ಧನು ರಾಶಿಯವರಿಗೆ ಯುಗಾದಿ ಫಲದಲ್ಲಿ ಬರ್ಫಿ- ಚೌಚೌ, ಆದರೆ ಗೋಡಂಬಿ ಮಿಸ್
ವಿಳಂಬಿ ನಾಮ ಸಂವತ್ಸರ ಆರಂಭವಾಗಿ ಒಂದು ತಿಂಗಳಾಯಿತು. ಧನುಸ್ಸು ರಾಶಿಯವರಿಗೆ ವಿಚಿತ್ರ ಅನುಭವಗಳು ಆರಂಭವಾಗಿರುತ್ತವೆ. ಮೂಲ ನಕ್ಷತ್ರದ ಒಂದು, ಎರಡು, ಮೂರು ಹಾಗೂ ನಾಲ್ಕನೇ ಪಾದ, ಪೂರ್ವಾಷಾಢ ನಕ್ಷತ್ರದ ನಾಲ್ಕೂ ಪಾದ ಮತ್ತು ಉತ್ತರಾಷಾಢ ನಕ್ಷತ್ರದ ಮೊದಲನೇ ಪಾದ ಧನುಸ್ಸು ರಾಶಿ ಆಗುತ್ತದೆ. ಈ ರಾಶಿಯ ಅಧಿಪತಿ ಗುರು.
ಇನ್ನು ಗೋಚಾರದಲ್ಲಿ ಹೇಗಿದೆ ಅಂತ ನೋಡಿದರೆ ಜನ್ಮ ರಾಶಿಯಲ್ಲೇ ಶನಿ ಸ್ಥಿತವಾಗಿದೆ. ಎರಡನೇ ಸ್ಥಾನದಲ್ಲಿ ಕೇತು ಹಾಗೂ ಎಂಟನೇ ಸ್ಥಾನದಲ್ಲಿ ರಾಹು ಮತ್ತು ಹನ್ನೊಂದನೇ ಮನೆಯಲ್ಲಿ ಗುರು ಅಕ್ಟೋಬರ್ ವರೆಗೆ ಇರುತ್ತದೆ. ಆ ನಂತರ ಗುರು ಹನ್ನೆರಡನೇ ಮನೆಗೆ ಪ್ರವೇಶ ಆಗುತ್ತದೆ. ಅಂದರೆ ಸದ್ಯದ ಪರಿಸ್ಥಿತಿಯಲ್ಲಿ ಗುರು ಗ್ರಹ ಒಂದು ಪೂರಕವಾಗಿದೆ.
ವಾಸ್ತು ಟಿಪ್ಸ್: ಈ 9 ವಸ್ತುಗಳು ಮನೆಯಲ್ಲಿದ್ದರೆ ಎಚ್ಚರ!
ಉಳಿದಂತೆ ಶನಿ, ರಾಹು, ಕೇತು ಈ ಮೂರೂ ಗ್ರಹಗಳು ಅನಾರೋಗ್ಯ, ಖರ್ಚು, ಮಾನಸಿಕ ಚಿಂತೆಯನ್ನು ಸೂಚಿಸುತ್ತಿದೆ. ಯಾವುದೆಲ್ಲ ಸಮಸ್ಯೆಗೆ ಹಣದಿಂದ ಪರಿಹಾರ ದೊರಕಿಸಿಕೊಳ್ಳಬಹುದೋ ಅಂಥದ್ದಕ್ಕೆ ಅಕ್ಟೋಬರ್ ತನಕ ಯಾವುದೇ ಚಿಂತೆ ಇಲ್ಲದೆ ಗೋಲಿ ಹೊಡೆದು ಮುಂದೆ ಸಾಗಿಬರುತ್ತೀರಿ.
ಇನ್ನು ಮುಂದೆ ವಿಳಂಬಿ ಸಂವತ್ಸರ ಆದಾಯ-ವ್ಯಯ, ಆರೋಗ್ಯ-ಅನಾರೋಗ್ಯ, ರಾಜ ಪೂಜೆ- ರಾಜ ಕೋಪ, ಸುಖ-ದುಃಖದ ಬಗ್ಗೆ ತಿಳಿದುಕೊಳ್ಳಿ.
ಆದಾಯಕ್ಕೆ ಸಮನಾಗಿಯೇ ಖರ್ಚು
ಧನುಸ್ಸು ರಾಶಿಯವರಿಗೆ ವಿಳಂಬಿನಾಮ ಸಂವತ್ಸರದಲ್ಲಿ ಆದಾಯ 5 ಇದ್ದರೆ, ವ್ಯಯ 5 ಇರುತ್ತದೆ. ಇನ್ನು ಆರೋಗ್ಯ 1 ಇದ್ದರೆ, ಅನಾರೋಗ್ಯವೂ 1 ಇರುತ್ತದೆ. ಗೌರವ- ಮರ್ಯಾದೆ 4 ಇದ್ದರೆ, ಅವಮಾನ 2 ಇರುತ್ತದೆ. ಸುಖ 6 ಅಂತಿದ್ದರೆ, ದುಃಖ 3 ಇದೆ. ಅಲ್ಲಿಗೆ ನಿಮ್ಮ ಆದಾಯವು ಖರ್ಚು ಸರಿದೂಗಿಸುವುದರಲ್ಲಿ ಆಗುತ್ತದೆ. ಸ್ವಲ್ಪ ಮಟ್ಟಿಗೆ ಸಮಾಜದಲ್ಲಿ ಮನ್ನಣೆ ಸಿಗುತ್ತದೆ. ಸುಖವು ಅನುಭವಕ್ಕೆ ಬರುತ್ತದೆ. ಆದರೆ ಆರೋಗ್ಯವಾಗಿ ಕಾಣಿಸಿಕೊಳ್ಳುವ ಬೆನ್ನಿಗೆ ಅನಾರೋಗ್ಯ ಕಾಣಿಸಿಕೊಳ್ಳುತ್ತದೆ.
ಮೂಲ ನಕ್ಷತ್ರದವರು ಜೋಪಾನವಾಗಿರಿ
ಆದಾಯದ ವಿಚಾರದಲ್ಲಿ ಏಪ್ರಿಲ್ ನಿಂದ ಎಂಟು ತಿಂಗಳು ಮೂಲ ನಕ್ಷತ್ರದವರಿಗೆ ಆದಾಯದಲ್ಲಿ ಭಾರೀ ತಡೆಯಾಗುತ್ತದೆ. ಹಣಕಾಸಿನ ಮುಗ್ಗಟ್ಟು ಒಂದು ಕಡೆಯಾದರೆ, ಹಾನಿ ಅಥವಾ ನಷ್ಟ ಆಗುವುದು ಮತ್ತೊಂದು ಕಡೆ. ಇದ್ದದ್ದರಲ್ಲಿ ಪೂರ್ವಾಷಾಢ ಹಾಗೂ ಉತ್ತರಾಷಾಢ ನಕ್ಷತ್ರದವರಿಗೆ ಅಡ್ಡಿ ಇಲ್ಲ. ಮೂಲ ನಕ್ಷತ್ರದವರು ತುಂಬ ಸಾಲ ಮಾಡಬೇಡಿ. ಆದಷ್ಟೂ ಜೋಪಾನವಾಗಿರಿ.
ಸಾಲು ಸಾಲು ಸವಾಲುಗಳು
ಧನುಸ್ಸು ರಾಶಿಯವರಿಗೆ ಜನ್ಮ ರಾಶಿಯ ಶನಿ, ದ್ವಿತೀಯದಲ್ಲಿನ ಕೇತು ಮತ್ತು ಎಂಟನೇ ಸ್ಥಾನದಲ್ಲಿನ ರಾಹುವಿನ ಕಾರಣಕ್ಕೆ ಸಾಲು-ಸಾಲು ಸವಾಲುಗಳು ಎದುರಾಗುತ್ತವೆ. ಅಕ್ಟೋಬರ್ ನಂತರ ಹನ್ನೆರಡನೇ ಸ್ಥಾನದ ಗುರುವು ಖರ್ಚನ್ನು ಸೂಚಿಸುತ್ತದೆ. ಆದ್ದರಿಂದ ದುಡ್ಡು-ಕಾಸಿನ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ಬೇಡ.
ಶುಭ ಕಾರ್ಯಗಳಿಗೆ ಖರ್ಚಾಗುತ್ತದೆ
ಕೌಟುಂಬಿಕ ಜವಾಬ್ದಾರಿಗಳು ಈ ಸಂವತ್ಸರದಲ್ಲಿ ಹೆಚ್ಚಾಗುತ್ತದೆ. ನಿಮ್ಮ ನಿರ್ಧಾರಗಳು ಯೋಚನೆಗೆ ಕಾರಣವಾಗುತ್ತವೆ. ಉಳಿತಾಯದ ಹಣವು ಶುಭ ಕಾರ್ಯಗಳಿಗೆ, ಚಿನ್ನ- ಭೂಮಿ ಖರೀದಿಗೆ ಖರ್ಚಾಗಬಹುದು. ಆದರೆ ಈ ವಿಚಾರದಲ್ಲಿ ಎಚ್ಚರದಿಂದ ಇರಬೇಕು. ಯಾವುದೇ ಕಾನೂನು ತೊಡಕು ಆಗದಂತೆ ಎಚ್ಚರ ತೆಗೆದುಕೊಳ್ಳಿ.