ಸಾವಿನ ನಂತರ ಮುಂದೇನು? ಆತ್ಮದ ಬಗೆಗಿನ ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ
Recommended Video
ಸಾವಿನ ನಂತರ ಮುಂದೇನು? ಈ ಪ್ರಶ್ನೆ ಒಂದಲ್ಲ ಒಂದು ಹಂತದಲ್ಲಿ ಕಾಡುತ್ತದೆ. ಆತ್ಮ ಹಾಗೂ ದೇಹ ಎರಡೂ ಬೇರೆ-ಬೇರೆ ಮತ್ತು ಆತ್ಮಕ್ಕೆ ಅಸ್ತಿತ್ವ ಇದೆ ಎಂದು ಒಪ್ಪಿದವರಿಗೆ ಈ ಬಗ್ಗೆ ತಮ್ಮದೇ ಆದ ಕೆಲ ನಂಬಿಕೆಗಳಿರುತ್ತವೆ. ಆ ಪ್ರಕಾರವೇ ಹೇಳಬೇಕು ಅಂದರೆ, ದೇಹಕ್ಕೆ ಆತ್ಮ ಹಾಗೂ ಆತ್ಮಕ್ಕೆ ದೇಹ ಬೇಕೇಬೇಕು. ಇದು ಪರಸ್ಪರ ಅವಲಂಬನೆ.
ಒಂದು ಸಲ ದೇಹದಿಂದ ಜೀವ ಹೋದ ನಂತರ ಏನಾಗುತ್ತದೆ ಎಂಬುದೇ ಮುಖ್ಯ ಪ್ರಶ್ನೆ. ದೇಹವನ್ನು ಕಳೆದುಕೊಂಡ ಆತ್ಮ ತನ್ನ ಪ್ರಯಾಣ ಆರಂಭಿಸಬೇಕಾಗುತ್ತದೆ. ಈ ಭೂಮಿ ಮೇಲೆ ಬರುವುದಕ್ಕೆ ಕಾರಣವಾದ ಕೆಲಸಗಳನ್ನೆಲ್ಲ ಮುಗಿಸಿದ ತೃಪ್ತಿ ಇರುವ ಆತ್ಮಗಳು ಅವುಗಳ ಪಾಪ ಹಾಗೂ ಪುಣ್ಯಗಳ ಲೆಕ್ಕಾಚಾರದಲ್ಲಿ ಸ್ವರ್ಗ ಅಥವಾ ನರಕವನ್ನು ಸೇರುತ್ತವೆ.
ದೆಹಲಿಯಲ್ಲಿ 11 ಜನರ ನಿಗೂಢ ಆತ್ಮಹತ್ಯೆ ಮತ್ತು ಪ್ರಳಯದ ಸಂದೇಶ!
ಇಲ್ಲ, ಈ ಭೂಮಿಯ ಮೇಲಿನ ಯಾವುದಾದರೂ ವಿಷಯ- ವಸ್ತುಗಳ ಮೇಲೆ ಮೋಹ- ಆಸೆ ಬೆಳೆಸಿಕೊಂಡ ಅತೃಪ್ತ ಆತ್ಮಗಳು ಇಲ್ಲಿಂದ ಪ್ರಯಾಣವನ್ನು ಮಾಡುವುದೇ ಇಲ್ಲ. ಆತ್ಮಕ್ಕೆ ಯಾವುದೇ ಹಾನಿ ಮಾಡಲು ಆಗಲ್ಲ ಎಂಬ ನಂಬಿಕೆ ಇದ್ದರೂ ಸ್ವರ್ಗ -ನರಕಗಳಲ್ಲಿ ಆಯಾ ಜೀವದ ಪಾಪ- ಪುಣ್ಯಗಳಿಗೆ ತಕ್ಕಂತೆ ಸುಖ ಮತ್ತು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
ಸ್ವರ್ಗ- ನರಕ ಪ್ರಾಪ್ತಿ
ಕೆಲವು ಆತ್ಮಗಳು ಭೂಮಿ ಮೇಲೆ ಮಾಡಬೇಕಾದ ಕೆಲಸಗಳು ಬಾಕಿ ಇರುವುದರಿಂದ ಮತ್ತೆ ಮತ್ತೆ ಹುಟ್ಟುತ್ತವೆ. ಅಂಥ ಕೆಲಸಗಳನ್ನು ಜವಾಬ್ದಾರಿ ಅಥವಾ ಲೋಕೋದ್ಧಾರ ಹೀಗೆ ಕೂಡ ಕರೆಯಬಹುದು. ಸತ್ಕಾರ್ಯ, ಸತ್ಕರ್ಮ, ಸದ್ವಿಚಾರದ ಚಿಂತನೆ ಮಾಡುವ ಜೀವದ ಆತ್ಮಗಳು ಸದ್ಗತಿಯನ್ನು ಹೊಂದಿದರೆ, ಇನ್ನೊಬ್ಬರಿಗೆ ತೊಂದರೆ ಕೊಟ್ಟು, ತಮ್ಮ ಲಾಭದ ಬಗ್ಗೆಯೇ ಯೋಚಿಸುವ ದುಷ್ಟ ಜೀವದ ಆತ್ಮಗಳು ಅದಕ್ಕೆ ತಕ್ಕ ಶಿಕ್ಷೆ ಅನುಭವಿಸುತ್ತವೆ.
ಮೋಕ್ಷ ಪ್ರಾಪ್ತಿಗೆ ಯಾರ ಅನುಗ್ರಹ?
ಜ್ಞಾನಿಗಳು ಹಾಗೂ ಆತ್ಮದ ಬಗ್ಗೆ ಜ್ಞಾನ ಹೊಂದಿದವರು ಮೋಕ್ಷದ ಬಗ್ಗೆ ಚಿಂತಿಸುತ್ತಾರೆ. ಮೋಕ್ಷ ಅಂದರೆ ಹುಟ್ಟು ಹಾಗೂ ಸಾವುಗಳಿಲ್ಲದ ಸ್ಥಿತಿ. ಆ ಪರಮಾತ್ಮನಲ್ಲಿ ಐಕ್ಯವಾಗುವಂಥ ಆ ಸ್ಥಿತಿಯನ್ನು ಪಡೆಯುವುದು ಅಷ್ಟು ಸುಲಭವೂ ಅಲ್ಲ. ಮೋಕ್ಷವನ್ನು ದಯಪಾಲಿಸುವ ಶಕ್ತಿ ಇರುವುದು ಆ ಮಹಾ ವಿಷ್ಣುವಿಗೆ ಮಾತ್ರ ಎಂದು ಆಧ್ಯಾತ್ಮಿಕ ಚಿಂತಕರು ಹೇಳುತ್ತಾರೆ.
ಬಾಕಿ ಕೆಲಸ ಮುಗಿಸಲು ಮತ್ತೆ ಜನ್ಮ
ಇನ್ನು ಒಂದು ಜನ್ಮದಲ್ಲಿ ಯಾವುದಾದರೂ ನಿರ್ದಿಷ್ಟ ಸಾಧನೆಯ ಹಾದಿಯಲ್ಲಿ ಸಾಗಿ, ಬಹಳ ಪ್ರಯತ್ನದ ನಂತರವೂ ಆ ಸಾಧನೆ ಮಾಡಲಾಗಿದೆ ತೀರಿಕೊಂಡವರಿಗೆ ಮತ್ತೊಂದು ಅವಕಾಶ ಸಿಗುತ್ತದೆ. ಈ ಭೂಮಿಯ ಮೇಲೆ ಮತ್ತೆ ಹುಟ್ಟಿ ಹಿಂದಿನ ಜನ್ಮದಲ್ಲಿ ಬಾಕಿ ಉಳಿದಿದ್ದ ಕೆಲಸಗಳನ್ನು ಪೂರೈಸಬಹುದು.
ದೇಹ- ಜೀವಕ್ಕೆ ತೊಂದರೆ ಕೊಟ್ಟವರ ವಿರುದ್ಧ ಪ್ರತೀಕಾರ
ಇನ್ನು ಕೆಲವು ಆತ್ಮಗಳು ತಾನು ಇದ್ದ ದೇಹ ಹಾಗೂ ಜೀವಕ್ಕೆ ತೊಂದರೆ ನೀಡಿದ್ದ ವ್ಯಕ್ತಿಗಳ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ಉದಾಹರಣೆ ಸಹ ಉಂಟು. ಅಂಥದ್ದನ್ನು ದೆವ್ವ- ಭೂತ ಕಾಟ ಎಂದು ಹೇಳುವವರೂ ಇದ್ದಾರೆ. ಆದರೆ ಆ ಸ್ಥಿತಿಯನ್ನು ಅರ್ಥೈಸಿಕೊಳ್ಳುವ ಬಗೆ ಹೀಗೆ. ಮತ್ತೊಬ್ಬರಿಗೆ ಹಿಂಸೆ ಕೊಡುವ ಮುನ್ನ ಇವೆಲ್ಲವನ್ನೂ ಯೋಚಿಸಿ, ಆಗ ನಮ್ಮಿಂದ ಆಗಬಹುದಾದ ತಪ್ಪು ಕೆಲಸಗಳು ತಡೆಯಲು ಸಾಧ್ಯವಿದೆ.