ಶಿವನಿಗೆ ಯಾವ ಅಭಿಷೇಕ ಮಾಡಿದರೆ ಯಾವ ಫಲ?
ಶಿವನಿಗೆ ನಾನಾ ರೀತಿಯಲ್ಲಿ ಅಭಿಷೇಕ ಮಾಡುತ್ತಾರೆ. ಒಂದೊಂದು ರೀತಿಯ ಅಭಿಷೇಕಕ್ಕೆ ಒಂದೊಂದು ಫಲ ಎಂಬುದು ನಂಬಿಕೆ. ಅಭಿಷೇಕದಿಂದ ದೊರೆಯುವ ಫಲಗಳನ್ನು ವಿವರಿಸುವ ಲೇಖನ ಇಲ್ಲಿದೆ
ವಿಷ್ಣು ಅಲಂಕಾರಪ್ರಿಯ, ಶಿವ ಅಭಿಷೇಕಪ್ರಿಯ. ಆದ್ದರಿಂದ ಮನಸ್ಸಿನಲ್ಲಿ ಇಷ್ಟಾರ್ಥ ಸಿದ್ಧಿಗೆ ಹಾಗೂ ಪ್ರಾರ್ಥನೆ ನೆರವೇರುವುದಕ್ಕೆ ಶಿವನಿಗೆ ಯಾವ ಅಭಿಷೇಕ ಮಾಡಿದರೆ ಯಾವ ಫಲ ಎಂದು ಇಂದಿನ ಲೇಖನದಲ್ಲಿ ತಿಳಿಸಿಕೊಡಲಾಗುವುದು. ಈ ಅಭಿಷೇಕಗಳಿಗೆ ಮಹತ್ವ ಇರುವುದು ಹೌದಾದರೂ ಈ ಬಗ್ಗೆ ಯಾವುದೇ ಪ್ರಮಾಣ ಅಥವಾ ಪ್ರಸ್ತಾವ ಇದ್ದಂತಿಲ್ಲ.
ಅದರೆ, ಅನುಭವ ಜನ್ಯವಾಗಿ ಹಾಗೂ ಬಾಯಿಂದ ಬಾಯಿಗೆ ಹರಡುತ್ತಾ ಇಂಥ ಅಭಿಷೇಕ ಮಾಡಿಸಿದರೆ ಇಂಥ ಫಲ ಎಂಬುದು ಪ್ರಚಲಿತಕ್ಕೆ ಬಂದಿದೆ. ಯಾವುದೇ ಶಿವ ದೇವಾಲಯದಲ್ಲಿ ಅಥವಾ ಅನುಕೂಲವಿದ್ದರೆ ಮನೆಯಲ್ಲಿ ಈ ಅಭಿಷೇಕವನ್ನು ಮಾಡಬಹುದು. ಶ್ರದ್ಧಾ-ಭಕ್ತಿ ಹಾಗೂ ನಂಬಿಕೆಯಿಂದ ಆ ಶಿವನ ಅರಾಧನೆ ಮಾಡಿದರೆ ಅನುಗ್ರಹಿಸುತ್ತಾನೆ ಎಂಬುದು ಆಸ್ತಿಕರ ನಂಬಿಕೆ.[ಹಣ ಸ್ಥಿರವಾಗಲು, ಲಕ್ಷ್ಮಿ ಕಟಾಕ್ಷಕ್ಕೆ ಇಲ್ಲಿವೆ ರಹಸ್ಯ ಸೂತ್ರಗಳು]
ಇನ್ನೇನು ಏಪ್ರಿಲ್ 29ಕ್ಕೆ ಅಕ್ಷಯ ತೃತೀಯ ಇದೆ. ಆ ದಿನ ಯಾವುದೇ ಶುಭ ಕಾರ್ಯಗಳನ್ನು ಮಾಡಿದರೆ ಅವುಗಳ ಫಲ ಅಕ್ಷಯವಾಗುತ್ತದೆ ಎಂಬುದು ನಂಬಿಕೆ. ದೇವತಾರಾಧನೆಯಾದರೂ ಸರಿ, ಮಾಡಿದರೆ ಅದರಿಂದ ಸಿಗುವ ಫಲ ಅಕ್ಷಯವಾಗುತ್ತದೆ. ಅಂದಹಾಗೆ ಶಿವನಿಗೆ ಯಾವುದರಿಂದ ಅಭಿಷೇಕ ಮಾಡಿದರೆ ಯಾವ ಫಲ ಎಂಬುದನ್ನು ತಿಳಿಯಲು ಮುಂದೆ ಓದಿ.
ಪಂಚಗವ್ಯ, ಪಂಚಾಮೃತ
ಪಂಚಗವ್ಯ(ಹಾಲು, ಮೊಸರು, ತುಪ್ಪ, ಗೋಮೂತ್ರ ಹಾಗೂ ಗೋಮಯದ ಮಿಶ್ರಣ) ದಿಂದ ಅಭಿಷೇಕ ಮಾಡಿದರೆ ಎಲ್ಲ ರೀತಿಯ ಮಾನವ ಪಾಪಗಳು ನಿವರಣೆಯಾಗುತ್ತವೆ. ಪಂಚಾಮೃತ (ಬಾಳೆಹಣ್ಣು, ಬೆಲ್ಲ, ಸಕ್ಕರೆ, ಖರ್ಜೂರ, ಜೇನು ಹಾಗೂ ಒಣಹಣ್ಣುಗಳು) ಅಭಿಷೇಕದಿಂದ ಶ್ರೀಮಂತಿಕೆ ಪ್ರಾಪ್ತಿಯಾಗುತ್ತದೆ. ತುಪ್ಪದ ಅಭಿಷೇಕದಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ.
ಹಾಲು-ಜೇನುತುಪ್ಪ
ಹಾಲಿನ ಅಭಿಷೇಕದಿಂದ ದೀರ್ಘಾಯುಷ್ಯ, ಜೇನುತುಪ್ಪದಿಂದ ಉತ್ತಮ ಧ್ವನಿ-ಸಂಗೀತ ಸಿದ್ಧಿ, ಅಕ್ಕಿ ಹಿಟ್ಟಿನಿಂದ ಋಣ ವಿಮೋಚನೆ, ಕಬ್ಬಿನ ಹಾಲಿನಿಂದ ಆರೋಗ್ಯ ಹಾಗೂ ಶತ್ರುನಾಶ, ನಿಂಬೆಹಣ್ಣಿನ ಪಾನಕದಿಂದ ಜೀವ ಭಯ ನಿವಾರಣೆ-ಆರೋಗ್ಯ ಚೇತರಿಕೆ, ಎಳನೀರಿನಿಂದ ಸಂತೃಪ್ತಿ, ಅನ್ನದಿಂದ ರಾಜ್ಯಪ್ರಾಪ್ತಿ.
ಗಂಧ-ನೀರಿನ ಅಭಿಷೇಕ
ಗಂಧದಿಂದ ಲಕ್ಷ್ಮಿ ಅನುಗ್ರಹ, ನೀರಿನಿಂದ ನೆಮ್ಮದಿ, ಎಳ್ಳೆಣ್ಣೆಯಿಂದ ಅಭಿಷೇಕ ಮಾಡಿದರೆ ಅಪಮೃತ್ಯು ಪರಿಹಾರ, ಅರಿಶಿನದಿಂದ ವಿವಾಹ ಭಾಗ್ಯ, ಹಸುವಿನ ಹಾಲಿನಿಂದ ನಾಗಭಯ ನಿವಾರಣೆ, ಮೊಸರನ್ನದಿಂದ ಅಲ್ಸರ್ ನಂಥ ಕಾಯಿಲೆ ನಿವಾರಣೆ, ತುಪ್ಪದಿಂದ ಆರ್ಥಿಕ ಅನುಗ್ರಹ, ಭಸ್ಮದಿಂದ ಮಹಾಪಾಪ ವಿನಾಶ, ಗಂಧದ ನೀರಿನಿಂದ ಮಕ್ಕಳ ಏಳ್ಗೆಯಾಗುತ್ತದೆ.
ಧಾನ್ಯ-ಗೃಹ ಅಭಿವೃದ್ಧಿ
ಪುಷ್ಪೋದಕದಿಂದ ಭೂ ಲಾಭ, ಬಿಲ್ವ ಜಲದಿಂದ ಭೋಗ-ಭಾಗ್ಯ, ದೂರ್ವೋದಕ (ಗರಿಕೆ)ದಿಂದ ನಷ್ಟ ದ್ರವ್ಯ ಪ್ರಾಪ್ತಿ, ರುದ್ರಾಕ್ಷೋದಕದಿಂದ ಮಹಾ ದ್ರವ್ಯ ಪ್ರಾಪ್ತಿ, ದ್ರಾಕ್ಷಿ ರಸದಿಂದ ಸಕಲ ಕಾರ್ಯ ಜಯ, ಕಸ್ತೂರಿ ನೀರಿನಿಂದ ರಾಜ್ಯ ಪ್ರಾಪ್ತಿ, ನವರತ್ನ ಜಲದಿಂದ ಧಾನ್ಯ-ಗೃಹ ಅಭಿವೃದ್ಧಿ, ಮಾವಿನಹಣ್ಣಿನ ರಸದಿಂದ ಅಭಿಷೇಕ ಮಾಡಿದರೆ ದೀರ್ಘಕಾಲೀನ ಸಮಸ್ಯೆಗಳು ನಿವಾರ್ಣೆಯಾಗುತ್ತವೆ.
ವಿಶೇಷ ಸೂಚನೆ
ಪೂಜೆ ಸಮಯದಲ್ಲಿ ಮೂರು ಎಲೆ ಇರುವ ಬಿಲ್ವಪತ್ರೆಯನ್ನೇ ಬಳಸಬೇಕು. ಕಂಚಿನಿಂದ ಮಾಡಿದ ಪಾತ್ರಗಳಲ್ಲಿ ಹಾಲು-ಮೊಸರು ಹಾಕಿ ಅಭಿಷೇಕ ಮಾಡಬಾರದು. ನೀರು, ಹಾಲು, ತುಪ್ಪ ಮತ್ತ್ಯಾವುದನ್ನೇ ಬಳಸುವಾಗ ಅದರಲ್ಲಿ ಬೆರಳನ್ನು ಅದ್ದಬಾರದು. ಕೇತಕಿ ಹಾಗೂ ಚಂಪಕ ಹೂವುಗಳನ್ನು ಬಳಸಕೂಡದು. ಅಭಿಷೇಕ ಮಾಡಿದ ನೀರನ್ನು ತುಳಸಿ ಗಿಡಕ್ಕೆ ಹಾಕಬಾರದು.