ಕರ್ಕ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ
ಪಂಚಮ ಶನಿಕಾಟದ ಅನುಭವ ಪಡೆದುಕೊಳ್ಳುತ್ತಿರುವ ಕರ್ಕ ರಾಶಿಯವರು ಈಗಾಗಲೇ ಸಾಕಷ್ಟು ಬುದ್ಧಿ ಕಲಿತುಕೊಂಡಾಗಿದೆ. ಇನ್ನಷ್ಟು ಕಲಿಯುವ ಸಮಯ 2017ರ ಜನವರಿವರೆಗೆ. ಅಲ್ಲಿಂದ ಸುಖಕರ ಜೀವನದನುಭವ. ಹೆಚ್ಚು ಚಿಂತಿಸುವ ಅಗತ್ಯವಿಲ್ಲ.
ಈ ರಾಶಿಯ ಪುನರ್ವಸು ನಕ್ಷತ್ರದ ಮೊದಲೆರಡು ಚರಣದವರಿಗೆ ವರ್ಷದ ಮೊದಲಾರ್ಧ ಅಷ್ಟೇನೂ ಶುಭ ಸೂಚನೆಗಳಿಲ್ಲ. ವರ್ಷದ ಕೊನೆಯ ನಾಲ್ಕು ತಿಂಗಳ ಮಾತ್ರ ಸ್ವಲ್ಪ ನೆಮ್ಮದಿ ಮೂಡುತ್ತದೆ. ಹಣದ ವಿಷಯದಲ್ಲಿ ಮಾತ್ರ ಯಾವುದೋ ರೂಪದಲ್ಲಿ ಸಹಾಯ ದೊರಕುತ್ತದೆ.
ಪುಷ್ಯ ನಕ್ಷತ್ರದವರಿಗೆ ಹಣದ ಹರಿವು ವರ್ಷದ ಮೊದಲ ನಾಲ್ಕು ತಿಂಗಳು ಉತ್ತಮ ರೀತಿಯಲ್ಲಿರುತ್ತದೆ. ಆದರೆ ಕೊನೆಯ 8 ತಿಂಗಳು ಮಾತ್ರ ಅದೇ ರಾಗ ಅದೇ ಹಾಡು ಎಂಬಂತಾಗುತ್ತದೆ. ಆಶ್ಲೇಷಾ ನಕ್ಷತ್ರದವರಿಗೆ ಮೊದಲ ನಾಲ್ಕು ತಿಂಗಳು ಉತ್ತಮವೆನಿಸಿದ್ದರೆ ಕಡೆಯ 8 ತಿಂಗಳು ಮತ್ತೆ ಜೀವನ ಮಂದಗತಿಯಲ್ಲಿ ಸಾಗಲಾರಂಭಿಸುತ್ತದೆ. ಚಿಕ್ಕಪುಟ್ಟ ಕೆಲಸಗಳಿಗಾಗಿ ಊರೂರು ಅಲೆದಾಟ ಹತ್ತಬಹುದು ಕೆಲವರಿಗೆ. ದುಡಿದಿದ್ದು ಕೈಗೆ ಹತ್ತದೇ ಬರೀ ಖರ್ಚಿನಲ್ಲೇ ಕಾಲ ಕಳೆಯುವಂತಾಗುತ್ತದೆ. [ಜನ್ಮನಕ್ಷತ್ರದಿಂದ ತಿಳಿಯಿರಿ ನಿಖರವಾದ ಭವಿಷ್ಯ]
ಗುರುಬಲ ಈ ವರ್ಷದ ಆಗಸ್ಟ್ ವರೆಗಿದೆ. ಆ ಸಮಯದೊಳಗೆ ಶುಭ ಕಾರ್ಯಗಳನ್ನು ಮಾಡಿಕೊಳ್ಳಬಹುದು. ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರೂ ಪೂರ್ವಾಪರ ಯೋಚಿಸಿ ಕುಟುಂಬದವರ ನಿರ್ಧಾರ ತೆಗೆದುಕೊಂಡೇ ಮಾಡಿಕೊಳ್ಳಬೇಕು.
ಪರಿಹಾರೋಪಾಯ : ಮೊದಲೇ ಪಂಚಮ ಶನಿಕಾಟದಲ್ಲಿ ಸಿಲುಕಿ ಗುಂಯ್ ಗುಡುವಂತಾಗಿರುವ ಕರ್ಕ ರಾಶಿಯವರು ಸೂಕ್ತ ಪರಿಹಾರೋಪಾಯಗಳನ್ನು ಕೂಡಲೇ ಮಾಡಿಕೊಳ್ಳಲೇಬೇಕು. 2017ರ ಜನವರಿಯಿಂದ ಶನಿಬಲ ಬರುತ್ತದೆ. ಆಗ ಜೀವನದ ಮಜಾ ಲಭಿಸಲಾರಂಭಿಸುತ್ತದೆ. ಅಲ್ಲಿಯವರೆಗೂ ಕಾಲಾಯ ತಸ್ಮೈ ನಮಃ ಎಂದುಕೊಂಡು ದಿನಕ್ಕೊಂದು ಗಂಟೆ ಧ್ಯಾನ ಮಾಡುತ್ತಲಿದ್ದರೆ ಸಾಕು.
ವಾಹನ ಚಲಾವಣೆಯ ಸಮಯದಲ್ಲಿ ಸ್ಪೀಡ್ ಲಿಮಿಟ್ ತಪ್ಪಿಸದೇ ಪಾಲಿಸಿಕೊಳ್ಳಿ. ಒಟ್ಟಿನಲ್ಲಿ ಈ ವರ್ಷ ಶೇ.70ರಷ್ಟು ಅಶುಭ ಫಲವೇ ಕಾದಿರುವುದರಿಂದ ಉಳಿದ ಶೇ.30ರಷ್ಟು ಒಳ್ಳೆಯ ಫಲಗಳನ್ನು ಆನಂದಿಸದೇ ಬೇರೆ ದಾರಿಯಿಲ್ಲ ಕರ್ಕ ರಾಶಿಯವರಿಗೆ.