ಶೋಭಕೃತ್ ನಾಮ ಸಂವತ್ಸರದ ಉತ್ತರಾಯಣ ಶಿಶಿರ ಋತು ಫಾಲ್ಗುಣ ಮಾಸದ ಶುದ್ಧ ಅಷ್ಟಮಿಯಿಂದ ಚತುರ್ದಶಿಯವರೆಗೂ ಅಂದರೆ
ಈ ವಾರದ ಚಂದ್ರನ ಸಂಚಾರ ಮೃಗಶಿರಾ ನಕ್ಷತ್ರದ ದಿಂದ ಪೂರ್ವಾಫಾಲ್ಗುಣಿ ವರೆಗೆ
17/03/2024 ರಿಂದ 23/03/2024 ವಾರಭವಿಷ್ಯ
ಪ್ರತಿ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಮಾರ್ಚ್ 17ರಿಂದ ಮಾರ್ಚ್ 23 ವರೆಗೆ ಹೊಸ ಯೋಜನೆಗಳು, ಶಿಕ್ಷಣ, ವಿದೇಶ ಪ್ರವಾಸ, ಹಣಕಾಸು, ಆಸ್ತಿ-ಅಂತಸ್ತು ವಿಚಾರದಲ್ಲಿ ಎಲ್ಲಾ 12 ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ತಿಳಿಯೋಣ.
ಮೇಷ ರಾಶಿಯ ವಾರ ಭವಿಷ್ಯ
ಶನಿ, ಶುಕ್ರ, ಮಂಗಳ ಲಾಭಸ್ಥಾನದಲ್ಲಿ ಧನಲಾಭ, ಭೂಮಿಲಾಭವನ್ನು ಕೊಡುತ್ತಾರೆ. ಶನಿ ನಿಮ್ಮ ಕೆಲಸಕ್ಕೆ ಇರುವ ಅಡೆತಡೆಗಳನ್ನು ದೂರ ಮಾಡುತ್ತಾನೆ. ವ್ಯಯಸ್ಥಾನದಲ್ಲಿ ರಾಹು ಸೂರ್ಯ ಬುಧ ಇರುವುದು ಅಷ್ಟು ಒಳ್ಳೆಯದಲ್ಲ. ತಂದೆಯ ಆರೋಗ್ಯಕ್ಕೆ ಹಾನಿ ಇದೆ. ನಿಮ್ಮ ರಾಶಿಯಲ್ಲೇ ಇರುವ ಗುರು ಕೂಡ ಕಿರಿಕಿರಿಯನ್ನೇ ಕೊಡುತ್ತಾನೆ. ಒಳ್ಳೆಯ ದಿನಗಳು ಈಗಲೂ ಇವೆ ಆದರೆ ಪರಿಪಕ್ವವಾಗಿ ಸಿಗಲು ಇನ್ನೂ ಸ್ವಲ್ಪ ದಿನ ಕಾಯಬೇಕಿದೆ.
ವೃಷಭ ರಾಶಿಯ ವಾರ ಭವಿಷ್ಯ
ಹತ್ತನೇ ಮನೆಯಲ್ಲಿ ಮಂಗಳ, ಶನಿ ಶುಕ್ರ ಒಳ್ಳೆಯ ಫಲಗಳನ್ನು ನೀಡುತ್ತಾರೆ. ವೃತ್ತಿಯಲ್ಲಿ ಪ್ರಗತಿಇದೆ. ನಿಮ್ಮ ಮೇಲಾಧಿಕಾರಿಯ ಅಭಯ ಹಸ್ತ ನಿಮಗೆ ಇದ್ದೇ ಇರುತ್ತದೆ. ಇದರಿಂದ ನಿಮಗೆ ಹಲವಾರು ಲಾಭಗಳಿವೆ. ವೃತ್ತಿಯಲ್ಲಿ ಅನುಕೂಲಗಳಿವೆ. ಲಾಭಸ್ಥಾನದಲ್ಲಿ ರಾಹು ಸೂರ್ಯ ಬುಧ ನಿಮಗೆ ಧನಲಾಭವನ್ನು ಕೊಡುತ್ತಾರೆ. ಲಾಭಸ್ಥಾನದ ಸೂರ್ಯ ರಾಹುವಿನಿಂದ ನಿಮಗೆ ಅತಿಹೆಚ್ಚಿನ ಶುಭ ಫಲಗಳಿವೆ.
ಮಿಥುನ ರಾಶಿಯ ವಾರ ಭವಿಷ್ಯ
ಒಂಬತ್ತರಲ್ಲಿ ಶನಿ ಮಂಗಳ ಶುಕ್ರರಿಂದ ತಕ್ಕಷ್ಟು ಶುಭಫಲಗಳು ಇದೆ. ಆದರೆ ಲಾಭಸ್ಥಾನದ ಗುರು ನಿಮಗೆ ಬಹುದೊಡ್ಡ ಶಕ್ತಿ. ಗುರುಬಲ ಇದ್ದರೆ ಏನನ್ನಾದರೂ ಸಾಧಿಸಬಹುದು. ಗುರು ನಿಮ್ಮ ಕೆಲಸ ಕಾರ್ಯಗಳನ್ನು ಸುಗಮ ಮಾಡಿಕೊಡುತ್ತಾನೆ. ಅಡೆತಡೆಗಳನ್ನು ನಿವಾರಿಸಿ ದಾರಿ ಸುಗಮ ಮಾಡುತ್ತಾನೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ಕೆಲಸದಲ್ಲಿ ಬಡ್ತಿ ಇದೆ. ಗುರುವಿನ ಅನುಗ್ರಹದಿಂದ ಸಕಲವೂ ಶುಭವಾಗುತ್ತದೆ
ಕಟಕ ರಾಶಿಯ ವಾರ ಭವಿಷ್ಯ
ಎಂಟನೇ ಮನೆಯಲ್ಲಿ ಶನಿ ಕುಜ ಇರುವುದು ಕೊಂಚ ಆತಂಕಕ್ಕೆ ಕಾರಣವಾಗುತ್ತದೆ ಆದರೆ ಇವರ ಜೊತೆ ಶುಕ್ರ ಇರುವುದರಿಂದ ಆತಂಕ ನಿವಾರಣೆ ಕೂಡ ಇದೆ. ದೊಡ್ಡದಾಗಿ ಬಂದದ್ದು ಹಗುರವಾಗಿ ಪರಿಹಾರ ಆಗುತ್ತದೆ. ಇನ್ನು ಮುಂದಿನ ದಿನಗಳಲ್ಲಿ ಗುರುಬಲ ಬರುವುದರಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಅವಿವಾಹಿತರಿಗೆ ಇನ್ನೆರಡು ತಿಂಗಳ ನಂತರ ವಿವಾಹ ಯೋಗ ಇದೆ. ಒಂಬತ್ತರಲ್ಲಿ ಸೂರ್ಯ ರಾಹು ಇರುವುದು ತಂದೆಯ ಆರೋಗ್ಯಕ್ಕೆ ಒಳ್ಳೆಯದಲ್ಲ
ಸಿಂಹ ರಾಶಿಯ ವಾರ ಭವಿಷ್ಯ
ಏಳನೇ ಮನೆಯಲ್ಲಿ ಶುಕ್ರ ಶನಿ ಕುಜ ಇದ್ದಾರೆ. ಸಂಗಾತಿಯ ಆರೋಗ್ಯದಲ್ಲಿ ಸಣ್ಣ ಏರುಪೇರುಇದೆ. ಒಂಬತ್ತರಲ್ಲಿ ಗುರು ನಿಮಗೆ ಭಾಗ್ಯಗಳನ್ನು ಸಿಗುವಂತೆ ಮಾಡುತ್ತಾನೆ. ಎಂಟರಲ್ಲಿ ಸೂರ್ಯ ರಾಹು ಸೇರಿ ನಿಮಗೆ ಸಣ್ಣ ಸಣ್ಣ ವಿಷಯಗಳಲ್ಲೂ ಟೆನ್ಷನ್ ಆಗುವಂತೆ ಮಾಡುತ್ತಾರೆ. ಆದಷ್ಟು ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಿ. ಮೆದುಳುಗೆ ಕಣ್ಣಿಗೆ ಹಾನಿಯಾಗಂತೆ ಎಚ್ಚರಿಕೆ ವಹಿಸಿ. ವಾರದ ಮೊದಲಲ್ಲಿ ಚಂದ್ರ ಉಚ್ಚನಾಗಿದ್ದು ನಿಮಗೆ ವೃತ್ತಿಯಲ್ಲಿ ಕೀರ್ತಿ ಸಿಗುವಂತೆ ಮಾಡುತ್ತಾನೆ.
ಕನ್ಯಾ ರಾಶಿಯ ವಾರ ಭವಿಷ್ಯ
ಆರರಲ್ಲಿ ಶನಿ ಕುಜ ನಿಮಗೆ ಅಗಣಿತ ಧನಲಾಭ ಮಾಡಿಕೊಡುತ್ತಾರೆ. ಆರರಲ್ಲಿ ಇರುವ ಶುಕ್ರನಿಂದ ಕೊಂಚ ಅನಾರೋಗ್ಯ. ಏಳರಲ್ಲಿ ಸೂರ್ಯ ಬುಧ ರಾಹು ಇರುವುದು ಅಷ್ಟು ಶ್ರೇಯಸ್ಕರವಲ್ಲದಿದ್ದರೂ ಬುಧ ಇರುವುದು ಎಷ್ಟೋ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ವಾರದ ಮೊದಲಲ್ಲಿ ಪುಣ್ಯಕ್ಷೇತ್ರ ದರ್ಶನ ಇದೆ. ದಾನ ಧರ್ಮ ಮಾಡುವಯೋಗ ಇದೆ. ಮೈಮೇಲೆ ಹರಿತವಾದ ಆಯುಧದಿಂದ ಗಾಯ ಆಗಬಹುದು ಜಾಗ್ರತೆಯಿಂದ ಇರಿ.
ತುಲಾ ರಾಶಿಯ ವಾರ ಭವಿಷ್ಯ
ಪಂಚಮಶನಿಯ ಪ್ರಭಾವ ಬಹಳ ಇದೆ. ಕೊಂಚ ಉಸಿರುಕಟ್ಟುವಷ್ಟು ವಾತಾವರಣ. ಹಣಕಾಸಿನ ಬಿಗಿ ಹಿಡಿತಕ್ಕೆ ಸಿಕ್ಕು ನರಳುತ್ತೀರಿ. ಆದರೆ ಗುರುಬಲ ಇದೆ. ಸಂಕಟಗಳಿಗೆ ಪರಿಹಾರವೂ ಒದಗಿಬರುತ್ತದೆ. ಆರರಲ್ಲಿ ಸೂರ್ಯ ರಾಹು ಕೂಡ ನಿಮ್ಮ ಧನ ಬಲವನ್ನು ಹೆಚ್ಚಿಸುವವರೇ ಆಗಿದ್ದಾರೆ.ಆದರೂ ಇಕ್ಕಟ್ಟಿನ ಪರಿಸ್ಥಿತಿ. ಹೂವೂ ಹಾವಾಗುವಂತಹ ಸಂದರ್ಭ. ಜಾಗ್ರತೆಯಿಂದ ಇರಿ. ಯಾವುದೇ ಘರ್ಷಣೆ ಯಾರೊಂದಿಗೂ ಬೇಡ. ಒಳ್ಳೆಯ ದಿನಗಳು ಖಂಡಿತಾ ಮುಂದೆ ಇದೆ.
ವೃಶ್ಚಿಕ ರಾಶಿಯ ವಾರ ಭವಿಷ್ಯ
ಗುರು ಆರನೇ ಮನೆಯಲ್ಲಿ ಮಾನಸಿಕವಾಗಿ ಕುಗ್ಗಿಸುತ್ತಾನೆ. ಹಣಕಾಸಿನ ಅಡಚಣೆಯೂ ಇದೆ. ಸುಖ ಸ್ಥಾನದಲ್ಲಿ ಶನಿ, ಶುಕ್ರ ಕುಜ ಇದ್ದಾರೆ.
ವಾಹನದಿಂದ ವಿದ್ಯುತ್ ಉಪಕರಣಗಳಿಂದ, ಶಕ್ತಿಗೆ ಸಂಬಂಧಿಸಿದ ಸಂಗತಿಗಳಿಂದ ಲಾಭ ಇದೆ. ಭೂಮಿ ಕೊಳ್ಳುವ ಯೋಗ ಇದೆ. ಹೊಸ ವಾಹನ ಖರೀದಿಯೂ ಇದೆ. ವೃತ್ತಿಯಲ್ಲಿ ಒಳ್ಳೆಯ ಬದಲಾವಣೆ ಇದೆ. ಮಕ್ಕಳಿಂದ ಮನಸ್ಸಿಗೆ ನಿರಾಸೆ ಆಗುತ್ತದೆ. ಮಕ್ಕಳ ಮಾತು ನಿಮ್ಮ ಮನಸ್ಸು ನೋಯಿಸಬಹುದು. ಸ್ವಲ್ಪ ದಿನಗಳು ಕಳೆದರೆ ಸಂಕಟ ಪರಿಹಾರವಾಗಿ ನೆಮ್ಮದಿ ದೊರೆಯುತ್ತದೆ.
ಧನಸ್ಸು ರಾಶಿಯ ವಾರ ಭವಿಷ್ಯ
ತಾಯಿಯೊಂದಿಗೆ ವಿರಸ ಅಥವಾ ಜಗಳ ಇದೆ.ಮನಸ್ಸಿಗೆ ನೋವಾಗುತ್ತದೆ. ಸುಖ ಸ್ಥಾನದಲ್ಲಿ ರಾಹು ಇದ್ದು ನೆಮ್ಮದಿಯಾಗಿ ಇರಲು ಏನೋ ಒಂದು ಕಿರಿಕಿರಿ ಇರುತ್ತದೆ. ವಾಹನದಿಂದ ನಷ್ಟ ಇದೆ. ವಾಹನ ರಿಪೇರಿಯೂ ಬರಬಹುದು. ಮೂರನೇ ಮನೆಯ ಶನಿ, ಕುಜ, ಶುಕ್ರ ನಿಮಗೆ ಧನಲಾಭ ಕೊಡಿಸುತ್ತಾರೆ. ಐದನೇ ಮನೆಯ ಗುರು ಮನೆಯಲ್ಲಿ ಶುಭಕಾರ್ಯ ಮಾಡಿಸುತ್ತಾನೆ. ಮನಸ್ಸಿಗೆ ಮುದ ಕೊಡುವ ಸಂಗತಿಗಳುಇವೆ. ಮಕ್ಕಳಿಂದ ಸಂತೋಷ ಇದೆ. ಮಕ್ಕಳ ಪ್ರಗತಿ ನಿಮಗೆ ನೆಮ್ಮದಿ ಕೊಡುತ್ತದೆ.
ಮಕರ ರಾಶಿಯ ವಾರ ಭವಿಷ್ಯ
ತುಂಬಾ ಸಂಕಟದ ಸಮಯ. ಪರೀಕ್ಷೆಯ ಮೇಲೆ ಪರೀಕ್ಷೆಗಳು. ಧೃತಿಗೆಡುವಂತೆ ಮಾಡುವ ಸಮಸ್ಯೆಗಳು. ನಂಬಿಕೆಯೇ ಬುಡಮೇಲಾಗುವಂಥ ಪರಿಸ್ಥಿತಿಗಳು ಇರುತ್ತವೆ. ಕೊಂಚ ತಾಳ್ಮೆ ತಂದುಕೊಳ್ಳಿ. ಎದೆಗುಂದಬೇಡಿ. ಈಕಷ್ಟಗಳು ಶಾಶ್ವತವಲ್ಲ. ಒಳ್ಳೆಯ ದಿನಗಳನ್ನು ಖಂಡಿತಾ ಕಾಣುತ್ತೀರಿ. ನೀವು ಕಳೆದುಕೊಂಡ ಅಧಿಕಾರ ಪದವಿ ಸವಲತ್ತು ಮತ್ತೆ ಪಡೆಯುತ್ತೀರಿ. ಕೆಲವೇ ದಿನಗಳು ಮಾತ್ರ. ತಾಳ್ಮೆ ಇರಲಿ. ಕುಲದೇವತೆಯ ಪ್ರಾರ್ಥನೆ ಮಾಡಿಕೊಳ್ಳಿ.
ಕುಂಭ ರಾಶಿಯ ವಾರ ಭವಿಷ್ಯ
ನಿಮಗೆ ಒಳ್ಳೆಯ ದಿನಗಳು ಬರಲು ಕಾಯಬೇಕು. ಈಗ ಖರ್ಚು ವೆಚ್ಚಕ್ಕೆ ತಾಳಮೇಳ ಇಲ್ಲದಂತೆ ಆಗುತ್ತಿದೆ. ನೀವಂದುಕೊಂಡಂತೆ ಯಾವಕೆಲಸಗಳೂ ನಡೆಯುತ್ತಿಲ್ಲ. ನಿಮ್ಮ ಯೋಜನೆಗಳು ಉಲ್ಟಾಪಲ್ಟಾ ಆಗುತ್ತಿವೆ. ಕೆಲಸದ ಒತ್ತಡ ಹೆಚ್ವು ಇದೆ. ಮನೆಯಲ್ಲಿ ಸಣ್ಣ ಪುಟ್ಟ ಕಾರಣಕ್ಕೂ ಕಿರಿಕಿರಿ ಅಸಮಾಧಾನದ ಹೊಗೆ ಏಳುತ್ತದೆ. ಕೊಂಚ ತಾಳ್ಮೆ ವಹಿಸಿ. ಗುರುಗಳ ಪೂಜೆ ಮಾಡಿ. ರಾಘವೇಂದ್ರ ಅಥವಾ ದತ್ತಾತ್ರೇಯ ಗುಡಿಗೆ ಹೋಗಿ ಬನ್ನಿ. ಆರೋಗ್ಯ ಜೋಪಾನ. ಯಾರೊಂದಿಗೂ ಘರ್ಷಣೆ ಬೇಡ.
Recommended Video
ಮೀನ ರಾಶಿಯ ವಾರ ಭವಿಷ್ಯ
ಸಾಡೆಸಾತಿ ಶನಿ ಮಕರಕ್ಕೆ ಮುಗಿದಿದೆ. ಕುಂಭಕ್ಕೆ ಅರ್ಧಭಾಗದಲ್ಲಿದೆ ಆದರೆ ನೀವು ಇನ್ನೂ ಪ್ರಾರಂಭದಲ್ಲಿ ಇದ್ದೀರಿ. ಈಗ ಗುರುಬಲ ಇರುವುದರಿಂದ ಅದರ ಬಿಸಿ ನಿಮಗೆ ತಿಳಿಯುತ್ತಿಲ್ಲ. ಆದರೆ ಖರ್ಚುಗಳು ಹೇರಳವಾಗಿಇದೆ. ಆರೋಗ್ಯ ಏರುಪೇರಾಗುತ್ತದೆ. ಯಾವುದೇ ಮುಖ್ಯ ನಿರ್ಧಾರಗಳನ್ನು ಈಗಲೇ ತೆಗೆದುಕೊಳ್ಳಿ. ಮುಂದಿನ ದಿನಗಳಲ್ಲಿ ಗುರುಬಲ ಇಲ್ಲದೆ ಪರದಾಟ ಆಗುತ್ತದೆ. ಒತ್ತಡಗಳು ಸಾಮಾನ್ಯ, ಮನಸ್ಸಿಗೆ ನೋವಾಗುವಂತಹ ಘಟನೆಗಳು ನಡೆಯುತ್ತದೆ.
RECOMMENDED STORIES