ಮಕರ ವರ್ಷ ಭವಿಷ್ಯ : ಸಾಲ- ಸೋಲಿನ ಮುಂದೆ ಮಂಡಿಯೂರದಿರಿ
ನಿಮ್ಮ ರಾಶಿಯವರ ಪೈಕಿ ಹಲವರಿಗೆ ಊಹೆ ಕೂಡ ಮಾಡದ ವಿಶೇಷ- ವಿಚಿತ್ರ ಫಲಗಳು ಸಿಗಲಿವೆ. ಊಹೆ ಮಾಡಲು ಸಾಧ್ಯವಿಲ್ಲದ್ದು ಎಂಬ ಮಾತ್ರಕ್ಕೆ ಕೆಟ್ಟ ಫಲವೇ ಇರಬೇಕು ಅಂದುಕೊಳ್ಳಬೇಡಿ. ಒಳಿತಾಗಲಿ ಅಥವಾ ಕೆಡುಕಾಗಲೀ ನಿಮ್ಮಿಂದ ಅಂದಾಜು ಕೂಡ ಮಾಡಲಾಗದ ರೀತಿಯಲ್ಲಿ ಅನುಭವಕ್ಕೆ ಬರುತ್ತದೆ. ಸಾಮಾನ್ಯವಾಗಿ ಮಕರ ರಾಶಿಯವರು ಕ್ಯಾಲ್ಕುಲೇಟರ್ ಇದ್ದ ಹಾಗೆ.
ಯಾವುದನ್ನೇ ಆಗಲಿ ಮುಂಚಿತವಾಗಿ ಊಹಿಸಬಲ್ಲಂಥ ಲೆಕ್ಕಾಚಾರದ ಮನುಷ್ಯರು ಹಾಗೂ ನಿಧಾನಸ್ಥರು. ಆದರೆ ಈಗಿನ ಪರಿಸ್ಥಿತಿ ಮಾತ್ರ ನಿಮ್ಮ ಕಣ್ಣಂದಾಜಿಗಿಂತ ದೂರವಿದೆ. ಗಾಸಿಪ್- ವದಂತಿಗಳಿಗೆ ಆಹಾರವಾಗುವ ಪೈಕಿ ನಾವಲ್ಲ ಎಂದು ಇಷ್ಟು ಕಾಲ ಅದೊಂದು ಆತ್ಮವಿಶ್ವಾಸ ನಿಮ್ಮಲ್ಲಿತ್ತು. ಅದು ಇಷ್ಟಿಷ್ಟೇ ಕರಗುವ ಸಮಯವಿದು.
ಯಾವ ಹೋಮದಿಂದ ಏನು ಫಲ? ಶಾಸ್ತ್ರೋಕ್ತವಾಗಿ ಮಾಡುವುದು ಹೇಗೆ?
ನೀವು ಅದ್ಯಾವ ಕ್ಷೇತ್ರದಲ್ಲೇ ಇರಿ, ಅದೆಷ್ಟೇ ಎಚ್ಚರಿಕೆಯಿಂದ ಇದ್ದರೂ ಗುರುತರವಾದ ಅಪವಾದಗಳು ನಿಮ್ಮ ಮೇಲೆ ಬರಲಿವೆ. ತಪ್ಪಿಸಿಕೊಳ್ಳುವ ಪ್ರಯತ್ನ ಅದೆಷ್ಟೇ ಬಲವಾಗಿ ಮಾಡಿದರೂ ಏನೂ ಉಪಯೋಗ ಆಗುವುದಿಲ್ಲ. ಎಷ್ಟೇ ಲೆಕ್ಕಾಚಾರ ಹಾಕಿ ದುಡ್ಡಿನ ವ್ಯವಹಾರ ಮಾಡಿದರೂ ಸಿಕ್ಕಾಪಟ್ಟೆ ಸಾಲದ ಸುಳಿಗೆ ಸಿಲುಕಿಕೊಳ್ಳುವುದು ಖಚಿತ. ಹಿರಿಯರ ಸಹಾಯದಿಂದ ಈ ಸಾಲದಿಂದ ಆಚೆ ಬರುತ್ತೀರಿ.
ಅಧ್ಯಾಪಕ ವೃತ್ತಿಯಲ್ಲಿರುವವರು ಇನ್ನಷ್ಟು ಎಚ್ಚರವಾಗಿರಿ
ಅಧ್ಯಾಪಕ ವೃತ್ತಿಯಲ್ಲಿ ಇರುವವರು ಇತರರಿಗಿಂತ ಹೆಚ್ಚು ಹುಷಾರಾಗಿರಬೇಕು. ನಿಮ್ಮ ಕೆಲಸದ ವಿಚಾರದಲ್ಲಿ ಯಾವುದೇ ಅಸಮಾಧಾನ ಅಥವಾ ಆಕ್ಷೇಪ ಕೇಳಿಬರುವುದಿಲ್ಲ. ಆದರೆ ಬೇರೆ ರೀತಿಯ ಅಪವಾದಗಳು ನಿಮ್ಮ ಮೇಲೆ ಬರುತ್ತವೆ. ಸಾಮಾನ್ಯವಾಗಿ ಸಮಸ್ಯೆಗಳನ್ನು ಮುಂಚೆಯೇ ಅಂದಾಜು ಮಾಡುವ ನೀವು, ಈ ಬಾರಿ ನಾಲ್ಕು ಜನರ ಮಧ್ಯೆ ತೀವ್ರ ಟೀಕೆಗೆ ಗುರಿಯಾಗುತ್ತೀರಿ.
ಮದುವೆ ಪ್ರಯತ್ನ ಮಾಡಿ
ಮದುವೆ ವಯಸ್ಸು ಬಂದು, ಮೀರಿ ಹೋಗುತ್ತಿದೆ ಎಂದಾದಲ್ಲಿ ಮಾತ್ರ ಈ ವರ್ಷ ವಿವಾಹದ ವಿಚಾರ ಕಡ್ಡಾಯವಾಗಿ ಮಾಡಿ. ಇಲ್ಲದಿದ್ದಲ್ಲಿ ಉದ್ಯೋಗದಲ್ಲಿ ಅಥವಾ ನೀವು ಮಾಡುತ್ತಿರುವ ವ್ಯಾಪಾರ- ವ್ಯವಹಾರದಲ್ಲಿ ಸರ್ವತೋಮುಖ ಅಭಿವೃದ್ಧಿಯತ್ತ ಸಂಪೂರ್ಣ ಪ್ರಯತ್ನ ಇದ್ದರೆ ಒಳ್ಳೆಯದು.
ಶತ್ರು ಬಾಧೆ
ಕ್ರೀಡಾ ವಿಭಾಗದಲ್ಲಿ ಸಾಧನೆಯ ಕನಸು ಇರುವವರಿಗೆ ಈ ವರ್ಷ ಕಷ್ಟ. ಆದರೂ ನಿಮ್ಮ ಪ್ರಯತ್ನ ಮಾಮೂಲಿಗಿಂತ ತುಸು ಹೆಚ್ಚಿಗೆಯೇ ಇರಲಿ. ಹೋಟೆಲ್ ಉದ್ಯಮದಲ್ಲಿ ಇರುವವರು ಉತ್ತಮ ಪ್ರಗತಿ ಕಾಣಬಹುದು. ನಿಮಗೆ ಹೆಚ್ಚು ಕಾಡುವ ವಿಚಾರ ಅಂದರೆ ಶತ್ರು ಬಾಧೆ. ಶತ್ರುಗಳು ನಿಮಗಿಂತ ಒಂದು ಹೆಜ್ಜೆ ಮುಂದೆ ಇರುತ್ತಾರೆ ಅಥವಾ ನಿಮ್ಮ ಕೈಗೆ ಎಟುಕದ ಜಾಗದಿಂದ ತೊಂದರೆ ಕೊಡುತ್ತಿರುತ್ತಾರೆ. ಆದ್ದರಿಂದ ಶತ್ರುಗಳ ಕಾಟದಿಂದ ತಪ್ಪಿಸಿಕೊಳ್ಳುವುದು ಕಷ್ಟ.
ಆರೋಗ್ಯ ಸಮಸ್ಯೆಗಳಿವೆ
ಇನ್ನು ದೂರ ಪ್ರಯಾಣಗಳು ಕಡಿಮೆ ಆದರೂ ಖರ್ಚುಗಳು ಮಾತ್ರ ಹೆಚ್ಚಾಗುತ್ತವೆ. ಇನ್ನು ನಿಮ್ಮ ಆಹಾರ ವಿಚಾರದ ಮೇಲೆ ಹಿಡಿತ ಇಲ್ಲದಿದ್ದಲ್ಲಿ ಬಹಳ ದಪ್ಪ ಆಗುತ್ತೀರಿ. ಇದೇ ಆಹಾರ ಪದ್ಧತಿಯ ಕಾರಣದಿಂದ ಹೊಟ್ಟೆ ನೋವು, ಅಜೀರ್ಣ ಇತ್ಯಾದಿ ಸಹ ಪ್ರಾರಂಭ ಆಗುತ್ತವೆ. ಬೆನ್ನು ಅಥವಾ ಮೊಣಕಾಲು ನೋವು ಹೊಸದಾಗಿ ಪ್ರಾರಂಭ ಆದರೂ ಆಶ್ಚರ್ಯ ಇಲ್ಲ.
ಯಾವುದನ್ನೂ ಕಣ್ಣು ಮುಚ್ಚಿ ನಂಬಬೇಡಿ
ವಿದ್ಯಾರ್ಥಿಗಳು ಯಾರದೇ ಭರವಸೆಯನ್ನು ಕಣ್ಣುಮುಚ್ಚಿಕೊಂಡು ನಂಬಬೇಡಿ. ನೀವು ಸೇರುವ ಕೋರ್ಸ್ ಗೆ ಮಾನ್ಯತೆ ಇದೆಯಾ? ಆ ಕಾಲೇಜು ಅಥವಾ ಶಿಕ್ಷಣ ಸಂಸ್ಥೆ ನೋಂದಣಿ ಆಗಿದೆಯಾ ಇತ್ಯಾದಿ ವಿಚಾರಗಳನ್ನು ಸರಿಯಾಗಿ ತಿಳಿದುಕೊಂಡ ನಂತರವೇ ಮುಂದಡಿ ಇಡಿ. ಈ ವಿಚಾರದಲ್ಲಿ ಹಿರಿಯರ- ತಿಳಿದವರ ಮಾರ್ಗದರ್ಶನ ಪಡೆಯುವುದು ಒಳ್ಳೆಯದು.
ಅನುಮಾನ ಹೆಡೆ ಎತ್ತಲಿದೆ
ದಂಪತಿ ಮಧ್ಯೆ ಅನುಮಾನಗಳು ಹೆಡೆ ಎತ್ತಲಿವೆ. ಇದೇ ಮಾತು ಪ್ರೇಮಿಗಳಿಗೂ ಅನ್ವಯಿಸುತ್ತದೆ. ಹಳೆಯ ವಿಚಾರಗಳನ್ನು ಎಳೆದು ಮನಸ್ಸು ಹಾಳು ಮಾಡಿಕೊಳ್ಳಬೇಡಿ. ಇನ್ನು ಆಡಬಾರದ ಮಾತು- ವಿಚಾರ ಯಾವುದೆಂದು ತಿಳಿದು ಮೌನವಾಗಿರುವುದು ಒಳಿತು. ಇಲ್ಲ ಸಲ್ಲದ ವಿಚಾರಕ್ಕೆ ಪ್ರಾಮುಖ್ಯ ಕೊಟ್ಟು ನೆಮ್ಮದಿ- ಪ್ರೀತಿ ಕಳೆದುಕೊಳ್ಳಬೇಡಿ.
ನನಗೆ ತಿಳಿದಿರುವುದೇ ಸರಿ ಎಂಬ ಧೋರಣೆ ಬೇಡ
ಯಾರದೋ ಮೇಲೆ ಸವಾಲು ಹಾಕಿ ಮನೆ ನಿರ್ಮಾಣ ಕಾರ್ಯವನ್ನು ಆರಂಭಿಸಬೇಡಿ. ಸಾಲದ ಸುಳಿಗೆ ಸಿಲುಕುವ ಸಾಧ್ಯತೆ ಮತ್ತೂ ಹೆಚ್ಚಾಗುತ್ತದೆ. ಮಕ್ಕಳ ಮದುವೆ, ಕೋರ್ಟು- ಕಚೇರಿ ವ್ಯವಹಾರ, ಹೂಡಿಕೆ ಇವ್ಯಾವುದೇ ಆಗಲಿ ಎಷ್ಟು ಎಚ್ಚರಿಕೆಯಿಂದ ಇದ್ದರೆ ಅಷ್ಟು ಒಳ್ಳೆಯದು. ನನಗೆ ತಿಳಿದಿರುವುದೇ ಸರಿ ಎಂಬ ಧೋರಣೆ ಸಲ್ಲ.
ಪರಿಹಾರ ಏನು?
ರಾಹು-ಕೇತು ಶಾಂತಿ ಹವನ ಸಹಿತ ಶನಿ ಶಾಂತಿ ಹವನ ಕಡ್ಡಾಯ ಮಾಡಿಸಿ. ಅವೆಲ್ಲದರ ಜೊತೆಯಲ್ಲಿ ದುರ್ಗಾ ಸೂಕ್ತ ಹವನ ಅಥವಾ ಇನ್ನೂ ಆರ್ಥಿಕವಾಗಿ ಶಕ್ತಿ ಇರುವವರು ಚಂಡಿಕಾ ಹವನ ಮಾಡಿಸಿ. ಇವೆಲ್ಲವನ್ನೂ ವೇದಾಧ್ಯಯನ ಆಗಿರುವ, ನಿಯಮಬದ್ಧವಾಗಿ ಮಾಡಬಲ್ಲವರಿಂದಲೇ ಹೋಮ ಮಾಡಿಸಿ. ಇಲ್ಲದಿದ್ದರೆ ಪೂಜೆ ಮಾಡಿಸಿಯೂ ವ್ಯರ್ಥವಾಗುತ್ತದೆ. ಇನ್ನು ಅಭಿಮಂತ್ರಿತ ವ್ಯಾಘ್ರ ನೇತ್ರ ರತ್ನಗಳ ಮಾಲೆ ನಿಮಗೆ ಹೆಚ್ಚು ರಕ್ಷಣೆ ಒದಗಿಸಿದರೆ, ಬೆಳ್ಳಿಯಲ್ಲಿ ರಕ್ಷಾ ಸುದರ್ಶನ ಯಂತ್ರ ರಚಿಸಿ, ಅದನ್ನು ಅಭಿಮಂತ್ರಿಸಿ, ಪೂಜಿಸಿ ಮನೆಯಲ್ಲಿ ಇಟ್ಟು ನಿತ್ಯ ಪೂಜಿಸುವುದರಿಂದ ಜೀವನದಲ್ಲಿ ಏಳಿಗೆ ಪಡೆಯಬಹುದು.
ಪಂಡಿತ್ ವಿಠ್ಠಲ ಭಟ್ ಸಂಪರ್ಕ ಸಂಖ್ಯೆ 9845682380, ಇಮೇಲ್ ಐಡಿ- [email protected]