ನಿದ್ರಿಸುವ ಜಾಯಮಾನದವರಿಗೆ ಚಂದ್ರ ಗ್ರಹಣ ಅಪಾಯ, ಎಚ್ಚರ!
ಜನವರಿ 31ಕ್ಕೆ ಖಗ್ರಾಸ ಚಂದ್ರಗ್ರಹಣ. ಆಶ್ಲೇಷಾ ನಕ್ಷತ್ರದಲ್ಲಿ ಚಂದ್ರನಿಗೆ ರಾಹು ಗ್ರಹಣ. ಅಂದರೆ ಚಂದ್ರನೇನೂ ಗ್ರಹಣ ಬಾಧಿತನಾಗುವುದಿಲ್ಲ ಅಥವಾ ಮಲಿನವೂ ಆಗುವುದಿಲ್ಲ. ಆದರೆ ಅಷ್ಟು ಹೊತ್ತು ಚಂದ್ರ ರಶ್ಮಿಗಳು ಭೂಮಿಗೆ ವಂಚಿತವಾಗುತ್ತದೆ. ಗ್ರಹಣದ ಫಲಗಳನ್ನು ತಿಳಿದುಕೊಳ್ಳಬೇಕು ಎಂಬ ಕುತೂಹಲದಿಂದ ಇರುವವರಿಗೆ ಈ ಲೇಖನ ಉತ್ತಮ ಮಾಹಿತಿ ಒದಗಿಸುತ್ತದೆ.
ಚಂದ್ರ ಅಂದರೆ ಮನೋಕಾರಕ. ಆದ್ದರಿಂದ ಮನುಷ್ಯನ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಂದರೆ existing nature ಇರುವವರಿಗೆ ಇನ್ನಷ್ಟು ಆ ಪ್ರಕೃತಿಯು ಉದ್ದೀಪನಗೊಳ್ಳುತ್ತದೆ. ಹೆಂಡ ಕುಡಿಯದೆಯೇ ತೂರಾಡುವವನು ಹೆಂಡ ಕುಡಿದರೆ ಹೇಗಾದೀತು? ಅತಿಯಾಗಿ ನಿದ್ರಿಸುವ ಜಾಯಮಾನದವರಿಗೆ, ಸಭೆ ಸಮಾರಂಭಗಳೆನ್ನದೆ ವೇದಿಕೆಯಲ್ಲೇ ತೂಕಡಿಸುವ ಮನುಷ್ಯರಿಗೆ ಅಪಾಯವಿದೆ.
ಅವರ ನಿದ್ರಾ ಪ್ರವೃತ್ತಿಯನ್ನು ಇನ್ನಷ್ಟು ಉದ್ದೀಪನಗೊಳಿಸುತ್ತದೆ. ಅದರಲ್ಲೂ ಆಶ್ಲೇಷಾ ನಕ್ಷತ್ರ ಇರುವ ಇಂತಹ ನಿದ್ರಾಸಕ್ತರು, ದಶಾಧಿಪ ಆಶ್ಲೇಷಾ ನಕ್ಷತ್ರದಲ್ಲಿದ್ದರೂ ಇದು ದುಷ್ಪರಿಣಾಮ ಬೀರಬಹುದು. ಅದಕ್ಕಾಗಿ ಆ ದಿನ ಮಧ್ಯಾಹ್ನದ ನಂತರ ಉಪವಾಸವಿದ್ದು, ಘಟ ಶುದ್ಧಿಯಿಂದ ಇದ್ದರೆ ತುಂಬಾ ಕ್ಷೇಮವಿದೆ.
ನಿದ್ರಾಪ್ರಿಯರೇ ಎಚ್ಚರ
ಅತಿ ನಿದ್ರೆಯು ನರಮಂಡಲಗಳ ದೌರ್ಬಲ್ಯಕ್ಕೆ ಕಾರಣವಾಗುತ್ತದೆ. ಹಾಗಾಗಿ ಇಂತಹ ನಿದ್ರಾಪ್ರಿಯರು ಎಚ್ಚರದಿಂದ ಇದ್ದರೆ ಕ್ಷೇಮ. ಇನ್ನು ಇದು ಸಿಂಹ ರಾಶಿ, ಅದರ ತ್ರಿಕೋನ ರಾಶಿಗಳಾದ ಮೇಷ, ಧನುಸ್ಸು ರಾಶಿಗಳವರಿಗೂ ಪರಿಣಾಮ ಬೀರುತ್ತದೆ. ಕರ್ಕಾಟಕ ರಾಶಿಗೂ ಪರಿಣಾಮವಿದೆ.
ಜಪ-ತಪ ಅನುಷ್ಠಾನ
ಈ ಗ್ರಹಣ ಪರ್ವ ಕಾಲದಲ್ಲಿ ಜಪಾನುಷ್ಟಾನ, ಪ್ರವಚನ ಶ್ರವಣ, ಪ್ರಾಣಾಯಾಮ ಧ್ಯಾನ, ಅವರವರ ಐಚ್ಛಿಕ ಸಂಶೋಧನೆ, ವಿದ್ಯಾರ್ಥಿಗಳು ಅವರವರ syllabus study ಇತ್ಯಾದಿಗಳನ್ನು ಮಾಡಿದರೆ ಅದು ವಿಶೇಷ ಪರಿಣಾಮ ಬೀರುತ್ತದೆ. ದುಃಖ, ಹೊಡೆದಾಟ, ಹಿಂಸೆಗಳ ಸಿನಿಮಾ, ಧಾರಾವಾಹಿ ನೋಡಿದರೆ ದುಷ್ಪರಿಣಾಮ ಖಂಡಿತಾ.
ಕಾರ್ಯ ಸಾಧನೆಗೆ ಮಾಧ್ಯಮ
ಯಾಕೆಂದರೆ ಆ ಗ್ರಹಣ ಕಾಲವು ನಮ್ಮ ನಮ್ಮ ಭಾವನೆಗಳನ್ನು ಉದ್ದೀಪನಗೊಳಿಸುವ ಕಾಲವಾಗಿರುತ್ತದೆ. ಒಟ್ಟಿನಲ್ಲಿ ಶರೀರ ಮಾಧ್ಯಂ ಖಲು ಧರ್ಮ ಸಾಧನಂ ಎಂಬಂತೆ ಶರೀರದ ಸೌಖ್ಯವೇ ಸಕಲ ಕಾರ್ಯ ಸಾಧನೆಗೆ ಮಾಧ್ಯಮವಾಗುತ್ತದೆ.
ಗ್ರಹಣ ಕಾಲ ಹಾಗೂ ಆಹಾರ ಸೇವನೆ
ಸ್ಪರ್ಶ ಕಾಲ- ಸಂಜೆ 5.22 (ಭಾರತೀಯ ಕಾಲ ಮಾನ)
ಮಧ್ಯ ಕಾಲ- ರಾತ್ರಿ 7.04
ಅಂತ್ಯ ಕಾಲ- ರಾತ್ರಿ 8.46.
ಗ್ರಹಣ ಮುಗಿದ ಬಳಿಕ ಚಂದ್ರದರ್ಶನ, ಸ್ನಾನಾದಿಗಳನ್ನು ಮಾಡಿ ರಾತ್ರಿ 9 ಗಂಟೆಯ ನಂತರ ಲಘುವಾದ ಹಣ್ಣಿನ ರಸ ಅಥವಾ ಹಣ್ಣು ಸೇವಿಸಿದರೆ ಆರೋಗ್ಯಕರ.