ಕುಂಭ ವರ್ಷ ಭವಿಷ್ಯ 2019 : ತಡೆದ ಮಳೆ ಜಡಿದು ಬರಲಿದೆ
ಹನ್ನೊಂದನೇ ಸ್ಥಾನದಲ್ಲಿರುವ ಶನಿ, ಒಂಬತ್ತನೇ ಮನೆಯಲ್ಲಿರುವ ಗುರು, ಆರನೇ ಸ್ಥಾನದಲ್ಲಿರುವ ರಾಹು...ಹೀಗೆ ಶುಭ ಫಲಗಳನ್ನು ನೀಡುವುದಕ್ಕೆ ಮೂರು ಗ್ರಹಗಳು ನಿಮ್ಮ ಪರವಾಗಿ ನಿಂತಿರುವಾಗ ಒಳಿತನ್ನಲ್ಲದೇ ಬೇರೆ ಏನನ್ನು ಹೇಳಲು ಸಾಧ್ಯ. ಕುಂಭ ರಾಸಿಯವರ ಪಾಲಿಗೆ ಗೋಚಾರ ಫಲಗಳು ಉತ್ತಮವಾಗಿವೆ. ಅಂದರೆ ನಿಮ್ಮ ದಶಾ- ಭುಕ್ತಿಯನ್ನು ಒಮ್ಮೆ ಪರಿಶೀಲಿಸಿಕೊಳ್ಳಲೇ ಬೇಕು.
ಹಣದ ಹರಿವು ಹೆಚ್ಚಾಗುತ್ತದೆ. ದಿನಗಳ ಕಳೆದಂತೆ ಆತ್ಮವಿಶ್ವಾಸ ಹೆಚ್ಚಾಗಿ, ಆಸ್ತಿ ಖರೀದಿಗೆ ಮನಸು ಮಾಡುತ್ತೀರಿ. ತಡೆದ ಮಳೆ ಜಡಿದು ಬರುತ್ತದೆ ಎಂಬ ಮಾತೊಂದಿದೆ. ಆ ರೀತಿ ಇಷ್ಟು ಸಮಯ ಒಳಿತನ್ನು ಎದುರು ನೋಡುತ್ತಿರುವವರಿಗೆ ಶುಭ ಫಲಗಳು ಕಾಣಲು ಶುರುವಾಗುತ್ತವೆ. ಹಾಗಂತ ದೇವರ ಮೇಲೆ ಭಕ್ತಿ ಹೋದರೆ ಕಷ್ಟ ಕಷ್ಟ.
ಇನ್ನು ಅವಿವಾಹಿತರಿಗೆ ತಮ್ಮ ಉದ್ಯೋಗ ಸ್ಥಳದಲ್ಲಿ ಅಥವಾ ತಮ್ಮದೇ ಉದ್ಯೋಗ ಮಾಡುತ್ತಿರುವವರಲ್ಲಿ ಹುಡುಕಿದರೆ ವಿವಾಹ ಸಿದ್ಧಿಯ ಸಾಧ್ಯತೆಗಳು ಹೆಚ್ಚು ಕಾಣುತ್ತಿವೆ. ಆದ್ದರಿಂದ ಮದುವೆಗೆ ಪ್ರಯತ್ನ ಮಾಡುತ್ತಿರುವವರು ಸುತ್ತಲೂ ಕಣ್ತೆರೆದು ನೋಡಿ. ಅಥವಾ ಈ ಹಿಂದೆಯೇ ಅಂಥದ್ದೊಂದು ಪ್ರಸ್ತಾವ ಬಂದಿದ್ದಲ್ಲಿ ಈ ಬಾರಿ ಇನ್ನಷ್ಟು ಶ್ರಮ ಹಾಕಿ ಪ್ರಯತ್ನಿಸಿದರೆ ಶುಭವಿದೆ.
ಆಸ್ತಿ ಮಾರಾಟದಿಂದ ಉತ್ತಮ ಲಾಭ
ಜಮೀನು ಮಾರಾಟ ಮಾಡುವುದಿದ್ದಲ್ಲಿ ಹೆಚ್ಚಿನ ಲಾಭ ಸಿಗುತ್ತದೆ. ಆಸ್ತಿ ಮಾರಾಟಕ್ಕೆ ಇಡಬೇಕು ಎಂದು ಯೋಚಿಸುತ್ತಿರುವವರು ಹಾಗೂ ಈಗಾಗಲೇ ಮಾರಾಟಕ್ಕೆ ಇಟ್ಟವರಿಗೆ ಉತ್ತಮ ಲಾಭ ದೊರೆಯುವಂಥ ಸಾಧ್ಯತೆಗಳು ಗೋಚರಿಸುತ್ತಿವೆ. ಬಂದ ಅವಕಾಶವನ್ನು ಇನ್ನೂ ಮುಂದಕ್ಕೆ ಹಾಕಲು ಹೋಗದಿರಿ.
ಉದ್ಯೋಗ ಬದಲಾವಣೆ ಸಾಧ್ಯತೆ
ಉದ್ಯೋಗ ಬದಲಾವಣೆ ಮಾಡುವ ಸಾಧ್ಯತೆಗಳು ಹೆಚ್ಚಾಗಿ ಕಾಣುತ್ತಿವೆ. ಒಂದು ಪಕ್ಷ ನೀವು ಉದ್ಯೋಗ ಬಿಟ್ಟು ಹೊಸದಾದ ಉದ್ಯೋಗ ಸೇರಿದರೂ ಈ ವರ್ಷದ ಮಧ್ಯ ತನಕ ವಿಶೇಷ ಕಷ್ಟಗಳು ಹೆಚ್ಚಿನದಾಗಿ ಕಾಣುತ್ತಿಲ್ಲ. ಹಾಗೆಂದು ಹೊಸ ಉದ್ಯೋಗದಲ್ಲಿ ಸಿಕ್ಕಾಪಟ್ಟೆ ಹೆಚ್ಚಿನ ಸಂಬಳದ ನಿರೀಕ್ಷೆ ಇಟ್ಟುಕೊಳ್ಳುವುದೂ ಸೂಕ್ತ ಅಲ್ಲ. ನಿಮಗೆ ಸ್ಥಳ ಹಾಗೂ ವ್ಯಕ್ತಿಗಳ ಬದಲಾವಣೆ ಇರುತ್ತದೆ.
ವ್ಯಾಪಾರ- ವ್ಯವಹಾರಸ್ಥರಿಗೆ ಲಾಭ
ಇನ್ನು ವ್ಯಾಪಾರ ಹಾಗೂ ವ್ಯವಹಾರಸ್ಥರ ವಿಚಾರದ ಬಗ್ಗೆ ಹೇಳುವುದಾದರೆ ಹೆಚ್ಚಿನ ಲಾಭ ಗಳಿಸುತ್ತಾರೆ. ಆದರೆ ಆ ಲಾಭ ಅವರ ಕೈ ಸೇರಲು ಬಹಳ ತಡ ಆಗುತ್ತದೆ. ಇಷ್ಟು ಕಾಲ ಹೇಗಿದ್ದಿರೋ ಏನೋ ಈಗಂತೂ ಜಿಪುಣತನ ನಿಮಗೆ ಅರಿವಿಲ್ಲದಂತೆ ಹೆಚ್ಚಾಗುತ್ತದೆ. ಅಳೆದು- ತೂಗಿ ನೋಡಿ ಖರ್ಚು ಮಾಡುತ್ತೀರಿ.
ವರ್ಷದ ಮಧ್ಯ ಭಾಗದಲ್ಲಿ ವಿವಾಹ ಸಾಧ್ಯತೆ
ಅವಿವಾಹಿತರಿಗೆ ವಿವಾಹ ವಿಚಾರ ವರ್ಷದ ಮಧ್ಯಭಾಗದಲ್ಲಿ ಚಿಗುರುವ ಸಾಧ್ಯತೆಗಳು ಹೆಚ್ಚಿವೆ. ಆದರೆ ವಿವಾಹದ ವಿಚಾರದಲ್ಲಿ ನಿಮ್ಮ ಆಣತಿಗಿಂತ ಇತರರ ಮಾತಿಗೆ ಹೆಚ್ಚು ಮನ್ನಣೆ ಲಭಿಸುತ್ತಿರುವುದು ಕಾಣುತ್ತೀರಿ. ನಿಮ್ಮ ಮಾತು ಕೇಳದೆ ಬೇರೆಯವರ ಅಭಿಪ್ರಾಯದಂತೆ ತಲೆ ಅಲ್ಲಾಡಿಸಬೇಕಾದ ಸನ್ನಿವೇಶ ಎದುರಾಗುತ್ತದೆ.
ವಿದೇಶ ಪ್ರಯಾಣದ ಅವಕಾಶ
ವಿದೇಶ ಪ್ರಯಾಣ ವಿಚಾರ ಸಹ ಹೆಚ್ಚು-ಕಡಿಮೆ ಅದೇ ಸಮಯದಲ್ಲಿ ಬರುವ ಸಾಧ್ಯತೆಗಳು ಇವೆ. ಆದರೆ ಅದು ಬರುವ ಹೊತ್ತಿಗೆ ನಿಮಗೆ ಆ ವಿದೇಶ ಪ್ರಯಾಣ ವಿಚಾರದಲ್ಲಿ ಇದ್ದ ಆಸಕ್ತಿ ಕಡಿಮೆ ಆಗಿರುತ್ತದೆ. ನಿಮ್ಮದು ನಿರೀಕ್ಷೆಗಳು ಆಕಾಶದೆತ್ತರ. ಅದನ್ನು ನೀವು ನಿಗ್ರಹಿಸಿದಲ್ಲಿ ಆಗುತ್ತಿರುವ ಒಳಿತು ಅನುಭವಕ್ಕೆ ಬರುತ್ತದೆ.
ಮಾರ್ಗದರ್ಶನ ಇದ್ದರೆ ಹೂಡಿಕೆ ಮಾಡಿ
ಉತ್ತಮ ಮಾರ್ಗದರ್ಶನ ಇದ್ದಲ್ಲಿ ನಿಯಮಿತವಾಗಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಬಹುದು. ವ್ಯಾಪಾರ ಸಹ ಅಷ್ಟೇ, ಹೂಡಿಕೆ ನಿಮ್ಮ ಸಾಮರ್ಥ್ಯ ಮೀರದಿದ್ದಲ್ಲಿ ಹಾಗೂ ಆಲಸ್ಯ ಬಿಟ್ಟು ಶ್ರದ್ದೆಯಿಂದ ದುಡಿದಲ್ಲಿ ದೇವರ ಸಹಕಾರ ಚೆನ್ನಾಗಿ ಇದೆ. ಲಾಭವನ್ನು ಕಾಣಬಹುದು.
ಸ್ತ್ರೀಯರಿಗೆ ವಿಶೇಷ ಫಲ
ಸ್ತ್ರೀಯರಿಗೆ ಬಹಳ ವಿಶೇಷವಾದ ಶುಭ ಫಲಗಳು ಲಭಿಸುತ್ತವೆ. ಸಂತಾನ ಮಾತ್ರ ನಿಮಗೆ ನಿಧಾನ ಆಗುತ್ತದೆ. ವರ್ಷದ ಆದಿಯಲ್ಲಿ ನಿಮ್ಮ ಪ್ರಯತ್ನ ಇದ್ದರೆ ಗರ್ಭಿಣಿ ಆಗಿರುವ ಖಾತ್ರಿ ತಿಳಿಯಲು ಸಹ ಬಹಳ ತಿಂಗಳು ಹಿಡಿಯುತ್ತವೆ. ಆದರೆ ಶುಭ ವಾರ್ತೆಯಂತೂ ಕೇಳುತ್ತೀರಿ, ಈ ವಿಚಾರವಾಗಿ ಖಿನ್ನರಾಗುವ ಅಗತ್ಯವಿಲ್ಲ.
ಏಕಾಗ್ರತೆಯನ್ನು ಕುದುರಿಸಿಕೊಳ್ಳಿ
ವಿದ್ಯಾರ್ಥಿಗಳಿಗೆ ಇದು ಶುಭ ಸಮಯ. ಇಷ್ಟು ಕಾಲ ಆಲಸ್ಯ ಮಾಡಿದ್ದರೆ ಅಥವಾ ನಿರ್ಲಕ್ಷ್ಯ ಧೋರಣೆ ಇದ್ದರೆ ಇನ್ನು ಬಿಟ್ಟುಬಿಡಿ. ಸ್ವಲ್ಪ ಮಟ್ಟಿಗೆ ಏಕಾಗ್ರತೆಯನ್ನು ಕುದುರಿಸಿಕೊಂಡರೂ ಒಳ್ಳೆ ಫಲವನ್ನೇ ಪಡೆಯಬಹುದು. ನಿಮ್ಮನ್ನು ಅಚ್ಚರಿಯಿಂದ ನೋಡುವಂಥ ಸಾಧನೆ ಮಾಡುತ್ತೀರಿ. ಅದಕ್ಕೆ ಮಾನಸಿಕವಾಗಿ ನೀವು ಸಿದ್ಧರಾಗಬೇಕಷ್ಟೇ.
ಪರಿಹಾರ ಏನು?
ಸಂತಾನ ಅಪೇಕ್ಷೆ ಇರುವ ದಂಪತಿ ಶನಿ ಶಾಂತಿ ಸಹಿತ ಸಂತಾನ ಗೋಪಾಲ ಜಪ ಹವನ ಮಾಡಿಸಬೇಕು. ಮಿಕ್ಕವರು ಅಘೋರಾಸ್ತ್ರ ಹವನ ಮಾಡಿಸುವ ಅಗತ್ಯ ಇದೆ. ಏನೋ ಸಮಸ್ಯೆ ಆಗಿ ನಂತರ ಅದರ ಪರಿಹಾರಕ್ಕಾಗಿ ಅಘೋರಾಸ್ತ್ರ ಹವನ ಮಾಡಿಸುವ ಬದಲು ಮೊದಲೇ ಆ ಪರಿಹಾರ ಮಾಡಿಸಿಕೊಳ್ಳುವುದು ಉತ್ತಮ.
ಪಂಡಿತ್ ವಿಠ್ಠಲ ಭಟ್ ಸಂಪರ್ಕ ಸಂಖ್ಯೆ 9845682380, ಇಮೇಲ್ ಐಡಿ- [email protected]