ಮಂಗಳಸೂತ್ರದ ಮಹತ್ವ, ಹವಳ ದೋಷಕ್ಕೆ ಪರಿಹಾರ
"ಮಂಗಳಸೂತ್ರದಲ್ಲಿ ಇರುವ ಹವಳ ಮಾತಾಡುತ್ತೆ ನಿಮ್ಮ ಪತಿ ಮರಣ ಹೊಂದುತ್ತಾನೆ, ಆದುದರಿಂದ ತಕ್ಷಣ ನಿಮ್ಮ ಕುತ್ತಿಗೆಯಲ್ಲಿ ಇರುವ ಮಂಗಳಸೂತ್ರದಲ್ಲಿ ಇರುವ ಹವಳವನ್ನು ಕುಟ್ಟಿ ಪುಡಿ ಮಾಡಿ..."
ಹೀಗೊಂದು ವದಂತಿ ಎದ್ದು ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ಣಾಟಕ ಭಾಗದಲ್ಲಿ ನಿನ್ನೆ ಮಧ್ಯರಾತ್ರಿಯಿಂದ ಅಲ್ಲೊಲಕಲ್ಲೋಲ ಎಬ್ಬಿಸಿ, ನಂತರ ಕನ್ನಡ ವಾರ್ತಾ ಚಾನ್ನೆಲ್ಗಳಲ್ಲಿ ಇನ್ನೂ ದೊಡ್ಡದಾಗಿ, ಬೆಳಗ್ಗೆಯಿಂದ ರಾತ್ರಿ ತನಕ ಚರ್ಚಿತವಾಗಿ, ಎಲ್ಲರನ್ನೂ ಇನ್ನಷ್ಟು ಭಯಭೀತಿಗೆ ದೂಡಿದೆ.
"ಹವಳ ಮಾತನಾಡುತೈತೆ, ಪತಿ ಪ್ರಾಣಕ್ಕೆ ಕಂಟಕ ಬರುತೈತೆ"
ಈ ಮುಗ್ಧ ಮುತ್ತೈದೆಯರು ಒಂದು ವಿಧದ ಸಮೂಹ ಸನ್ನಿಗೆ ಒಳಗಾಗಿ, ಮಧ್ಯರಾತ್ರಿಯಿಂದಲೇ ತಮ್ಮ ಕುತ್ತಿಗೆಯ ಮಂಗಳಸೂತ್ರದಲ್ಲಿ ಇದ್ದ ಹವಳವನ್ನು ಅತ್ಯಂತ ಅಶಾಸ್ತ್ರೀಯವಾಗಿ ಕಲ್ಲಿನಲ್ಲಿ ಕುಟ್ಟಿ ಪುಡಿ ಮಾಡಿರುವುದು ನಿಜಕ್ಕೂ ಶೋಚನೀಯ ಪ್ರಕ್ರಿಯೆ. ಈ ಕೃತ್ಯ ಮಾಡಿ ಇಲ್ಲದ ಸಂಕಟವನ್ನು ಮತ್ತೆ ಕೊಂಡು ತಂದಂತೆ ಆಗಿದೆ.
ಇಲ್ಲಿ ಸಮಾಧಾನಕರ ವಿಚಾರ ಏನೆಂದರೆ, ಅವರು ಒಡೆದು ಹಾಕಿದ ಹವಳಗಳಲ್ಲಿ ಶೇಕಡ 90ರಷ್ಟು ಬಂಗಾರದ ತಾಳಿ ಕೊಳ್ಳುವಾಗ ಅಂಗಡಿಯವನಿಂದ ಉಚಿತವಾಗಿ ದೊರೆತ ನಕಲಿ ಹವಳಗಳು! ಆದುದರಿಂದ ನಷ್ಟ ಅಷ್ಟಾಗಿ ಆಗುವುದಿಲ್ಲ.
ಆದರೆ ಶುಭ ಮುಹೂರ್ತ ಶುಭ ಘಳಿಗೆ ಇತ್ಯಾದಿಗಳನ್ನು ನೋಡಿ ಗಂಡನು ಕಟ್ಟಿದ ತಾಳಿ ಗುಂಡನ್ನೂ ಸಹ ಈ ಹವಳ ಕುಟ್ಟುವ ಭರದಲ್ಲಿ ಕುಟ್ಟಿ ಹಾಳು ಮಾಡಿರುವುದು ದುರದೃಷ್ಟಕರ. ಇದೆಲ್ಲ ಬೆಳವಣಿಗೆಗಳು ನೋಡಿದಾಗ ಮಂಗಳಸೂತ್ರದ ಪ್ರಾಮುಖ್ಯತೆ ವೈಶಿಷ್ಟ್ಯತೆ ಜನರಿಗೆ ಅರ್ಥ ಆಗಬೇಕಾಗಿರುವ ಅನಿವಾರ್ಯತೆ ಕಾಣಿಸುತ್ತಿದೆ.
ಉತ್ತಮ ಬಾಂಧವ್ಯದ ಸಂಕೇತ ಮಂಗಲಸೂತ್ರ
ಅತ್ಯಂತ ಮಂಗಲಪ್ರದವಾದುದು ಹಾಗೂ ದಂಪತಿಗಳ ಉತ್ತಮ ಬಾಂಧವ್ಯದ ಸಂಕೇತವಾಗಿ ಹಾಗೂ ತನ್ನ ದರ್ಶನ ಮಾತ್ರದಿಂದ ಗೃಹಿಣಿಗೆ ಸಮಾಜದಲ್ಲಿ ಗೌರವ ವೃದ್ಧಿಸುವ ಅದ್ಭುತ ಶಕ್ತಿ ಈ ಮಾಂಗಲ್ಯ ಎಂದರೆ ತಪ್ಪಾಗಲಾರದು. ಪತಿಯ ತನ್ನ ದೀರ್ಘಾಯುಷ್ಯಕ್ಕಾಗಿ ಪತ್ನಿಯ ಕುತ್ತಿಗೆಯಲ್ಲಿ ಈ ಮಂಗಲಸೂತ್ರ ಧರಿಸುವುದು ಎಂದು ಜಗದ್ಗುರುಗಳಾದ ಆದಿ ಶಂಕರಾಚಾರ್ಯರು ಸಹ ತಮ್ಮ ಸೌಂದರ್ಯ ಲಹರಿ ಕೃತಿಯಲ್ಲಿ ತಿಳಿಸಿದ್ದಾರೆ.
ಮಾಂಗಲ್ಯ ಧಾರಣೆ ಅತ್ಯಂತ ಪವಿತ್ರವಾದುದು
ಪಂಡಿತರು ಜ್ಯೋತಿಷಿಗಳ ಮುಖಾಂತರ ಅತ್ಯುತ್ತಮ ಮುಹೂರ್ತವನ್ನು ಹುಡುಕಿಸಿ ವೇದಾಧ್ಯಯನ ಸಂಪನ್ನ ಬ್ರಾಹ್ಮಣರ ಮುಖಾಂತರ ವೇದ ಮಂತ್ರಘೋಷಗಳೊಂದಿಗೆ, ಮಂಗಲ ವಾದ್ಯದ ಹಿಮ್ಮೇಳದಲ್ಲಿ ಶಾಸ್ತ್ರಬದ್ಧವಾಗಿ ಜರುಗುವ ಈ ವಿವಾಹ ಹಾಗು ಅದರ ಮಧ್ಯದಲ್ಲಿ ಜರುಗುವ ಈ ಮಾಂಗಲ್ಯ ಧಾರಣೆ ಅತ್ಯಂತ ಪವಿತ್ರವಾದುದು. 'ನನ್ನ ಜೀವನದ ಮೂಲ ಹೇತು, ಅಂದರೆ ಕಾರಣೀಭೂತವಾದ ಈ ಸೂತ್ರವನ್ನು {ದಾರವನ್ನು} ನಿನ್ನ ದೀರ್ಘಾಯುಷ್ಯಕ್ಕಾಗಿ ನಿನ್ನ ಕುತ್ತಿಗೆಯಲ್ಲಿ ಕಟ್ಟುತ್ತಿದ್ದೇನೆ. ಇದರಿಂದ ನೀನು ದೀರ್ಘಾಯುಷ್ಯಳಾಗು' ಎಂದು ಮದುವೆಯ ಶುಭ ಸಂದರ್ಭದಲ್ಲಿ ಗಂಡು ಹೆಣ್ಣಿನ ಕುತ್ತಿಗೆಯಲ್ಲಿ ಈ ಮಂಗಲ ಸೂತ್ರವನ್ನು ಕಟ್ಟುವಾಗ ಉಚ್ಚರಿಸುವ ಮಂತ್ರದ ಅರ್ಥ.
ಮಂಗಲಸೂತ್ರದ ಮೂರು ಗಂಟಿನ ಮಹತ್ವ
ಇನ್ನು ಈ ಮಂಗಲ ಸೂತ್ರವನ್ನು ಮೂರು ಗಂಟು ಹಾಕಿ ಕಟ್ಟಲಾಗುತ್ತದೆ. ಒಂದೊಂದು ಗಂಟಿಗೆ ಒಂದೊಂದು ಅರ್ಥವಿದೆ. ಮೊದಲನೇಯ ಗಂಟು ಗಂಡನೊಂದಿಗಿನ ವಿಧೇಯತೆಗಾಗಿ ಹಾಕಿದರೆ, ಎರಡನೇಯ ಗಂಟು ಕುಟುಂಬದವರೊಂದಿಗೆ ವಿಧೇಯತೆ ಇರಲಿ ಎಂದು ಹಾಕುವುದು, ಇನ್ನು ಮೂರನೇಯ ಗಂಟು ಪರಮಾತ್ಮನಲ್ಲಿ ಶ್ರದ್ದೆಯಿರಲಿ ಎಂದು ಹಾಕುವುದು. ಇಷ್ಟೆಲ್ಲ ನಿಯಮಗಳ ಅನುಸರಿಸಿ ಪದ್ಧತಿ ಪ್ರಕಾರ ಕಟ್ಟಿದ ತಾಳಿಯನ್ನು ಗೃಹಿಣಿಯರು ಸಹ ಅಷ್ಟೇ ಶ್ರದ್ದೆಯಿಂದ ಧರಿಸುತ್ತಿದ್ದಾರೆ.
ಮಹಿಳೆಯರಲ್ಲಿ ಸಂಸ್ಕಾರದ ಕೊರತೆ
ಈಗಲು ಕೆಲವರ ಮನಸ್ಸಿನಲ್ಲಿ ಆ ಭಾವನೆಗಳು ಜೀವಂತ ಇದ್ದು, ಅದನ್ನು ಅಷ್ಟೇ ಪವಿತ್ರವಾಗಿ ನೋಡಿಕೊಳ್ಳುತ್ತಿದ್ದಾರೆ. ಆದರೆ ತಮ್ಮ dress ಜೊತೆ match ಆಗೊಲ್ಲ ಅಥವಾ fashion ಹೆಸರಿನಲ್ಲಿ ಮಂಗಲ ಸೂತ್ರವನ್ನು ಮನೆಯಲ್ಲಿ ಇಟ್ಟು ಬರುವ ಹಲವರನ್ನು ಕಾಣುತ್ತೇವೆ. ಆ ನಡೆ ಅವರಿಗಿರುವ ಸಂಸ್ಕಾರದ ಕೊರತೆ ಎತ್ತಿ ತೋರಿಸುತ್ತದೆ.
ಕರಿಮಣಿಗೆ ಮಂಗಲಸೂತ್ರದಲ್ಲಿ ಹೆಚ್ಚಿನ ಮಹತ್ವ
ಇನ್ನು ಈ ಮಂಗಲ ಸೂತ್ರದಲ್ಲಿ ಬರುವ ಪವಿತ್ರ ವಸ್ತುಗಳ ವಿಚಾರಕ್ಕೆ ಬಂದರೆ, ಪ್ರಮುಖವಾಗಿ ಕಾಣುವುದು ಮತ್ತು ಮಹತ್ವವಿರುವುದು ಕರಿ ಮಣಿಗಳಿಗೆ. ಈ ಕರಿ ಮಣಿಗಳು ಈ ಗೃಹಿಣಿಯ ಮೇಲೆ ಯಾವುದೇ ಕೆಟ್ಟ ದೃಷ್ಟಿ ಬೀಳದಂತೆ ತಡೆಯುತ್ತದೆ. ಮನುಷ್ಯರು ಬೇಗ ಹಾಳಾಗುವುದು ಈ ಕಣ್ಣುಗಳ ವಕ್ರ ದೃಷ್ಟಿಯಿಂದ ಎಂದರೆ ತಪ್ಪಾಗಲಾರದು. ಅಷ್ಟೇ ಅಲ್ಲ, ಯೌವನ ಸೌಂದರ್ಯಭರಿತ ಗೃಹಿಣಿಯನ್ನು ಪರ ಪುರುಷರು ಕಾಮದ ದೃಷ್ಟಿಯಿಂದ ಅಥವಾ ಇತರೆ ಯಾವುದೇ ಕೆಟ್ಟ ದೃಷ್ಟಿಯಿಂದ ನೋಡಬಾರದು.
ಗೃಹಿಣಿ ಮೇಲೆ ಕೆಟ್ಟ ದೃಷ್ಟಿ ಬೀಳದಿರಲೆಂದು
ಇಲ್ಲಿ ಕೆಟ್ಟ ದೃಷ್ಟಿ ಎಂದರೆ ಕೇವಲ ಮನುಷ್ಯರ ದೃಷ್ಟಿ ಎಂದಷ್ಟೇ ಅಲ್ಲ, ಭೂತ ಪ್ರೇತ ಪಿಶಾಚಿ ಇತ್ಯಾದಿ ಯಾವುದೇ ದುಷ್ಟ ಶಕ್ತಿಗಳ ಕೆಟ್ಟ ದೃಷ್ಟಿ ಆ ಗೃಹಿಣಿಯ ಮೇಲೆ ಬೀಳದಂತೆ ಇರಲು ಈ ಕರಿ ಮಣಿ ಸಹಕಾರಿ ಆಗಿರುತ್ತದೆ. ನಾವು ಯಾವುದೇ ಚಿತ್ರ ಅಥವಾ ವ್ಯಕ್ತಿ ಏನನ್ನೇ ನೋಡಲಿ, ಅವುಗಳಲ್ಲಿ odd ಆಗಿ ಇರುವುದು ಮೊದಲು ನಮ್ಮ ಕಣ್ಣುಗಳಿಗೆ ಗೋಚರಿಸುತ್ತದೆ. ಆ ಬುದ್ದಿವಂತಿಕೆ ಬಳಸಿ ಶಾಸ್ತ್ರಕಾರರು ಈ ಕಪ್ಪು ಮಣಿಸರ ತನ್ನ ಬಣ್ಣದ ಮೂಲಕ ಗೃಹಿಣಿಯಲ್ಲಿ ಮೊದಲು ಕಂಡುಬಂದು, ಆ ದೃಷ್ಟಿ ದೋಷವ ಕಳೆದರೆ ನಂತರದ ಉತ್ತಮ ದೃಷ್ಟಿ ಗೃಹಿಣಿಯ ಮೇಲೆ ಬೀಳಬಹುದು ಎಂದು.
ಮಂಗಲಸೂತ್ರದ ಶಕ್ತಿಯುತ ವಸ್ತು ಹವಳ
ಎರಡನೇಯದಾಗಿ ಮಂಗಳಸೂತ್ರದಲ್ಲಿ ಬರುವ ಇನ್ನೊಂದು ಪ್ರಮುಖವಾದ ವಸ್ತು ಹವಳ! ಮಂಗಳಸೂತ್ರದ ಅತ್ಯಂತ ಶಕ್ತಿಯುತ ವಸ್ತುಗಳಲ್ಲಿ ಇದೂ ಒಂದು ಕಾರಣ ಈ ರತ್ನಕ್ಕೆ ಇರುವ ದಿವ್ಯವಾದ ಶಕ್ತಿ. ಜ್ಯೋತಿಷ್ಯದ ಪ್ರಕಾರ ಹವಳ ಕುಜ ಗ್ರಹವನ್ನು ಸೂಚಿಸುತ್ತದೆ. ಕುಜ ಶರೀರದಲ್ಲಿ ಶಕ್ತಿಯನ್ನು ವೃದ್ಧಿಸುತ್ತದೆ. ಆದ ಕಾರಣ ಉತ್ತಮ ಕ್ರೀಡಾಪಟು ಆಗಬೇಕು, ಬೇಗ ದಣಿವು ಆಗಬಾರದು, ಸತತ ಕ್ರಿಯಾಶೀಲತೆಯಿಂದ ಇರಬೇಕು ಎಂದರೆ ಜಾತಕದಲ್ಲಿ ಕುಜ ಗ್ರಹ ಉತ್ತಮವಾಗಿ ಇರಬೇಕು. ಅದರಂತೆಯೇ ಶರೀರದಲ್ಲಿ ಶಕ್ತಿ ಹಾಗೂ ಸದಾ ಕ್ರಿಯಾಶೀಲ ವ್ಯಕ್ತಿತ್ವ ಇವೆರಡೂ ಸಹ ಗೃಹಿಣಿಗೆ ಅತ್ಯಂತ ಆವಶ್ಯ.
ವಿವಾಹ ಹೊಂದಾಣಿಕೆಗಾಗಿ ಕುಜನ ರತ್ನ ಹವಳ
ಕುಜ ಗ್ರಹ ರಕ್ತಕಾರಕ ಗ್ರಹ. ಸ್ತ್ರೀಯರಿಗೆ ಪ್ರತೀ ಮಾಸದ ಋತು ಚಕ್ರದ ಸಂದರ್ಭದಲ್ಲಿ ಸಮಸ್ಯೆ ಉಂಟಾಗಬಾರದು ಹಾಗೂ ಕುಜ ಗ್ರಹನ ಅನುಗ್ರಹದಿಂದ ಅವರ ಶರೀರದಲ್ಲಿ ಉತ್ತಮ ಶಕ್ತಿ ಚೈತನ್ಯ ಹೆಚ್ಚಬೇಕು ಎಂಬಿತ್ಯಾದಿ ಕಾರಣಗಳಿಂದ ಕುಜನ ರತ್ನ ಹವಳವನ್ನು ಮಂಗಲಸೂತ್ರದಲ್ಲಿ ಹಾಕುತ್ತಾರೆ. ಇನ್ನು ವಿವಾಹದ ಹೊಂದಾಣಿಕೆ ನೋಡುವಾಗ ಸಾಮಾನ್ಯವಾಗಿ ಬರುವ ದೋಷ ಅಥವಾ ಸಮಸ್ಯೆ ಅಂದರೆ ಕುಜ ದೋಷ. ಆದುದರಿಂದ ವಿವಾಹದ ನಂತರ ಕುಜ ದೋಷದಿಂದಾಗಿ ದಂಪತಿಗಳ ಮಧ್ಯದಲ್ಲಿ ಯಾವುದೇ ವಿರಸ ಅಥವಾ ಜಗಳ ಉಂಟಾಗಬಾರದು ಎಂದು ಕುಜನ ರತ್ನವಾದ ಈ ಹವಳವನ್ನು ಮಂಗಳಸೂತ್ರದಲ್ಲಿ ಹಾಕುವುದು ಸರ್ವರೀತಿಯಿಂದಲೂ ಉತ್ತಮವಾದದ್ದು.
ಹವಳ ಒಡೆದವರು ಈಗ ಏನು ಮಾಡಬೇಕು?
ಇನ್ನು ಈ ಲೇಖನ ಓದಿದ ನಿಮಗೆ, ಈಗಾಗಲೇ ಮಂಗಳಸೂತ್ರದ ಹವಳವನ್ನು ಒಡೆದು ಹಾಕಿರುವವರು ಸಿಕ್ಕರೆ, ಅವರಿಗೆ ಪರಿಹಾರ ತಿಳಿಸಿ... ಶುಚಿರ್ಭೂತರಾಗಿ ದೇವರ ಮನೆಯಲ್ಲಿ ತುಪ್ಪದ ದೀಪ ಹಚ್ಚಿ, ಯಾವ ಮುತ್ತೈದೆ ಈ ಥರಹ ಹವಳ ಒಡೆದಿಲ್ಲವೋ ಅಂತಹ ಮಹಿಳೆಯನ್ನು ಹುಡುಕಿ ಅವರಿಗೆ ಅರಿಶಿನ ಕುಂಕುಮ ವೀಳ್ಯದಯಲೆ ಅಡಿಕೆ ಸಹಿತ ಎರಡು ತೆಂಗಿನಕಾಯಿ ಹಾಗೂ ಕನಿಷ್ಠ 1 ಕೆಜಿ ತೂಕ ತೊಗರಿ ಬೇಳೆ ದಾನ ಮಾಡಿ ಅವರ ಕಾಲಿಗೆ ನಮಸ್ಕರಿಸಿ ಮತ್ತೆ ಉತ್ತಮ ಗುಣಮಟ್ಟದ ನಿಜವಾದ ಹವಳವನ್ನು ತಮ್ಮ ಮಾಂಗಲ್ಯದಲ್ಲಿ ಧರಿಸಲು ಹೇಳಿ.
ಆಚಾರ್ಯ ವಿಠ್ಠಲ ಭಟ್ ಕೆಕ್ಕಾರು - 9845682380