ಮೀನ ರಾಶಿಯವರಿಗೆ ವಿಳಂಬಿ ಸಂವತ್ಸರದ ಫಲಾಫಲ ಹೀಗಿದೆ
ವಿಳಂಬಿನಾಮ ಸಂವತ್ಸರದ ಫಲಗಳನ್ನು ತಿಳಿಯುವುದರ ಕೊನೆ ಹಂತಕ್ಕೆ ಬಂದಿದ್ದೀವಿ. ಈ ದಿನ ಮೀನ ರಾಶಿಯವರಿಗೆ ಏನು ಫಲ ಇದೆ ಎಂಬುದನ್ನು ನೋಡೋಣ. ಪೂರ್ವಾಭಾದ್ರಾ ನಕ್ಷತ್ರದ ನಾಲ್ಕನೇ ಪಾದ, ಉತ್ತರಾಭಾದ್ರಾ ನಕ್ಷತ್ರದ ಒಂದು, ಎರಡು, ಮೂರು ಮತ್ತು ನಾಲ್ಕನೇ ಪಾದ ಹಾಗೂ ರೇವತಿ ನಕ್ಷತ್ರದ ನಾಲ್ಕೂ ಪಾದ ಮೀನ ರಾಶಿಗೆ ಸೇರುತ್ತದೆ. ಈ ರಾಶಿಯ ಅಧಿಪತಿ ಗುರು.
ಗೋಚಾರದ ವಿಚಾರಕ್ಕೆ ಬಂದರೆ ಹತ್ತನೇ ಮನೆಯಲ್ಲಿ ಶನಿ, ಅಕ್ಟೋಬರ್ ವರೆಗೆ ಎಂಟರಲ್ಲಿ ಹಾಗೂ ಆ ನಂತರ ಒಂಬತ್ತನೇ ಮನೆಯಲ್ಲಿ ಗುರು, ಐದನೇ ಸ್ಥಾನದಲ್ಲಿ ರಾಹು, ಹನ್ನೊಂದನೇ ಮನೆಯಲ್ಲಿ ಕೇತು ಗ್ರಹ ಇದೆ. ಮುಖ್ಯವಾಗಿ ಎಂಟನೇ ಮನೆಯ ಗುರು ಆರೋಗ್ಯ ಹಾಗೂ ಮಾನಸಿಕ ಕಿರಿಕಿರಿ ನೀಡುತ್ತದೆ. ಹನ್ನೊಂದನೇ ಮನೆಯ ಕೇತು ಅನುಕೂಲ ಮಾಡಿದರೂ ಐದನೇ ಮನೆಯ ರಾಹು ಅಷ್ಟು ಅನುಕೂಲ ಅಲ್ಲ.
ಇನ್ನು ಹತ್ತನೇ ಸ್ಥಾನದಲ್ಲಿ ಶನಿಯು ಮುಖ್ಯವಾಗಿ ಉದ್ಯೋಗ ಸ್ಥಾನದಲ್ಲಿನ ಬದಲಾವಣೆ ಅಥವಾ ಸವಾಲುಗಳನ್ನು ಸೂಚಿಸುತ್ತದೆ. ಮೇಲಧಿಕಾರಿಗಳ ಜತೆಗೆ ಭಿನ್ನಾಭಿಪ್ರಾಯ, ಯತ್ನ ಕಾರ್ಯದಲ್ಲಿ ವಿಳಂಬ, ಒಂದೇ ಕೆಲಸಕ್ಕೆ ಹಲವು ಬಾರಿ ಪ್ರಯತ್ನಿಸಿದರೂ ಪೂರ್ತಿ ಆಗದಿರುವುದನ್ನು ಇದು ಸೂಚಿಸುತ್ತದೆ. ಈ ವರ್ಷದ ಅಕ್ಟೋಬರ್ ತನಕ ತುಂಬ ಸವಾಲಿನ ಸಮಯ ಆಗಿರುತ್ತದೆ.
ಮೀನರಾಶಿಯವರ ಆದಾಯ- ವ್ಯಯ
ವಿಳಂಬಿನಾಮ ಸಂವತ್ಸರದಲ್ಲಿ ಮೀನ ರಾಶಿಯವರ ಆದಾಯ 5, ವ್ಯಯ 5 ಇದೆ. ಇನ್ನು ಆರೋಗ್ಯ 1, ಅನಾರೋಗ್ಯ 1, ರಾಜಪೂಜಾ 4 ಹಾಗೂ ರಾಜ ಕೋಪ 2 ಮತ್ತು ಸುಖ 6, ದುಃಖ 3 ಹೀಗಿವೆ. ಧನುಸ್ಸು ಹಾಗೂ ಮೀನ ರಾಶಿಯವರ ಸಂವತ್ಸರ ಫಲಗಳು ಒಂದೇ ಸಂಖ್ಯೆಯಲ್ಲಿದ್ದು, ಖರ್ಚು ಹಾಗೂ ಆದಾಯದ ಪ್ರಮಾಣ ಸಮಾನವಾಗಿರುತ್ತದೆ. ಆರೋಗ್ಯ ಹಾಗೂ ಅನಾರೋಗ್ಯವೂ ಸಮ ಪ್ರಮಾಣವನ್ನೇ ಸೂಚಿಸುತ್ತಿದೆ. ಈ ಸಂವತ್ಸರದಲ್ಲಿ ಸಾಮಾಜಿಕ ಬದುಕಿನಲ್ಲಿ ಒಂದಿಷ್ಟು ಮನ್ನಣೆ ದೊರೆಯುತ್ತದೆ. ದುಃಖಕ್ಕಿಂತ ಸುಖದ ಪ್ರಮಾಣವೂ ಹೆಚ್ಚಾಗಿ ತೋರಿಬರುತ್ತಿದೆ.
ಕಂದಾಯ ಫಲ ಏನು ಸೂಚಿಸುತ್ತದೆ?
ಇನ್ನು ಕಂದಾಯ ಫಲಗಳನ್ನು ನೋಡುವುದಾದರೆ, ಪೂರ್ವಾಭಾದ್ರಾ ನಕ್ಷತ್ರದವರಿಗೆ ಮೊದಲ ಹಾಗೂ ಕೊನೆಯ ನಾಲ್ಕು ತಿಂಗಳು ಅಡ್ಡಿ ಇಲ್ಲ. ಆದರೆ ಮಧ್ಯದ ನಾಲ್ಕು ತಿಂಗಳು ಸವಾಲಿನದಾಗಿರುತ್ತದೆ. ಉತ್ತರಾಭಾದ್ರಾ ನಕ್ಷತ್ರದವರಿಗೆ ಮೊದಲ ನಾಲ್ಕು ತಿಂಗಳು ಚೆನ್ನಾಗಿದ್ದು, ಆ ನಂತರದ ಎಂಟು ತಿಂಗಳು ಆದಾಯದಲ್ಲಿ ಇಳಿಕೆ ಇದೆ. ಇನ್ನು ರೇವತಿ ನಕ್ಷತ್ರದವರು ಈ ಸಂವತ್ಸರ ಪೂರ್ತಿ ಎಚ್ಚರದಿಂದ ಇರಬೇಕು. ಸಾಲ ಮಾಡದಿರುವುದು ಉತ್ತಮ. ಜತೆಗೆ ಷೇರು ಹೂಡಿಕೆ, ಮನೆ ಕಟ್ಟುವುದು ಇತ್ಯಾದಿ ಮಾಡಬೇಡಿ.
ವೃತ್ತಿ ಬದುಕಿನಲ್ಲಿ ವಿಪರೀತ ಸವಾಲುಗಳು
ಅಷ್ಟಮದಲ್ಲಿರುವ ಗುರು ಆಯಾ ವ್ಯಕ್ತಿಯ ವಯಸ್ಸಿಗೆ ತಕ್ಕಂಥ ಸವಾಲುಗಳನ್ನು ತಂದೊಡ್ಡುತ್ತದೆ. ಕೆಲಸದಲ್ಲಿನ ಏಕಾಗ್ರತೆ ಕೊರತೆ ಕಾರಣಕ್ಕೆ ಅವಮಾನ ಹಾಗೂ ಇಷ್ಟವಿಲ್ಲದ ಸ್ಥಳ- ವಿಭಾಗಕ್ಕೆ ವರ್ಗಾವಣೆ ಅಥವಾ ನಿಯೋಜನೆ ಆಗುವಂತೆ ಮಾಡುತ್ತದೆ. ದುಷ್ಟ ಜನರ ಕೈ ಕೆಳಗೆ ಕೆಲಸ ಮಾಡುವಂತಾಗುತ್ತದೆ. ವಿದ್ಯಾರ್ಥಿಗಳಿಗೆ ಹಿನ್ನಡೆ ಆಗುತ್ತದೆ. ಮದುವೆ ಮತ್ತಿತರ ಶುಭ ಕಾರ್ಯಗಳು ಕೈಗೂಡುವುದಿಲ್ಲ. ಇಂಥ ಫಲಗಳನ್ನೇ ಅನುಭವಿಸಬೇಕಾಗುತ್ತದೆ.
ವಾಹನ ಚಾಲನೆ ವಿಚಾರದಲ್ಲಿ ಎಚ್ಚರ
ಮಕ್ಕಳ ವಿಚಾರವಾಗಿ ಅವಮಾನ ಎದುರಿಸುವಂಥ ಸನ್ನಿವೇಶ ಎದುರಾಗುತ್ತದೆ. ಪ್ರಯಾಣದಲ್ಲಿ ಬಹಳ ಹುಷಾರಾಗಿರಬೇಕು. ದಿಢೀರ್ ಪ್ರಯಾಣ ಒಳ್ಳೆಯದಲ್ಲ. ರಾತ್ರಿ ವಾಹನ ಚಾಲನೆ ಮಾಡುವುದನ್ನು ಬಿಡಬೇಕು. ಕಾಗದ-ಪತ್ರ, ಕಾನೂನಿನ ವಿಚಾರದಲ್ಲಿ ಸಣ್ಣ- ಪುಟ್ಟ ನಿರ್ಲಕ್ಷ್ಯವೂ ದೊಡ್ಡ ಸಮಸ್ಯೆ ಬರುವಂತೆ ಮಾಡುತ್ತದೆ. ಆದ್ದರಿಂದ ಈ ಎಲ್ಲ ವಿಚಾರದ ಬಗ್ಗೆ ಎಚ್ಚರವಾಗಿರಬೇಕು.