ಶನಿ ಭಗವಾನ್ ಈಗ ಯಾರಿಗೆ ಒಳ್ಳೆಯವನಾಗಿದ್ದಾನೆ?
ಆದರೆ ಶನಿ ಮಹಾರಾಜನು ಈ ಸಮಯದಲ್ಲಿ ಕೆಲವರಿಗೆ ಒಳ್ಳೆಯದನ್ನೂ ಮಾಡುತ್ತಿದ್ದಾನೆ. ಅಂದರೆ ಈ ರಾಶಿಯವರಿಗೆ ಮಾತ್ರ ಸಾಡೇಸಾತಿಯಿಲ್ಲ. ಮೇಷ ರಾಶಿಯವರಿಗೆ ಲಗ್ನದಿಂದ 7ನೇ ಸ್ಥಾನ, ವೃಷಭದವರಿಗೆ 6ನೇ ಸ್ಥಾನ, ಸಾಡೇಸಾತಿಯಿಂದ ಪಾರಾಗಿರುವ ಸಿಂಹ ರಾಶಿಗೆ 3ನೇಯವನಾಗಿ, ಧನಸ್ಸು ರಾಶಿಯವರಿಗೆ 11ನೇ ಮನೆಯಲ್ಲಿ, ಕುಂಭ ರಾಶಿಯವರಿಗೆ 9ನೇಯವನಾದ ಶನಿ ಮಹಾರಾಜನು ಅದೃಷ್ಟ ತರುತ್ತಿದ್ದಾನೆ.
ನಿಮ್ಮ ಒಳ್ಳೆಯ ಸಮಯದಲ್ಲಿ ಒಳ್ಳೆಯದನ್ನು ಮಾಡಬೇಕೆಂಬುದು ಈ ಮೇಲಿನ ರಾಶಿಯವರಿಗೆ ಅನ್ವಯಿಸುತ್ತದೆ. ನಿಮಗೆ ಒಳ್ಳೆಯ ಸಮಯ ಇದು. ಆದ್ದರಿಂದ ಗ್ರಹಬಲ ಬಂದಿದೆ ಎಂದು ಗೊತ್ತಿದ್ದೂ ಗೊತ್ತಿದ್ದೂ ಯಾರಿಗೂ ಕೆಟ್ಟದ್ದನ್ನ ಬಯಸಬೇಡಿ. ಏಕೆಂದರೆ ಗುಪ್ತಚರ ಇಲಾಖೆಯ ತರಹ ನಿಮ್ಮೆಲ್ಲ ಕರ್ಮದ ಲೆಕ್ಕಾಚಾರವನ್ನು ಶನಿ ಮಹಾರಾಜನು ದಾಖಲಿಸಿಕೊಂಡಿರುತ್ತಾನೆ. ನಿಮಗೆ ಶನಿಯು ಸಾಡೇಸಾತಿಯಾಗಿ ಬಂದಾಗ ನೀವು ಮಾಡಿದ ಒಂದು ಚಿಕ್ಕದಾಗಿರುವ ಕೆಟ್ಟ ಕರ್ಮವು ನಿಮಗೇ ಮರಳಿ ಬಂದು, ಮಾಡಿದ್ದುಣ್ಣೋ ಮಹಾರಾಯ ಎಂಬ ಗಾದೆ ಮಾತಿನಂತೆ ಅನುಭವಿಸಬೇಕಾಗುತ್ತದೆ.
ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವವರು ಪಾರಾಗಲು ಮಹಾರಾಷ್ಟ್ರದ ಶಿರಡಿಯಲ್ಲಿರುವ ಸಾಯಿಬಾಬಾ ದರ್ಶನಕ್ಕೆ ಹೋಗುವಂತೆ, ಇನ್ನು ಎಷ್ಟೋ ದಿನಗಳಿಂದ ದೊಡ್ಡ ದೊಡ್ಡ ನೋಟಿನ ಮುಖವನ್ನೇ ನೋಡದವರು ತಿರುಪತಿಗೆ ಹೋಗಿ ಕಾಯ್ದು ತಿಮ್ಮಪ್ಪನ ದರ್ಶನ ಮಾಡಿಕೊಂಡು ಬಂದ ನಂತರ ದೊಡ್ಡ ದೊಡ್ಡ ನೋಟಿನ ಕಂತೆಗಳನ್ನು ಎಣಿಸುವಂತೆ ಆಗಿರುವುದನ್ನು ನೀವು ನೋಡಿದ್ದೀರಿ. ಆದರೆ ನೆನಪಿರಲಿ ಶನಿಯ ಸಾಡೇಸಾತಿಯಲ್ಲಿ ನೀವು ಎಷ್ಟೇ ದೈವಭಕ್ತರಾಗಿದ್ದರೂ ಯಾವುದೇ ದೇವರನ್ನು ಪೂಜಿಸಿದರೂ ಶನಿಯು ನೀಡುವ ಕರ್ಮಫಲಗಳನ್ನು ಸ್ವೀಕರಿಸಲೇಬೇಕು ಎಂಬ ಮಾತನ್ನು ಮಾತ್ರ ವೇದವಾಕ್ಯವೆನ್ನಬೇಕಾಗುತ್ತದೆ.
ಶನಿಯ ಸಾಡೇಸಾತಿಯಲ್ಲೇ ಶ್ರೀರಾಮಚಂದ್ರನು ರಾಜ್ಯಭಾರ ಬಿಟ್ಟು ವನವಾಸ ಅನುಭವಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ. ವೃಶ್ಚಿಕ ರಾಶಿಯವರು ಸಾಡೇಸಾತಿಯ ಸಮಯದಲ್ಲಿ ಅಪ್ಪಿತಪ್ಪಿಯೂ ನೀಲ ರತ್ನದ ಉಂಗುರ ಧರಿಸಬಾರದು. ಇನ್ನು ಹವಳದೊಂದಿಗೆ ನೀಲ ರತ್ನವನ್ನು ಧರಿಸಲೇಬೇಡಿ. ಸಾಧ್ಯವಾದರೆ ಮುತ್ತಿನ ಬೆಳ್ಳಿಯ ಉಂಗುರವನ್ನು ಬಲಗೈ ಕಿರುಬೆರಳಿಗೆ ಧರಿಸಿದರೆ ತುಂಬಾ ಒಳ್ಳೆಯದು.
ಕಷ್ಟಗಳಿಗೆ ಪರಿಹಾರ : ಈ ಹಿಂದಿನ ಲೇಖನದ ಅಭಿಪ್ರಾಯ ವಿಭಾಗದಲ್ಲಿ ಕಷ್ಟ ಹಂಚಿಕೊಂಡ ಸಾಡೇಸಾತಿಯಲ್ಲಿನ ರಾಶಿಗಳವರಿಗೆ ಮುಂದಿನ ಲೇಖನದಲ್ಲಿ ಪರಿಹಾರೋಪಾಯಗಳನ್ನು ವಿವರಿಸಲಾಗುವುದು. ಇನ್ನು ಸದ್ಯ ಶನಿಯಿಂದಾಗಿ ಒಳ್ಳೆಯದನ್ನು ಪಡೆಯುತ್ತಿರುವವರು ತಮ್ಮ ಅಭಿಪ್ರಾಯವನ್ನು ಈ ಲೇಖನದ ಕೆಳಗಿನ ಅಭಿಪ್ರಾಯ ವಿಭಾಗದಲ್ಲಿ ತಿಳಿಸಿ ಶನಿಯ ಪ್ರಭಾವಕ್ಕೆ ಸಾಕ್ಷಿಯಾಗಿ.
ಶನಿಕೃಪೆಗೆ ಹೀಗೆ ಮಾಡಿರಿ : ಬಂದಿರುವ ಸಂಕಷ್ಟಗಳಿಂದ ದೇವರನ್ನು ದೂಷಿಸದೇ ದೈವ ಪೂಜೆಯನ್ನು ಬಿಡಬಾರದು. ಇದು ಪರೀಕ್ಷೆ ಕಾಲ ಎಂದುಕೊಂಡು ಎಂದಿನ ದೈವಭಕ್ತಿಯಿಂದ ಪೂಜೆ, ಪುನಸ್ಕಾರ ಮಾಡುತ್ತಿರಬೇಕು. ನವಗ್ರಹ ಯಂತ್ರವನ್ನು ಯಾವಾಗಲೂ ಹತ್ತಿರದಲ್ಲಿ ಇಟ್ಟುಕೊಂಡರೆ ತುಂಬಾ ಒಳ್ಳೆಯದು.
ವಾಸ್ತು ಟಿಪ್ಸ್ : ಮನೆ ಮುಂದಿನ ಬಾಗಿಲು ಅಕ್ಕಪಕ್ಕ ತ್ರಿಶೂಲ, ಓಂ ಮತ್ತು ಸ್ವಸ್ತಿಕ್ ಚಿಹ್ನೆಯಿರುವ ಸ್ಟಿಕರ್ ಅಂಟಿಸಿ ಅಥವಾ ಚಿತ್ರ ಬಿಡಿಸಿ ಆದರೆ ಸಿಂಧೂರ ಬಣ್ಣದಿಂದ ಮಾತ್ರ. ಮುಂಬಾಗಿಲಿನ ಮನೆಯ ಒಳಗಡೆ ಮೇಲ್ಗಡೆ ಪಂಚಮುಖಿ ಹನುಮಾನ ಚಿತ್ರ ತೂಗು ಹಾಕಿ ಅಥವಾ ಅಂಟಿಸಿ. [ಲೇಖಕರ ಮೊಬೈಲ್ : 9481522011]