ವಾಸ್ತು ಟಿಪ್ಸ್: ಈ 9 ವಸ್ತುಗಳು ಮನೆಯಲ್ಲಿದ್ದರೆ ಎಚ್ಚರ!
ಎಲ್ಲರಿಗೂ ಅಕ್ಷಯ ತೃತೀಯದ ಶುಭ ಕಾಮನೆಗಳನ್ನು ಹೇಳುತ್ತಾ, ಈ ದಿನ ಆಸಕ್ತಿಕರವಾದ ಸಂಗತಿಯೊಂದನ್ನು ನಿಮಗೆ ತಿಳಿಸಲಿದ್ದೇನೆ. ನನ್ನ ಬಳಿ ಜ್ಯೋತಿಷ್ಯ ಕೇಳಲು ಬರುವವರು ಪೈಕಿ ಹಲವರಿಗೆ ಗ್ರಹಗತಿಗಳು ಚೆನ್ನಾಗಿದ್ದರೂ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದವು. ಅದರಲ್ಲೂ ಸಾಂಸಾರಿಕ ಕಲಹ, ದಿಢೀರ್ ಆರ್ಥಿಕ ನಷ್ಟ, ದಾಂಪತ್ಯ ಸಮಸ್ಯೆ ಹೀಗೆ.
ಆಗ ಅವರ ಮನೆಯ ವಾಸ್ತು ಹೇಗಿದೆ ಅನ್ನೋದನ್ನು ನೋಡುವುದಕ್ಕೆ ತೆರಳುತ್ತಿದ್ದೆ. ಆಗ ನನ್ನ ಗಮನಕ್ಕೆ ಬಂದದ್ದು ಏನೆಂದರೆ, ಬಹಳ ಸಮಸ್ಯೆಗಳನ್ನು ಅವರು ದುಡ್ಡು ಕೊಟ್ಟು ತಂದು ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಕೆಲವು ತಮಗೆ ಆಪ್ತೇಷ್ಟರ ಕೊಟ್ಟ ವಸ್ತುಗಳು ಎಂದು ಮನೆಯಲ್ಲಿ ಇರಿಸಿಕೊಂಡು ಹಿಂಸೆ ಪಡುತ್ತಿದ್ದರು.
ಉತ್ತಮ ಸಂತಾನ ಬೇಕೆ? ಹಾಗಿದ್ರೆ ಈ ರೂಲ್ಸ್ ಪಾಲಿಸಿ
ಹೌದು, ವಾಸ್ತು ಶಾಸ್ತ್ರದ ಅನ್ವಯ ಕೆಲವು ವಸ್ತುಗಳನ್ನು ಯಾವ ಕಾರಣಕ್ಕೂ ಮನೆಯಲ್ಲಿ ಇಟ್ಟುಕೊಳ್ಳಬಾರದು. ಈ ವಿಚಾರವನ್ನು ನಿಮಗೆ ಒಳಿತಾಗಲಿ ಎಂಬ ಕಾರಣಕ್ಕೆ ಹೇಳುತ್ತಿದ್ದೇನೆ. ನನ್ನ ಸಂಬಂಧಿಕರು, ಪರಿಚಯಸ್ಥರ ಮನೆಯಲ್ಲಿ ವರ್ಷಗಟ್ಟಲೆಯಿಂದ ಆ ವಸ್ತು ಇದೆ. ಅವರಿಗೇನಾಗಿದೆ ಎಂದು ಪ್ರಶ್ನಿಸುವವರನ್ನು ಒಪ್ಪುವಂತೆ ಮಾಡುವುದು ನನ್ನ ಈ ಲೇಖನದ ಉದ್ದೇಶವಲ್ಲ.
ಈ ರೀತಿಯಾದದ್ದನ್ನು ಮನೆಯಲ್ಲಿ ಇಟ್ಟರೆ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸುವುದು ನನ್ನ ಧರ್ಮ. ಆ ಕೆಲಸ ಇಂದು ಮಾಡುತ್ತಿದ್ದೇನೆ.
ರಾಮಾಯಣ, ಮಹಾಭಾರತದ ಯುದ್ಧದ ಚಿತ್ರಗಳು
ರಾಮಾಯಣ ಹಾಗೂ ಮಹಾಭಾರತ ಮಹಾ ಕಾವ್ಯಗಳು. ನಮ್ಮೆಲ್ಲರ ಜೀವನದಲ್ಲೂ ಆ ಕಾವ್ಯದ ಮೂಲಕ ಹೇಳಿದ ನೀತಿಗಳು ಪ್ರಭಾವ ಬೀರುತ್ತಲೇ ಇವೆ. ಆದರೆ ರಾಮಾಯಣ ಹಾಗೂ ಮಹಾಭಾರತದ ಯುದ್ಧದ ಚಿತ್ರಗಳು, ಕಲಾಕೃತಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಹಾಗೆ ಮಾಡುವುದರಿಂದ ಕುಟುಂಬ ಸದಸ್ಯರಲ್ಲೇ ಸಾಮರಸ್ಯ ಹಾಳಾಗುತ್ತದೆ. ಕಲಹಗಳು ಏರ್ಪಡುತ್ತವೆ.
ಮುಳ್ಳಿನ ಗಿಡಗಳನ್ನು ಮನೆಯಲ್ಲಿ ಇರಬಾರದು
ಮನೆಯಲ್ಲಿ ಮುಳ್ಳಿನ ಗಿಡಗಳನ್ನು ಯಾವುದೇ ಕಾರಣಕ್ಕೂ ನೆಡಬಾರದು. ಈ ವಿಚಾರದಲ್ಲಿ ರೋಜಾ ಗಿಡಕ್ಕೆ ರಿಯಾಯಿತಿ ಇದೆ. ಉಳಿದಂತೆ ಬೇರೆ ಯಾವುದೇ ಮುಳ್ಳಿನ ಗಿಡಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಕೆಲವರು ನೋಡುವುದಕ್ಕೆ ಚೆನ್ನಾಗಿರುತ್ತದೆ ಎಂಬ ಕಾರಣಕ್ಕೆ ಸಣ್ಣ ಕುಂಡಗಳಲ್ಲಿ ಹಾಕಿಡುವುದು ಉಂಟು. ನೆನಪಿಡಿ, ಅಂಥ ಗಿಡಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ.
ನಕಾರಾತ್ಮಕ ಕಲಾಕೃತಿಗಳನ್ನು ಇಟ್ಟುಕೊಳ್ಳಬಾರದು
ನಕಾರಾತ್ಮಕ ಪರಿಣಾಮ ಬೀರಬಲ್ಲ ಕೆಲವು ಕಲಾಕೃತಿಗಳನ್ನು ಕೂಡ ಮನೆಯಲ್ಲಿ ಇರಿಸಿಕೊಳ್ಳಬಾರದು. ಉದಾಹರಣೆಗೆ ಹಣ್ಣ ಅಥವಾ ಹೂವು ಇಲ್ಲದ ಮರ, ಮುಳುಗುತ್ತಿರುವ ದೋಣಿ ಅಥವಾ ಹಡಗು, ಬೆತ್ತಲಾಗಿ ಕತ್ತಿಯಲ್ಲಿ ಹೊಡೆದಾಡುತ್ತಿರುವುದು, ಬೇಟೆ ಆಡುತ್ತಿರುವ ದೃಶ್ಯ, ಸೆರೆ ಹಿಡಿದ ಆನೆ, ವ್ಯಕ್ತಿ ದುಃಖ ಪಡುತ್ತಿರುವುದು ಅಥವಾ ಅಳುತ್ತಿರುವುದು. ಇಂಥ ಕಲಾಕೃತಿಗಳನ್ನು ಮನೆಯ ಗೋಡೆಗಳ ಮೇಲೆ ನೇತು ಹಾಕಬಾರದು.
ತಾಜ್ ಮಹಲ್ ಚಿತ್ರ, ಫೋಟೋ
ಇನ್ನು ಈ ವಸ್ತುವನ್ನು ಧರ್ಮದ ಆಧಾರದಲ್ಲಿ ಹೇಳುತ್ತಿರುವುದಿಲ್ಲ ಅನ್ನೋದನ್ನು ಮೊದಲಿಗೆ ಖಾತ್ರಿ ಪಡಿಸುತ್ತಿದ್ದೇನೆ. ಮನೆಯಲ್ಲಿ ತಾಜ್ ಮಹಲ್ ಚಿತ್ರವನ್ನೋ ಅಥವಾ ಶೋ ಪೀಸ್ ಅನ್ನೋ ಇಡಬಾರದು. ಅದಕ್ಕೆ ಕಾರಣ ಏನು ಅಂದರೆ, ಅದು ಸ್ಮಶಾನವನ್ನು ಪ್ರತಿನಿಧಿಸುತ್ತದೆ. ನಕಾರಾತ್ಮಕ ವಿಚಾರವನ್ನು ಪ್ರತಿನಿಧಿಸುತ್ತದೆ. ಇದನ್ನು ಮಮ್ತಾಜ್- ಷಾಜಹಾನ್ ರ ಪ್ರೇಮದ ಸಂಕೇತ ಅಂತ ಹೇಳುವುದು ಉಂಟು. ಆದರೆ ತಾಜ್ ಮಹಲ್ ನ ಫೋಟೋ, ಚಿತ್ರ ಅಥವಾ ಅದನ್ನು ಹೋಲುವ ವಸ್ತು ಸಾವು ಹಾಗೂ ನಕಾರಾತ್ಮಕತೆ ಸೂಚಿಸುತ್ತದೆ. ಇಂಥದ್ದು ಮನೆಯಲ್ಲಿದ್ದಾಗ ಬದುಕು ಕೂಡ ನಕಾರಾತ್ಮಕ ವಿಚಾರಕ್ಕೆ ಸಿಲುಕುತ್ತದೆ.
ಪ್ರಾಣಿ-ಪಕ್ಷಿಗಳ ಫೋಟೋ
ಹಂದಿ, ಹಾವು, ಕತ್ತೆ, ಹದ್ದು, ಗೂಬೆ, ಬಾವುಲಿ, ರಣಹದ್ದು, ಪಾರಿವಾಳ, ಕಾಗೆ ಮತ್ತಿತರ ಪ್ರಾಣಿ- ಪಕ್ಷಿಗಳ ಫೋಟೋ, ಚಿತ್ರಗಳನ್ನು ಮನೆಯಲ್ಲಿ ಇಡಬಾರದು. ಅದರಲ್ಲೂ ದಂಪತಿ ವಾಸಿಸುವ ಕೋಣೆಯಲ್ಲಿ ಪ್ರಾಣಿಗಳ ಚಿತ್ರವನ್ನೋ, ವಸ್ತುವನ್ನೋ ಯಾವ ಕಾರಣಕ್ಕೂ ಇಡಬಾರದು. ಇಂಥವನ್ನು ಇಟ್ಟರೆ ಮನೆಯಲ್ಲಿ ಸದಾ ಉದ್ವೇಗದ ಹಾಗೂ ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂಥ ವಾತಾವರಣ ಇರುತ್ತದೆ.
ಕ್ರೂರ ಪ್ರಾಣಿಗಳ ಕಲಾಕೃತಿಗಳು
ಮರದ ಅಥವಾ ಲೋಹದಲ್ಲಿ ಮಾಡಿದಂಥ ಭಯ ಮೂಡಿಸುವ ರಾಕ್ಷಸ ಮುಖದ ಕಲಾಕೃತಿಗಳು, ಹುಲಿ, ತೋಳ, ಕರಡಿ, ಸಿಂಹ, ನರಿ ಇತರೆ ವನ್ಯ ಪ್ರಾಣಿಗಳ ಕಲಾಕೃತಿಗಳು, ಚಿತ್ರಗಳನ್ನು ಮನೆಯಲ್ಲಿ ಇಡಬಾರದು.
ಒಡೆದ ಕನ್ನಡಿ, ಭಗ್ನವಾದ ವಿಗ್ರಹ
ಬಹಳ ಜನರ ಮನೆಯಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಮುರಿದ ಅಥವಾ ಭಗ್ನವಾದ ವಿಗ್ರಹಗಳು ಇರುತ್ತವೆ. ಅದೇ ರೀತಿ ಒಡೆದ ಕನ್ನಡಿಯನ್ನು ಬಳಸುತ್ತಿರುತ್ತಾರೆ. ಅಂಥದ್ದು ಮನೆಯಲ್ಲಿ ಇಟ್ಟುಕೊಳ್ಳುವುದು ಶುಭ ಸೂಚನೆಯಲ್ಲ.
ನಟರಾಜನ ಮೂರ್ತಿ ಅಥವಾ ಕಲಾಕೃತಿ
ನೃತ್ಯ ಭಂಗಿಯ ನಟರಾಜನ ಕಲಾಕೃತಿಯನ್ನು ನಾವು ಬಹುತೇಕ ಮನೆಗಳಲ್ಲಿ ಕಾಣುತ್ತೇವೆ. ಈ ಕಲಾಕೃತಿಗೆ ಹೇಗೆ ನೃತ್ಯವನ್ನು ಪ್ರತಿನಿಧಿಸುವ ಸ್ಥಾನ ಇದೆಯೋ, ಅದೇ ರೀತಿ ನಾಶವನ್ನು ಅಥವಾ ಲಯವನ್ನು ಸೂಚಿಸುವ ಸ್ವಭಾವ ಇದೆ. ಇದನ್ನು ತಾಂಡವ ನೃತ್ಯ ಎಂದು ಕರೆಯಲಾಗುತ್ತದೆ. ಆದ್ದರಿಂದ ಮನೆಯಲ್ಲಿ ನಟರಾಜನ ಮೂರ್ತಿ ಅಥವಾ ಕಲಾಕೃತಿ ಇರಿಸಿಕೊಳ್ಳಬಾರದು.
ನೀರಿನ ಕಾರಂಜಿ
ಕೆಲವರಿಗೆ ಮನೆಯಲ್ಲಿ ಅದ್ಭುತವಾದ ನೀರಿನ ಕಾರಂಜಿ ಇರಬೇಕೆಂಬ ಅಭಿಲಾಷೆ ಇರುತ್ತದೆ. ಆದರೆ ವಾಸ್ತು ಪ್ರಕಾರವಾಗಿ ಅಂಥ ಕಾರಂಜಿ ಇರಬಾರದು. ಅದು ತೇಲುವ ಗುಣವನ್ನು ಪ್ರತಿನಿಧಿಸುತ್ತದೆ. ಇದರರ್ಥ, ಮನೆಗೆ ಬಂದ ಸಂಪತ್ತು ಅಥವಾ ಹಣ ಬಹಳ ಕಾಲ ಉಳಿಯುವುದಿಲ್ಲ. ಕಾಲ ಕ್ರಮೇಣ ಅದು ಕಣ್ಮರೆ ಆಗುತ್ತದೆ ಎಂಬುದನ್ನು ಸೂಚಿಸುತ್ತದೆ.