ವಿಳಂಬಿ ಸಂವತ್ಸರ ಫಲ: ತುಲಾ ರಾಶಿಗೆ ಸೇಬಿನಂತೆಯೇ ಹುಳಿ ದ್ರಾಕ್ಷಿ ಇದೆ
ವಿಳಂಬಿನಾಮ ಸಂವತ್ಸರದಲ್ಲಿ ತುಲಾ ರಾಶಿಯವರ ಆದಾಯ-ವ್ಯಯ, ಗೌರವ- ಅಪಮಾನ ಇನ್ನಿತರ ವಿಚಾರಗಳಲ್ಲಿ ಹೇಗಿರುತ್ತದೆ ಎಂದು ಇಂದಿನ ಲೇಖನದಲ್ಲಿ ತಿಳಿಸಲಾಗುತ್ತಿದೆ. ಚಿತ್ತಾ ನಕ್ಷತ್ರದ ಮೂರು, ನಾಲ್ಕನೇ ಪಾದ, ಸ್ವಾತಿ ನಕ್ಷತ್ರದ ಒಂದರಿಂದ ನಾಲ್ಕು ಪಾದ, ವಿಶಾಖಾ ನಕ್ಷತ್ರದ ಒಂದು ಮತ್ತು ಎರಡನೇ ಪಾದ ತುಲಾ ರಾಶಿಗೆ ಸೇರುತ್ತದೆ. ಈ ರಾಶಿಯ ಅಧಿಪತಿ ಶುಕ್ರ.
ಇನ್ನು ಈ ಸಂವತ್ಸರದಲ್ಲಿ ತುಲಾ ರಾಶಿಯವರಿಗೆ ಆದಾಯ 11 ಹಾಗೂ ವ್ಯಯ 5 ಇದೆ. ಇನ್ನು ಗೌರವ 2 ಮತ್ತು ಅಪಮಾನ 2 ಇದೆ. ಗೋಚಾರದ ವಿಚಾರಕ್ಕೆ ಬಂದರೆ ಮೂರನೇ ಮನೆಯಲ್ಲಿ ಶನಿ ಸಂಚಾರ, ಅಕ್ಟೋಬರ್ ವರೆಗೆ ಜನ್ಮ ಸ್ಥಾನದಲ್ಲಿ, ಆ ನಂತರ ಸಂವತ್ಸರದ ಕೊನೆವರೆಗೆ ಎರಡನೇ ಸ್ಥಾನದಲ್ಲಿ ಗುರು ಸಂಚಾರ ಇರುತ್ತದೆ. ಚತುರ್ಥದಲ್ಲಿ ಕೇತು, ಹತ್ತನೇ ಮನೆಯಲ್ಲಿ ರಾಹು ಇರುತ್ತದೆ.
ಕನಸಿನಲ್ಲಿ ಏನು ಬಂದರೆ ಯಾವ ಫಲ? ಜ್ಯೋತಿಷ್ಯ ಪರಿಹಾರ
ಹತ್ತನೇ ಮನೆಯಲ್ಲಿ ರಾಹು ಇರುವುದರಿಂದ ಕೆಲಸದಲ್ಲಿ ಓಡಾಟ ಹೆಚ್ಚಾಗಿರುವವರು, ಟ್ರಾನ್ಸ್ ಪೋರ್ಟ್ ವ್ಯವಹಾರದಲ್ಲಿ ಇರುವವರು, ವಿದೇಶದಲ್ಲಿ ಕೆಲಸ ಮಾಡುತ್ತಿರುವವರು, ಮಾರ್ಕೆಟಿಂಗ್ ವೃತ್ತಿಯಲ್ಲಿರುವವರಿಗೆ ವಿಶೇಷ ಪ್ರಭಾವ ಇರುತ್ತದೆ. ನಿರುದ್ಯೋಗಿಗಳಾಗಿದ್ದಲ್ಲಿ ಈಗ ಹೇಳಿದ ವೃತ್ತಿಯಲ್ಲಿ ಪ್ರಯತ್ನ ಪಟ್ಟರೆ ಒಳಿತು. ಬೇಗ ಕೆಲಸ ಸಿಗುತ್ತದೆ.
ಆರೋಗ್ಯ ವಿಚಾರದಲ್ಲಿ ಎಚ್ಚರ ಅಗತ್ಯ
ಈ ಸಂವತ್ಸರದಲ್ಲಿ ಆರೋಗ್ಯ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಜನ್ಮ ರಾಶಿಯಲ್ಲಿ ಇರುವ ಗುರು ಅನಾರೋಗ್ಯ ನೀಡುತ್ತಾನೆ. ಅಜೀರ್ಣ, ಚರ್ಮರೋಗ ಇತ್ಯಾದಿ ಅನಾರೋಗ್ಯ ಆಗುತ್ತದೆ. ಸ್ವಲ್ಪ ವ್ಯಾಯಾಮ, ಧ್ಯಾನ ಮಾಡಿ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳುವ ಬಗ್ಗೆ ಗಮನ ಇರಿಸಿಕೊಳ್ಳಬೇಕು. ಯಾವುದೇ ರೀತಿಯ ದೈಹಿಕ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡದೆ ಕೂಡಲೇ ವೈದ್ಯರ ಬಳಿ ತೋರಿಸಿಕೊಳ್ಳಬೇಕು.
ಉದ್ಯೋಗದಲ್ಲಿ ಬಡ್ತಿ, ಸಂತಾನ ಅಪೇಕ್ಷಿಗಳಿಗೆ ಶುಭ ಸುದ್ದಿ
ವಿದೇಶ ಪ್ರವಾಸ ಮಾಡಬೇಕು ಅಂದುಕೊಂಡವರಿಗೆ ಮೊದಲ ಪ್ರಯತ್ನದಲ್ಲಿ ಆಗದಿದ್ದರೂ ಎರಡು ಅಥವಾ ಮೂರನೇ ಪ್ರಯತ್ನದಲ್ಲಿ ಕೈಗೂಡಬಹುದು. ವಿದ್ಯಾರ್ಥಿಗಳಿಗೆ ನಿರೀಕ್ಷಿತವಾದ ಶೈಕ್ಷಣಿಕ ಫಲಿತಾಂಶ ದೊರೆಯುವುದಿಲ್ಲ. ಸಣ್ಣ ಪ್ರಮಾಣದ ವ್ಯಾಪಾರ ಮಾಡುತ್ತಿರುವವರಿಗೆ ಒಳ್ಳೆ ಕಾಲ. ಬೇರೆಯವರ ಹೆಸರಿನಲ್ಲಿ ವ್ಯಾಪಾರ ಮಾಡುತ್ತಿರುವವರಿಗೆ ಸ್ವಲ್ಪ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ ಇದೆ. ಇನ್ನು ಸಂತಾನ ಅಪೇಕ್ಷಿಗಳಿಗೆ ಶುಭ ಸುದ್ದಿ ಕೇಳಿಬರುತ್ತದೆ. ವಿವಾಹಕ್ಕೆ ಪ್ರಯತ್ನಿಸುತ್ತಿರುವವರಿಗೆ ವರ್ಷಾಂತ್ಯಕ್ಕೆ ಕಾರ್ಯಾನುಕೂಲ ಇದೆ.
ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಬೇಕು
ವಿವಾಹಿತ ಸ್ತ್ರೀಯರಿಗೆ ತವರು ಮನೆಯಲ್ಲಿ ಕಲಹ ಆಗುವ ಸಾಧ್ಯತೆಗಳಿವೆ. ತುಲಾ ರಾಶಿಯವರು ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಈ ರಾಶಿಯ ಸರಕಾರಿ ನೌಕರರಿಗೆ ತಮ್ಮ ಕೈ ಕೆಳಗಿನವರಿಂದ ಸಹಕಾರ ಸಿಗುವುದಿಲ್ಲ. ಬೇಕಾದ ಕಡೆ ವರ್ಗಾವಣೆ ಪಡೆಯಲು ಶ್ರಮ ಪಟ್ಟರೆ ಕೆಲಸ ಆಗಿಬಿಡುತ್ತದೆ. ವರ್ಷದ ಆದಿಯಲ್ಲಿ ಉದ್ಯೋಗಸ್ಥರು ಕೆಲವು ಅವಮಾನದ ಸನ್ನಿವೇಶ ಎದುರಿಸಬೇಕಾಗುತ್ತದೆ.
ಸೈಟು ಅಥವಾ ಮನೆ ಖರೀದಿಸುವ ಪ್ರಯತ್ನ
ಮನೆಯಲ್ಲಿನ ಹಿರಿಯರೊಬ್ಬರಿಗೆ ಆರೋಗ್ಯ ಸಮಸ್ಯೆ ಆಗುತ್ತದೆ. ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದ ಅನಿವಾರ್ಯ ಇದೆ. ಯಾವುದೇ ವ್ಯವಹಾರದಲ್ಲಿ ಬಾಯಿ ಮಾತು ಬೇಡ. ಯಾವುದಕ್ಕಾದರೂ ದಾಖಲೆ- ಪತ್ರಗಳನ್ನು ಇಟ್ಟುಕೊಳ್ಳಿ. ಈ ವರ್ಷದ ಮಧ್ಯ ಅಥವಾ ಕೊನೆಯಲ್ಲಿ ಸೈಟು ಅಥವಾ ಮನೆ ಖರೀದಿಸುವ ಆಲೋಚನೆ ಅಥವಾ ಯತ್ನ ಕಾಣಿಸುತ್ತಿದೆ.
ಆತ್ಮಸಾಕ್ಷಿಗೆ ವಿರುದ್ಧವಾದ ಕೆಲಸ ಮಾಡುವುದಿಲ್ಲ ಎಂಬ ಸಂಕಲ್ಪ ಮಾಡುತ್ತೀರಿ
ಪಾಲುದಾರಿಕೆ ವ್ಯವಹಾರ ಮಾಡುತ್ತಿರುವವರಿದ್ದಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಾಗುತ್ತದೆ. ಹಾಗೆ ಮಾಡಿದರಷ್ಟೇ ಒಂದಿಷ್ಟು ಲಾಭ ಕಾಣಬಹುದು. ದೊಡ್ಡ ಮಟ್ಟದ ಜನರ ಪರಿಚಯ ಆಗುತ್ತದೆ. ಅವರ ಜತೆಗೆ ವ್ಯವಹಾರ ಮಾಡುವ ಸಾಧ್ಯತೆಗಳು ಕೂಡ ಇವೆ. ಹಲವು ವಿಚಾರದಲ್ಲಿ ನೀವೇ ಮೌನ ತಾಳುತ್ತೀರಿ. ನಿಮ್ಮ ಆತ್ಮಸಾಕ್ಷಿಗೆ ವಿರುದ್ಧವಾದ ಕೆಲಸ ಮಾಡುವುದಿಲ್ಲ ಎಂಬ ಸಂಕಲ್ಪ ಮಾಡುತ್ತೀರಿ. ಇನ್ನು ರಾಜಕೀಯದಲ್ಲಿ ಇರುವವರಿಗೆ ಈ ವರ್ಷದಲ್ಲಿ ಅಧಿಕಾರ ಸಿಗುವ ಸಾಧ್ಯತೆ ಕಡಿಮೆ. ಅದೇನೇ ಪ್ರಯತ್ನ ಪಟ್ಟರೂ ಅದು ಮುಂದಿನ ಸಂವತ್ಸರದಲ್ಲಿಯೇ ಎಂಬಂತೆ ಕಾಣುತ್ತಿದೆ.