ದಸರಾ ವೇಳೆ ನುಡಿಯಲಾದ 3 ಕಾರ್ಣಿಕ: ಒಂದೊಂದರಲ್ಲಿ ಒಂದೊಂದು, ಬರೀ ಗೊಂದಲ!
ನವರಾತ್ರಿಯ ವೇಳೆ ರಾಜ್ಯದ ವಿವಿಧ ಪುರಾಣ ಪ್ರಸಿದ್ದ ದೇವಾಲಯಗಳಲ್ಲಿ ಭವಿಷ್ಯವಾಣಿ/ಕಾರ್ಣಿಕ ನುಡಿಯುವ ಪದ್ದತಿ ಹಿಂದಿನಿಂದಲೂ ಇದೆ. ಆ ಸಂಪ್ರದಾಯ ಕೊರೊನಾ ಎರಡನೇ ಅಲೆಯ ನಡುವೆಯೂ ನಿರಾಂತಕವಾಗಿ ಮುಂದುವರಿದಿದೆ.
ಈ ಕಾರ್ಣಿಕದ ಸತ್ಯಾಸತ್ಯತೆಯ ಬಗ್ಗೆ ಭಕ್ತರಿಗೆ ಹೆಚ್ಚಿನ ನಂಬಿಕೆ ಇರುವುದರಿಂದ, ಗೊರವಯ್ಯ ನುಡಿಯಲಾಗುವ ಭವಿಷ್ಯವಾಣಿ ಅಷ್ಟೇ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಒಗಟಿನ ರೂಪದಲ್ಲಿ ಹೇಳಲಾಗುವ ಭವಿಷ್ಯವನ್ನು ಅವರವರು ತಮ್ಮ ವಿವೇಚನೆಗೆ ತಕ್ಕಂತೆ ಅರ್ಥೈಸಿಕೊಳ್ಳುತ್ತಿದ್ದರು.
ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ...; ಬೀರೂರು ಮೈಲಾರಲಿಂಗಸ್ವಾಮಿ ನುಡಿದ ಕಾರ್ಣಿಕ!
ಆದರೆ, ಇತ್ತೀಚಿನ ಕೆಲವು ವರ್ಷಗಳಲ್ಲಿ ದೇವಾಲಯಕ್ಕೆ ಸಂಬಂಧಪಟ್ಟ ಧರ್ಮದರ್ಶಿಗಳೋ ಅಥವಾ ಪ್ರಧಾನ ಅರ್ಚಕರು, ಕಾರ್ಣಿಕದ ಅರ್ಥವನ್ನು ತಾವೇ ಜನರ ಮುಂದೆ ಇಡುತ್ತಾರೆ. ಹಾಗಾಗಿ, ಇದರ ಮೇಲಿರುವ ಗೊಂದಲಕ್ಕೆ ಅವರೇ ತೆರೆ ಎಳೆಯುತ್ತಿದ್ದಾರೆ.
ಈ ಬಾರಿಯ ಅಂದರೆ 2021ರ ಆಯುಧಪೂಜೆ/ವಿಜಯದಶಮಿಯ ವೇಳೆ ಮೂರು ಪ್ರಸಿದ್ದ ದೇವಾಲಯಗಳ ವಾರ್ಷಿಕ ಜಾತ್ರೆಯ ವೇಳೆ ಕಾರ್ಣಿಕವನ್ನು ನುಡಿಯಲಾಗಿದೆ. ಆದರೆ, ಮೂರೂ ಭವಿಷ್ಯಗಳು ಒಂದಕ್ಕೊಂದು ತಾಳೆಯಾಗದೇ ವಿಭಿನ್ನವಾಗಿದೆ. ಅದು ಹೀಗಿದೆ:
ದೇವರಗುಡ್ಡ ಮಾಲತೇಶ ಮೈಲಾರಲಿಂಗ ಸ್ವಾಮಿಯ ಕಾರ್ಣಿಕದ ಸಂಪೂರ್ಣ ವಿಶ್ಲೇಷಣೆ
ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದ ಮಾಲತೇಶ ಮೈಲಾರಲಿಂಗ ಸ್ವಾಮಿ ದೇವಾಲಯ
'ಎರೆ ದೊರೆ ಆಕತಲೆ ದೈವ ದರ್ಬಾರ್ ಆಕತಲೆ ಪರಾಕ್' ಎನ್ನುವ ಭವಿಷ್ಯವಾಣಿಯನ್ನು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದ ಮಾಲತೇಶ ಮೈಲಾರಲಿಂಗ ಸ್ವಾಮಿ ದೇವಾಲಯದಲ್ಲಿ ನುಡಿಯಲಾಗಿತ್ತು. "ರೈತ ಏನು ಬೆಳೆ ಬೆಳೆಯುತ್ತಾನೋ, ಅದು ದೊರೆಯಾಗುತ್ತದೆ. ಅಂದರೆ, ಬೆಳೆ ವೃದ್ದಿಯಾಗಿ ಫಲವನ್ನು ಕೂಡುತ್ತದೆ. ಇನ್ನು, ದೈವ ದೊರೆಯಾದಿತಲೇ ಎಂದರೆ ದೇವರ ಕೃಪೆ ಎಲ್ಲರ ಮೇಲೆ ಇರಲಿದೆ. ಕೊರೊನಾ ಮೂರನೇ ಅಲೆ ಬರತಕ್ಕಂತಹ ವಾತಾವರಣ ಇಲ್ಲ" ಎಂದು ದೇವಾಲಯದ ಪ್ರಧಾನ ಅರ್ಚಕರಾದ ಸಂತೋಷ್ ಗುರೂಜಿಗಳು ವ್ಯಾಖ್ಯಾನಿಸಿದ್ದರು.
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಗಡಿಭಾಗ, ದೇವರಗುಟ್ಟು ಬಸವಣ್ಣನ ದೇವಾಲಯ
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಗಡಿಭಾಗ, ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲಾ ವ್ಯಾಪ್ತಿಗೆ ಬರುವ ದೇವರಗುಟ್ಟು ಬಸವಣ್ಣನ ದೇವಾಲಯದಲ್ಲೂ ನವರಾತ್ರಿ ಕಾರ್ಣಿಕ ನುಡಿಯಲಾಗಿದೆ. "2023ರವರೆಗೆ ಮಾರಮ್ಮ ದೇಶ ಸಂಚಾರ ಮಾಡುತ್ತಾಳೆ, ಮಾರಮ್ಮ ಗಂಗೆ ಹೊಳೆ ದಂಡೆಗೆ ನಿಂತಾಳ, ಉತ್ತರ ಭಾಗಕ್ಕೆ ಸವಾರಿ ಮಾಡ್ಯಾಳ ಬಹುಪರಾಕ್. 5600 ನಗೆಳ್ಳಿ, ಒಕ್ಕಳು ಜೋಳ 2600, 3-6, 6-3 ಆದೀತು" ಎನ್ನುವ ಭವಿಷ್ಯವನ್ನು ನುಡಿಯಲಾಗಿದೆ. ಇದರ ಅರ್ಥ, ಮುಂದಿನ ಸ್ಲೈಡಿನಲ್ಲಿ..
ಮುಂದಿನ ದಿನಗಳಲ್ಲಿ ರೈತರಿಗೆ ತಮ್ಮ ಬೆಳೆಗೆ ಹೆಚ್ಚಿನ ಬೆಲೆ ಸಿಗಲಿದೆ
ದೇವರಗುಟ್ಟು ಬಸವಣ್ಣನ ದೇವಾಲಯದಲ್ಲಿ ನುಡಿಯಲಾದ ಕಾರ್ಣಿಕದ ಪ್ರಕಾರ, "2023ರವರಗೆ ದೇಶಾದ್ಯಂತ ಕೊರೊನಾ ವೈರಸ್ ಮುಂದುವರಿಯಲಿದೆ. ಉತ್ತರ ಭಾಗದ ಕಡೆ ಹೆಚ್ಚಿನ ಮಳೆಯಾಗಲಿದೆ. ಹತ್ತಿ ಬೆಳೆಗೆ 5600, ಜೋಳಕ್ಕೆ 2600 ಮೇಲ್ಪಟ್ಟು ದರ ಸಿಗಲಿದೆ. ಮುಂದಿನ ದಿನಗಳಲ್ಲಿ ರೈತರಿಗೆ ತಮ್ಮ ಬೆಳೆಗೆ ಹೆಚ್ಚಿನ ಬೆಲೆ ಸಿಗಲಿದೆ"ಎಂದು ಅರ್ಚಕ ಗಿರಿಮಲ್ಲಯ್ಯ ನುಡಿದ ಕಾರ್ಣಿಕವನ್ನು ಅರ್ಥೈಸಲಾಗಿದೆ.
ಇತಿಹಾಸ ಪ್ರಸಿದ್ಧ ಬೀರೂರು ಮೈಲಾರಲಿಂಗಸ್ವಾಮಿಯವರ ಕಾರ್ಣಿಕ ಮಹೋತ್ಸವ
ಶನಿವಾರ (ಅ 16) ಬೆಳಗಿನ ಜಾವ ಇತಿಹಾಸ ಪ್ರಸಿದ್ಧ ಬೀರೂರು ಮೈಲಾರಲಿಂಗಸ್ವಾಮಿಯವರ ಕಾರ್ಣಿಕ ಮಹೋತ್ಸವ ನಡೆಯಿತು. ಅರ್ಚಕ ದಶರಥ ಪೂಜಾರ್ ಬೆಣ್ಣೆಮೆತ್ತಿದ್ದ ಬಿಲ್ಲಪ್ಪನನ್ನು ಏರಿ ಗಂಟೆಯ ಸದ್ದು ಮಾಡಿ ಕಾರ್ಣಿಕ ನುಡಿದರು. "ಇಟ್ಟ ರಾಮನ ಬಾಣಕ್ಕೆ ಹುಸಿ ಇಲ್ಲ, ಸಿಂಹಾಸನಕ್ಕೆ ಗಿಳಿಗಳು ಕುಟುಕಿದವು, ದಾನವರು ಮಾನವರಿಗೆ ಕಂಟಕವಾದರು, ರಾಮರಾಜ್ಯಕ್ಕೆ ಸರ್ವರೂ ಹೊಡೆ ಹೊಡೆದರು, ಸರ್ವರೂ ಎಚ್ಚರದಿಂದಿರಬೇಕು" ಎನ್ನುವ ಭವಿಷ್ಯವನ್ನು ನುಡಿದರು. ಇದರ ಅರ್ಥ, ಮುಂದಿನ ಸ್ಲೈಡಿನಲ್ಲಿ..
ರಾಮನ ಬಾಣಕ್ಕೆ ಹುಸಿಯಿಲ್ಲ, ದೇವರ ಮಾತು ಸತ್ಯವಾಗಲಿದೆ. ಸಿಂಹಾಸನಕ್ಕೆ ಗಿಳಿಗಳು ಕುಟುಕಿವು
ಈ ಕಾರ್ಣಿಕದ ಪ್ರಕಾರ, "ರಾಮನ ಬಾಣಕ್ಕೆ ಹುಸಿಯಿಲ್ಲ, ದೇವರ ಮಾತು ಸತ್ಯವಾಗಲಿದೆ. ಸಿಂಹಾಸನಕ್ಕೆ ಗಿಳಿಗಳು ಕುಟುಕಿವು ರಾಜಕೀಯದಲ್ಲಿ ಒಳಗಿನವರಿಂದ ಹೊರಗಿನವರಿಂದ ತೊಂದರೆಯಾಗಲಿದೆ. ದಾನವರು ಮಾನವರಿಗೆ ಕಂಟಕವಾದರು, ಕೆಟ್ಟ ಜನರಿಂದ ಒಳ್ಳೆಯವರಿಗೆ ತೊಂದರೆಯಾಗಲಿದೆ.
ರಾಮರಾಜ್ಯಕ್ಕೆ ಸರ್ವರು ಹೊಡೆ ಹೊಡೆದರು, ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರಿಗೆ ಸರ್ವರಿಂದಲೂ ಸೋಲುಣುವಂತಾಗಲಿದೆ ಎಂಬುದು ಈ ಕಾರ್ಣಿಕದ ಅರ್ಥ ಎಂದು ವಿಶ್ಲೇಷಿಸಲಾಗುತ್ತಿದೆ. ಹಾಗಾಗಿ ಸರ್ವರು ಎಚ್ಚರದಿಂದರಬೇಕು" ಎನ್ನುವುದು ಕಾರ್ಣಿಕದ ಅರ್ಥ ಎಂದು ವಿಶ್ಲೇಷಿಸಲಾಗುತ್ತಿದೆ.