ಗುರು ಸಂಚಾರ ದುಷ್ಪ್ರಭಾವಕ್ಕೆ ಜ್ಯೋತಿಷ್ಯ ಪರಿಹಾರೋಪಾಯ
ಸೆಪ್ಟೆಂಬರ್ ಹನ್ನೆರಡನೇ ತಾರೀಕಿನಿಂದ ಗುರು ಗ್ರಹವು ತುಲಾ ರಾಶಿಯನ್ನು ಪ್ರವೇಶಿಸಿದೆ. ಇನ್ನು ಮುಂದಿನ ವರ್ಷದ ಅಕ್ಟೋಬರ್ ವರೆಗೆ ಗುರುವು ಇದೇ ರಾಶಿಯಲ್ಲೇ ಸ್ಥಿತವಾಗಿರುತ್ತದೆ. ಹನ್ನೆರಡು ರಾಶಿಗಳವರಿಗೆ ಇನ್ನು ಬದಲಾವಣೆಯ ಕಾಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಆದರೆ ಅದೆಂಥ ಬದಲಾವಣೆ ಎಂಬುದನ್ನು ತಿಳಿದುಕೊಳ್ಳಬೇಕಲ್ಲವೆ?
ಅದಕ್ಕಾಗಿ ಒನ್ಇಂಡಿಯಾ ಕನ್ನಡದಲ್ಲಿ ಈಗಾಗಲೇ ಪ್ರಕಟವಾಗಿರುವ ಗುರು ಸಂಚಾರದಿಂದ ದ್ವಾದಶ ರಾಶಿಗಳವರ ಮೇಲೆ ಆಗುವಂಥ ಬದಲಾವಣೆಗಳ ಬರೆದಿರುವ ಲೇಖನವನ್ನು ಓದಿಕೊಳ್ಳಿ. ಆ ಲೇಖನದಲ್ಲೇ ತಿಳಿಸಿದ ಹಾಗೆ ಯಾರಿಗೆ ಯಾವ ರೀತಿಯ ಪರಿಹಾರ ಎಂಬುದನ್ನು ಈ ಬಾರಿ ತಿಳಿಸಲಾಗಿದೆ.
ಸೆ.12 ತುಲಾ ರಾಶಿಗೆ ಗುರು ಪ್ರವೇಶ, ಹನ್ನೆರಡು ರಾಶಿಗೆ ಏನು ವಿಶೇಷ?
ಹಾಗಂತ ಗುರುವು ಹನ್ನೆರಡು ರಾಶಿಗೂ ಕೆಡುಕನ್ನು ಮಾಡುವುದಿಲ್ಲ. ಕೆಲ ರಾಶಿಗಳವರಿಗೆ ಅಡೆತಡೆಗಳನ್ನು, ಇನ್ನೂ ಕೆಲ ರಾಶಿಯವರಿಗೆ ತೀರಾ ಸವಾಲುಗಳನ್ನು ಎದುರಿಗೆ ನೀಡುತ್ತಾನೆ. ಆದರೆ ಬಹುತೇಕರಿಗೆ ಅನುಕೂಲಗಳೇ ಇವೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಆದರೂ ಮುಂಜಾಗ್ರತೆಯಾಗಿ ಕೆಲವು ಶಾಂತಿ-ಹವನ ಮಾಡಿಸಿಕೊಂಡರೆ ಉತ್ತಮ. ಅವುಗಳನ್ನೇ ಇಲ್ಲಿ ತಿಳಿಸಿಕೊಡಲಾಗಿದೆ.
ಮೇಷ
ನಿಮ್ಮ ಸ್ಥಿತಿ ಉತ್ತಮ ಆಗುತ್ತದೆ. ಹಾಗೆಂದ ಮಾತ್ರಕ್ಕೆ ಅಹಂಕಾರ ಬಾರದಂತೆ ಎಚ್ಚರಿಕೆ ವಹಿಸಿ. ಈಗ ನಿಮ್ಮ ಬಲ ಕೂಡ ಇಮ್ಮಡಿ ಆಗುವುದರಿಂದ ಕಷ್ಟದಲ್ಲಿ ಇರುವ ಇತರರಿಗೆ ಸಹಾಯ ಮಾಡಿ. ದೇವರ ಆಶೀರ್ವಾದ ಪಡೆಯಿರಿ.
ವೃಷಭ
ಸಮಸ್ಯೆ ಹೆಚ್ಚು ಇರುವುದು ನಿಮಗೇ ಎಂದು ತಿಳಿದಿದ್ದೀರಿ. ಆದರೆ ಅದರರ್ಥ ಹೆದರಿ ಮೂಲೆ ಸೇರು ಎಂದಲ್ಲ. ನಿತ್ಯವೂ ಗುರು ಗ್ರಹದ ಅಷ್ಟೋತ್ತರ ಹಾಗೂ ಶನಿ ಗ್ರಹದ ಅಷ್ಟೋತ್ತರ ಪಠಿಸಿ. ಮನೆಯ ಹತ್ತಿರ ಇರುವ ಗುರು ಸಾನ್ನಿಧ್ಯ ಇರುವ ದೇಗುಲಕ್ಕೆ (ರಾಘವೇಂದ್ರ ಸ್ವಾಮಿಗಳ ಮಠ ಅಥವಾ ಶಂಕರ ಮಠ ಇತ್ಯಾದಿ) ಪ್ರತೀ ಗುರುವಾರ ತಪ್ಪದೇ ಹೋಗಿ. ಪ್ರದಕ್ಷಿಣೆ, ಪೂಜೆ ಇತ್ಯಾದಿ ಯಥಾ ಶಕ್ತಿ ಮಾಡಿ ಬನ್ನಿ.
ಮಿಥುನ
ನಿಮ್ಮ ಮಾತಿಗೆ ತೂಕ ಹೆಚ್ಚು ಬರುತ್ತದೆ. ಅದರರ್ಥ ಹೆಚ್ಚು ಜನ ನಿಮ್ಮ ಮಾತಿಗೆ ಬೆಲೆ ಕೊಡುತ್ತಾರೆ, ನೀವು ಹೇಳಿದಂತೆ ನಡೆದುಕೊಳ್ಳುತ್ತಾರೆ. ಅದರ ದುರುಪಯೋಗ ಪಡಿಸಿಕೊಳ್ಳದೇ ಸತ್ಯ ಮಾರ್ಗದಲ್ಲಿ ನಡೆದು ಎಲ್ಲರ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಹಣದ ಒಳ ಹರಿವು ಚೆನ್ನಾಗಿ ಇರುತ್ತದೆ.
ಹಾಗೆಂದು ದುಂದು ವೆಚ್ಚ ಮಾಡಿದರೆ ಇನ್ನು ಎರಡೂವರೆ ವರುಷದ ನಂತರ ಪ್ರಾರಂಭ ಆಗುವ ಅಷ್ಟಮ ಶನಿ ಪ್ರಭಾವದಲ್ಲಿ ಆರ್ಥಿಕ ಸಂಕಷ್ಟಗಳು ಅನುಭವಿಸ ಬೇಕಾಗುತ್ತದೆ, ನೆನಪಿರಲಿ.
ಕರ್ಕ
ಆಸಕ್ತಿಕರ ವಿಚಾರಗಳು ನಿಮ್ಮನ್ನು ಹೆಚ್ಚು ಸೆಳೆಯುವುದು. ಆದರೆ ಅದರ ಹಿಂದೆ ಓಡುತ್ತಾ ಪ್ರಧಾನವಾದ ವಿಚಾರಗಳನ್ನು, ನಿತ್ಯ ಜೀವನದ ಆವಶ್ಯಕ ವಿಷಯಗಳನ್ನು ಕಡೆಗಣಿಸುವಂತೆ ಇಲ್ಲ.
ಸಿಂಹ
ನಿಮಗಿದ್ದ ಗುರುಬಲ ಎಂಬ ರಕ್ಷಾ ಕವಚ ಪೂರ್ಣವಾಗಿ ಕುಸಿದಿದೆ. ಅದರಿಂದ ಇನ್ನು ಮುಂದೆ ದೊಡ್ಡ ಸಮಸ್ಯೆಯಾಗಿ ನಿಂತಿರುವ ಪಂಚಮ ಶನಿಯ ದುಷ್ಪ್ರಭಾವ ಕಡಿಮೆ ಮಾಡಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಲೇ ಬೇಕು. ತಡ ಮಾಡದೇ ಶನಿ ವೇದ ಮಂತ್ರ ಜಪ ತರ್ಪಣ ಸಹಿತ ಶನಿ ಶಾಂತಿ ಹವನವನ್ನು ಕೃಸರಾನ್ನ ಹಾಗೂ ಶಮೀ ಸಮಿಧೆ ಬಳಸಿ ವೇದೋಕ್ತವಾಗಿ ಮಾಡಿಸಿ.
ಅಪ್ಪಿ ತಪ್ಪಿಯೂ ಯಾರಿಗೂ ಸಾಲ ಕೊಡುವುದು ಅಥವಾ ನೀವೇ ಗ್ಯಾರಂಟೀರ್ ಆಗಿ ನಿಂತು ದುಡ್ದು ಕೊಡಿಸುವುದು ಮಾಡಬೇಡಿ. ಷೇರು ಮಾರುಕಟ್ಟೆಯಿಂದ, ಚಲನಚಿತ್ರ ನಿರ್ಮಾಣ ಇತ್ಯಾದಿಗಳಿಂದ ಆದಷ್ಟೂ ದೂರ ಇರಿ. ಯಾರನ್ನೂ ನಿಂದಿಸಲು ಹೋಗದಿರಿ. ಜಗಳ, ಮನಸ್ತಾಪಗಳಿಗೆ ಮಾರು ದೂರ ಇರಿ. ನಿಮಗೆ ಸಂಬಂಧಿಸದ ವಿಚಾರಗಳಿಗೆ ತಲೆ ಹಾಕಲು ಹೋಗದಿರಿ.
ಕನ್ಯಾ
ಇನ್ನು ಮುಂದೆ ಕಾಲ ಇಷ್ಟು ದಿನಗಳಂತೆ ಅಲ್ಲ. ನಿಮ್ಮ ಪಾಲಿಗೆ ಬದಲಾಗುತ್ತದೆ. ಆಲಸ್ಯ ಬಿಟ್ಟು, ಮೈ ಬಗ್ಗಿಸಿ, ಬೆವರು ಸುರಿಸಿ ನಿಯತ್ತಾಗಿ ದುಡಿಯಲು ಸಿದ್ಧರಿದ್ದರೆ ಅವಕಾಶಗಳು ಹೇರಳವಾಗಿ ನಿಮ್ಮನ್ನು ಹುಡುಕುತ್ತಾ ಬರುತ್ತವೆ. ಆ ವಿಚಾರದಲ್ಲಿ ಎರಡು ಮಾತಿಲ್ಲ. ಶ್ರಮಕ್ಕೆ ತಕ್ಕ ಪ್ರತಿಫಲ ಸಹ ಇದೆ. ಆದರೆ ನಿಜವಾದ ಕಠಿಣ ಪರಿಶ್ರಮದ ಅವಶ್ಯಕತೆ ಇದೆ.
ತುಲಾ
ಆಹಾರ ಪದ್ಧತಿ ಬಗ್ಗೆ ಎಚ್ಚರ ವಹಿಸಿ. ಹೆಚ್ಚು ಆರೋಗ್ಯ ಬಾಧೆಗಳನ್ನು ಅನುಭವಿಸುವುದರಿಂದ ಆಂಗ್ಲ ಪದ್ಧತಿಯ ಔಷಧ ಉಪಚಾರಕ್ಕಿಂತ ಆಯುರ್ವೇದದ ಮೊರೆ ಹೋಗಿ. ಆಯುರ್ವೇದ ತನ್ನ ಪರಿಣಾಮವನ್ನು ಬಹಳ ನಿಧಾನವಾಗಿ ನೀಡುತ್ತದೆ ಎಂಬಿತ್ಯಾದಿ ಮೌಢ್ಯಗಳಿಂದ ಆಚೆ ಬನ್ನಿ.
ನಿತ್ಯದ ಆಹಾರದಲ್ಲಿ ಉಪ್ಪು- ಹುಳಿ ಅವಶ್ಯವಾಗಿ ಕಡಿಮೆ ಮಾಡಿ. ಚರ್ಮ ರೋಗ, ತುರಿಕೆ ಇತ್ಯಾದಿ ಪ್ರಾರಂಭ ಆಗುತ್ತದೆ. ಅದಕ್ಕೆ ಆಯುರ್ವೇದ ಔಷಧ ಹಾಗೂ ಪಥ್ಯ ಮಾತ್ರ ಗುಣ ಮಾಡುತ್ತದೆ ನೆನಪಿರಲಿ.
ವೃಶ್ಚಿಕ
ಪರಿಹಾರಗಳಲ್ಲಿ ಪ್ರಧಾನವಾಗಿ ಒಂದು ನೆನಪಿಟ್ಟುಕೊಳ್ಳ ಬೇಕಾದ ವಿಚಾರ ಎಂದರೆ ನಾಯಿಗಳಿಂದ ಆದಷ್ಟು ದೂರ ಇರಿ (ಅದು ಸಾಕು ನಾಯಿ ಆದರೂ ಸರಿ ಕೆಲ ದಿನಗಳ ಮಟ್ಟಿಗೆ ಆದರೂ ದೂರ ಇರಿ). ಬೀದಿ ನಾಯಿಗಳಿಗೆ ಕಲ್ಲು ಹೊಡೆಯುವುದು ಅಥವಾ ಪರಿಚಯ ಇಲ್ಲದ ನಾಯಿ ಸಾಕಿದವರ ಮನೆಗಳಿಗೆ ಭೇಟಿ ಕೊಡುವಾಗ ಎಚ್ಚರ.
ಇನ್ನು ಅವಶ್ಯವಾಗಿ ವೇದೋಕ್ತ ಗುರು ಮಂತ್ರ ಜಪ ತರ್ಪಣ ಸಹಿತ ಗುರು ಶಾಂತಿ ಮಾಡಿಸಿ. ಮಂತ್ರಾಲಯಕ್ಕೆ ಕಡ್ಡಾಯವಾಗಿ ಹೋಗಿ ಬನ್ನಿ ಅಥವಾ ನಿಮ್ಮ ಕುಲ ಗುರುಗಳ ಬಳಿ ಹೋಗಿ ಪಾದ ಪೂಜೆ ಯಥಾ ಶಕ್ತಿ ಸೇವೆ ಮಾಡಿ.
ಧನು
ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವ ಒಂದು ಅಧಿಕಾರ ನಿಮಗೆ ಸಿಗುತ್ತದೆ. ಆಗ ಕಷ್ಟದಲ್ಲಿ ಇರುವವರ ಕೈ ಹಿಡಿದು ಸಹಾಯ ಮಾಡಿ. ನಿಮ್ಮಿಂದ ನಿರಪರಾಧಿಗಳಿಗೆ ಶಿಕ್ಷೆ ಆಗದಂತೆ ಎಚ್ಚರವಹಿಸಿ.
Recommended Video
ಮಕರ
ನಿಮ್ಮಿಂದ ಸಾಧ್ಯ ಆದಷ್ಟು ವಸ್ತ್ರ ದಾನ ಆಗಬೇಕು. ಹತ್ತಿರದ ವೃದ್ಧಾಶ್ರಮ ಅಥವಾ ಅನಾಥಾಶ್ರಮಗಳ ಹುಡುಕಿ ಅಲ್ಲಿ ಕಂಬಳಿ ದಾನ ಮಾಡಿ. ಹತ್ತಿಯ ವಸ್ತ್ರಗಳ ದಾನ ಮಾಡಿ. ಇನ್ನು ವೃದ್ಧರ ಔಷದ ಉಪಚಾರಗಳಿಗೆ ಸಹಾಯ ಮಾಡಿ. ಅಂಗವಿಕಲರಿಗೆ ಅದರಲ್ಲಿಯೂ ಕಾಲು ಸರಿ ಇಲ್ಲದವರಿಗೆ ನೀವು ಈಗ ಮಾಡುವ ಸಹಾಯ ಹತ್ತು ಪಟ್ಟು ಹೆಚ್ಚು ಲಭಿಸುತ್ತದೆ.
ಕುಂಭ
ಪರಿಹಾರ ಎಂದರೆ ನೀವು ಮನಸ್ಸು ಮಾಡುವುದು ಅಷ್ಟೇ! ಹೌದು ನೀವು ಮೊದಲು ಮನಸು ಮಾಡಿ, ನಿಮ್ಮ ಕಷ್ಟಗಳು ಹಾಗೂ ಅದಕ್ಕೆ ಇರುವ ಪರಿಹಾರಗಳು ತಿಳಿದಿದೆ. ಆದರೆ ನೀವು ಮಾತ್ರ ನೋಡೋಣ, ಹೋಗಲಿ ಬಿಡು ಅಥವಾ ಇನ್ನೇನೋ ಕಾರಣ ಹೇಳುತ್ತಾ ಸುಮ್ಮನೆ ಇರುತ್ತೀರಿ.
ಅದನ್ನು ಬಿಟ್ಟರೆ ನಿಮಗೆ ಈಗ ಬಂದಿರುವ ಗುರುಬಲ ಅತ್ಯುತ್ತಮವಾಗಿ ಕೆಲಸ ಮಾಡುವುದು ಗಮನಕ್ಕೆ ಬರುತ್ತದೆ.
ಮೀನ
ದೂರ ಪ್ರಯಾಣಗಳನ್ನು ವರ್ಜಿಸಿ. ನಿತ್ಯದ ಆಹಾರ ಪದ್ಧತಿಗಳಲ್ಲಿ ದೊಡ್ಡ ಪ್ರಮಾಣದ ವ್ಯತ್ಯಾಸ ಏನೂ ಆಗದಂತೆ ನೋಡಿಕೊಳ್ಳಿ. ಯಾರಿಗೂ ಯಾವುದೇ ಕೆಲಸ- ಕಾರ್ಯಗಳನ್ನು ನೀವೇ ಮಾಡಿಕೊಡುವುದಾಗಿ ಮಾತು ಕೊಡಬೇಡಿ. ಕೆಲಸ- ಕಾರ್ಯ, ಉದ್ಯೋಗ ಕ್ಷೇತ್ರದಲ್ಲಿ ಬರುವ ಅಧಿಕವಾದ ಒತ್ತಡವನ್ನು ತಡೆಯುವ ಹಾಗೂ ಅವುಗಳನ್ನು ಎದುರಿಸುವ ವಿಧಾನ ತಿಳಿದು ಅನುಸರಿಸಿ.
ಧರ್ಮಸ್ಥಳಕ್ಕೆ ಅವಶ್ಯ ಹೋಗಿ ಸ್ವಾಮಿ ದರ್ಶನ ಮಾಡಿ, ರುದ್ರಾಭಿಷೇಕ ಮಾಡಿಸಿ, ಪ್ರಸಾದ ಸ್ವೀಕರಿಸಿ.
ರಾಶಿ, ನಕ್ಷತ್ರ ತಿಳಿಯದವರೂ ಅನುಸರಿಸಬಹುದಾದ ಪರಿಹಾರ
ಇನ್ನು ಯಾವ ರಾಶಿ, ನಕ್ಷತ್ರ ಎಂದು ತಿಳಿಯದ ಹಾಗೂ ಎಲ್ಲರೂ ಆಚರಿಸಬಹುದಾದ ಪರಿಹಾರ ಎಂದರೆ ಐದು ಗುರುವಾರಗಳು ಅರಿಶಿನ ಬಣ್ಣದ ವಸ್ತ್ರದಲ್ಲಿ ಕಡಲೆ ಕಾಳು ಹಾಕಿ, ಮೂರು ಗಂಟು ಕಟ್ಟಿ ಯಥಾ ಶಕ್ತಿ ದಕ್ಷಿಣೆ, ತಾಂಬೂಲ ಸಹಿತ ಗುರುವಾರದಂದು ನವಗ್ರಹ ವಿಗ್ರಹಗಳಲ್ಲಿ ಉತ್ತರದಲ್ಲಿ ಇರುವ ಗುರು ಗ್ರಹದ ಮುಂದೆ ಇಡಿಸಿ, ಅಷ್ಟೋತ್ತರ ಪೂಜೆ ಮಾಡಿಸಿ ದಾನ ಮಾಡಿ.
ಪ್ರತೀ ಗುರುವಾರ ಒಂದು ಹೊತ್ತು ಉಪವಾಸ ಮಾಡಿ ಅಥವಾ ಅನ್ನ ಬಿಟ್ಟು ಹಾಲು- ಹಣ್ಣು ಮಾತ್ರ ಸೇವಿಸಿ. ನಿಮಗೆ ಪಾಠ ಮಾಡಿದ ಅಥವಾ ಮಾಡುತ್ತಿರುವ ಗುರುಗಳಿಗೆ ಗೌರವ -ಸತ್ಕಾರ ಮಾಡಿ. ನಿಮ್ಮ ಜನ್ಮ ಜಾತಕದಲ್ಲಿ ಗುರು ಉತ್ತಮ ಸ್ಥಾನದಲ್ಲಿ ಇದ್ದಲ್ಲಿ ಮಾತ್ರ ಉತ್ತಮ ಗುಣ ಮಟ್ಟದ ಕನಕ ಪುಷ್ಯರಾಗ ರತ್ನವನ್ನು ಮೂರು ದಿನ ದಿನ ಅಭಿಮಂತ್ರಿಸಿ ಗುರುವಾರದಂದು ಧರಿಸಿ.
ಆಚಾರ್ಯ ವಿಠ್ಠಲ ಭಟ್ ಕೆಕ್ಕಾರು ಮೊಬೈಲ್ ಸಂಖ್ಯೆ 9845682380.