ಸಾಡೇ ಸಾತ್ ಶನಿಯಿಂದ ಯಾವ ವಯಸ್ಸಿನಲ್ಲಿ ಎಂಥ ಫಲ?
ಸಾಡೇಸಾತ್ ಶನಿ (ಏಳರಾಟ ಶನಿ) ಅಂದಾಕ್ಷಣ ಬಹಳ ಹೆದರುವ ಜನರನ್ನು ನಾನು ನೋಡಿದ್ದೀನಿ. ನಿಮ್ಮ ಜೀವನದಲ್ಲೇ ಎಷ್ಟನೇ ಸಲ ಸಾಡೇ ಸಾತ್ ಬಂದಿದೆ ಎಂದು ಕೇಳುವವರು ಸಹ ಉಂಟು. ಯಾವುದೇ ವ್ಯಕ್ತಿಯ ಜೀವನದಲ್ಲಿ ಮೂರನೇ ಬಾರಿಗೆ ಸಾಡೇ ಸಾತ್ ಶನಿ ಬಂದರೆ ಜೀವಕ್ಕೆ ಕುತ್ತು ಎನ್ನುವವರಿದ್ದಾರೆ.
Recommended Video
ಹೌದಾ, ಅದು ನಿಜವಾ? ಆ ಬಗ್ಗೆ ವಿವರಿಸುವುದಕ್ಕಾಗಿಯೇ ಈ ಲೇಖನ. ಶನಿ ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಲು ಎರಡೂವರೆ ವರ್ಷ ಆಗುತ್ತದೆ. ಹನ್ನೆರಡು ರಾಶಿಯನ್ನು ಒಳಗೊಂಡ ಚಕ್ರವನ್ನು ಸುತ್ತಿಬರಲು ಮೂವತ್ತು ವರ್ಷದ ಸಮಯ ತೆಗೆದುಕೊಳ್ಳುತ್ತದೆ.
ಉದಾಹರಣೆಗೆ ಈಗ ಮಕರ ರಾಶಿಯಲ್ಲಿ ಶನಿ ಗ್ರಹ ಸ್ಥಿತವಾಗಿದೆ. ಮೂವತ್ತು ವರ್ಷದ ಹಿಂದೆ, ಅಂದರೆ 1990-91ರಲ್ಲಿ, ಅದಕ್ಕೂ ಮುನ್ನ 1960-61ರಲ್ಲಿ ಹಾಗೂ ಅದಕ್ಕೂ ಹಿಂದೆ 1930-31ರಲ್ಲಿ ಮಕರ ರಾಶಿಯಲ್ಲಿ ಶನಿ ಸಂಚಾರ ಮಾಡಿರುವುದನ್ನು ಗಮನಿಸಬಹುದು. ಉದಾಹರಣೆಗೆ 1990ರಲ್ಲಿ ಜನಿಸಿದ, ಮೂವತ್ತು ವರ್ಷದ ಮಕರ, ಕುಂಭ, ಧನುಸ್ಸು ರಾಶಿಯ ವ್ಯಕ್ತಿಗೆ ಅದಾಗಲೇ ಇದು ಎರಡನೇ ಸಲದ ಸಾಡೇ ಸಾತ್.
Saturn Transit 2020: ಮಕರದಲ್ಲಿ ಶನಿ ಸಂಚಾರ- ದ್ವಾದಶ ರಾಶಿ ಫಲಾಫಲ
ಇವರಿಗೆ ಅರವತ್ತನೇ ವಯಸ್ಸಿಗೂ ಮುಂಚೆಯೇ ಮೂರನೇ ಬಾರಿಗೆ ಸಾಡೇ ಸಾತ್ ಬರುತ್ತದೆ. ಹಾಗಿದ್ದರೆ ಅವರಿಗೆ ಏನಾಗುತ್ತದೆ.
ಚಿಕ್ಕವಯಸ್ಸಿನಲ್ಲಿ ಏಳರಾಟ ಶನಿ ಬಂದರೆ
ಚಿಕ್ಕ ವಯಸ್ಸಿನಲ್ಲಿ ಅಂದರೆ ವಿದ್ಯಾಭ್ಯಾಸದ ವಯಸ್ಸಿನಲ್ಲಿ ಏಳರಾಟದ ಶನಿ ಬಂದರೆ ವಿದ್ಯೆಯಲ್ಲಿ ಅಡೆತಡೆ ಎದುರಾಗುತ್ತದೆ. ತಂದೆ- ತಾಯಿಯಿಂದ ದೂರವಾಗಿ ಬೇರೆಡೆ ಬೆಳೆಯಬೇಕಾಗುತ್ತದೆ. ದುರ್ಜನರ ಸಹವಾಸ ಬೇಡವೆಂದರೂ ಅಂಟಿಕೊಳ್ಳುತ್ತದೆ. ಏಕಾಗ್ರತೆಯಲ್ಲಿ ಭಂಗ ಉಂಟಾಗುತ್ತದೆ. ಯಾರದೋ ತಪ್ಪನ್ನು ತಾವು ಹೊತ್ತುಕೊಳ್ಳಬೇಕಾಗುತ್ತದೆ. ಬಾಲ್ಯದಲ್ಲಿ ದೊರೆಯಬೇಕಾದ ಸುಖ, ಸೌಲಭ್ಯ, ಸವಲತ್ತು, ಪ್ರೀತಿ ಇವ್ಯಾವೂ ಪೂರ್ಣಪ್ರಮಾಣದಲ್ಲಿ ದೊರೆಯುವುದಿಲ್ಲ. ತಾಯಿಯ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ. ತಂದೆಗೆ ಸಾಲ ಜಾಸ್ತಿ ಆಗುತ್ತದೆ. ಇನ್ನು ಹರಕೆಗಳನ್ನು ಹೊತ್ತಿದ್ದರೆ ಅವುಗಳನ್ನು ಪೂರ್ತಿ ಮಾಡಲು ಆಗುವುದಿಲ್ಲ. ಇದರಿಂದ ದೈವ ಕೋಪಕ್ಕೆ ಗುರಿ ಆಗಬೇಕಾಗುತ್ತದೆ. ಸಂಬಂಧಿಕರಲ್ಲಿ ಇವರ ಬಗ್ಗೆ ಶಾಶ್ವತವಾಗಿ ನಕಾರಾತ್ಮಕವಾದ ಅಭಿಪ್ರಾಯವೊಂದು ಮೂಡುತ್ತದೆ. ಅದನ್ನು ನಿವಾರಿಸಿಕೊಳ್ಳುವುದರಲ್ಲೇ ಯೌವನದ ದಿನಗಳು ಕಳೆದುಹೋಗುತ್ತವೆ.
ಇಪ್ಪತ್ತೈದರಿಂದ ನಲವತ್ತೈದನೇ ವಯಸ್ಸಿನ ಮಧ್ಯೆ ಸಾಡೇಸಾತ್
ಉದ್ಯೋಗ- ವ್ಯಾಪಾರದಲ್ಲಿ ಅನಿಶ್ಚಿತತೆ ಎದುರಿಸಬೇಕಾಗುತ್ತದೆ. ಮನೆಯಲ್ಲಿ ವಿರೋಧ ಕಟ್ಟಿಕೊಂಡು ಮದುವೆ ಆಗುವಂಥ ಪರಿಸ್ಥಿತಿ ಬರುತ್ತದೆ. ವಿಪರೀತ ಸಾಲ ಆಗುತ್ತದೆ. ಬೇರೆ ಯಾರದೋ ಸಾಲಕ್ಕೆ ಜಾಮೀನಾಗಿ ನಿಂತು, ಅದನ್ನು ಅವರು ತೀರಿಸದಂತೆ ಆಗಿ, ಸಾಲ ತೀರಿಸುವ ಜವಾಬ್ದಾರಿ ಹೊರಬೇಕಾಗುತ್ತದೆ. ಮದುವೆಗೆ ಪದೇಪದೇ ಅಡೆತಡೆಗಳಾಗುತ್ತವೆ. ಗರ್ಭ ಧರಿಸುವುದು ವಿಳಂಬ ಆಗುತ್ತದೆ. ಯಾವುದೇ ವ್ಯವಹಾರ ಕೈ ಹಿಡಿಯುವುದಿಲ್ಲ. ಸಂಗಾತಿಯಿಂದ ಕೆಲ ಸಮಯವಾದರೂ ದೂರ ಇರಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತದೆ. ಇರುವ ಊರು, ದೇಶ ಬಿಟ್ಟು ಬೇರೆಡೆಗೆ ಹೋಗಬೇಕಾದ ಸಂದರ್ಭ ಬರುತ್ತದೆ. ಕೆಲವರಿಗೆ ಬಾಕಿ ಉಳಿದ ವರ್ಷಗಳಿಗೆ ಶಾಶ್ವತವಾಗಿ ಔಷಧ ಸೇವಿಸಬೇಕಾದ ಕಾಯಿಲೆಗಳು ಬರುತ್ತವೆ. ಕೆಲಸದಲ್ಲಿ ಹಿರಿಯ ಅಧಿಕಾರಿಗಳಿಂದ ಕಿರಿಕಿರಿ, ಈಗ ಬರುತ್ತಿರುವ ಸಂಬಳಕ್ಕಿಂತ ಕಡಿಮೆ ಆಗುವುದು ಇತ್ಯಾದಿ ಫಲಗಳು ಅನುಭವಿಸಬೇಕಾಗುತ್ತದೆ.
ಮೂರನೇ ಬಾರಿಗೆ ಸಾಡೇ ಸಾತ್ ಶನಿ ಬಂದಲ್ಲಿ
ಅವಮಾನದ ಪಾಲಾಗಬೇಕಾಗುತ್ತದೆ. ಬಹಳ ಮಂದಿ ಪೊಲೀಸ್ ಠಾಣೆ ಮೆಟ್ಟಿಲೇರುತ್ತಾರೆ. ಮಕ್ಕಳು- ಮೊಮ್ಮಕ್ಕಳಿಂದ ನಾನಾ ಬಗೆಯ ಚುಚ್ಚು ಮಾತುಗಳನ್ನು ಕೇಳಬೇಕಾಗುತ್ತದೆ. ಕಣ್ಣು, ಜಠರ, ಜೀರ್ಣಾಂಗ, ಹಿಮ್ಮಡಿ, ಮಂಡಿ ನೋವು ಇತ್ಯಾದಿ ಅನಾರೋಗ್ಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಕೂಡಿಟ್ಟಿದ್ದ ಹಣವು ಪರರ ಪಾಲಾಗುತ್ತದೆ. ಆಪ್ತರ ವಿಯೋಗವು ದುಃಖ ನೀಡುತ್ತದೆ. ಯಾವ ಕಾಯಿಲೆ- ಏನು ಸಮಸ್ಯೆ ಎಂದು ಗೊತ್ತಾಗದ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ದೈಹಿಕ ಬಾಧೆಗೆ ಕಾರಣ ಏನು ಎಂದು ತಿಳಿಯುವುದಕ್ಕೇ ಬಹಳ ಹಣ ಖರ್ಚು ಮಾಡುವಂತಾಗುತ್ತದೆ. ಈ ಅವಧಿಯಲ್ಲಿ ದೀರ್ಘ ಸಮಯ ಹಾಸಿಗೆ ಹಿಡಿಯುವಂತಾಗುತ್ತದೆ. ಆಸ್ತಿ ವ್ಯಾಜ್ಯಗಳು ಕೋರ್ಟ್ ಮೆಟ್ಟಿಲೇರುವಂತಾಗುತ್ತದೆ. ಈಗಾಗಲೇ ಕೋರ್ಟ್ ನಲ್ಲಿರುವ ವ್ಯಾಜ್ಯಗಳಲ್ಲಿ ಹಿನ್ನಡೆ ಉಂಟಾಗುತ್ತದೆ. ಹೀಗೆ ವಿವಿಧ ಅಶುಭ ಫಲಗಳನ್ನು ಎದುರಿಸಬೇಕಾಗುತ್ತದೆ.
ಶನಿ ಕಾಡಿ ಸತ್ತವರಿಲ್ಲ, ಕುಜ ಕಾಡಿ ಬದುಕಿದವರಿಲ್ಲ
ಈ ಮೇಲ್ಕಂಡ ಫಲಗಳು ಆಯಾ ವಯಸ್ಸಿನಲ್ಲಿ ಸಾಡೇಸಾತ್ ನಿಂದ ಅನುಭವಿಸಬೇಕಾಗುತ್ತದೆ. ಆದರೆ ಶನಿ ಯಾರನ್ನೂ ಕಾಡಿ ಪ್ರಾಣ ತೆಗೆಯುವುದಿಲ್ಲ. ಆದ್ದರಿಂದಲೇ 'ಶನಿ ಕಾಡಿ ಸತ್ತವರಿಲ್ಲ, ಕುಜ ಕಾಡಿ ಬದುಕಿದವರಿಲ್ಲ' ಎಂಬ ಮಾತೊಂದು ಜನಜನಿತವಾಗಿದೆ. ಆದರೆ ಯಾವುದೇ ವ್ಯಕ್ತಿಯ ಸಾವಿನ ಬಗ್ಗೆ ಚಿಂತನೆ ಮಾಡುವಾಗ ಜನ್ಮ ಜಾತಕದಲ್ಲಿ ಲಗ್ನದಿಂದ ಎಂಟನೇ ಮನೆ ಯಾವುದು? ಆ ರಾಶಿಯ ಅಧಿಪತಿ ಯಾವುದು? ಆ ಗ್ರಹ ಎಲ್ಲಿದೆ? ಇನ್ನು ಆ ಸಮಯದಲ್ಲಿ ಯಾವ ಗ್ರಹ ಅಲ್ಲಿದೆ ಮತ್ತು ದೃಷ್ಟಿಗಳನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯ ನುಡಿಯಬೇಕಾಗುತ್ತದೆ.