ತುಲಾರಾಶಿಗೆ ಶನಿಮಹಾರಾಜನ ಪ್ರವೇಶ
ನಾಳೆ ಅಂದರೆ ಮಂಗಳವಾರ 15 ನವೆಂಬರ್ ಶನಿಯು ಕನ್ಯಾ ರಾಶಿಯಿಂದ ತುಲಾ ರಾಶಿಗೆ ಶಿಫ್ಟ್ ಆಗಲಿದ್ದಾನೆ. ಈ ದಿನದಿಂದ ಮೂರು ವರ್ಷ ಅಂದರೆ ನವೆಂಬರ್ 2, 2014ರ ವರೆಗೆ ಶನಿದೇವರು ತುಲಾ ರಾಶಿಯಲ್ಲಿ ನೆಲೆಯೂರಲಿದ್ದಾನೆ. ಈ ಹಿಂದೆ ಶನಿದೇವರು ಶ್ರೀವಿರೋಧಿ ಸಂವತ್ಸರದಲ್ಲಿ ತನ್ನ ರಾಶಿ ಬದಲಿಸಿದ್ದನು. ಹೆಚ್ಚಾಗಿ ಎರುಡುವರೆ ವರ್ಷಕ್ಕೊಮ್ಮೆ ಸ್ಥಾನ ಬದಲಾಯಿಸುವ ಶನಿ ಈ ಬಾರಿ ಆರು ತಿಂಗಳು ತಡವಾಗಿ ತುಲಾ ರಾಶಿಗೆ ಪ್ರವೇಶವಾಗುತ್ತಿರುವುದು ಗಮನಾರ್ಹ.
ಶನಿದೇವರ ರಾಶಿ ಬದಲಾವಣೆ ಎಲ್ಲರ ಭವಿಷ್ಯದಲ್ಲೂ ಪ್ರಮುಖ ಘಟ್ಟ ಎನ್ನುವುದು ಸರ್ವವೇದ್ಯ. ಹಾಗಾಗಿ ಕೆಲ ರಾಶಿಯವರಿಗೆ ದೆಶೆ ಬದಲಾಗುವ ಸಮಯವಾದರೆ, ಇನ್ನು ಕೆಲ ರಾಶಿಯವರು ಎಚ್ಚರಿಂದ ಇರುವುದು ಒಳಿತು ಎನ್ನುವುದು ನಾಡಿನ ಸಮಸ್ತ ಜ್ಯೋತಿಷಿಗಳ ಒಕ್ಕೊರಲ ಅಭಿಪ್ರಾಯ. ಮುಖ್ಯವಾಗಿ, ತುಲಾ, ವೃಶ್ಚಿಕ, ಮೇಷ, ಮಿಥುನ, ಕಟಕ ಮತ್ತು ಮೀನಾ ರಾಶಿಯವರು.
ಶನಿಯ ವಕ್ರ ದೃಷ್ಟಿಗೆ ಬಿದ್ದವರಿಗೆ ಮಾನಸಿಕ ಕ್ಲೇಷ, ವೃಥಾ ಚಿಂತೆ, ಹಣ ಪೋಲಾಗುವುದು, ದಾಂಪತ್ಯ ವಿರಸ, ನೌಕರಿ ನಾಶ, ವ್ಯಾಪಾರದಲ್ಲಿ ನಷ್ಟ, ಸಹೋದರರೊಂದಿಗೆ ಕಲಹ, ದೂರ ಪ್ರಯಾಣ, ದೈಹಿಕ, ಮಾನಸಿಕ ಚಿಂತೆ ಮುಂತಾದುವುಗಳು ಎದುರಾಗಬಹುದು.
ಹಾಗಾಗಿ, ಈ ಮೇಲೆ ತಿಳಿಸಿದ ರಾಶಿಯವರು ಶನಿದೇವರನ್ನು ಸಂಪ್ರೀತಗೊಳಿಸಲು ಇರುವೆಗೆ ಸಕ್ಕರೆ ಹಾಕುವುದು, ಕಾಗೆಗೆ ಆಹಾರ ನೀಡುವುದು, ಶಿವನಿಗೆ ಮತ್ತು ಶನಿದೇವರಿಗೆ ಎಳ್ಳು ದೀಪ ಹಚ್ಚುವುದು, ಎಣ್ಣೆ ಸ್ನಾನ, ಸಮುದ್ರ ಸ್ನಾನ ಮಾಡುವುದು, ಬಡವರಿಗೆ ಎಳ್ಳು ದಾನ ಮಾಡುವುದು, ಶನಿ ದೇವರ ಸ್ತುತಿ, ವಿಷ್ಣು ಸಹಸ್ರನಾಮ ಪಾರಾಯಣ , ರುದ್ರ ಪಠಿಸುವುದು, ಆಂಜನೇಯ ಸ್ತುತಿ ಭಜನೆ ಮಾಡುವುದರಿಂದ ಎದುರಿಸಬೇಕಾದ ಕಂಟಕಗಳಿಂದ ಸ್ವಲ್ಪ ಮಟ್ಟಿಗೆ ಶನಿ ರಿಲೀಫ್ ನೀಡಬಹುದು. ಶನಿ ಅಥವಾ ಆಂಜನೇಯ ದೇವಾಯಲದ ದರುಶನ ತಪ್ಪದೆ ಮಾಡಿ.
ಉಳಿದ ರಾಶಿಯವರಿಗೆ ಶನಿ ದೇವರಿಂದ ಅಂತಹ ಕಂಟಕವೇನೂ ಎದುರಾಗುವುದಿಲ್ಲ. ಹಾಗಾಗಿ, ಹೋದಲೆಲ್ಲಾ ಜಯ, ಬಡ್ತಿ, ನಿವೇಶನ ಖರೀದಿ, ಗೃಹ ನಿರ್ಮಾಣ, ಸುಖ ದಾಂಪತ್ಯ, ಧನ ಲಾಭ, ಶ್ರಮಕ್ಕೆ ತಕ್ಕ ಪ್ರತಿಫಲವಿರುತ್ತದೆ ಎನ್ನುವುದು ಜ್ಯೋತಿಷಿಗಳ ಅಂಬೋಣ. ಸಕಲ ಸಂಕಷ್ಟಗಳನ್ನು ನಿವಾರಿಸುವ ಶನಿ ಮಹಾರಾಜ ಸಮಸ್ತ ಜನತೆಗೆ ಮತ್ತು ಒನ್ ಇಂಡಿಯ ಕನ್ನಡ ವಾಚಕ ಬಂಧುಗಳಿಗೆ ಸನ್ಮಂಗಳವನ್ನು ಉಂಟು ಮಾಡಲಿ.