ಗ್ರಹ ಸಂಧಿ ಎಂದರೇನು? ಶಾಂತಿ ಮಾಡಿಸದಿದ್ದಲ್ಲಿ ಏನಾಗುತ್ತದೆ ಗೊತ್ತಾ?
ಬಹಳ ಮಂದಿ ತಮ್ಮ ಜಾತಕವನ್ನು ಜ್ಯೋತಿಷಿಗಳಿಗೆ ತೋರಿಸುವುದಕ್ಕೇ ಹೆದರುತ್ತಾರೆ. ಇನ್ನು ಭವಿಷ್ಯದ ಬಗ್ಗೆ ಕೇಳುವುದಕ್ಕೆ ಒಂದಕ್ಕೆ ನಾಲ್ಕು ಸಲ ಯೋಚಿಸುತ್ತಾರೆ. ಎಲ್ಲಿ ಯಾವುದೋ ದೋಷ ಹೇಳಿಬಿಡುತ್ತಾರೋ, ದೊಡ್ಡ ಮಟ್ಟದ- ವಿಪರೀತ ಖರ್ಚಿನ ಹೋಮ- ಹವನ ಮಾಡಿಸಿ ಎಂದು ಹೇಳುತ್ತಾರೋ ಎಂಬ ಅಂಜಿಕೆ ಅವರದು.
ಇದೇ ಕಾರಣಕ್ಕೆ ಸಮಸ್ಯೆ ಕುತ್ತಿಗೆಗೆ ಬಂದು ನಿಲ್ಲುವ ತನಕ ಜ್ಯೋತಿಷಿಗಳ ಬಳಿ ಹೋಗುವುದಿಲ್ಲ. ಇರಲಿ, ಇದು ಅವರವರ ಇಷ್ಟ. ಕನಿಷ್ಠ ಪಕ್ಷ ಮಾಡಿಸಿಕೊಳ್ಳಲೇ ಬೇಕಾದ ಗ್ರಹ ಶಾಂತಿಯನ್ನು ಮಾಡಿಸಿಕೊಳ್ಳುತ್ತಾರಾ ಅಂದರೆ, ಅದು ಇಲ್ಲ. ಏನಿದು ಕಡ್ಡಾಯವಾಗಿ ಮಾಡಿಸಲೇ ಬೇಕಾದ ಶಾಂತಿಪರಿಹಾರ ಎಂಬ ಪ್ರಶ್ನೆ ಮೂಡುತ್ತದೆ.
ಸಾಡೇ ಸಾತ್ ಶನಿಯಿಂದ ಯಾವ ವಯಸ್ಸಿನಲ್ಲಿ ಎಂಥ ಫಲ?
ಎಲ್ಲವನ್ನೂ ತಿಳಿಸಲು ಹೋಗುವುದಿಲ್ಲ. ಈ ಲೇಖನದಲ್ಲಿ 'ಸಂಧಿ ಶಾಂತಿ' ಬಗ್ಗೆ ಮಾತ್ರ ತಿಳಿಸಲಾಗುತ್ತದೆ. ಅದನ್ನು ತಿಳಿದುಕೊಂಡು, ಸರಿಯಾದ ಸಮಯಕ್ಕೆ ಶಾಂತಿ ಮಾಡಿಸಿಕೊಂಡರೆ ಬಹಳ ದೊಡ್ಡ ಮಟ್ಟದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಏನಿದು ಸಂಧಿ ಶಾಂತಿ, ಏಕೆ ಮಾಡಿಸಬೇಕು ಎಂಬಿತ್ಯಾದಿ ವಿವರಗಳಿಗೆ ಮುಂದೆ ಓದಿ.
ಏನಿದು ಗ್ರಹ ಸಂಧಿ?
ಯಾವುದೇ ವ್ಯಕ್ತಿಯ ಜಾತಕದಲ್ಲಿ ಗ್ರಹಗಳ ದಶೆ ಬದಲಾಗುವಾಗ ಈ 'ಸಂಧಿ ಶಾಂತಿ' ಮಾಡಲಾಗುತ್ತದೆ. ಹಾಗಂತ ಎಲ್ಲ ಗ್ರಹಗಳಿಗೂ ಮಾಡಿಸುವುದಿಲ್ಲ. ಕುಜ ದಶೆ ಮುಗಿದು ರಾಹು ದಶೆ ಆರಂಭ ಆಗುವಾಗ, ಇನ್ನು ರಾಹುವಿನ ದಶೆ ಮುಗಿದು ಗುರು ದಶೆಯ ಶುರುವಿನಲ್ಲಿ, ಶುಕ್ರ ದಶೆಯ ನಂತರ ರವಿ ದಶೆ ಶುರುವಿನಲ್ಲಿ ಶಾಂತಿ ಮಾಡಿಸಿಕೊಳ್ಳಲಾಗುತ್ತದೆ. ಇವುಗಳನ್ನು ಕುಜ- ರಾಹು ಸಂಧಿ ಶಾಂತಿ, ರಾಹು- ಬೃಹಸ್ಪತಿ ಸಂಧಿ ಶಾಂತಿ ಹಾಗೂ ಶುಕ್ರಾದಿತ್ಯ ಸಂಧಿ ಶಾಂತಿ ಎನ್ನಲಾಗುತ್ತದೆ. ಜನ್ಮ ಜಾತಕದಲ್ಲಿ ದಶಾ- ಭುಕ್ತಿ ವಿವರಗಳು ಇರುತ್ತವೆ. ಅದರಲ್ಲಿ ನೋಡಿದಾಗ ಈ ಸಂಧಿ ಸಮಯ ಯಾವುದು ಎಂದು ತಿಳಿಯುತ್ತದೆ.
ಯಾವಾಗ ಶಾಂತಿ ಮಾಡಿಸಬೇಕು?
ಕುಜ ದಶೆ ಮುಗಿದು ಇನ್ನೇನು ರಾಹು ದಶೆ ಶುರುವಾಗುತ್ತದೆ ಎಂದಾಗ ಆರು ತಿಂಗಳ ಮುಂಚೆ ಈ ಕುಜ-ರಾಹು ಸಂಧಿ ಶಾಂತಿ ಮಾಡಿಸಿಕೊಳ್ಳಬೇಕು. ಶಾಂತಿ ಮಾಡಿಸಿಕೊಳ್ಳುವ ದಿನದಂದು ಜಾತಕರ ಜನ್ಮ ನಕ್ಷತ್ರವೇ ಇದ್ದರೆ ಉತ್ತಮ. ಇದೇ ರೀತಿಯಾಗಿ ರಾಹು ದಶೆ ಮುಗಿದು ಗುರು ದಶೆ ಶುರುವಾಗುವ ಮತ್ತು ಶುಕ್ರ ದಶೆ ಮುಗಿದು ರವಿ ದಶೆ ಆರಂಭಕ್ಕೂ ಆರು ತಿಂಗಳು ಮೊದಲು ಕಡ್ಡಾಯವಾಗಿ ಶಾಂತಿ ಮಾಡಿಸಿಕೊಳ್ಳಬೇಕು. ಈ ವಿಚಾರದಲ್ಲಿ ವಿಚಾರ ತಿಳಿದ ಜ್ಯೋತಿಷಿಗಳು ಮತ್ತು ಪುರೋಹಿತರ ನೆರವು ಪಡೆದು, ಮುಂದುವರಿಯುವುದು ಉತ್ತಮ.
ಜ್ಯೋತಿಷ್ಯ: ಮಕರ ರಾಶಿಯಲ್ಲಿ ಗುರು- ಶನಿ ಇರುವಾಗ ಏನೆಲ್ಲ ಆಗಬಹುದು?
ಏನೇನು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ?
ಕುಜ-ರಾಹು ಸಂಧಿಯ ಸಮಯದಲ್ಲಿ ಆ ಜಾತಕರಿಗೆ ವಿವಿಧ ರೀತಿಯ ಸಂಕಷ್ಟಗಳು ತಲೆದೋರುತ್ತವೆ. ಅಗ್ನಿ ಅವಘಡ, ವಿದ್ಯಾಭ್ಯಾಸಕ್ಕೆ ಅಡಚಣೆ, ಅವಮಾನ ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇನ್ನು ರಾಹು ಬೃಹಸ್ಪತಿ ಗ್ರಹ ಸಂಧಿ ಸಮಯದಲ್ಲಿ ಶಸ್ತ್ರಚಿಕಿತ್ಸೆ, ಆಪ್ತರು ಅಗಲುವುದು, ಭೂಮಿ ನಷ್ಟ ಸೇರಿದಂತೆ ಇತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮುಖ್ಯವಾಗಿ ಆರೋಗ್ಯ ಸಮಸ್ಯೆಗಳು, ಅಪಘಾತ ಸಾಧ್ಯತೆಗಳು ಇರುತ್ತವೆ. ಶುಕ್ರ ದಶೆ ಮುಗಿದು ರವಿ ದಶೆ ಆರಂಭವಾಗುವಾಗ ಹೃದಯಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆ, ಪಿತ್ರಾರ್ಜಿತವಾದ ಆಸ್ತಿ ನಷ್ಟ, ವ್ಯಾಪಾರದಲ್ಲಿ ನಷ್ಟ ಇತ್ಯಾದಿ ಫಲಗಳನ್ನು ಅನುಭವಿಸಬೇಕಾಗುತ್ತದೆ.
ಲಗ್ನದಿಂದ ಎಷ್ಟನೇ ಮನೆಯಲ್ಲಿ ಗ್ರಹಗಳಿವೆ ಎಂಬುದು ಗಮನಿಸಿ
ಜನ್ಮ ಜಾತಕದಲ್ಲಿ ಕುಜ, ರಾಹು, ಗುರು, ಶುಕ್ರ ಮತ್ತು ರವಿ ಯಾವ ಸ್ಥಾನಗಳಲ್ಲಿ ಇದ್ದಾರೆ ಎಂಬುದನ್ನು ಸಹ ಗಮನಿಸಬೇಕಾಗುತ್ತದೆ. ಲಗ್ನದಿಂದ ಎಷ್ಟನೇ ಸ್ಥಾನದಲ್ಲಿ ಆ ಗ್ರಹಗಳು ಸ್ಥಿತವಾಗಿವೆ ಎಂಬುದರ ಆಧಾರದಲ್ಲಿ ಅದರ ಕಾರಕತ್ವವನ್ನು ನೋಡಿಕೊಂಡು, ಅದಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಹ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ಈ ಗ್ರಹ ಸಂಧಿ ಶಾಂತಿಗಳನ್ನು ಒಂದು ಕಡೆ ಬರೆದಿಟ್ಟುಕೊಳ್ಳಿ. ಆ ಸಮಯಕ್ಕೆ ಸರಿಯಾಗಿ ಈ ಬಗ್ಗೆ ಜ್ಞಾನ ಇರುವ ಪುರೋಹಿತರ ಮೂಲಕ ಶಾಂತಿ ಮಾಡಿಸಿಕೊಳ್ಳಿ.