ಯುಗಾದಿ ಭವಿಷ್ಯ 2020 : ಗೋಚಾರ ದೋಷಕ್ಕೆ ಪರಿಹಾರ ಮಾರ್ಗಗಳು
ಯುಗಾದಿ ರಾಶಿ ಫಲ ಓದಿದ ಸಹಸ್ರಾರು ಮಂದಿಯ ಪೈಕಿ ಹಲವರು ತಮ್ಮ ರಾಶಿಗೆ ಇರುವ ಗೋಚಾರ ಸಮಸ್ಯೆಗೆ ಪರಿಹಾರ ಏನು ಎಂದು ಕೇಳುತ್ತಿದ್ದಾರೆ. ಕೆಲವರಿಗೆ ಗುರು ಗ್ರಹ ಚೆನ್ನಾಗಿದ್ದರೆ, ಮತ್ತೆ ಕೆಲವರಿಗೆ ಶನಿ ಗ್ರಹ ಚೆನ್ನಾಗಿದೆ. ಆದರೆ ಜಾತಕ ನೋಡದ ಹೊರತು, ನಿರ್ದಿಷ್ಟವಾದ ಪರಿಹಾರ ಸೂಚಿಸುವುದು ಕಷ್ಟಸಾಧ್ಯ.
ಆದರೆ, ಹೇಗೆ ತಲೆ ನೋವು, ಕೆಮ್ಮು ಈ ಥರದ ಸಮಸ್ಯೆಗಳಿಗೆ ಸಾಮಾನ್ಯವಾದ ಮಾತ್ರೆ ಅಥವಾ ಔಷಧಿಯನ್ನು ಹೇಳಬಹುದೋ ಆ ಥರದಲ್ಲಿ ಕೆಲವು ಸಾಮಾನ್ಯವಾದ ಪರಿಹಾರಗಳನ್ನು ಸೂಚಿಸಬಹುದು. ತಕ್ಷಣಕ್ಕೆ ಮುಖ್ಯವಾದ ಕೆಲಸವನ್ನು ಮಾಡುತ್ತಿರುವವರು ಇವುಗಳನ್ನು ಅನುಸರಿಸಬಹುದು.
ಅನುಕೂಲ ಆದಲ್ಲಿ ಮಾತ್ರ ಜನ್ಮ ಜಾತಕವನ್ನು ತೋರಿಸಿಯೇ ಪರಿಹಾರ ಕಂಡುಕೊಳ್ಳಿ. ಏಕೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಅನ್ವಯಿಸುವಂಥ ಕೆಲವು ಪರಿಹಾರಗಳು ಇವೆ. ಆದರೆ ಅದು ಎಲ್ಲ ಸಂದರ್ಭದಲ್ಲಿ, ಎಲ್ಲರಿಗೂ ಕೆಲಸ ಮಾಡುತ್ತದಾ ಅಂದರೆ... ಶೇಕಡಾ ಐವತ್ತರಷ್ಟು ಮಾತ್ರ ಎಂದು ಹೇಳಬಹುದು. ಆದ್ದರಿಂದ ದ್ವಾದಶ ರಾಶಿಗಳಿಗೆ ಸುಲಭವಾದ ಪರಿಹಾರ ಮಾರ್ಗಗಳನ್ನು ತಿಳಿಸುತ್ತಿದ್ದೇನೆ.
Ugadi Bhavishya 2020 : ದ್ವಾದಶ ರಾಶಿಗಳ ಯುಗಾದಿ ಫಲಾಫಲ
ಯಾವುದೇ ಮಾರ್ಗದರ್ಶನಕ್ಕೆ, ಸೂಕ್ತ ಜಾತಕ ವಿಶ್ಲೇಷಣೆಗೆ ವೈಯಕ್ತಿಕವಾಗಿ ಭೇಟಿಗೆ ಮೊಬೈಲ್ ಫೋನ್ ಸಂಖ್ಯೆ 9886665656- 9886155755 ಸಂಪರ್ಕಿಸಿ.
ವೆಬ್ಸೈಟ್ ವಿಳಾಸ : https://www.sadgurusai.in
ಮೇಷ
ನಿಮ್ಮ ರಾಶಿಯವರು ದಶರಥ ಕೃತ ಶನೈಶ್ಚರ ಸ್ತೋತ್ರವನ್ನು ಪಠಣ ಮಾಡಬೇಕು. ಇದರಿಂದ ನಿಮ್ಮ ಉದ್ಯೋಗ ಸ್ಥಾನದಲ್ಲಿ ಅಥವಾ ಕರ್ಮ ಸ್ಥಾನದಲ್ಲಿ ಆಗುವ ತೊಂದರೆಗಳನ್ನು ನಿವಾರಿಸಿಕೊಳ್ಳಲು ಅನುಕೂಲ ಆಗುತ್ತದೆ. ಪುಸ್ತಕದ ಅಂಗಡಿಯಲ್ಲಿ ಈ ಪುಸ್ತಕವನ್ನು ಕೇಳಿದರೆ ದೊರೆಯುತ್ತದೆ. ಕನ್ನಡದಲ್ಲಿಯೇ ಸಿಗುವ ಸ್ತೋತ್ರದ ಪುಸ್ತಕವನ್ನು ನಿತ್ಯವೂ ಪಠಣ ಮಾಡಿ. ಇನ್ನು ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಮಂಗಳವಾರದಂದು ತೆರಳಿ, ದರ್ಶನ ಪಡೆಯಿರಿ.
ವೃಷಭ
ಯತ್ನ ಕಾರ್ಯಗಳಲ್ಲಿ ಯಶಸ್ಸು ಸಿಗಬೇಕು. ಕೈ ಹಿಡಿದ ಕೆಲಸಗಳು ಪೂರ್ತಿಯಾಗಿ ಮುಗಿಯಬೇಕು. ಮನೆಯಲ್ಲಿ ಹಿರಿಯ ಆರೋಗ್ಯ ಸುಧಾರಣೆ ಆಗಬೇಕು ಎಂದಾದಲ್ಲಿ ನವಗ್ರಹ ಗುಡಿಗೆ ತೆರಳಿ ವಿಗ್ರಹಗಳನ್ನು ಕೈಯಿಂದ ಮುಟ್ಟದೆ, ಸಾಷ್ಟಾಂಗ ನಮಸ್ಕಾರ ಮಾಡದೆ ಒಂದು ಬದಿಯಿಂದ ಶನೈಶ್ಚರ ವಿಗ್ರಹಕ್ಕೆ ಕೈ ಮುಗಿದು ನಮಸ್ಕರಿಸಿ. ವಿಗ್ರಹದ ನೇರ ದೃಷ್ಟಿಗೆ ನಿಂತು ನಮಸ್ಕಾರ ಮಾಡದಿರಿ.
ಮಿಥುನ
ಪ್ರತಿ ಮಂಗಳವಾರ ನರಸಿಂಹ ದೇವರ ದೇವಸ್ಥಾನಕ್ಕೆ ತೆರಳಿ ಇಪ್ಪತ್ತೊಂದು ನಮಸ್ಕಾರ ಮಾಡಿ. ಪ್ರತಿ ಗುರುವಾರ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಹೋಗಿ ದರ್ಶನ ಮಾಡಿ ಬನ್ನಿ. ಈ ಎರಡು ದಿನಗಳಲ್ಲಿ ತಿಂಗಳಲ್ಲಿ ಒಮ್ಮೆ ಪಂಚಾಮೃತ ಅಭಿಷೇಕ ಮಾಡಿಸುವುದು ಉತ್ತಮ. ಆರೋಗ್ಯದಲ್ಲಿ ಹಾಗೂ ವಾಹನ ಚಾಲನೆಯಲ್ಲಿ ಎಚ್ಚರಿಕೆಯಿಂದ ಇರಬೇಕು.
ಕರ್ಕಾಟಕ
ಶತ್ರು ಬಾಧೆ ನಿವಾರಣೆ ಆಗುವುದಕ್ಕೆ ಹಾಗೂ ಸಂಸಾರದಲ್ಲಿ ನೆಮ್ಮದಿ ನೆಲೆಸುವುದಕ್ಕೆ, ಪಾರ್ಟನರ್ ಷಿಪ್ ವ್ಯವಹಾರಗಳಲ್ಲಿ ನಷ್ಟ ಆಗದಿರುವಂತೆ ಇರಲು ಆಂಜನೇಯ ಸ್ವಾಮಿ ದೇಗುಲಕ್ಕೆ ವಸ್ತ್ರ ಸಮರ್ಪಣೆ ಮಾಡಿ. ಹಳದಿ ಬಟ್ಟೆಯಲ್ಲಿ ಕಡಲೆಕಾಳು ಕಟ್ಟಿ, ದಕ್ಷಿಣೆ ಸಹಿತ ಬ್ರಾಹ್ಮಣರಿಗೆ ದಾನ ಮಾಡಿ.
ಸಿಂಹ
ಆರೋಗ್ಯ ಸುಧಾರಣೆಗೆ, ಶತ್ರು ಬಾಧೆ ನಿವಾರಣೆಗೆ ನಿಮ್ಮ ಜಾತಕವನ್ನೊಮ್ಮೆ ಪರಿಶೀಲನೆ ಮಾಡಿಸಿ, ಕನಕ ಪುಷ್ಯರಾಗ ಅದೃಷ್ಟ ರತ್ನವನ್ನು ಧರಿಸಿ. ಅದು ಒಂದು ವೇಳೆ ಸಾಧ್ಯವಿಲ್ಲದಿದ್ದಲ್ಲಿ ಮಂತ್ರಾಲಯಕ್ಕೆ ತೆರಳಿ, ಕನಿಷ್ಠ ಮೂರು ದಿನದ ಸೇವೆಯನ್ನು ಮಾಡಲು ಪ್ರಯತ್ನಿಸಿ.
ಕನ್ಯಾ
ನಿಮ್ಮಿಂದ ಸಾಧ್ಯವಾದಷ್ಟು ಬಡಬಗ್ಗರಿಗೆ ಅನ್ನ ಸಂತರ್ಪಣೆ ಮಾಡಿ. ವಿಷ್ಣು ದೇವಾಲಯದಲ್ಲಿ ದೇವರಿಗೆ ನೈವೇದ್ಯ ಮಾಡಿಸಿ, ಅದನ್ನು ಬಡವರಿಗೆ ಹಂಚಿ. ಕಂಬಳಿ, ವಸ್ತ್ರದಾನ ಮಾಡಿದರೆ ಆರೋಗ್ಯದಲ್ಲೂ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣಿಸಿಕೊಳ್ಳುತ್ತದೆ. ಈ ಅವಧಿಯಲ್ಲಿ ಕಪ್ಪು ಬಟ್ಟೆ ಧಾರಣೆ ಮಾಡದಿರಿ.
ತುಲಾ
ನಿಮ್ಮಿಂದ ಸಾಧ್ಯವಾದಲ್ಲಿ ಒಮ್ಮೆ ಜಾತಕವನ್ನು ಪರಿಶೀಲನೆ ಮಾಡಿಸಿ, ನೀಲ ರತ್ನವನ್ನು ಬೆಳ್ಳಿಯಲ್ಲಿ ಕೂಡಿಸಿ, ಮಧ್ಯದ ಬೆರಳಿಗೆ ಹಾಕಿಕೊಳ್ಳಿ. ನೆನಪಿಡಿ, ಜಾತಕದ ಪರಿಶೀಲನೆ ಮಾಡಿಸದೆ ಯಾವ ಕಾರಣಕ್ಕೂ ನೀಲ ರತ್ನವನ್ನು ಧಾರಣೆ ಮಾಡದಿರಿ. ಯಾರ ಬಗ್ಗೆಯೂ ಹಗುರವಾದ ಮಾತನಾಡದಿರಿ, ಎಚ್ಚರ.
ವೃಶ್ಚಿಕ
ಗುರುವಾರದಂದು ಕಡ್ಲೇಕಾಳನ್ನು (ಹಸಿ) ಬ್ರಾಹ್ಮಣರಿಗೆ ದಕ್ಷಿಣೆ ಸಹಿತವಾಗಿ ದಾನ ಮಾಡಬೇಕು. ಇದರ ಜತೆಗೆ ಗುರು ಸಮಾನರಾದ ದಂಪತಿಗೆ ವಸ್ತ್ರವನ್ನು ನೀಡಬೇಕು. ಜಾತಕದಲ್ಲಿ ಗುರು ಗ್ರಹದ ಸ್ಥಿತಿಯನ್ನು ಸಹ ಒಮ್ಮೆ ತೋರಿಸಿಕೊಳ್ಳಿ. ಇನ್ನು ಉದ್ದು- ಹುರುಳಿ ಧಾನ್ಯವನ್ನು ಸಹ ಯಥಾಶಕ್ತಿ ದಕ್ಷಿಣೆಯ ಜತೆಗೆ ದಾನ ಮಾಡಿ.
ಧನುಸ್ಸು
ದುಃಖ, ಸಾಲ ಬಾಧೆಗಳು, ಅನಾರೋಗ್ಯ ಸಮಸ್ಯೆ ಕಾಡದಿರಲು ನವಗ್ರಹ ಸ್ತೋತ್ರ ಪಠಣ ಮಾಡಿ. ಅಂಗಡಿಯಲ್ಲಿ ಅಥವಾ ಯೂ ಟ್ಯೂಬ್ ನಲ್ಲಿ ನವಗ್ರಹ ಸ್ತೋತ್ರ ಸಿಗುತ್ತದೆ. ಅದನ್ನು ತಿಳಿದುಕೊಂಡು ಪಠಣ ಮಾಡಿ. ಹಾಗೆ ಹೇಳುವುದಕ್ಕೆ ಸಾಧ್ಯವಿಲ್ಲದ ಪಕ್ಷದಲ್ಲಿ ಕನಿಷ್ಠ ಕೇಳಿಸಿಕೊಳ್ಳಿ.
ಮಕರ
ನವಗ್ರಹ ಹವನ ಜಪ ಸಹಿತವಾಗಿ ಮಾಡಿಸುವುದು ಉತ್ತಮ. ಅನಾರೋಗ್ಯ ಸಮಸ್ಯೆ, ಹಣಕಾಸಿನ ತೊಂದರೆ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ನೀಲಿ ಬಟ್ಟೆಯಲ್ಲಿ ಎಳ್ಳು, ಹಳದಿ ಬಟ್ಟೆಯಲ್ಲಿ ಕಡ್ಲೇಕಾಳು ಕಟ್ಟಿ, ದಕ್ಷಿಣೆ ಸಹಿತವಾಗಿ ದಾನ ಮಾಡಿ.
ಕುಂಭ
ಮಧುಮೇಹ, ರಕ್ತದೊತ್ತಡದಂಥ ಸಮಸ್ಯೆ ಇರುವವರು ಬಹಳ ಎಚ್ಚರಿಕೆಯಿಂದ ಇರಬೇಕು. ಎಳ್ಳು, ಉದ್ದು, ಹುರುಳಿ ಧಾನ್ಯವನ್ನು ದಕ್ಷಿಣೆ ಸಹಿತವಾಗಿ ದಾನ ಮಾಡಿ. ಅದಕ್ಕೂ ಮುನ್ನ ಧಾನ್ಯವನ್ನು ದೇವರ ಮುಂದೆ ಇಟ್ಟು, ಮನೆಯವರೆಲ್ಲರಿಂದಲೂ ಅದನ್ನು ಮುಟ್ಟಿಸಬೇಕು. ಆ ನಂತರ ದಾನ ಮಾಡಿ.
ಮೀನ
ನಿಮ್ಮ ರಾಶಿಯವರು ಅತಿಯಾದ ಆತ್ಮವಿಶ್ವಾಸ ಮಾಡಿಕೊಳ್ಳಬಾರದು. ಗುರು- ಹಿರಿಯರ ನಿಂದನೆ ಮಾಡಬೇಡಿ. ನಿಮಗೆ ಯಾವಾಗ ಸಾಧ್ಯವೋ ಆಗ ಸಾಯಿ ಬಾಬ ದೇಗುಲಕ್ಕೆ ಒಮ್ಮೆ ಭೇಟಿ ನೀಡಿ. ತಾಮಸ ಆಹಾರ ಪದಾರ್ಥಗಳನ್ನು ಏಪ್ರಿಲ್ ನಿಂದ ಜೂನ್ ತನಕ ವರ್ಜ್ಯ ಮಾಡಿದರೆ ಉತ್ತಮ.