ಮಹಾಭಾರತ ಯುದ್ಧ ಕಾಲದಲ್ಲೂ ಸಂಭವಿಸಿತ್ತು ಎರಡು ಗ್ರಹಣ, ಏನು ಪರಿಣಾಮ?
Recommended Video
ಇದೇ ಜುಲೈ ಹದಿಮೂರನೇ ತಾರೀಕು ಸೂರ್ಯಗ್ರಹಣ ಹಾಗೂ ಇಪ್ಪತ್ತೇಳನೇ ತಾರೀಕು ಚಂದ್ರಗ್ರಹಣ ಅನ್ನೋ ವಿಚಾರ ನಿಮಗೆಲ್ಲ ಈಗಾಗಲೇ ಗೊತ್ತಾಗಿದೆ. ಆದರೆ ಈ ರೀತಿಯ ಗ್ರಹಣದಿಂದ ಅನಾಹುತ ಕಟ್ಟಿಟ್ಟ ಬುತ್ತಿ ಅನ್ನೋದು ಜ್ಯೋತಿಷಿಗಳ ಮಾತು. ನಮ್ಮ ದೇಶದಲ್ಲಿ ಜ್ಯೋತಿಷಿಗಳಿಗೂ ಬಾಹ್ಯಾಕಾಶ ವಿಜ್ಞಾನಿಗಳಿಗೂ ಅಂಥ ವ್ಯತ್ಯಾಸ ಇಲ್ಲ ಅಂತಲೇ ಭಾವಿಸಿದ್ದಾರೆ.
ಇರಲಿ ಬಿಡಿ, ಕೆಲವು ವಿಚಾರದಿಂದ ವಿಷಯಾಂತರ ಆಗಿಬಿಡುತ್ತದೆ. ಹಾಗೆ ಆಗೋದು ಬೇಡ. ಈಗ ಹೇಗೆ ಹದಿನೈದು ದಿನಗಳ ಅಂತರದಲ್ಲಿ ಸೂರ್ಯ- ಚಂದ್ರ ಗ್ರಹಣಗಳು ಸಂಭವಿಸಿದೆಯೋ ಅದೇ ರೀತಿ ಮಹಾಭಾರತ ಯುದ್ಧ ನಡೆಯಿತಲ್ಲಾ, ಆಗ ಕೂಡ ಹದಿಮೂರು ಮುಕ್ಕಾಲು ದಿನದ ಅಂತರದಲ್ಲಿ ಎರಡು ಗ್ರಹಣಗಳು 'ಕುರುಕ್ಷೇತ್ರ'ದಲ್ಲಿ ಕಾಣಿಸಿಕೊಂಡಿತ್ತು ಎಂಬ ಬಗ್ಗೆ ಉಲ್ಲೇಖವಿದೆ. ಆ ಕಾರಣಕ್ಕೆ ಈ ತಿಂಗಳೂ ಅಂಥ ಸಾವು- ನೋವುಗಳು ಸಂಭವಿಸುವ ಎಚ್ಚರಿಕೆ ನೀಡುತ್ತಿದ್ದಾರೆ.
ಹನ್ನೆರಡು ರಾಶಿಗಳ ಮೇಲೆ ಜುಲೈ 27ರ ಚಂದ್ರ ಗ್ರಹಣದ ಫಲಾಫಲ
ಆದರೆ, ಮಹಾಭಾರತವು ಕಾವ್ಯವೋ ಅಥವಾ ಇತಿಹಾಸವೋ ಎಂಬ ಜಿಜ್ಞಾಸೆ ಮಧ್ಯೆ ಆರ್ಯಭಟ ಹಾಗೂ ವರಾಹಮಿಹಿರ ಇಬ್ಬರೂ ಆಗಿನ ಕಾಲಘಟ್ಟದ ಬಗ್ಗೆ ಒಂದು ಅಭಿಪ್ರಾಯಕ್ಕೆ ಬಂದಿದ್ದಾರೆ. ಆರ್ಯಭಟರ ಪ್ರಕಾರ ಕಿಸ್ತಪೂರ್ವ 3130- 3140ರ ಮಧ್ಯೆ ಮಹಾಭಾರತ ಯುದ್ಧ ಸಂಭವಿಸಿದೆ. ವರಾಹಮಿಹಿರರು ಸಹ ಈ ಕಾಲವನ್ನು ತಮ್ಮ ಸಂಹಿತೆಯಲ್ಲಿ ಹೇಳಿದ್ದಾರೆ.
ಕ್ರಿಸ್ತ ಪೂರ್ವ 3102ರಲ್ಲಿ ಕಲಿಯುಗ ಆರಂಭ
ಸನಾತನ ಧರ್ಮ ಪಾಲಿಸುವವರು ಕೃಷ್ಣನ ಕಾಲವಾದ ನಂತರ ಕಲಿಯುಗ ಆರಂಭವಾಯಿತು ಎಂದು ಹೇಳುತ್ತಾರೆ. ಕ್ರಿಸ್ತ ಪೂರ್ವ 3102ರಲ್ಲಿ ಆರಂಭವಾಯಿತು. ಮಹಾಭಾರತ ಯುದ್ಧ ನಡೆದ ಕಾಲ ಕ್ರಿಸ್ತಪೂರ್ವ 3138 ಎಂದು ಬಲವಾಗಿ ನಂಬುತ್ತಾರೆ. ಆದರೆ ಮಹಾಭಾರತವು ಕಾವ್ಯವೋ ಇತಿಹಾಸವೋ ಎಂಬ ಬಗ್ಗೆಯೇ ಗೊಂದಲಗಳಿವೆ.
ಎಷ್ಟೋ ತಲೆಮಾರುಗಳ ಜನ ಬದುಕು ನಡೆಸಿದ್ದಾರೆ
ಆಧಾರ ಹುಡುಕುವ ಪ್ರಯತ್ನ ಮಾಡಬೇಕು ಅಂದರೆ, ಆ ಘಟನೆಗಳು ನಡೆದ ಸ್ಥಳಗಳಲ್ಲಿ ಎಷ್ಟೋ ತಲೆಮಾರುಗಳ ಜನ ಬದುಕು ನಡೆಸಿದ್ದಾರೆ. ಆ ಕುರುಹುಗಳು ಇನ್ನೂ ಉಳಿದಿರುತ್ತವೆಯೇ ಎಂಬ ಅನುಮಾನ ಕಾಡುತ್ತದೆ. ಇನ್ನು ನಮ್ಮ ಪಾಲಿನ ಜನಪದವೇ ಆದ ಪುರಾಣ ಮತ್ತು ವೇದವನ್ನೇ ನೆಚ್ಚಿಕೊಳ್ಳಬೇಕು. ಆದರೆ ಅದರಲ್ಲಿ ಎಷ್ಟೆಲ್ಲ ಸೇರ್ಪಡೆ ಅಗಿದೆಯೋ ಎಂಬ ಬಗ್ಗೆ ಕೂಡ ಅನುಮಾನ ಮೂಡುತ್ತದೆ.
ಭೀಷ್ಮರು ಕಾದಿದ್ದು ಮಕರ ಸಂಕ್ರಮಣಕ್ಕಾಗಿ
ಆದರೆ, ಮಹಾಭಾರತದ ಭೀಷ್ಮ ಪರ್ವದಲ್ಲಿ ಕೆಲವು ಕುರುಹುಗಳು ಸಿಗುತ್ತವೆ. ಇಚ್ಛಾ ಮರಣಿಯಾಗಿದ್ದ ಭೀಷ್ಮರು ಪರ್ವ ಕಾಲಕ್ಕಾಗಿ ಕಾಯುತ್ತಾರೆ. ಅಂದರೆ ಅದು ನಾವು ಸಂಕ್ರಾಂತಿ ಎಂದು ಈಗ ಕರೆಯುವ ಉತ್ತರಾಯಣ ಪುಣ್ಯ ಕಾಲ. ಆದರೆ ಈಗಿನಂತೆ ಆಗ ಸಂಕ್ರಾಂತಿ ಜನವರಿ ತಿಂಗಳಲ್ಲಿ ಬರುತ್ತಿತ್ತು ಅಂದುಕೊಳ್ಳಬೇಡಿ ಅನ್ನುವ ಜ್ಯೋತಿಷಿಗಳು ಇದ್ದಾರೆ. ಏಕೆಂದರೆ, ಅದು ದ್ವಾಪರ ಯುಗ. ಅಂದರೆ ರವಿಯ ಚಲನೆಯ ವೇಗದಲ್ಲಿ ವ್ಯತ್ಯಾಸ ಆಗಿ ಅದು ಬೇರೆ ಯಾವುದೋ ದಿನವಾಗಿದ್ದರೂ ಅಚ್ಚರಿ ಪಡಬೇಕಿಲ್ಲ.
ಗ್ರಹಣದ ಪರಿಣಾಮ ಏನಾಗಬಹುದು?
ಕ್ರಿಸ್ತಪೂರ್ವ 3129, 2599, 2056, 1853, 1708 ಹಾಗೂ 1309ರಲ್ಲಿ ಹೀಗೆ ಬೇರೆ ವರ್ಷಗಳಲ್ಲಿ ಎರಡೂ (ಸೂರ್ಯ ಹಾಗೂ ಚಂದ್ರ) ಗ್ರಹಣಗಳು ಆಗಿವೆ. ಮಹಾಭಾರತದ ಯುದ್ಧ ವರ್ಷವನ್ನು ಗುರ್ತಿಸಲು ತೊಡಕಾಗಿರುವ ಅಂಶ ಇದೇ. ಆದರೆ ಆರ್ಯಭಟ ಹಾಗೂ ವರಾಹಮಿಹಿರರ ಲೆಕ್ಕಾಚಾರದ ಬಗ್ಗೆ ಒಂದು ನಂಬಿಕೆ ಇರುವುದರಿಂದ ಕ್ರಿಸ್ತಪೂರ್ವ 3129 ಅನ್ನು ಹೆಚ್ಚು ನಂಬಿಕೆಯಿಂದ ಸ್ವೀಕರಿಸಬಹುದು. ಸೂರ್ಯ- ಚಂದ್ರ ಗ್ರಹಣ ಪ್ರತಿ ತಿಂಗಳೂ ಸಂಭವಿಸುತ್ತವೆ. ಆದರೆ ಗೋಚರ ಆಗುವುದು ಕೆಲವು ಮಾತ್ರ. ಆ ಕೆಲವು ಪೈಕಿ ವಿರಳವಾಗಿ ಎರಡೆರಡು ಗ್ರಹಣ ಕಾಣಿಸಿಕೊಳ್ಳುತ್ತವೆ. ನಾಳಿನ ಗ್ರಹಣ ಭಾರತದಲ್ಲಿ ಗೋಚರಿಸದೆ ಇರಬಹುದು. ಆದರೆ ಭೂಮಿ ಮೇಲೆ ಪರಿಣಾಮ ಬೀರುತ್ತದೆ. ಪಂಚಭೂತಗಳಾದ ಅಗ್ನಿ, ಪೃಥ್ವಿ, ವಾಯು, ಜಲ ಹಾಗೂ ಆಕಾಶ ಈ ಪೈಕಿ ಯಾವುದರ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡೋಣ.