ಮಿಥುನ ವರ್ಷ ಭವಿಷ್ಯ: ದುಡ್ಡು ಚದುರದೆ ಉಳಿದರೆ ಚತುರರು ನೀವೇ!
ಸ್ವಭಾವತಃ ಹಣ-ಕಾಸಿನ ಖರ್ಚಿನ ವಿಚಾರದಲ್ಲಿ ಮಹಾನ್ ಚತುರರಾದ ನಿಮಗೆ ಈ ವರ್ಷ ಅಚ್ಚರಿ ಕಾದಿದೆ. ಆದಾಯ- ವೆಚ್ಚ ನೋಡಿಯೇ ಖರ್ಚು ಮಾಡ್ತೀವಿ ಅಂತ ನೀವೇನೇ ಹೇಳಿದರೂ 2018ನೇ ಇಸವಿಯಲ್ಲಿ ಹಣ ಉಳಿಯಲು ಸಾಧ್ಯವೇ ಇಲ್ಲ ಅನ್ನೋದನ್ನು ಸೂಚಿಸುತ್ತಿದೆ. ದುಡ್ಡೇನೋ ಬರುತ್ತದೆ. ಆದರೆ ಅದು ಹೇಗೆ ಖರ್ಚಾಯಿತು ಎಂದು ತಲೆ ಕೆಡಿಸಿಕೊಳ್ಳುವಂತೆ ಆಗುತ್ತದೆ.
ಮಿಥುನ ರಾಶಿಯವರು ಮೂಲತಃ ಲೆಕ್ಕಾಚಾರದವರು. ಆದರೆ ನಿಮಗೇ ಗೊಂದಲ ಸೃಷ್ಟಿ ಮಾಡುತ್ತಿರುವುದು ರಾಹು ಗ್ರಹ. ದ್ವಿತೀಯದಲ್ಲಿರುವ ರಾಹು ಅನಗತ್ಯ ಖರ್ಚುಗಳನ್ನು ಮಾಡಿಸುತ್ತದೆ. ದೂರ ಪ್ರಯಾಣಗಳು ಅಂದುಕೊಂಡ ಫಲ ಕೊಡುವುದಿಲ್ಲ. ಅದರಲ್ಲೂ ವಿದೇಶ ಪ್ರಯಾಣಗಳ ಯೋಜನೆ ಹಾಕಿಕೊಂಡರೆ ಒಂದಕ್ಕೆ ಎರಡು ಸಲ ಯೋಚನೆ ಮಾಡುವುದು ಉತ್ತಮ.
ಯಾವ ಹೋಮದಿಂದ ಏನು ಫಲ? ಶಾಸ್ತ್ರೋಕ್ತವಾಗಿ ಮಾಡುವುದು ಹೇಗೆ?
ಇನ್ನು ವೈದ್ಯರು ಸಹ ಗುರುತಿಸಲಾಗದಂಥ ಅನಾರೋಗ್ಯ ಸಮಸ್ಯೆಗೆ ತುತ್ತಾಗುತ್ತೀರಿ. ಅದಕ್ಕೆ ಕಾರಣ ಹಾಗೂ ಪರಿಹಾರ ತಿಳಿದುಕೊಳ್ಳುವ ಸಲುವಾಗಿಯೇ ಬೇರೆ-ಬೇರೆ ವೈದ್ಯರು, ಆಸ್ಪತ್ರೆ ಅಂತ ತಿರುಗಾಡಿ, ಹಣ ಖರ್ಚು ಮಾಡುತ್ತೀರಿ ವಿನಾ ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಇದಕ್ಕೆ ಕಾರಣ ಆಗುವುದು ಎಂಟನೇ ಸ್ಥಾನದಲ್ಲಿರುವ ಕೇತು ಗ್ರಹ.
ಸ್ನೇಹಿತರು-ಬಾಳ ಸಂಗಾತಿ ಜತೆಗೆ ಭಿನ್ನಾಭಿಪ್ರಾಯ
ಸಪ್ತಮದಲ್ಲಿರುವ ಶನಿಯ ಪ್ರಭಾವದಿಂದ ಸ್ನೇಹಿತರು ಹಾಗೂ ಬಾಳಸಂಗಾತಿ ಜತೆಗೆ ಭಿನ್ನಾಭಿಪ್ರಾಯಗಳು ಏರ್ಪಡುತ್ತವೆ. ಸೌಹಾರ್ದ ಸಂಬಂಧಕ್ಕೆ ಕಿಡಿ ತಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಸುಖಾಸುಮ್ಮನೆ ಅನುಮಾನ ಪಡುವುದು, ಮಾತನ್ನು ಬಿಟ್ಟುಬಿಡುವಂಥದ್ದನ್ನು ಮಾಡಬೇಡಿ. ಏನೇ ಇದ್ದರೂ ಕೂತು ಮಾತನಾಡಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಿ.
ಅಂತರ್ಜಾತಿ ವಿವಾಹಕ್ಕೆ ಇಂಬು ಕೊಡುವ ಸಂದರ್ಭ
ಪ್ರೀತಿ-ಪ್ರೇಮದಲ್ಲಿ ಇರುವವರು ಅದರಲ್ಲಿ ಅಂತರ್ಜಾತಿ ವಿವಾಹ ಅನ್ನೋದಾದರೆ ಆಗಿಬಿಡುವ ಸಾಧ್ಯತೆ ಹೆಚ್ಚಿರುತ್ತದೆ. ಮನೆಯಲ್ಲಿ ಒಪ್ಪುತ್ತಾರೋ ಬಿಡುತ್ತಾರೋ ಮದುವೆ ಆಗಿಬಿಡೋಣ ಎಂಬ ಒತ್ತಡ ಹೆಚ್ಚಾಗಿ, ಅದಕ್ಕೆ ಪೂರಕವಾಗಿ ವಾತಾವರಣವೂ ನಿರ್ಮಾಣ ಆಗಿಬಿಡುತ್ತದೆ. ಆದರೆ ಮನೆಯವರಿಗೆ ಹೆಚ್ಚಿನ ನೋವು ಮಾಡಬೇಡಿ.
ಪಂಚಮದಲ್ಲಿ ಗುರು
ಪಂಚಮದಲ್ಲಿ ಗುರು ಶುಭ ಕೊಡಬೇಕು. ಆದರೆ ಈ ಸ್ಥಾನದಲ್ಲಿ ಎಲ್ಲ ರೀತಿಯಲ್ಲೂ ಶುಭ ಫಲ ಕೊಡುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ. ಇತರ ಗ್ರಹಗಳ ಅಶುಭ ಫಲಗಳನ್ನು ಗುರಾಣಿಯಂತೆ ಸ್ವಲ್ಪ ಮಟ್ಟಿಗೆ ತಡೆಯಬಹುದು ಎಂಬುದು ಸತ್ಯ. ಆದರೆ ಎಲ್ಲರಿಗೂ ಒಳಿತನ್ನೇ ಮಾಡುತ್ತಾನೆ ಎನ್ನಲಾಗುವುದಿಲ್ಲ.
ವಿದ್ಯಾರ್ಥಿಗಳಿಗೆ ಆಲಸ್ಯವೇ ಶತ್ರು
ಆದರೆ, ವಿದ್ಯಾರ್ಥಿಗಳಿಗೆ ಪಂಚಮ ಗುರು ಶುಭವನ್ನೇ ನೀಡುತ್ತಾನೆ. ಉದ್ಯೋಗಸ್ಥರಿಗೂ ಶುಭ ನೀಡಬಹುದಾದರೂ ಆಲಸ್ಯದ ಕಾರಣಕ್ಕೆ ಅವಕಾಶಗಳು ಕಣ್ಣೆದುರಿನಿಂದ ಕರಗಿ ಹೋಗುತ್ತದೆ. ನಿತ್ಯದ ಅಭ್ಯಾಸದಲ್ಲಿ ಏರುಪೇರಾಗುವ ಸಾಧ್ಯತೆಗಳಿದ್ದು, ಆಲಸ್ಯ ಎಂಬ ಶತ್ರುವಿನಿಂದ ದೂರಾಗದಿದ್ದರೆ ಪಶ್ಚಾತ್ತಾಪ ಪಡುವಂತಾಗುತ್ತದೆ.
ಸಂತಾನ ಅಪೇಕ್ಷಿತರಿಗೆ ಸೂಕ್ತ ಸಮಯ
ಮದುವೆ ಆಗಿಲ್ಲ ಅಥವಾ ಈಗ ಮದುವೆಗೆ ಸರಿಯಾದ ಸಮಯ ಎಂದು ಅರಿತವರು ಶೀಘ್ರವಾಗಿ ಅನ್ವೇಷಣೆ ಪ್ರಾರಂಭಿಸಿ ಹಾಗೂ ಅಕ್ಟೋಬರ್ ಒಳಗೆ ಮದುವೆಯೇ ಮುಗಿದು ಹೋಗುವಂತೆ ನೋಡಿಕೊಳ್ಳಿ. ಬಹಳ ಮುಖ್ಯವಾಗಿ ಗರ್ಭಿಣಿಯರು ವಿಶೇಷವಾದ ಎಚ್ಚರಿಕೆ ವಹಿಸಬೇಕು. ಗರ್ಭಾವಸ್ಥೆಯ ಆರಂಭದಲ್ಲಿ ಇರುವವರಿಗೆ ಈಗ ಈ ಮಗು ಬೇಕಾ ಎನ್ನುವ ದ್ವಂದ್ವ ಸಹ ಕಾಡಲು ಪ್ರಾರಂಭ ಆಗಬಹುದು. ಸಂತಾನ ಬೇಕು ಎನ್ನುವವರಿಗೆ ಆ ದಿಸೆಯಲ್ಲಿ ಪ್ರಯತ್ನಿಸಲು ಉತ್ತಮ ಸಮಯ.
ಹೊಸ ಉದ್ಯೋಗ ಪ್ರಯತ್ನಕ್ಕೆ ಸೂಕ್ತ ಸಮಯ
ಸದ್ಯಕ್ಕೆ ಉದ್ಯೋಗದಲ್ಲಿ ಇಲ್ಲದವರಿಗೆ ಹಾಗೂ ಸದ್ಯಕ್ಕೆ ಇರುವ ಉದ್ಯೋಗದಲ್ಲಿ ಸಮಾಧಾನ ಇಲ್ಲ, ಬೇರೊಂದು ಉತ್ತಮ ಕೆಲಸ ಹುಡುಕಬೇಕು ಎನ್ನುವ ಯೋಚನೆಗಳು ಇರುವವರಿಗೆ ಹೊಸ ವರ್ಷದಲ್ಲಿ ಪ್ರಯತ್ನ ಮಾಡಲು ಸೂಕ್ತ ಸಮಯ. ನೀವು ಅಂದುಕೊಂಡಂಥ ಉದ್ಯೋಗ ಸಿಗುತ್ತದೆ. ಆಲಸ್ಯ ಮಾಡುತ್ತಾ ಮುಂದಕ್ಕೆ ಹಾಕಬೇಡಿ.
ಒಳ್ಳೆ ಕೆಲಸಗಳಿಗೆ ಖರ್ಚು ಮಾಡಿ
ನೀವು ಏನು ಮಾಡಿದರೂ ಖರ್ಚನ್ನು ತಡೆಯಲು ಸಾಧ್ಯವಿಲ್ಲವಾದ್ದರಿಂದ ಮನೆ ಕಟ್ಟುವುದಿದ್ದರೆ, ಮಕ್ಕಳ ಮದುವೆ ಮತ್ತಿತರ ಶುಭ ಕಾರ್ಯಗಳಿಗೆ ಹಣ ವೆಚ್ಚ ಮಾಡುವುದು ಉತ್ತಮ. ಆದರೆ ಯಾವುದೇ ಖರೀದಿ ಮಾಡುವ ಮುನ್ನ ಬೇರೊಬ್ಬರ ಸಲಹೆ ಪಡೆಯಿರಿ. ಅಗತ್ಯ ಇಲ್ಲದ ವಸ್ತುಗಳಿಗೆ ಹೆಚ್ಚು ಖರ್ಚಾಗದಂತೆ ಎಚ್ಚರ ವಹಿಸಿ.
ಸಮಸ್ಯೆಗೆ ಪರಿಹಾರ ಏನು?
ನಿಮ್ಮ ಜಾತಕವನ್ನು ಒಮ್ಮೆ ಪರಿಶೀಲಿಸಿ, ಯಾವ ಹೋಮ ಮಾಡುವ ಅವಶ್ಯಕತೆ ಇದೆ ಎಂದು ತಿಳಿದುಕೊಳ್ಳಿ. ಅದರ ಜೊತೆಯಲ್ಲಿ ನಿಮ್ಮ ಸರ್ವತೋಮುಖ ಅಭಿವೃದ್ಧಿಗಾಗಿ ವಿಶೇಷವಾದ "ಆವಹಂತೀ" ಹವನ ಮಾಡಿಸಿ. ಉತ್ತಮ ಗುಣಮಟ್ಟದ, ಅಭಿಮಂತ್ರಿತ ಜಲರತ್ನವನ್ನು ಬೆಳ್ಳಿಯಲ್ಲಿ ಉಂಗುರ ಮಾಡಿಸಿ, ಧರಿಸಿ.