ಮಾಟ ಮಾಡಿಸಿದಲ್ಲಿ ಕಂಡುಬರುವ ಲಕ್ಷಣಗಳು ಮತ್ತು ಪರಿಹಾರ
Recommended Video
ವಾಮಾಚಾರ ಪ್ರಯೋಗ ಎಂಬ ಪದವೇ ದಿಗಿಲು ಹುಟ್ಟಿಸುವಂಥದ್ದು. ಏಕೆಂದರೆ ಹೀಗೆ ವಾಮಾಚಾರ ಮಾಡಿದರೆ ಸಮಸ್ಯೆಗಳು ಹೇಗಾಗುತ್ತವೆ ಅಂದರೆ, ಕೆನ್ನೆ ಮೇಲೆ ಪೆಟ್ಟು ಬಿದ್ದ ಅನುಭವ ಆಗುತ್ತದೆ. ಆದರೆ ಹೊಡೆದವರು ಯಾರು ಎಂಬುದು ಕಣ್ಣಿಗೆ ಕಾಣಲ್ಲ. ಎದುರು ನಿಂತು ಬಡಿದಾಡುವ ಶತ್ರುವಾದರೆ ಹೇಗೋ ಎದುರಿಸಬಹುದು. ಆದರೆ ಹೀಗೆ ಕಣ್ಣಿಗೆ ಕಾಣದ ಸಮಸ್ಯೆ ಎದುರಿಸುವುದು ಹೇಗೆ?
ದುಷ್ಟಶಕ್ತಿ ಪ್ರಯೋಗ, ವಾಮಾಚಾರ ಪ್ರಯೋಗ ಇವೆಲ್ಲವನ್ನೂ ನಂಬದವರು ಹೆಚ್ಚು. ಆದರೆ ಕೆಲವು ಸಲ ಜ್ಯೋತಿಷ್ಯದಲ್ಲಿ ಸಮಸ್ಯೆ ಏನು ಎಂಬುದನ್ನು ಪತ್ತೆ ಮಾಡಲು ಆಗುವುದಿಲ್ಲ. ಹೆಚ್ಚು ಸ್ಪಷ್ಟವಾಗಿ ಹೇಳಬೇಕೆಂದರೆ, ಜಾತಕದಲ್ಲಿ ಯಾವುದೇ ಗ್ರಹದೋಷ- ಗೃಹ ವಾಸ್ತು ದೋಷ ಇಲ್ಲದಿದ್ದರೂ ತೊಂದರೆ ಆಗುತ್ತಿರುತ್ತದೆ. ಅದಕ್ಕೆ ಕೃತ್ರಿಮ ಪ್ರಯೋಗ ಆಗಿರುವ ಸಾಧ್ಯತೆ ಇರುತ್ತದೆ.
ಕೊಳ್ಳೇಗಾಲದ ಮಾಟಳ್ಳಿಯಲ್ಲಿ ಕೇಳುವುದು ಬರೀ ಸಾವಿನ ಸದ್ದು!
ಬಹಳ ಜನಕ್ಕೆ ತಮ್ಮ ಮೇಲೆ ಪ್ರಯೋಗ ಆಗಿದೆ ಎಂಬ ಅನುಮಾನ ಮೂಡಿದರೂ ಹೇಳಿಕೊಳ್ಳಲು ಎಂಥದ್ದೋ ನಾಚಿಕೆ ಅಥವಾ ಸಂಕೋಚ ಇರುತ್ತದೆ. ಆದ್ದರಿಂದ ಈ ಲೇಖನದಲ್ಲಿ ಕೆಲವು ಲಕ್ಷಣಗಳನ್ನು ತಿಳಿಸಲಾಗುವುದು. ಅವುಗಳು ಕಂಡುಬಂದಲ್ಲಿ ಕೂಡಲೇ ಈ ಬಗ್ಗೆ ತಿಳಿವಳಿಕೆ ಹಾಗೂ ಜ್ಞಾನ ಇರುವ ಜ್ಯೋತಿಷಿಯನ್ನು ಭೇಟಿ ಮಾಡಿ.
ಮೌಢ್ಯ ನಿಷೇಧ ಕಾಯ್ದೆ ಸದನದಲ್ಲಿ ಮಂಡನೆ, ಮುಖ್ಯಾಂಶಗಳು
ಇಂಥ ಸಮಸ್ಯೆ ಜಾತಕದಲ್ಲಿ ಗೊತ್ತಾಗುವುದಿಲ್ಲ ಎಂದು ಈಗಾಗಲೇ ಹೇಳಿಯಾಗಿದೆ. ಪ್ರಶ್ನಶಾಸ್ತ್ರದ ಮೂಲಕ ಅದನ್ನು ತಿಳಿದುಕೊಂಡು ಶಾಶ್ವತವಾದ ಪರಿಹಾರ ಮಾಡಬೇಕಾಗುತ್ತದೆ. ಇರಲಿ, ಮೊದಲಿಗೆ ವಾಮಾಚಾರ ಪ್ರಯೋಗ ಆಗಿರಬಹುದಾದ ಲಕ್ಷಣಗಳನ್ನು ತಿಳಿದುಕೊಳ್ಳಿ.
ಮುಖದಲ್ಲಿ ವಿಕಾರತೆ
ವಾಮಾಚಾರ ಪ್ರಯೋಗ ಆಗಿದೆ ಅಂದರೆ ದೈಹಿಕ ಬದಲಾವಣೆಗಳು ಮೊದಲ ಹಂತದಲ್ಲೇ ಗೋಚರವಾಗುತ್ತದೆ. ವಿಪರೀತ ಕೂದಲು ಉದುರುತ್ತದೆ. ಮುಖದಲ್ಲೊಂದು ವಿಕಾರತೆ ಕಾಣಿಸುತ್ತದೆ. ನಿತ್ಯವೂ ಗಮನಿಸುವವರಿಗೆ ಈ ಬದಲಾವಣೆ ಬಹಳ ಬೇಗ ಗೊತ್ತಾಗುತ್ತದೆ. ಜೀವ ಕಳೆ ಅಂತ ಏನು ಹೇಳ್ತೀವಿ ಅದು ಇಲ್ಲದಂತಾಗುತ್ತದೆ.
ಊಟದಲ್ಲಿ ಕೂದಲು
ಊಟದಲ್ಲಿ ಪದೇಪದೇ ಕೂದಲು ಸಿಗುತ್ತದೆ. ಇದು ಯಾವ ಪರಿಯಲ್ಲಿ ಅಂದರೆ, ಖಂಡಿತಾ ಅನುಮಾನ ಮೂಡುವ ಮಟ್ಟಕ್ಕೆ ಇರುತ್ತದೆ. ಆಹಾರದಲ್ಲಿ ಆಗೊಮ್ಮೆ- ಈಗೊಮ್ಮೆ ಅಪರೂಪಕ್ಕೆ ಕೂದಲು ಸಿಗುವುದು ಬೇರೆ. ಆದರೆ ವಾಮಾಚಾರ ಪ್ರಯೋಗ ಆಗಿದ್ದರೆ ಅದರ ಪರಿಣಾಮವೇ ಬೇರೆ.
ಪೊಟ್ಟಣ ಕಟ್ಟಿದ ಕುಂಕುಮ
ಮನೆಯಲ್ಲಿ ಬಳಕೆಯಾಗದ ಸ್ಥಳದಲ್ಲಿ ಪೊಟ್ಟಣ ಕಟ್ಟಿರುವಂತೆ ಕುಂಕುಮ, ಅರಿಶಿನ, ನಿಂಬೆಹಣ್ಣು, ಗೊಂಬೆ, ಭಸ್ಮ, ದಾರ ಸುತ್ತಿಟ್ಟ ಮಡಿಕೆ, ಸೂಜಿ ಚುಚ್ಚಿದ ವಸ್ತು, ಮೊಟ್ಟೆ, ಮೆಣಸಿನಕಾಯಿ ಪದೇಪದೇ ಸಿಕ್ಕರೆ ಖಂಡಿತಾ ಈ ಬಗ್ಗೆ ಒಂದು ಅನುಮಾನ ಮೂಡಬೇಕು. ಏಕೆಂದರೆ ಇವೆಲ್ಲ ವಸ್ತುಗಳು ಕೃತ್ರಿಮ ಪ್ರಯೋಗದ ಮುನ್ಸೂಚನೆಗಳು.
ಅಕಾರಣವಾದ ಸಿಟ್ಟು
ಅರಿವಿಗೆ ಬಾರದಂತೆ ವಿಪರೀತ ಸಿಟ್ಟು ಬರುತ್ತಿದೆ. ಕಾರಣವೇ ಇಲ್ಲದಂತೆ ಸ್ನೇಹಿತರೇ ಶತ್ರುಗಳಾಗಿ ಬದಲಾಗುತ್ತಿದ್ದಾರೆ. ಕುಟುಂಬದವರೇ ವಿನಾಕಾರಣ ಸಿಟ್ಟು ಮಾಡಿಕೊಳ್ಳುತ್ತಿದ್ದಾರೆ. ಇವೆಲ್ಲವೂ ಅನುಮಾನಾಸ್ಪದ ಎನ್ನುವ ಮಟ್ಟಕ್ಕೆ ಇದ್ದರೆ ಕೂಡಲೇ ಎಚ್ಚೆತ್ತುಕೊಳ್ಳಬೇಕು.
ಗುರುತಿಸಲು ಸಾಧ್ಯವಾಗದಂಥ ಸಮಸ್ಯೆ
ವ್ಯಾಪಾರವೋ ವ್ಯವಹಾರವೋ ದಿಢೀರ್ ಆಗಿ ಮೇಲಿಂದ ಮೇಲೆ ನಷ್ಟ ಕಾಣತೊಡಗಿದರೆ, ಕೈಗೂಡಬೇಕಾದ ವ್ಯವಹಾರಗಳೆಲ್ಲ ಕಾರಣವೇ ಇಲ್ಲದೇ ಕೈ ಕಚ್ಚಿದರೆ, ಗುರುತಿಸಲು ಸಾಧ್ಯವೇ ಆಗದಂಥ ಸಮಸ್ಯೆ ಸೃಷ್ಟಿಯಾಗಿ, ಜಾತಕದಲ್ಲಿ ಯಾವ ತೊಂದರೆಯೂ ಇಲ್ಲ ಎಂದು ಖಾತ್ರಿಯಾಯಿತು ಅಂದರೆ ಕೃತ್ರಿಮ ಪ್ರಯೋಗದ ಅನುಮಾನ ಮೂಡುತ್ತದೆ.
ಕೆಟ್ಟ ಕನಸುಗಳು ಬೀಳುತ್ತಿದ್ದರೆ
ತೀರಾ ಕೆಟ್ಟ ಕನಸುಗಳು ಬೀಳುತ್ತಿದ್ದರೆ, ಅದರಲ್ಲೂ ಯಾರೋ ಎದೆಯ ಮೇಲೆ ಕತ್ತು ಹಿಸುಕಿದಂಥ ಅನುಭವ ಆಗುತ್ತಿದ್ದರೆ, ಅಂದರೆ ಪದೇಪದೇ ಈ ರೀತಿ ಕೆಟ್ಟ ಕನಸುಗಳು ಬೀಳುವಾಗ ಎಚ್ಚರ ಆಗಲೇಬೇಕು. ಕೆಲವರಿಗೆ ಈ ಅನುಭವ ಬಹಳ ಬೇಗ ಆಗುತ್ತದೆ.
ಯಾರಿಗೋ ಮಾಡಿದ ಮಾಟದ ಪ್ರಭಾವ
ಕೆಲವರು ಹೇಳುತ್ತಾರೆ: ನಮಗೆ ಶತ್ರುಗಳೇ ಇಲ್ಲ. ನಮಗೆ ಯಾರು ಮಾಟ-ಮಂತ್ರ ಮಾಡಿಸ್ತಾರೆ ಎಂಬ ವಾದ ಮಾಡುತ್ತಾರೆ. ವಾಮಾಚಾರವನ್ನು ಯಾರಿಗೋ ಮಾಡಿದ್ದು, ಅದನ್ನು ನಾವು ದಾಟಿದೆವು ಅಥವಾ ಸಂಪರ್ಕಕ್ಕೆ ಬಂದೆವು ಅಂದರೆ ಅದರ ಫಲಿತಾಂಶವನ್ನು ಅನುಭವಿಸಬೇಕಾಗುತ್ತದೆ.
ಪ್ರಶ್ನಶಾಸ್ತ್ರ, ಕವಡೆ ಶಾಸ್ತ್ರ ಅಥವಾ ತಾಂಬೂಲ ಶಾಸ್ತ್ರ
ವಾಮಾಚಾರ ಪ್ರಯೋಗಕ್ಕೆ ಪರಿಹಾರ ಏನು ಎಂದರೆ, ಇದು ಪ್ರಶ್ನಶಾಸ್ತ್ರ, ಕವಡೆ ಶಾಸ್ತ್ರ ಅಥವಾ ತಾಂಬೂಲ ಶಾಸ್ತ್ರದ ಮೂಲಕ ಕೃತ್ರಿಮ ಪ್ರಯೋಗ ಆಗಿದೆಯಾ ಎಂಬುದು ತಿಳಿದುಕೊಳ್ಳಬೇಕು. ಆ ನಂತರ ಅದು ಯಾವ ಪ್ರಮಾಣದ್ದು ಎಂದು ತಿಳಿದುಕೊಂಡು, ಚಂಡಿಕಾ ಪಾರಾಯಣ, ದೀಪ ನಮಸ್ಕಾರ ಪೂಜೆ, ಕೇರಳೀಯ ತಂತ್ರ ಹೋಮದ ಮೂಲಕ ಆಕರ್ಷಣ- ಉಚ್ಚಾಟನಾ ಸುದರ್ಶನ ಹೋಮ, ಅಘೋರನ ಆರಾಧನೆ ಹೀಗೆ ನಾನಾ ಬಗೆ ಪರಿಹಾರ ಮಾಡಬೇಕಾಗುತ್ತದೆ. ಶಾಶ್ವತ ಪರಿಹಾರವಾಗಿ ರಕ್ಷಾ ಹೋಮಗಳನ್ನು ಮಾಡಬೇಕಾಗುತ್ತದೆ. ಈ ಬಗ್ಗೆ ಜ್ಞಾನ, ಪಾಂಡಿತ್ಯ, ತಿಳಿವಳಿಕೆ ಇರುವವರ ಬಳಿಯೇ ತೆರಳಿ, ಸಮಸ್ಯೆ ಪರಿಹರಿಸಿಕೊಳ್ಳುವುದು ಉತ್ತಮ.