ಚಂದ್ರಗ್ರಹಣ ನಡೆಯಲಿರುವ ಆಶ್ಲೇಷಾ ನಕ್ಷತ್ರ ಬಗ್ಗೆ ನಿಮಗೆಷ್ಟು ಗೊತ್ತು?
ಜನವರಿ 31ರಂದು ಖಂಡಗ್ರಾಸ ಚಂದ್ರಗ್ರಹಣ ಇದೆ. ಆ ದಿನ ಆಶ್ಲೇಷಾ ನಕ್ಷತ್ರದಲ್ಲಿ ಗ್ರಹಣ ಸಂಭವಿಸಲಿದೆ. ಆದ್ದರಿಂದ ಆ ನಕ್ಷತ್ರದ ಬಗ್ಗೆಯೇ ಲೇಖನ ಬರೆದಿದ್ದೇನೆ. ಆಶ್ಲೇಷಾ ನಕ್ಷತ್ರದ ಗುಣ- ಸ್ವಭಾವವನ್ನು ತಿಳಿಸುತ್ತಿದ್ದೇನೆ.
ಆಶ್ಲೇಷಾ ನಕ್ಷತ್ರದವರು ರಾಕ್ಷಸ ಗಣಕ್ಕೆ ಸೇರಿದವರು. ತೀಕ್ಷ್ಣ ಗುಣದೊಂದಿಗೆ ಅಧೋಮುಖವಾಗಿ ಚಲಿಸಿ ಮಂದ ದೃಷ್ಟಿಯುಳ್ಳದ್ದು ಆಶ್ಲೇಷಾ ನಕ್ಷತ್ರ. 'ಆಶ್ರೇಷಾ ನಕ್ಷತ್ರಗಂ ಸರ್ಪಾ ದೇವತಾ' ಎಂದು ಯಜುರ್ವೇದದ ಸಂಹಿತಾ ನಾಲ್ಕನೇ ಕಾಂಡದಲ್ಲಿ ತಿಳಿಸಿದಂತೆ ಸರ್ಪ (ನಾಗ) ಆಶ್ಲೇಷಾ ನಕ್ಷತ್ರ ನಿಯಾಮಕ ಪ್ರಧಾನ ದೇವತೆ.
ಈ ನಕ್ಷತ್ರದ ನಾಲ್ಕೂ ಪಾದಗಳು ಕರ್ಕಾಟಕ ರಾಶಿಗೆ ಸೇರಿದ್ದು, ಚಂದ್ರ ಅಧಿಪತಿ ಆಗಿರುತ್ತದೆ. ಅಶ್ವಿನ್ಯಾದಿ ಯಾವುದಾದರೊಂದು ನಕ್ಷತ್ರಗಳಲ್ಲಿ ಜನಿಸುವ ಮನುಷ್ಯ ಆಶ್ಲೇಷಾ ನಕ್ಷತ್ರದಲ್ಲಿ ಜನಿಸಿದ ಪಕ್ಷದಲ್ಲಿ ಅದರದ್ದೇ ಆದ ವಿಶೇಷ ಫಲವನ್ನು ಅನುಭವಿಸುತ್ತಾರೆ. ಉದಾಹರಣೆಗೆ ಆಶ್ಲೇಷಾ ನಕ್ಷತ್ರದವರು ಕರ್ಕ ರಾಶಿಗೆ ಸೇರುವುದರಿಂದ, ಏಳನೇ ಮನೆಯ ಅಧಿಪತಿ ಶನೈಶ್ಚರ!
ಉದ್ಯೋಗ ಬದಲಾವಣೆಗೆ ಸೂಕ್ತ ಕಾಲವೆ?: ಇಲ್ಲಿದೆ ಜ್ಯೋತಿಷ್ಯ ಸಲಹೆ
ಅಂತಹವರ ಜಾತಕದಲ್ಲಿ ಶನೈಶ್ಚರ ಗ್ರಹ ಉಚ್ಚವಾದ ಸ್ಥಿತಿಯಲ್ಲಿ ಅಥವಾ ಮಿತ್ರ ಗ್ರಹಗಳೊಂದಿಗೆ ಮಿತ್ರ ರಾಶಿಯಲ್ಲಿ ಇಲ್ಲದಿದ್ದಾಗ ಬಾಳ ಸಂಗಾತಿಯೊಂದಿಗೆ ಸುಖಮಯ ಜೀವನ ಕಷ್ಟಸಾಧ್ಯ.
ಸ್ವಭಾವತಃ ಧೈರ್ಯಶಾಲಿಗಳು
'ಧೈರ್ಯಂ ಸರ್ವತ್ರ ಸಾಧನಂ' ಎಂಬ ವಾಕ್ಯವನ್ನು ಜೀವನದುದ್ದಕ್ಕೂ ತಮ್ಮ ಧ್ಯೇಯ ವಾಕ್ಯವಾಗಿ ಪರಿಗಣಿಸುವ ಆಶ್ಲೇಷಾ ನಕ್ಷತ್ರದವರು ಸ್ವಭಾವತಃ ಧೈರ್ಯಶಾಲಿಗಳು. ವಾಕ್ ಕಾರಕ ಬುಧನು ರಾಶ್ಯಾನುಸಾರ ಇವರಿಗೆ ವ್ಯಯಾಧಿಪತಿ ಆಗುವುದರಿಂದ ಮಾತಿನ ಮೇಲೆ ಹಿಡಿತ ಇಲ್ಲದೇ ಅನ್ಯರ ಮನಸ್ಸಿಗೆ ತಮ್ಮ ಕಟುವಾದ ಮಾತುಗಳಿಂದ ದುಃಖಪಡಿಸಿ, ಅವರ ದೃಷ್ಟಿಯಲ್ಲಿ ಕೆಟ್ಟವರಾಗುತ್ತಾರೆ.
ಆಸೆ ತೋರಗೊಡುವುದಿಲ್ಲ
ಧನ ಹಾಗೂ ಕೀರ್ತಿಯ ಬಗ್ಗೆ ಮನಸ್ಸಿನಲ್ಲಿ ಎಷ್ಟೇ ಆಸೆ ಇದ್ದರೂ ಪ್ರಪಂಚಕ್ಕೆ ಅದನ್ನು ತೋರ್ಪಡಿಸದೆ ತಾವು ಅಂತಹ ವಿಚಾರಗಳಲ್ಲಿ ಆಸಕ್ತಿರಹಿತರಂತೆ ತೋರ್ಪಡಿಸುತ್ತಾರೆ. ಕೆಲವೊಮ್ಮೆ ಧಾರಾಳತೆ, ಇನ್ನು ಕೆಲವೊಮ್ಮೆ ಅತೀ ಜಿಪುಣರಂತೆ ವರ್ತಿಸುವ ಇವರು ತಾವು ಕೊಡಬೇಕಾದ ಹಣದ ಪ್ರಮಾಣಕ್ಕಿಂತಲೂ ಬರಬೇಕಾದ ಹಣ ಬಾರದೇ ಹಣದ ವ್ಯವಹಾರಗಳಲ್ಲಿ ಇಕ್ಕಟ್ಟಿಗೆ ಸಿಲುಕುತ್ತಾರೆ.
ಕೋಪದ ಕಾರಣಕ್ಕೆ ಕುಖ್ಯಾತಿ
ಕೋಪ ಜಾಸ್ತಿ ಇರುವವರೆಂದು ನಿಕಟವರ್ತಿಗಳಲ್ಲಿ ಕುಖ್ಯಾತಿ ಪಡೆಯುವ ಇವರು ಆ ಕೋಪದ ಹಿಂದಿನ ಕಾರಣವನ್ನು ತಿಳಿಸಲು ನಿರಾಕರಿಸುತ್ತಾರೆ. 'ನಾನು ಹೀಗೆ ಹೀಗೆಯೇ ಇರುತ್ತೇನೆ' ಎಂಬ ಮೊಂಡುವಾದವನ್ನು ಸದಾ ಪ್ರಸ್ತಾಪಿಸುವ ಇವರು 'ಹೊಂದಾಣಿಕೆ' ಎಂಬುದನ್ನು ಜೀವನದುದ್ದಕ್ಕೂ ಬಳಸುವುದೇ ಇಲ್ಲ. ಇದರ ಪ್ರತಿಫಲವೋ ಎಂಬಂತೆ ಯಾವುದೇ ಪ್ರಶಸ್ತಿಗಳಿಗಾಗಲಿ, ಪ್ರಶಂಸೆಗಳಿಗಾಗಲಿ ಪಾತ್ರರಾಗದೆ ಕ್ಷುಲ್ಲಕ ಕಾರಣಗಳಿಂದಾಗಿ ಎಲೆ ಮರೆಯ ಕಾಯಿಗಳಂತೆ ಉಳಿದು ಬಿಡುತ್ತಾರೆ.
ಆಶ್ಲೇಷಾ ನಕ್ಷತ್ರದ ಫಲ
ಶಾಸ್ತ್ರಗಳಲ್ಲಿ ಆಶ್ಲೇಷಾ ನಕ್ಷತ್ರದ ಫಲ ವಿಭಾಗವನ್ನು ವಿವರಿಸುವಾಗ, ಆದ್ಯೇ ಪಾದೇ ಶುಭಃ | ದ್ವಿತೀಯೇ ಧನನಾಶಃ | ತೃತಿಯೇ ಮಾತುಃ ನಾಶಃ | ಚತುರ್ಥೇ ಪಿತುಃ | ಎಂಬಿತ್ಯಾದಿಯಾಗಿ ವಿಶ್ಲೇಷಿಸಿದ್ದಾರೆ. ಅಂದರೆ ಆಶ್ಲೇಷಾ ನಕ್ಷತ್ರದ ಮೊದಲನೇ ಪಾದದಲ್ಲಿ ಹುಟ್ಟಿದವರಿಗೆ ಶುಭ ಎಂದು ತಿಳಿಸಿದರೆ, ಎರಡನೇ ಪಾದದಲ್ಲಿ ಧನನಾಶವನ್ನೂ ಮೂರನೇ ಮತ್ತು ನಾಲ್ಕನೇ ಪಾದಗಳಿಗೆ ತಂದೆ ಹಾಗೂ ತಾಯಿಗೆ ಅನಿಷ್ಟ ಎಂದು ತಿಳಿಸುತ್ತದೆ.
ಜನನ ಶಾಂತಿ ಹವನ
ಇಲ್ಲಿ ಗಮನಿಸಲೇ ಬೇಕಾದ ಅಂಶ ಎಂದರೆ ಅನಿಷ್ಟ ಎಂಬ ಶಬ್ದಕ್ಕೆ ಸರ್ವನಾಶ ಅಥವಾ ಸಾವು ಎಂದು ಪರಿಗಣಿಸಬಾರದು. ಪ್ರಮುಖವಾಗಿ ಈ ಎಲ್ಲಾ ದೋಷಗಳ ಪರಿಹಾರವನ್ನು ಶಾಸ್ತ್ರಗಳಲ್ಲಿ ಅತ್ಯಂತ ಸುಸ್ಪಷ್ಟವಾಗಿ ವಿವರಿಸಿರುತ್ತಾರೆ. ಶಾಸ್ತ್ರಗಳಲ್ಲಿ ತಿಳಿಸಿದಂತೆ ಆಶ್ಲೇಷಾ ನಕ್ಷತ್ರದಲ್ಲಿ ಶಿಶು ಜನನವಾದರೆ ದಶರಾತ್ರಿಗಳ ಜಾತಾಶೌಚ ಮುಗಿದ ನಂತರ ನಾಮಕರಣ ಮಾಡುವ ಮೊದಲು ಗೋಮುಖ ಪ್ರಸವ ಶಾಂತಿ ಸಹಿತವಾಗಿ ಆಶ್ಲೇಷಾ ನಕ್ಷತ್ರ ಜನನ ಶಾಂತಿ ಹವನ ಮಾಡಬೇಕಾಗುತ್ತದೆ.
ಪರಿಹಾರ ಸಾಧ್ಯವಿದೆ
ಒಂದು ವೇಳೆ ಜನನ ಸಮಯದಲ್ಲಿ ಈ ಶಾಂತಿ ಮಾಡದೇ ಇದ್ದಲ್ಲಿ ಜೀವನದ ಯಾವುದೇ ಘಟ್ಟದಲ್ಲಿದ್ದರೂ ಆಶ್ಲೇಷಾ ನಕ್ಷತ್ರ ಜನನ ಶಾಂತಿಯನ್ನು ಒಮ್ಮೆ ಮಾಡಿಸಬೇಕು. ಆಶ್ಲೇಷಾ ನಕ್ಷತ್ರದಲ್ಲಿ ಜನಿಸಿದಂತಹವರಿಗೆ ಉಂಟಾಗುವ ಎಲ್ಲ ದುಷ್ಪರಿಣಾಮಗಳು ಭಕ್ತಿಪೂರ್ವಕವಾಗಿ ಹಾಗೂ ಕ್ರಮಬದ್ಧವಾಗಿ ಈ ಶಾಂತಿಯನ್ನು ಮಾಡಿಸುವುದರಿಂದ ಪರಿಹಾರವಾಗುತ್ತದೆ.