ಮೇಷ ರಾಶಿ ಯುಗಾದಿ ಫಲ, ಮೊದಲ 8 ತಿಂಗಳು ಬೊಂಬಾಟ್
ಯುಗಾದಿ ಬಂದರೆ ಆದಾಯ-ವ್ಯಯ, ಆರೋಗ್ಯ-ಅನಾರೋಗ್ಯ, ರಾಜಕೋಪ-ರಾಜಪೂಜಾ, ಲಾಭ-ನಷ್ಟವನ್ನು ಪಂಚಾಂಗ ಫಲದಲ್ಲಿ ಹೇಳುವ ಪದ್ಧತಿ ಇದೆ. ಇಂದಿನಿಂದ ಯುಗಾದಿ ಫಲದ ಲೇಖನ ಮೇಷ ರಾಶಿಯೊಂದಿಗೆ ಆರಂಭಿಸಲಾಗಿದೆ. ಹನ್ನೆರಡು ರಾಶಿಗಳವರ ಸಂವತ್ಸರ ಫಲವನ್ನು ತಿಳಿಸಲಾಗುವುದು. ಒನ್ಇಂಡಿಯಾ ಕನ್ನಡದಲ್ಲಿ ನಿರೀಕ್ಷಿಸಿ. ಎಲ್ಲರಿಗೂ ಶುಭ-ಲಾಭವಾಗಲಿ. - ಸಂಪಾದಕ
****
ಇನ್ನೇನು ಯುಗಾದಿಗೆ ದಿನಗಣನೆ ಶುರುವಾಗಿದೆ. ಪ್ರತಿ ಬಾರಿ ಯುಗಾದಿಯಲ್ಲೂ ಪಂಚಾಂಗ ಶ್ರವಣ ಮಾಡುವುದು ಸಂಪ್ರದಾಯ. ಇಂದಿನ ಲೇಖನದಲ್ಲಿ ಮೇಷ ರಾಶಿ ಅವರ ಯುಗಾದಿ ಭವಿಷ್ಯವನ್ನು ತಿಳಿಸಲಾಗುವುದು. ಅಶ್ವಿನಿ, ಭರಣಿ ನಕ್ಷತ್ರದ ನಾಲ್ಕು ಪಾದ ಹಾಗೂ ಕೃತ್ತಿಕಾ ನಕ್ಷತ್ರದ ಒಂದು ಪಾದ ಮೇಷ ರಾಶಿಗೆ ಸೇರುತ್ತವೆ.
ಈ ರಾಶಿಯವರ ಅಧಿಪತಿ ಕುಜ. ಆದ್ದರಿಂದ ಈ ರಾಶಿಯವರ ಪೈಕಿ ಬಹುತೇಕರಲ್ಲಿ ಕೋಪ ತುಂಬ ಬಹು ಬೇಗ ಬರುತ್ತದೆ. ಸಿಟ್ಟನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಇವರಿಗೆ ಬಹಳ ಮುಖ್ಯ. ಜತೆಗೆ ಸ್ವಲ್ಪ ಮಟ್ಟಿಗೆ ಹುಂಬತನ ಸಹ ಇರುತ್ತದೆ. ಆ ಕಾರಣದಿಂದ ಕೆಲ ಸಲ ಬಂಡೆಗೆ ತಲೆ ಚಚ್ಚಿಕೊಳ್ಳುವಂಥ ಹುಂಬ ಸಾಹಸಕ್ಕೆ ಕೈ ಹಾಕುವ ಸಾಧ್ಯತೆ ಇರುತ್ತದೆ.
2018ರ ಮೇಷ ವರ್ಷ ಭವಿಷ್ಯ: ಹಳಿಗೆ ಬಂದ ರೈಲಿನ ಚೈನ್ ಎಳೀಬೇಡಿ
ಇದು ಸ್ವಭಾವದ ವಿಷಯವಾಯಿತು. ಮತ್ತೆ ಯುಗಾದಿ ಭವಿಷ್ಯದ ವಿಚಾರಕ್ಕೆ ಬರೋಣ. ಮಾರ್ಚ್ ಹದಿನೆಂಟನೇ ತಾರೀಕು ನಾವು ವಿಳಂಬಿನಾಮ ಸಂವತ್ಸರಕ್ಕೆ ಕಾಲಿಡಲಿದ್ದೇವೆ. ಈ ಸಂವತ್ಸರದಲ್ಲಿ ನಿಮ್ಮ ಆದಾಯ ಹೇಗಿರುತ್ತದೆ? ಆರೋಗ್ಯದ ಸ್ಥಿತಿ ಯಾವ ಮಟ್ಟದಲ್ಲಿರುತ್ತದೆ? ಸಮಾಜದಲ್ಲಿ ಹಾಗೂ ಕುಟುಂಬದಲ್ಲಿ ನಿಮಗೆ ಗೌರವ- ಮನ್ನಣೆ ಸಿಗುತ್ತದೆಯಾ? ಈ ಮೂರು ವಿಚಾರಗಳನ್ನು ಪ್ರಮುಖವಾಗಿ ತಿಳಿಸಲಾಗುತ್ತದೆ.
ಮೊದಲ ಎಂಟು ತಿಂಗಳು ಉತ್ತಮ ಸಮಯ
ವಿಳಂಬಿನಾಮ ಸಂವತ್ಸರದ ಮೊದಲ ನಾಲ್ಕು ತಿಂಗಳು ಸಪ್ತಮದಲ್ಲಿನ ಗುರು ಅವಿವಾಹಿತರಿಗೆ ಉತ್ತಮ ಕಾಲ. ವಿದ್ಯಾರ್ಥಿಗಳಿಗೆ ಒಳ್ಳೆ ಫಲಿತಾಂಶ ದೊರೆಯುತ್ತದೆ. ಎರಡನೇ ನಾಲ್ಕು ತಿಂಗಳು ವಿದೇಶ ಪ್ರಯಾಣ ಮಾಡುವ ಸಾಧ್ಯತೆ ಇದೆ. ಹಣದ ವ್ಯವಹಾರ ಚೆನ್ನಾಗಿ ಕೂಡಿಬರುತ್ತದೆ. ಭೂಮಿ ಖರೀದಿ ಅನುಕೂಲ ಇದೆ.
ಕೊನೆ ನಾಲ್ಕು ತಿಂಗಳು ಕಷ್ಟ
ಕೊನೆಯ ನಾಲ್ಕು ತಿಂಗಳು ಆರೋಗ್ಯ ಬಾಧೆ, ಕೋರ್ಟ್- ಕಚೇರಿ ವ್ಯಾಜ್ಯಗಳು ಕಂಡುಬರುತ್ತಿದೆ. ಅಂದರೆ ಮಾರ್ಚ್ ನಿಂದ ಆರಂಭಗೊಂಡು ಎಂಟು ತಿಂಗಳು ಒಳ್ಳೆ ಸಮಯ ಇದ್ದರೆ, ಆ ನಂತರದ ನಾಲ್ಕು ತಿಂಗಳು ಅಷ್ಟಾಗಿ ಚೆನ್ನಾಗಿಲ್ಲ. ಮುಖ್ಯವಾಗಿ ಆರೋಗ್ಯದ ವಿಚಾರವನ್ನು ನಿರ್ಲಕ್ಷ್ಯ ಮಾಡಬೇಡಿ.
ಸಾಮಾಜಿಕ ಮನ್ನಣೆ, ಗೌರವದ ಅರ್ಧದಷ್ಟು ಅವಮಾನ ಸಾಧ್ಯತೆ
ಈ ಸಲ ಸಾಮಾಜಿಕವಾಗಿ, ಕೌಟುಂಬಿಕವಾಗಿ ನಿಮಗೆ ಮನ್ನಣೆ ಸಿಗುತ್ತಿದೆ ಎಂಬುದು ಗಮನಕ್ಕೆ ಬರಲಿದೆ. ಆದರೆ ಕೆಲವು ಕಡೆ ಅವಮಾನ ಎದುರಿಸುವುದನ್ನು ಸಹ ಕಾಣಬಹುದು. ಏಕೆಂದರೆ ರಾಜಪೂಜಾ ಎಂಟು ಹಾಗೂ ರಾಜ ಕೋಪ ನಾಲ್ಕು ಅಂತಿದೆ. ಅಂದರೆ ಅವಮಾನದ ಪ್ರಮಾಣ ಸನ್ಮಾನದ ಅರ್ಧದಷ್ಟಿದೆ. ಆದ್ದರಿಂದ ಸಕಾರಾತ್ಮಕವಾಗಿ ಈ ಅಂಶವನ್ನು ತೆಗೆದುಕೊಳ್ಳಬಹುದು.
ಹಣಕಾಸಿನ ಖರ್ಚು ವಿಚಾರದಲ್ಲಿ ಹೆಚ್ಚು ಗಮನ ಕೊಡಬೇಕು
ಇನ್ನು ಲಾಭ- ನಷ್ಟದ ವಿಚಾರವನ್ನು ಹೇಳುವುದಾದರೆ ಲಾಭ 7 ಹಾಗೂ ನಷ್ಟ 5 ಎಂದಿದೆ. ಅಂದರೆ ಹೆಚ್ಚಿನ ಪ್ರಮಾಣದ ಉಳಿತಾಯ ಕಾಣುವುದಿಲ್ಲ. ಆದ್ದರಿಂದ ಹಣಕಾಸಿನ ಖರ್ಚಿನ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲ. ಮತ್ತು ಬಹಳ ಎಚ್ಚರಿಕೆಯಿಂದ ನಡೆದುಕೊಳ್ಳುವ ಅಗತ್ಯವನ್ನು ಇದು ತಿಳಿಸುತ್ತದೆ.