ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Ugadi Bhavishya 2020 : ದ್ವಾದಶ ರಾಶಿಗಳ ಯುಗಾದಿ ಫಲಾಫಲ

By ಶ್ರೀನಿವಾಸ ಗುರೂಜಿ
|
Google Oneindia Kannada News

ಎಲ್ಲರಿಗೂ ಯುಗಾದಿ ಹಬ್ಬಕ್ಕೆ ಶುಭಾಶಯ. ಮಾರ್ಚ್ 25, 2020ಕ್ಕೆ ಶಾರ್ವರಿ ನಾಮ ಸಂವತ್ಸರದ ಆರಂಭವಾಗುತ್ತದೆ. ವಿಕಾರಿ ನಾಮ ಸಂವತ್ಸರವನ್ನು ದಾಟಿ ಮುಂದಕ್ಕೆ ಹೋಗುತ್ತೇವೆ. ಮುಂದಿನ ವರ್ಷದ ಏಪ್ರಿಲ್ 12ರ ತನಕ ಒಂದು ಸಂವತ್ಸರ. ಅಂದರೆ ಏಪ್ರಿಲ್ 12, 2021ರ ತನಕ ಶಾರ್ವರಿ ನಾಮ ಸಂವತ್ಸರ ಇರುತ್ತದೆ.

ಇನ್ನೂ ಒಂದು ತಿಂಗಳು ಸಮಯ ಇದ್ದರೂ ಬಹಳ ಮಂದಿಗೆ ತಮ್ಮ ರಾಶಿಗೆ ಯುಗಾದಿ ನಂತರ ಹೇಗಿರುತ್ತದೆ ಎಂಬ ಕುತೂಹಲ ಇರುತ್ತದೆ. ಆ ಬಗ್ಗೆ ವಿಪರೀತ ಫೋನ್ ಕರೆಗಳು ಸಹ ಬರಲು ಆರಂಭಿಸಿದ್ದರಿಂದ ಒಂದು ತಿಂಗಳ ಮುಂಚಿತವಾಗಿಯೇ ದ್ವಾದಶ ರಾಶಿಗಳ ಗೋಚಾರ ಫಲವನ್ನು ತಿಳಿಸುತ್ತಿದ್ದೇನೆ.

ಗುರು- ವರ್ಷಾದಿಯಿಂದ (ಯುಗಾದಿ) 29-3-2020ರ ತನಕ ಧನುಸ್ಸು ರಾಶಿಯಲ್ಲಿ ಸಂಚಾರ

29-3-2020ರಿಂದ 29-6-2020ರ ತನಕ ಮಕರ ರಾಶಿಯಲ್ಲಿ ಸಂಚಾರ

29-6-2020ರಿಂದ 20-11-2020ರ ತನಕ ಧನುಸ್ಸು ರಾಶಿಯಲ್ಲಿ ಸಂಚಾರ

20-11-2020ರಿಂದ 5-4-2021ರ ತನಕ ಮಕರ ರಾಶಿಯಲ್ಲಿ ಸಂಚಾರ

5-4-2021ರಿಂದ ಸಂವತ್ಸರದ ಕೊನೆ ತನಕ ಕುಂಭ ರಾಶಿಯಲ್ಲಿ ಸಂಚಾರ

ಶನಿ ಗ್ರಹ- ಸಂವತ್ಸರದ ಆರಂಭದಿಂದ ಕೊನೆ ತನಕ ಮಕರ ರಾಶಿಯಲ್ಲಿ ಸಂಚಾರ

ಇದು ಚಾಂದ್ರಮಾನ ಯುಗಾದಿಯನ್ನು ಅನುಸರಿಸಿದ ಫಲಾಫಲ. ಮುಖ್ಯವಾಗಿ ಗುರು- ಶನಿ ಗ್ರಹಗಳ ಸಂಚಾರವನ್ನು ಮಾತ್ರ ಪ್ರಮುಖವಾಗಿ ನೋಡಿಕೊಂಡು ಹೇಳಿರುವಂಥ ಫಲ. ಆಯಾ ವ್ಯಕ್ತಿಗಳ ದಶಾ- ಭುಕ್ತಿ, ಜಾತಕದ ಯೋಗಗಳು ಅದರದೇ ರೀತಿಯಲ್ಲಿ ಪ್ರಭಾವ ಬೀರುತ್ತವೆ. ಆದ್ದರಿಂದ ಯುಗಾದಿ ದ್ವಾದಶ ರಾಶಿಗಳ ಫಲವನ್ನು ನೀಡುತ್ತಿದ್ದೇನೆ. ಒಪ್ಪಿಸಿಕೊಳ್ಳಿ.

ಯಾವುದೇ ಮಾರ್ಗದರ್ಶನಕ್ಕೆ, ಸೂಕ್ತ ಜಾತಕ ವಿಶ್ಲೇಷಣೆಗೆ ವೈಯಕ್ತಿಕವಾಗಿ ಭೇಟಿಗೆ ಮೊಬೈಲ್ ಫೋನ್ ಸಂಖ್ಯೆ 9886665656- 9886155755 ಸಂಪರ್ಕಿಸಿ.

ವೆಬ್ಸೈಟ್ ವಿಳಾಸ : https://www.sadgurusai.in

 ಮೇಷ

ಮೇಷ

ಈ ವರ್ಷದ ಆರಂಭದ ಮೂರು ತಿಂಗಳು ಉದ್ಯೋಗದಲ್ಲಿ ಬಹಳ ಕಿರಿಕಿರಿ ಆಗುವ ಸಾಧ್ಯತೆ ಇದೆ. ಯಾವುದೇ ಕರ್ಮದಲ್ಲಿ ಆಸಕ್ತಿ ಕಳೆದುಕೊಳ್ಳುತ್ತೀರಿ. ನಿರೀಕ್ಷಿತ ಆದಾಯ ಇರುವುದಿಲ್ಲ. ವ್ಯಾಪಾರ- ವ್ಯವಹಾರದ ಸಲುವಾಗಿ ಸುಖಾಸುಮ್ಮನೆ ತಿರುಗಾಟ ಆಗುತ್ತದೆ. ಮುಖ್ಯವಾಗಿ ಹಣಕಾಸಿನ ವಿಚಾರದಲ್ಲಿ ಸವಾಲುಗಳನ್ನು ಎದುರಿಸುತ್ತೀರಿ. ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಸಾಲಗಾರರ ಕಾಟದಿಂದ ಮನಸ್ಸಿಗೆ ಆತಂಕ ಕಾಡುತ್ತದೆ. ಕೆಟ್ಟ ಕೆಲಸಗಳನ್ನು ಮಾಡಲು ಪ್ರೇರಣೆ ದೊರೆಯುತ್ತದೆ. ಕೃಷಿಕರಿಗೆ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ಪ್ರಗತಿ ಕಾಣುತ್ತಿದೆ. ಆದರೆ ಈ ಸಂವತ್ಸರದ ಕೊನೆಗೆ ಸಮಸ್ಯೆಗಳು ಕಡಿಮೆ ಆಗುತ್ತವೆ. ನೆಮ್ಮದಿ ಕಂಡುಕೊಳ್ಳುವುದಕ್ಕೆ ದಾರಿ ದೊರೆಯುತ್ತದೆ.

 ವೃಷಭ

ವೃಷಭ

ಈ ಸಂವತ್ಸರದಲ್ಲಿ ನಿಮಗೆ ಒಳಿತು- ಕೆಡಕುಗಳ ಮಿಶ್ರಣವಾದ ಫಲವನ್ನು ಕಾಣುವ ಯೋಗ ಇದೆ. ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವವರಿಗೆ ಅದನ್ನು ಪರಿಹರಿಸಿಕೊಳ್ಳುವುದಕ್ಕೆ ದಾರಿ ಗೋಚರಿಸುತ್ತದೆ. ಮನೆಯಲ್ಲಿ ದೇವತಾರಾಧನೆ, ಶುಭ ಕಾರ್ಯಗಳು ನಡೆಯುತ್ತವೆ. ಪ್ರಯತ್ನ ಪಟ್ಟ ಕಾರ್ಯಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಯಶಸ್ಸು ಕಾಣಲಿದ್ದೀರಿ. ಸರ್ಕಾರಕ್ಕೆ ಸಂಬಂಧಿಸಿದ ಕೆಲಸ- ಕಾರ್ಯಗಳಿಗೆ ಪ್ರಯತ್ನ ಮಾಡುತ್ತಿರುವವರಿಗೆ ನಿಧಾನ ಗತಿಯಲ್ಲಿ ಆಗುತ್ತದೆ. ಆದರೆ ಕುಟುಂಬದಲ್ಲಿ ಮನೆಯ ಹಿರಿಯರು, ಅದರಲ್ಲೂ ತಂದೆಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಜತೆಗೆ ಖರ್ಚು ನಿಭಾಯಿಸುವುದು ಸಹ ಕಷ್ಟವಾಗುತ್ತದೆ. ಈ ಕಾರಣದಿಂದ ಬಹಳ ಚಿಂತೆ ಮತ್ತು ಬೇಸರಕ್ಕೆ ಒಳಗಾಗುತ್ತೀರಿ.

 ಮಿಥುನ

ಮಿಥುನ

ನಿಮ್ಮ ಬಗ್ಗೆ ಇತರರಲ್ಲಿ ಅಸಮಾಧಾನ, ಅಸಂತುಷ್ಟತೆ ಮೂಡುತ್ತದೆ. ಕುಟುಂಬ ಸದಸ್ಯರ ಅನಾರೋಗ್ಯ, ಸ್ವತಃ ನಿಮ್ಮದೇ ಅನಾರೋಗ್ಯ ಚಿಂತೆಗೆ ಕಾರಣವಾಗುತ್ತದೆ. ಉದ್ಯೋಗ ಸ್ಥಳದಲ್ಲಿ ನಾನಾ ಬಗೆಯ ಕಿರಿಕಿರಿ ಎದುರಿಸುತ್ತೀರಿ. ಕೆಲವರು ಕೆಲಸವನ್ನು ಬಿಡುವ ಸಾಧ್ಯತೆ ಕೂಡ ಇದೆ. ಮುಖ್ಯವಾದ ದಾಖಲೆ, ಪತ್ರಗಳು, ಬೆಲೆ ಬಾಳುವ ವಸ್ತು- ವಾಹನಾದಿಗಳನ್ನು ಜೋಪಾನ ಮಾಡಿಕೊಳ್ಳಿ. ಸರ್ಕಾರಿ ಕಾಂಟ್ರ್ಯಾಕ್ಟ್ ವ್ಯವಹಾರಗಳನ್ನು ಮಾಡುವವರಿಗೆ ಬರಬೇಕಾದ ಹಣ ಸಮಯಕ್ಕೆ ಸರಿಯಾಗಿ ಕೈ ಸೇರುವುದಿಲ್ಲ. ಜೂನ್ ನಂತರ ಸ್ವಲ್ಪ ಮಟ್ಟಿಗೆ ಪರಿಸ್ಥಿತಿ ಪರವಾಗಿಲ್ಲ. ಆದರೆ ಪೂರ್ಣಪ್ರಮಾಣದಲ್ಲಿ ಅಲ್ಲ, ನೆನಪಿರಲಿ.

 ಕರ್ಕಾಟಕ

ಕರ್ಕಾಟಕ

ಸಂವತ್ಸರದ ಆರಂಭದ ಮೂರು ತಿಂಗಳು ಸ್ವಲ್ಪ ಮಟ್ಟಿಗೆ ಪರವಾಗಿಲ್ಲ. ಅಂದರೆ ವೈವಾಹಿಕ ಸುಖ- ಸಂತೋಷ, ಪಾರ್ಟನರ್ ಷಿಪ್ ವ್ಯವಹಾರಗಳಲ್ಲಿ ಯಶಸ್ಸು ಇತ್ಯಾದಿ ಕಾಣುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಈ ವರ್ಷ ಆರು ತಿಂಗಳು ಚೆನ್ನಾಗಿದ್ದರೆ, ಆರು ತಿಂಗಳು ಚೆನ್ನಾಗಿಲ್ಲ ಎಂಬ ಸ್ಥಿತಿ ನಿಮ್ಮದು. ವಿಪರೀತ ಅಲೆದಾಟ. ವರ್ಗಾವಣೆ, ಪರಸ್ಥಳ ವಾಸ, ಮನಸಿಗೆ ಬೇಸರ ಇತ್ಯಾದಿ ಅಶುಭ ಫಲಗಳನ್ನು ಕಾಣಲಿದ್ದೀರಿ. ವಿಪರೀತ ಖರ್ಚು- ವೆಚ್ಚಗಳು ಆಗಲಿವೆ. ಖರ್ಚಿಗೆ ತಕ್ಕಂತೆ ಫಲಿತಾಂಶ ಸಿಗುವುದಿಲ್ಲ. ಸರ್ಕಾರಕ್ಕೆ ಸಂಬಂಧಿಸಿದ ಕೆಲಸ- ಕಾರ್ಯಗಳು ವಿಳಂಬ ಆಗುತ್ತವೆ. ಇದರಿಂದ ಸಾಲ ಮಾಡಿಯಾದರೂ ನಿಮ್ಮ ಜವಾಬ್ದಾರಿಗಳನ್ನು ಪೂರೈಸಬೇಕಾಗುತ್ತದೆ.

 ಸಿಂಹ

ಸಿಂಹ

ಸಂತಾನ ಅಪೇಕ್ಷಿತ ದಂಪತಿಗೆ ಶುಭ ಸುದ್ದಿ, ವಿದೇಶ ಪ್ರಯಾಣ, ವಸ್ತ್ರಾಭರಣ, ಸೈಟು- ಮನೆ ಖರೀದಿ ಇತ್ಯಾದಿ ಶುಭ ಫಲಗಳಿವೆ. ವ್ಯಾಪಾರಿಗಳು- ಉದ್ಯಮಿಗಳಿಗೆ ವ್ಯಾಪಾರ, ಉದ್ಯಮ ವಿಸ್ತರಣೆಗೆ ಸೂಕ್ತವಾದ ಕಾಲ ಇದು. ಮನೆಯಲ್ಲಿ ದೇವತಾರಾಧನೆ, ಶುಭ ಕಾರ್ಯಗಳು ನಡೆಯುವುದು ಇತ್ಯಾದಿ ಶುಭ ಫಲಗಳಿವೆ. ಆದರೆ ವರ್ಷದ ಶುರುವಿನಲ್ಲಿ ಆಪ್ತರಿಂದಲೇ ವಂಚನೆಗೆ ಗುರಿಯಾಗುವ ಹಾಗೂ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಮಂತ್ರಾಲಯ ರಾಘವೇಂದ್ರ ಸ್ವಾಮಿ ಹಾಗೂ ಅಲ್ಲೇ ಸಮೀಪದಲ್ಲಿ ರಾಘವೇಂದ್ರ ಸ್ವಾಮಿಗಳು ತಪಸ್ಸು ಮಾಡಿದ ಸ್ಥಳ, ಪಂಚಮುಖಿ ಆಂಜನೇಯ ಸ್ವಾಮಿ ದರ್ಶನ ಮಾಡಿ. ಹಾಗೆ ಮಾಡಲು ಸಾಧ್ಯವಾಗದಿದ್ದವರು ಹಳದಿ ಬಟ್ಟೆಯಲ್ಲಿ ಕಡ್ಲೇಕಾಳು ದಾನ ಸಹಿತವಾಗಿ ಬ್ರಾಹ್ಮಣರಿಗೆ ದಾನ ಮಾಡಿ.

 ಕನ್ಯಾ

ಕನ್ಯಾ

ಈ ವರ್ಷ ನಿಮಗೆ ಮಿಶ್ರ ಫಲಗಳು ಕಂಡುಬರಲಿವೆ. ವರ್ಷದ ಆರಂಭದಲ್ಲಿ ಮಕ್ಕಳಿಂದ ಸುಖ- ಸಂತೋಷ ದೊರೆಯಲಿದೆ. ಅವರ ಪ್ರಗತಿಯಿಂದ ಹೆಮ್ಮೆ ಮೂಡಲಿದೆ. ಅದೇ ವೇಳೆ ಅನಾರೋಗ್ಯ, ಅಪಮಾನಗಳನ್ನು ಸಹ ಎದುರಿಸಬೇಕಾಗುತ್ತದೆ. ಜೀರ್ಣ ಸಮಸ್ಯೆ, ಮಧುಮೇಹ, ಕಿಡ್ನಿ ಸಮಸ್ಯೆ ಇತ್ಯಾದಿ ಅನಾರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಆದರೆ ಈ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ನಿಮ್ಮ ಬಗ್ಗೆ ಇಲ್ಲಸಲ್ಲದ ಸುದ್ದಿ ಹಬ್ಬಿಸಲಾಗುತ್ತದೆ. ಯಾವುದೇ ಪ್ರಯೋಜನ ಇಲ್ಲದೆ ತಿರುಗಾಟ ಮಾಡುವಂತಾಗುತ್ತದೆ. ಆಸ್ತಿ ವಿಚಾರಗಳಿಗೆ ವೈಮನಸ್ಯ ಉಂಟಾಗುತ್ತದೆ.

 ತುಲಾ

ತುಲಾ

ಕಳೆದ ವರ್ಷದ ತನಕ ನೀವು ಕಂಡ ಶುಭ ಫಲಗಳು ಈ ಬಾರಿ ಕಾಣಲಾರಿರಿ. ಮುಖ್ಯವಾಗಿ ಸೋದರ- ಸೋದರಿಯರ ಜತೆ ಆಸ್ತಿ ವ್ಯಾಜ್ಯಗಳು ಕಾಣಿಸಿಕೊಳ್ಳಬಹುದು. ನಿಮ್ಮ ಮಾತಿನ ಕಾರಣಕ್ಕೆ ಮೇಲಧಿಕಾರಿಗಳ ಜತೆ ವೈಮನಸ್ಯ, ಬಂಧು- ಮಿತ್ರರಿಂದ ದೂರಾಗುವುದು ಇತ್ಯಾದಿ ಅಶುಭ ಫಲಗಳನ್ನು ಕಾಣುವಿರಿ. ನೀವು ಕೆಲಸ ಮಾಡುವ ಸ್ಥಳದಲ್ಲಿ ಹಿತಶತ್ರುಗಳ ಕಾಟ ಇರುತ್ತದೆ. ನಿಮಗೆ ವಹಿಸಿದ ಜವಾಬ್ದಾರಿಗಳನ್ನು ಏಕಾಗ್ರತೆಯಿಂದ ನಿರ್ವಹಿಸಿರಿ. ಇಲ್ಲದಿದ್ದಲ್ಲಿ ವರ್ಚಸ್ಸಿಗೆ ಹಾನಿಯಾಗಲಿದೆ. ಷೇರು ಮತ್ತಿತರ ಹೂಡಿಕೆಗಳನ್ನು ಮಾಡುವಾಗ ಎಚ್ಚರದಿಂದ ಇರಬೇಕು. ಈ ಅವಧಿಯಲ್ಲಿ ಯಾವುದೇ ಹೂಡಿಕೆ, ಖರೀದಿ ಮಾಡದಿದ್ದರೂ ಅದು ಉತ್ತಮವೇ.

 ವೃಶ್ಚಿಕ

ವೃಶ್ಚಿಕ

ವರ್ಷದ ಆರಂಭದಲ್ಲಿ ನಿಮಗಾಗದವರ ಚಾಡಿ ಮಾತುಗಳಿಂದ ಧನ ನಷ್ಟ, ಅವಕಾಶಗಳು ತಪ್ಪಿ ಹೋಗುವುದು ಇತ್ಯಾದಿ ಅಶುಭ ಫಲಗಳು ಕಾಣುವಿರಿ. ಆದರೆ ಆ ನಂತರ ಧನ ಲಾಭ, ಹೆಚ್ಚುವರಿ ಆದಾಯ ಮೂಲಗಳು ಗೋಚರಿಸುತ್ತವೆ. ಭೂಮಿ, ಮನೆ ಮಾರಾಟದಿಂದ ಲಾಭ ಪಡೆಯುವಿರಿ. ಪಿತ್ರಾರ್ಜಿತವಾದ ಆಸ್ತಿ ವ್ಯಾಜ್ಯಗಳು ಇದ್ದಲ್ಲಿ ಅವುಗಳನ್ನು ಬಗೆಹರಿಸಿಕೊಳ್ಳುವಿರಿ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಕಾರು, ಬೈಕ್ ಖರೀದಿ ಮಾಡುವುದಕ್ಕೆ ಸರಿಯಾದ ಸಮಯ ಇದು. ಸಾಡೇಸಾತ್ ಶನಿಯಿಂದ ನೀವು ಅನುಭವಿಸಿದ ಕಷ್ಟಗಳೆಲ್ಲ ಕರಗಲಿವೆ. ಈ ಸಮಯದಲ್ಲಿ ಸಂಪಾದಿಸುವ ಹಣವನ್ನು ಜೋಪಾನ ಮಾಡುವುದು ಬಹಳ ಮುಖ್ಯ.

 ಧನುಸ್ಸು ರಾಶಿ

ಧನುಸ್ಸು ರಾಶಿ

ಜನ್ಮೇ ಗುರುಃ ದುಃಖದಾಯಕ ಎಂಬ ಮಾತಿನಂತೆ ಮಾನಸಿಕ ನೆಮ್ಮದಿಗೆ ಹೊಡೆತ ಬೀಳುತ್ತದೆ. ಆದರೆ ವರ್ಷದ ಮೊದಲ ಹಾಗೂ ಕೊನೆಯ ಭಾಗದಲ್ಲಿ ಬರಬೇಕಾಗಿದ್ದ ಬಾಕಿ ಹಣ ಬರುವಂಥ ಸಾಧ್ಯತೆಗಳಿವೆ. ಆದರೆ ಇದಕ್ಕಾಗಿ ನೀವು ಭಾರೀ ಶ್ರಮವನ್ನೇ ಪಡಬೇಕಾಗುತ್ತದೆ. ವ್ಯಾಪಾರಿಗಳು, ಉದ್ಯಮಿಗಳು ದೊಡ್ಡ ಮಟ್ಟದಲ್ಲಿ ಸಾಲ ತಂದು, ವ್ಯಾಪಾರ ವಿಸ್ತರಣೆಗೆಂದು ಪ್ರಯತ್ನಿಸಬೇಡಿ. ಹಾಗೊಂದು ವೇಳೆ ಮಾಡಿದರೆ ಬಹಳ ನಷ್ಟ ಅನುಭವಿಸುತ್ತೀರಿ. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರಿಂದ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಬಗೆಗಿನ ರಹಸ್ಯವನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ. ಅವಮಾನದ ಪಾಲಾಗುತ್ತೀರಿ, ಎಚ್ಚರ.

 ಮಕರ

ಮಕರ

ಈ ವರ್ಷ ನಿಮಗೆ ಗುರು ಹನ್ನೆರಡು ಮತ್ತು ಜನ್ಮ ಸ್ಥಾನದಲ್ಲಿ, ಶನಿ ಜನ್ಮ ಸ್ಥಾನದಲ್ಲಿ ಸಂಚಾರ ಮಾಡುವುದರಿಂದ ಯಾವುದೇ ಶುಭ ಫಲಗಳನ್ನು ಹೇಳಲು ಸಾಧ್ಯವಿಲ್ಲ. ಸ್ನೇಹಿತರು, ಬಂಧುಗಳ ಜತೆಗೆ ಮನಸ್ತಾಪ, ವ್ಯಾಪಾರ- ವ್ಯವಹಾರದಲ್ಲಿ ನಷ್ಟ, ಆದಾಯದಲ್ಲಿ ಕುಂಠಿತ,. ಅನಾರೋಗ್ಯ ಸಮಸ್ಯೆಗಳು, ಸಿಕ್ಕಾಪಟ್ಟೆ ಖರ್ಚು ಹೀಗೆ ನಾನಾ ಅಶುಭ ಫಲಗಳನ್ನು ಅನುಭವಿಸುತ್ತೀರಿ. ಉದ್ಯೋಗ ಬದಲಾವಣೆ ಸಾಧ್ಯತೆ ಇದೆ. ಕೆಲವರಿಗೆ ಇರುವ ಕೆಲಸ ಕೂಡ ಬಿಡಬೇಕಾದಂಥ ಪರಿಸ್ಥಿತಿ ಬರಬಹುದು ಅಥವಾ ಈಗಿರುವ ಸ್ಥಾನಮಾನಕ್ಕಿಂತ ಕಡಿಮೆ ಆಗಬಹುದು. ಆದರೆ ನೀವಾಗಿಯೇ ಕೆಲಸ ಬಿಟ್ಟಲ್ಲಿ ಬಹಳ ಕಷ್ಟ ಆಗುತ್ತದೆ. ಸತ್ಕರ್ಮಗಳನ್ನು ಆಚರಿಸಿ. ಸುಳ್ಳು ಹೇಳಬೇಡಿ.

 ಕುಂಭ

ಕುಂಭ

ಸಾಡೇ ಸಾತ್ ನ ಆರಂಭ ಇದಾಗಿರುವುದರಿಂದ ಅದರ ಪರಿಣಾಮವಾಗಿ ಯಾವುದೇ ಕೆಲಸಕ್ಕೂ ವಿಪರೀತ ಪ್ರಯತ್ನ ಮಾಡಬೇಕಾಗುತ್ತದೆ. ವ್ಯಾಪಾರ- ಉದ್ಯಮದಲ್ಲಿ ಸ್ವಲ್ಪ ಮಟ್ಟಿಗೆ ಲಾಭ ಕಾಣಬಹುದು. ಆದರೆ ವರ್ಷದ ಆರಂಭದ ಮೂರು ತಿಂಗಳು ಹಾಗೂ ನವೆಂಬರ್ ನಂತರ ವಿಪರೀತ ನಷ್ಟ, ಖರ್ಚು- ವೆಚ್ಚಗಳು ಕಾಣಿಸಿಕೊಳ್ಳುತ್ತವೆ. ದುಷ್ಟ ಜನರ ಸಹವಾಸ, ಜೂಜು, ಷೇರುಪೇಟೆ, ಸಟ್ಟಾ ವ್ಯವಹಾರದಿಂದ ಹಣ ಕೈ ಬಿಡಲಿದೆ. ಕೋರ್ಟ್ ವ್ಯವಹಾರಗಳಲ್ಲಿ ವಿರೋಧಿಗಳ ಕೈ ಮೇಲಾಗಬಹುದು. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಅದು ಉಲ್ಬಣಿಸಬಹುದು. ಯಾವುದೇ ಹೊಸ ವ್ಯಾಪಾರ- ವ್ಯವಹಾರ ಆರಂಭಿಸಬೇಡಿ. ವಾಹನ ಖರೀದಿ ಬೇಡ.

ಮೀನ

ಮೀನ

ಗುರು, ಶನಿ ಎರಡೂ ಗ್ರಹಗಳ ಅನುಗ್ರಹ ನಿಮ್ಮ ಮೇಲಿದೆ. ಇಂಥ ಸಂದರ್ಭದಲ್ಲಿ ನಿಮ್ಮ ಯೋಜನೆಗಳನ್ನು ಅನುಷ್ಠಾನಗೊಳಿಸಲಿದ್ದೀರಿ. ಆರೋಗ್ಯ ಉತ್ತಮವಾಗುತ್ತದೆ. ವೈವಾಹಿಕ ಜೀವನ ಸಂತುಷ್ಟವಾಗಿ ಇರುತ್ತದೆ. ಆದಾಯ ಮೂಲಗಳು ಹೆಚ್ಚಾಗಲಿವೆ. ಸಮಾಜದಲ್ಲಿ ನಿಮ್ಮ ಬಗ್ಗೆ ಗೌರವ ಹೆಚ್ಚಲಿದೆ. ವೃತ್ತಿ ಬದುಕಿನಲ್ಲಿ ಏಳ್ಗೆ ಕಾಣಲಿದ್ದೀರಿ. ಉದ್ಯೋಗ ಬದಲಾವಣೆಗೂ ಇದು ಸೂಕ್ತ ಸಮಯ. ಮನೆ, ಸೈಟು ಖರೀದಿ, ಕಾರು- ಬೈಕ್ ಇತ್ಯಾದಿ ವಾಹನ ಖರೀದಿ ಮಾಡುವುದಕ್ಕೂ ಉತ್ತಮ ಸಮಯ ಇದು. ಆಲಸ್ಯ ಮಾಡದಿದ್ದಲ್ಲಿ ಈ ಅವಧಿಯಲ್ಲಿ ಧನ ಸಂಗ್ರಹ ಆಗುತ್ತದೆ. ಅದನ್ನು ಭವಿಷ್ಯಕ್ಕಾಗಿ ಉಳಿತಾಯ ಮಾಡಿ.

https://www.sadgurusai.in

English summary
Hindu new year Sri Sarvari Nama Samvatsara Ugadi Predictions 2020 in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X