ವಿಳಂಬಿ ಸಂವತ್ಸರದಲ್ಲಿ ಕುಂಭ ರಾಶಿಯವರಿಗೆ ಶುಭ ಸುದ್ದಿಯೇ ಹೆಚ್ಚಿದೆ
ಈ ದಿನ ವಿಳಂಬಿನಾಮ ಸಂವತ್ಸರದಲ್ಲಿ ಕುಂಭ ರಾಶಿಯವರಿಗೆ ಹೇಗಿರುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಧನಿಷ್ಠಾ ನಕ್ಷತ್ರದ ಮೂರು ಮತ್ತು ನಾಲ್ಕನೇ ಪಾದ, ಶತಭಿಷಾ ನಕ್ಷತ್ರದ ಒಂದು, ಎರಡು, ಮೂರು ಮತ್ತು ನಾಲ್ಕನೇ ಪಾದ, ಪೂರ್ವಾಭಾದ್ರಾ ನಕ್ಷತ್ರದ ಒಂದು, ಎರಡು ಮತ್ತು ಮೂರನೇ ಪಾದ ಸೇರಿ ಕುಂಭ ರಾಶಿ ಆಗುತ್ತದೆ. ಈ ರಾಶಿಯ ಅಧಿಪತಿ ಶನಿ.
ಅಂಬರೀಶ್ ರಾಜಕೀಯ ಭವಿಷ್ಯದ ಟಾರೋ ಕಾರ್ಡ್ ಏನು ಹೇಳುತ್ತದೆ?
ಕುಂಭ ರಾಶಿಯವರಿಗೆ ಗೋಚಾರದ ಸ್ಥಿತಿ ಹೇಗಿದೆ ಅಂತ ನೋಡಿದರೆ, ಹನ್ನೊಂದನೇ ಸ್ಥಾನದಲ್ಲಿ ಶನಿ, ಆರನೇ ಮನೆಯಲ್ಲಿ ರಾಹು, ಹನ್ನೆರಡನೇ ಸ್ಥಾನದಲ್ಲಿ ಕೇತು, ಈ ವರ್ಷದ ಅಕ್ಟೋಬರ್ ವರೆಗೆ ಒಂಬತ್ತನೇ ಸ್ಥಾನದಲ್ಲಿ ಗುರು, ಆ ನಂತರ ಹನ್ನೊಂದನೇ ಮನೆಗೆ ಗುರು ಗ್ರಹದ ಪ್ರವೇಶ ಆಗುತ್ತದೆ.
ಉದ್ಯೋಗ- ವೃತ್ತಿ ಯಶಸ್ಸಿಗೆ ಜ್ಯೋತಿಷ್ಯ ಟಿಪ್ಸ್, ಶನಿ ಆರಾಧನೆ ಮಹತ್ವ
ಹನ್ನೊಂದರ ಶನಿ ಹಾಗೂ ಒಂಬತ್ತನೇ ಸ್ಥಾನದಲ್ಲಿರುವ ಗುರು ಶುಭ ಫಲಗಳನ್ನು ಸೂಚಿಸುತ್ತವೆ. ಇನ್ನು ಆರನೇ ಮನೆಯಲ್ಲಿನ ರಾಹು ಕೂಡ ಒಳಿತನ್ನೇ ಸೂಚಿಸುತ್ತದೆ. ಹನ್ನೆರಡನೇ ಮನೆಯಲ್ಲಿನ ಕೇತು ಖರ್ಚು ಮಾಡಿಸುತ್ತಾನಾದರೂ ಧರ್ಮ ಕಾರ್ಯಾಸಕ್ತಿ ಮೂಡಿಸುತ್ತದೆ. ಜತೆಗೆ ಮನೆಯಲ್ಲಿನ ಹಿರಿಯರ ಸಲುವಾಗಿ ಖರ್ಚು ಮಾಡಬೇಕಾಗುತ್ತದೆ. ಯಾವುದೇ ಬೇಸರ ಇಲ್ಲದೆ ಖರ್ಚು ಮಾಡಿ. ಸೇವೆ ಮಾಡುವ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ.
ಶುಭ ಕಾರ್ಯಗಳಿಗೆ ಖರ್ಚು ಹೆಚ್ಚಾಗುತ್ತದೆ
ವಿಳಂಬಿನಾಮ ಸಂವತ್ಸರದಲ್ಲಿ ಕುಂಭ ರಾಶಿಯವರ ಆದಾಯ 8, ವ್ಯಯ 14 ಇದೆ. ಇನ್ನು ಆರೋಗ್ಯ 2, ಅನಾರೋಗ್ಯ 3, ರಾಜಪೂಜಾ 5 ಹಾಗೂ ರಾಜ ಕೋಪ 6 ಮತ್ತು ಸುಖ 3, ದುಃಖ 3 ಹೀಗಿವೆ. ಮಕರ ಹಾಗೂ ಕುಂಭ ರಾಶಿಯವರ ಸಂವತ್ಸರ ಫಲಗಳು ಒಂದೇ ಸಂಖ್ಯೆಯಲ್ಲಿದ್ದು, ಖರ್ಚು ಹೆಚ್ಚಿನ ಪ್ರಮಾಣದಲ್ಲಿದ್ದರೂ ಶುಭ ಕಾರ್ಯಗಳಿಗೆ, ಉತ್ತಮ ಕೆಲಸಗಳಿಗೆ ಆಗುತ್ತದೆ. ಈ ಸಂವತ್ಸರದಲ್ಲಿ ಸಂತಾನ ಅಪೇಕ್ಷಿಗಳಿಗೆ ಶುಭ ಸುದ್ದಿ, ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ವ್ಯಾಜ್ಯ ಇದ್ದರೆ ಪರಿಹಾರ ಆಗುತ್ತದೆ. ಆಸ್ತಿ ಬರಬೇಕಿದ್ದಲ್ಲಿ ಅನಿರೀಕ್ಷಿತವಾಗಿ ಬರುತ್ತದೆ.
ಧನಿಷ್ಠಾ, ಶತಭಿಷಾ, ಪೂರ್ವಾಭಾದ್ರಾ ನಕ್ಷತ್ರದ ವಿಶ್ಲೇಷಣೆ
ಧನಿಷ್ಠಾ ಹಾಗೂ ಶತಭಿಷಾ ನಕ್ಷತ್ರದವರಿಗೆ ಆದಾಯ ವಿಚಾರದಲ್ಲಿ ಅಂಥ ಸಮಸ್ಯೆಯೇನೂ ಇಲ್ಲ. ಶತಭಿಷಾ ನಕ್ಷತ್ರದವರಿಗೆ ಸಂವತ್ಸರದ ಮೊದಲ ನಾಲ್ಕು ತಿಂಗಳು ಒಳ್ಳೆ ಆದಾಯ ಇರುತ್ತದೆ. ಧನಿಷ್ಠಾ ನಕ್ಷತ್ರದವರಿಗೆ ಮೊದಲ ನಾಲ್ಕು ಹಾಗೂ ಕೊನೆಯ ನಾಲ್ಕು ತಿಂಗಳ ಅಡ್ಡಿ ಇಲ್ಲ. ಇನ್ನು ಪೂರ್ವಾಭಾದ್ರ ನಕ್ಷತ್ರಕ್ಕೆ ಮೊದಲ ಹಾಗೂ ಕೊನೆಯ ನಾಲ್ಕು ತಿಂಗಳು ಸುಮಾರಾಗಿಯೂ, ಮಧ್ಯದ ನಾಲ್ಕು ತಿಂಗಳು ಕಷ್ಟವಾಗಿಯೂ ಇರುತ್ತದೆ. ಇದು ಆದಾಯಕ್ಕೆ ಸಂಬಂಧಿಸಿದ ಸಂಗತಿ.
ಈಗ ಮಾಡಿದ ಹೂಡಿಕೆಯಿಂದ ಭವಿಷ್ಯದಲ್ಲಿ ಅನುಕೂಲ
ಕುಂಭ ರಾಶಿಯವರು ಒಂದಿಷ್ಟು ತಾಳ್ಮೆಯಿಂದ ವರ್ತಿಸಿದರೆ ಒಳ್ಳೆ ಕಡೆ ಹೂಡಿಕೆ ಆಗುವ ಸಾಧ್ಯತೆ ಇದೆ. ಸಾಲ ಆದರೂ ಅದರಿಂದ ಭವಿಷ್ಯಕ್ಕೆ ಸಹಾಯ ಆಗುವಂಥ ಕಡೆ ಹೂಡಿಕೆ ಆಗಿ, ಭವಿಷ್ಯದಲ್ಲಿ ಅದರಿಂದ ಒಳ್ಳೆ ಪ್ರತಿಫಲ ಸಿಗಲಿದೆ. ಅಕ್ಟೋಬರ್ ವರೆಗೆ ಒಂಬತ್ತನೇ ಸ್ಥಾನದಲ್ಲಿರುವ ಗುರು ಒಳ್ಳೆ ಮಾರ್ಗದರ್ಶಕರನ್ನು ಪರಿಚಯ ಆಗುವಂತೆ ಮಾಡುತ್ತದೆ. ಅದರ ಸದುಪಯೋಗ ಪಡೆದುಕೊಳ್ಳಿ.
ಸಂಬಳ ಹೆಚ್ಚಳ, ಬಡ್ತಿ ನಿರೀಕ್ಷೆ ಮಾಡಬಹುದು
ಉದ್ಯೋಗ ಬದಲಾವಣೆ ಮಾಡಬೇಕಿದ್ದಲ್ಲಿ ಅಕ್ಟೋಬರ್ ವರೆಗೆ ಉತ್ತಮ ಕಾಲವಿದು. ಮದುವೆಗೆ ವರ ಅಥವಾ ವಧು ಅನ್ವೇಷಣೆಯಲ್ಲಿ ತೊಡಗಿರುವವರಿಗೆ ಉತ್ತಮ ಸಂಬಂಧ ಒದಗಿಬರುತ್ತದೆ. ಬಡ್ತಿಯ ನಿರೀಕ್ಷೆಯಲ್ಲಿ ಇರುವವರಿಗೆ ಹಾಗೂ ಸಂಬಳ ಹೆಚ್ಚಳದ ನಿರೀಕ್ಷೆಯಲ್ಲಿರುವವರಿಗೆ ಅಂದುಕೊಂಡಿದ್ದು ನೆರವೇರುವ ಕಾಲ ಇದು.