ಸಿಂಹ ರಾಶಿಯವರು ತೆಪ್ಪಗಿದ್ದರೆ ಸಮಸ್ಯೆಗಳ ನದಿ ದಾಟುವುದು ಸಲೀಸು
ಇಂದಿನ ಲೇಖನದಲ್ಲಿ ಸಿಂಹ ರಾಶಿಯ ಯುಗಾದಿ ಫಲ ತಿಳಿಸಲಾಗುತ್ತಿದೆ. ಮೊದಲಿಗೆ ಯಾವ ನಕ್ಷತ್ರಗಳು ಸಿಂಹ ರಾಶಿಗೆ ಬರುತ್ತವೆ ಅಂದರೆ, ಮಖಾ ನಕ್ಷತ್ರದ ಒಂದರಿಂದ ನಾಲ್ಕನೇ ಪಾದ, ಪುಬ್ಬಾ (ಪೂರ್ವಫಲ್ಗುಣಿ) ನಕ್ಷತ್ರದ ಒಂದರಿಂದ ನಾಲ್ಕನೇ ಪಾದ ಹಾಗೂ ಉತ್ತರಾ ಫಲ್ಗುಣಿ ನಕ್ಷತ್ರದ ಒಂದನೇ ಪಾದ ಸೇರಿಕೊಂಡು ಸಿಂಹ ರಾಶಿ ಆಗುತ್ತದೆ. ಈ ರಾಶಿಯ ಅಧಿಪತಿ ರವಿ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ವಿಳಂಬಿ ನಾಮ ಸಂವತ್ಸರದಲ್ಲಿ ಸಿಂಹ ರಾಶಿಗೆ ಹನ್ನೆರಡನೇ ಸ್ಥಾನದಲ್ಲಿ ರಾಹು, ಆರನೇ ಮನೆಯಲ್ಲಿ ಕೇತು, ಐದರಲ್ಲಿ ಶನಿ ಹಾಗೂ ಅಕ್ಟೋಬರ್ ತನಕ ಮೂರರಲ್ಲಿ ಆ ನಂತರ ನಾಲ್ಕನೇ ಮನೆಯಲ್ಲಿ ಗುರು ಸಂಚಾರ ಇದೆ. ಈ ಸಂವತ್ಸರದಲ್ಲಿ ಆದಾಯ 11 ಹಾಗೂ ವ್ಯಯ 11 ಇದೆ. ಇನ್ನು ರಾಜ ಮರ್ಯಾದೆ 3, ಅವಮಾನ 6 ಇದೆ.
ಹೊಸ ಜಮೀನು ಖರೀದಿ ಮಾಡಬೇಕು ಅಂದುಕೊಂಡವರು ಬಹಳ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ಬ್ಯಾಂಕ್ ನಿಂದಲೋ ಅಥವಾ ಮೂರನೇ ವ್ಯಕ್ತಿಗಳಿಂದಲೋ ಸಾಲ ಪಡೆದುಕೊಂಡು, ಜಮೀನಿನ ಮೇಲೆ ಹೂಡಿಕೆ ಮಾಡುವ ಆಲೋಚನೆ ಇದ್ದರೆ ಈಗಲೇ ಅಂಥ ತೀರ್ಮಾನವನ್ನು ಕೈ ಬಿಡಿ. ಸಾಲದ ಬಗ್ಗೆ ಕನಸಿನಲ್ಲೂ ಆಲೋಚನೆ ಮಾಡಬೇಡಿ.
ಐದನೇ ಮನೆ ಶನಿಯ ದುಷ್ಪ್ರಭಾವ ಬಹಳ ಹೆಚ್ಚಿರುತ್ತದೆ
ವರ್ಗಾವಣೆ ನಿರೀಕ್ಷೆ ಮಾಡುತ್ತಿರುವವರಿಗೆ ಅಂದುಕೊಂಡಂತೆ ಆಗಲ್ಲ. ಇನ್ನು ಆರನೇ ಮನೆಯಲ್ಲಿನ ಕೇತು ಒಳಿತನ್ನು ಮಾಡುವುದು ಹೌದಾದರೂ ಐದನೇ ಮನೆಯ ಶನಿಯ ದುಷ್ಪ್ರಭಾವ ಹೆಚ್ಚಿರುತ್ತದೆ. ಸಿಂಹ ರಾಶಿಯವರಿಗೆ ಮೂರು ಮೂಲ ಮಂತ್ರಗಳಿವೆ. ಒಂದು ಸಾಲ ತೆಗೆದುಕೊಳ್ಳಬಾರದು, ಎರಡನೆಯದು ಸಾಲ ಕೊಡಬಾರದು ಹಾಗೂ ಮೂರನೆಯದಾಗಿ ಮಧ್ಯ ನಿಂತು ಬೇರೆಯವರಿಗೆ ಸಾಲವನ್ನೂ ಕೊಡಿಸಬಾರದು. ಇನ್ನು ಸ್ನೇಹಿತರನ್ನು ನಂಬಿ ಯಾವುದೇ ಕೆಲಸಕ್ಕೂ ಕೈ ಹಾಕಬೇಡಿ.
ಹಿಂದೆ-ಮುಂದೆ ಆಲೋಚಿಸದೆ ಯಾರಿಗೂ ಮಾತು ಕೊಡಬೇಡಿ
ಈ ಸಂವತ್ಸರದ ಮೊದಲ ನಾಲ್ಕು ತಿಂಗಳು ಸ್ವಲ್ಪ ಕಷ್ಟದಾಯಕವಾಗಿದೆ. ಆರ್ಥಿಕವಾಗಿ ಎಚ್ಚರಿಕೆಯಿಂದ ಇರಬೇಕು. ಅಂದುಕೊಂಡಂತೆ ಯಾವ ಕೆಲಸ ಆಗುವುದಿಲ್ಲ. ಬೇರೆಯವರ ಕೆಲಸಗಳಿಗೆ ವೃಥಾ ಓಡಾಟ ಮಾಡಬೇಡಿ. ಇಂಥ ಕೆಲಸ- ಈ ಅವಧಿಯಲ್ಲಿ ಮಾಡಿಕೊಡ್ತೀವಿ ಅಂತ ಮಾತು ಕೊಡಬೇಡಿ. ಮಧ್ಯದ ಎರಡೂವರೆ ತಿಂಗಳು ಕೆಲಸ ಆಗುವ ಲಕ್ಷಣಗಳು ಕಾಣುವುದರಿಂದ ಕೆಲವು ವಿಷಯಗಳಲ್ಲಿ ಧೈರ್ಯದಿಂದ ಮುನ್ನುಗ್ಗಿ ಕೆಲಸ ಮಾಡಿಕೊಳ್ಳಬಹುದು. ನೀವಂತೂ ಯಾವ ವಿಚಾರದಲ್ಲೂ ಆಸೆ ಕೂಡ ಇಟ್ಟುಕೊಳ್ಳಬೇಡಿ.
ನೀವಾಯಿತು, ನಿಮ್ಮ ಕೆಲಸ ಆಯಿತು ಅಂತಿದ್ದರೆ ಒಳ್ಳೆಯದು
ಉದ್ಯೋಗದಲ್ಲಿ ಇರುವಂಥವರು ಮೇಲಧಿಕಾರಿಗಳ ಜತೆ ವ್ಯವಹರಿಸುವಾಗ ಎಚ್ಚರ. ಇನ್ನು ನೀವಾಗಿಯೇ ಯಾರ ಮೇಲೂ ಬಿದ್ದ ಜಗಳ ಆಡಬೇಡಿ. ಯಾವುದೇ ಗುಂಪಿನ ಜತೆ ಗುರುತಿಸಿಕೊಳ್ಳಬೇಡಿ. ಯಾವ ಗುಂಪಿನ ನಾಯಕತ್ವ ಸಹ ವಹಿಸಿಕೊಳ್ಳಬೇಡಿ. ನೀವಾಯಿತು, ನಿಮ್ಮ ಕೆಲಸ ಆಯಿತು ಅಂತಿದ್ದರೆ ಒಳೆಯದು.
ಸಂವತ್ಸರದ ಕೊನೆಯ ನಾಲ್ಕು ತಿಂಗಳು ಉತ್ತಮ ಫಲ
ಸಂವತ್ಸರದ ಕೊನೆ ನಾಲ್ಕು ತಿಂಗಳು ಅವಿವಾಹಿತರಿಗೆ ವಿವಾಹ ಯೋಗ ಇದೆ. ಸಂತಾನದ ನಿರೀಕ್ಷೆ ಇರುವವರಿಗೆ ಶುಭ ಸುದ್ದಿ ಇದೆ. ಉದ್ಯೋಗದಲ್ಲೂ ಬದಲಾವಣೆ ನಿರೀಕ್ಷೆ ಮಾಡಬಹುದು. ಇನ್ನು ಸಿಂಹ ರಾಶಿಯವರ ಮಕ್ಕಳಿಗೆ ಸಂವತ್ಸರದ ಆರಂಭದಲ್ಲಿ ಅನಾರೋಗ್ಯ ಕಾಡಿದ್ದರೆ ಕೊನೆಯ ನಾಲ್ಕು ತಿಂಗಳಲ್ಲಿ ಚೇತರಿಕೆ ಕಾಣುತ್ತದೆ. ಸ್ವಂತ ಬಂಡವಾಳ ಹೂಡಿ, ಈಗಾಗಲೇ ಕಷ್ಟದಲ್ಲಿ ಸಿಲುಕಿದ್ದೀನಿ ಅಂತ ಇರುವವರು ಶನೈಶ್ಚರ ಶಾಂತಿಯನ್ನು ತಕ್ಷಣ ಮಾಡಿಸಿಕೊಳ್ಳಿ.