿ ಉಪವಾಸ ಮಾಡಿ ಗಣಪತಿಯನ್ನು ಪೂಜಿಸಿ.