ಕೇಂದ್ರ ಬಜೆಟ್ 2018 : ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ
Recommended Video
ನಾಳಿನ ಬಜೆಟ್ (ಗುರುವಾರ) ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರ ಮಂಡಿಸುವ ಕೊನೆ ಪೂರ್ಣ ಪ್ರಮಾಣದ ಬಜೆಟ್ ಇದು. ಕೇಂದ್ರ ಬಜೆಟ್ ನಲ್ಲಿ ಏನೇನು ತೀರ್ಮಾನ ತೆಗೆದುಕೊಳ್ಳಬಹುದು ಅನ್ನೋದನ್ನು ಜ್ಯೋತಿಷ್ಯದ ಹಿನ್ನೆಲೆಯಲ್ಲಿ ತಿಳಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ.
ಮೊದಲನೇ ಅಂಶ ಮೊದಲಿಗೆ ತಿಳಿಸಿ ಬಿಡ್ತೀನಿ. ನಾಳಿನ ಬಜೆಟ್ ತೀರಾ ಗಟ್ಟಿ ಅಂಶಗಳನ್ನು ಒಳಗೊಂಡ, ಆಳವಾದ ಆಲೋಚನೆಗಳಿಂದ ಹೊರಬಂದಂಥದ್ದಾಗಿರುತ್ತದೆ. ಈ ವರೆಗಿನ ಎಲ್ಲ ಬಜೆಟ್ ಗಳಿಗಿಂತ ಹೆಚ್ಚು ಗಂಭೀರವಾದ ವಿಚಾರಗಳನ್ನು ಇದು ಒಳಗೊಂಡಿರುತ್ತದೆ ಎಂಬುದರಲ್ಲಿ ಯಾವ ಅನುಮಾನವೂ ಬೇಡ.
ಆದಾಯ ತೆರಿಗೆ ಇಳಿಕೆ? ಬಜೆಟ್ ನಿಂದ ನಿರೀಕ್ಷಿಸಬಹುದಾದ 9 ಸಂಗತಿಗಳು
ಉಳಿದಂತೆ ರೈಲ್ವೆ ಬಜೆಟ್ ಕೂಡ ನಾಳೆಯೇ ಮಂಡನೆ ಮಾಡುವುದರಿಂದ ಆ ಬಗ್ಗೆ ಕೂಡ ತಿಳಿಸಲಾಗಿದೆ. ಹೇಗಿದ್ದರೂ ಇನ್ನೊಂದು ದಿನ ಬಾಕಿ ಇದೆ. ಇಂಥ ಸಂದರ್ಭದಲ್ಲಿ ಭವಿಷ್ಯವನ್ನು ನುಡಿಯುವುದು ಸವಾಲೇ ಸರಿ. ಅದನ್ನು ಸ್ವೀಕರಿಸಿ, ತಿಳಿಸಲಾಗುತ್ತಿದೆ. ಯಾರಿಗೆ ಅನುಕೂಲ- ಯಾರಿಗೆ ಸವಾಲು ಎಂಬುದನ್ನು ಮುಂದೆ ತಿಳಿದುಕೊಳ್ಳಿ.
ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಪ್ರೋತ್ಸಾಹ
ಕೃಷಿ ಉತ್ಪನ್ನಗಳ ಮಾರುಕಟ್ಟೆ ಬಗ್ಗೆ ಪ್ರಮುಖ ನಿರ್ಧಾರ ಆಗುತ್ತದೆ. ಈ ವರೆಗೆ ಕೃಷಿಗೆ ಸಂಬಂಧಿಸಿದ ಸಮಸ್ಯೆಗಳು ಏನಿದ್ದವು ಆ ಪೈಕಿ ಬಹುತೇಕ ಪರಿಹಾರ ಕಾಣುತ್ತವೆ. ಇದರರ್ಥ ಕೃಷಿಕರಿಗೆ ಪುಕ್ಕಟೆ ಕೊಡುಗೆಗಳು ಸಿಗುತ್ತವೆ, ಯೋಜನೆಗಳು ಬರುತ್ತವೆ ಅಂತಲ್ಲ. ಆದರೆ ಕೃಷಿ ಚಟುವಟಿಕೆಯನ್ನು ಪ್ರೋತ್ಸಾಹಿಸುವಂಥ ಹಾಗೂ ಕೃಷಿಗೆ ನೆರವಾಗುವಂಥ ಯೋಜನೆಗಳನ್ನು ರೂಪಿಸಲಾಗುತ್ತದೆ.
ನೀರಿಗೆ ಸಂಬಂಧಿಸಿದ ಯೋಜನೆಗಳು
ಇನ್ನು ನೀರಿಗೆ ಸಂಬಂಧಿಸಿದಂತೆ ಪ್ರಮುಖ ತೀರ್ಮಾನ ಹೊರಬರುತ್ತದೆ. ಕಾಲುವೆ-ಕೆರೆ ಕಟ್ಟೆ ನಿರ್ಮಾಣ, ಈಗಿರುವ ನದಿ ಸಮಸ್ಯೆಗಳಿಗೆ ಪರಿಹಾರ ಸೇರಿದಂತೆ ಕೃಷಿಗೆ ಪೂರಕವಾಗಿ ನೀರನ್ನು ಒದಗಿಸುವ ಯೋಜನೆಗಳಿಗೆ ಪ್ರಮುಖ ಆದ್ಯತೆ ದೊರೆಯುವ ಸಾಧ್ಯತೆ ಇದೆ.
ಯಾವುದು ಏರಿಕೆ- ಯಾವುದು ಇಳಿಕೆ
ಏಕದಳ ಧಾನ್ಯಗಳ ಬೆಲೆ ಏರಿಕೆ ಆದೀತು. ತೆಂಗಿನಕಾಯಿ, ಅಡಿಕೆ, ಕಾಫಿ ಇತ್ಯಾದಿಗಳ ಬೆಲೆ ಏರಿಕೆ ಆಗಬಹುದು. ಚಿನ್ನದ ಬೆಲೆ ಕಡಿಮೆ ಆಗುವ ಸಾಧ್ಯತೆ ಇದ್ದು, ಷೇರು ಮಾರುಕಟ್ಟೆಗೆ ಪೂರಕವಾದ ವಾತಾವರಣ ನಿರ್ಮಾಣ ಆಗುತ್ತದೆ.
ದೊಡ್ಡ ಪ್ರಮಾಣದಲ್ಲಿ ಭೂಮಿ ಮೇಲೆ ಹೂಡಿದವರಿಗೆ ತೊಂದರೆ
ರಿಯಲ್ ಎಸ್ಟೇಟ್ ವಲಯದಲ್ಲಿ ಯಥಾ ಸ್ಥಿತಿ ಮುಂದುವರಿಯುವ ಸಾಧ್ಯತೆ ಗೋಚರಿಸುತ್ತಿದ್ದು, ದೊಡ್ಡ ಬದಲಾವಣೆ ನಿರೀಕ್ಷೆ ತರವಲ್ಲ. ಆದರೆ ದೊಡ್ಡ ಪ್ರಮಾಣದಲ್ಲಿ ಭೂಮಿ ಮೇಲೆ ಹೂಡಿಕೆ ಮಾಡಿದವರಿಗೆ ತೊಂದರೆ ಕಾಣಿಸುತ್ತದೆ. ಈ ಬಗ್ಗೆ ಹೊಸ ಕಾನೂನು- ಕಾಯಿದೆ ಬರಬಹುದು.
ಪೆಟ್ರೋಲ್- ಡೀಸೆಲ್ ಬೆಲೆ ಇಳಿಕೆ ನಿರೀಕ್ಷೆ ಬೇಡ
ಪೆಟ್ರೋಲ್- ಡೀಸೆಲ್ ಬೆಲೆ ಇಳಿಯಬಹುದು ಎಂಬ ನಿರೀಕ್ಷೆ ಬೇಡ. ಖಾದ್ಯ ತೈಲಗಳ ಬೆಲೆ ಇಳಿಕೆ ಆಗಬಹುದು. ಇನ್ನು ಧಾನ್ಯಗಳ ರಫ್ತು ವ್ಯವಹಾರಕ್ಕೆ ಪ್ರೋತ್ಸಾಹ ನೀಡುವಂಥ ಕೆಲಸ ಆಗುತ್ತದೆ. ಅವಶ್ಯಕ ವಸ್ತುಗಳ ಸುಂಕದಲ್ಲಿ ಕಡಿಮೆ ಮಾಡಬಹುದು. ಇದು ಜನರಿಗೆ ಅನುಕೂಲವಾದ ಬಜೆಟ್ ಆಗುತ್ತದೆ. ಸಿನಿಮಾ ರಂಗಕ್ಕೆ ಹೆಚ್ಚಿನ ಅನುಕೂಲ ಆಗುತ್ತದೆ (ಕಲಾತ್ಮಕ ಸಿನಿಮಾಕ್ಕೆ ಪೂರಕವಾದ ವಾತಾವರಣ ಸೃಷ್ಟಿ ಆಗುತ್ತದೆ).